ತುಳುಕೂಟ ಕುವೈಟ್ - ‘ಕುಟುಂಬ ಹೊರಾಂಗಣ ವಿಹಾರ’ |
ಪ್ರಕಟಿಸಿದ ದಿನಾಂಕ : 2009-05-07
ತುಳುಕೂಟ ಕುವೈಟ್ ಇದರ ಈ ವರ್ಷದ ಪ್ರಪ್ರಥಮ ಕಾರ್ಯಕ್ರಮ ‘ಕುಟುಂಬ ಹೊರಾಂಗಣ ವಿಹಾರ’ ಇದೇ ಕಳೆದ ಎಪ್ರಿಲ್ ೨೪, ೨೦೦೯ ನೇ ಶುಕ್ರವಾರ ಸ್ಥಳೀಯ ಜಾಬ್ರಿಯ ಉದ್ಯಾನದಲ್ಲಿ ಜರಗಿತು.
ಅಧ್ಯಕ್ಷ ಶ್ರೀ ಎ.ಕೆ. ರವೀಂದ್ರ ಧ್ವಜಾರೋಹಣಗೊಳಿಸಿ ಕ್ರೀಡಾಕೂಟವನ್ನು ಆರಂಭಿಸಿದ ನಂತರ ಪುಟಾಣಿಗಳ ಜೊತೆ ಕ್ರೀಡಾಳುಗಳು ಪಥ ಸಂಚಲನದೊಂದಿಗೆ ದ್ವಜಕ್ಕೆ ಗೌರವ ಸಲ್ಲಿಸಿದರು. ಅಧ್ಯಕ್ಷರು, ಕ್ರೀಡಾಕಾರ್ಯದರ್ಶಿ ಶ್ರೀ ರಮೇಶ್ ಕಿದಿಯೂರ್ ಮತ್ತು ಕೂಟದ ಹಿರಿಯ ಸಮಿತಿ ಸದಸ್ಯರು ಪಾರಿವಾಳಗಳನ್ನು ಗಗನಕ್ಕೆ ಹಾರಿಸಿ ಹೊರಾಂಗಣ ವಿಹಾರವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ತದನಂತರ ಒಂದರಮೇಲೊಂದರಂತೆ ವಿಭಿನ್ನ, ವಿಶೇಷ ತುಳುನಾಡ ಗ್ರಾಮೀಣ ಜಾನಪದ ಕ್ರೀಡೆಗಳು ಉದ್ಯಾವನದಲ್ಲಿ ಮೂಡಿಬಂದವು. ಗಂಡಸರಿಗಾಗಿ ಬಂಡಿ ಓಟ, ಎಣ್ಣೆ ಸವರಿದ ಕೊಳವೆಯಲ್ಲಿ ಸೇತುವೆ ದಾಟುವ ಸ್ಪರ್ಧೆ, ಹೆಂಗಸರಿಗಾಗಿ ನೀರು ತುಂಬಿದ ಕೊಡವನ್ನು ಸೊಂಟದಲ್ಲಿ ಹಿಡಿದು ಓಡುವ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ ದಿನದ ಆಕರ್ಷಣಾ ಆಟಗಳಾಗಿದ್ದವು.

ಚಿಣ್ಣರಿಗಾಗಿ ನಡೆದ ಬಣ್ಣ ಬಣ್ಣದ ಚೆಂಡನ್ನು ಒಟ್ಟುಗೂಡಿಸುವ ಸ್ಪರ್ಧೆ, ಕೆರೆ ದಡ, ವಿವಿಧ ರೀತಿಯ ಓಟಗಳಲ್ಲಿ ಬಹಳಷ್ಟು ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.
ದಂಪತಿಗಳಿಗಾಗಿ ನಡೆದ ಹಲಗೆ ಮೇಲೆ ಕುಳಿತು ಓಡುವ ಸ್ಪರ್ಧೆ, ಬಟ್ಟೆ ಒಣಗಿಸುವ ಸ್ಪರ್ಧೆಗಳಲ್ಲೂ ಜೋಡಿಗಳು ಹುಮ್ಮಸ್ಸಿನಿಂದ ಪಾಲ್ಗೊಂಡರು. ವಾಲಿಬಾಲ್, ಕಬ್ಬಡ್ಡಿ, ತ್ರೋಬಾಲ್ ಮತ್ತು ಹಗ್ಗಜಗ್ಗಾಟದಲ್ಲೂ ಭಾಗವಹಿಸಿದ ತಂಡಗಳು ನೆರೆದ ಕ್ರೀಡಾಭಿ ಮಾನಿಗಳಿಗೆ ಉನ್ನತ ಮಟ್ಟದ ಕ್ರೀಡಾ ಪ್ರದರ್ಶನವನ್ನಿತ್ತರು.
ಕಳೆದ ಒಂಬತ್ತು ವರ್ಷಗಳಿಂದ ಕುವೈಟಿನ ಉಸುಕು ಭೂಮಿಯಲ್ಲಿ ತುಳುನಾಡ ಗ್ರಾ ಮೀಣ, ಜಾನಪದ ಕ್ರೀಡೆಗಳನ್ನು ಆಡಿತೋರಿಸುತ್ತಾ ಬರುವ ತುಳುಕೂಟದ ಸಂಪ್ರದಾಯ ಅದೃಷ್ಟ ಬಹುಮಾನ ಯೋಜನೆ ಮತ್ತು ಬಹುಮಾನ ವಿತರಣೆಯೊಂದಿಗೆ ಮುಕ್ತಾಯ ಗೊಂಡಿತು.
ಶ್ರೀ ತಾರೇಂದ್ರ ಪಿ. ಶೆಟ್ಟಿಗಾರ್, ಶ್ರೀ ಸುರೇಶ್ ರಾವ್, ಶ್ರೀ ಅಗ್ನೆಲ್ಲೊ, ಶ್ರೀ ಸುರೇಶ್ ಸಾಲ್ಯಾನ್ ಮತ್ತು ಶ್ರೀ ಹರೀಶ್ ಭಂಡಾರಿ ವಿಹಾರ ಕೂಟವನ್ನು ನಿರೂಪಿಸಿದರು. ಕ್ರೀಡಾಕಾರ್ಯದರ್ಶಿ ಶ್ರೀ ರಮೇಶ್ ಕಿದಿಯೂರ್ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು. ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಸಾಲ್ಯಾನ್ ವಂದಿಸಿದರು.
ವರದಿಯ ವಿವರಗಳು |
 |
ಕೃಪೆ : ಎ.ಕೆ.ರವೀ೦ದ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-05-07
|
|
|