ಎನ್ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್ |
ಪ್ರಕಟಿಸಿದ ದಿನಾಂಕ : 2010-09-10
ಆರೋಪಿ ಬಾಗಲೂರಿನ ಮೂಲಕ ಕಾರಿನಲ್ಲಿ ಪರಾರಿಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಫ್ರೇಜರ್ಟೌನ್ ಇನ್ಸ್ಪೆಕ್ಟರ್ ಗಿರೀಶ್ ನೇತೃತ್ವದ ತಂಡ ಚಾಕ್ಲೇಟ್ ಬಾಗಲೂರಿನಿಂದ ಆತನ ವಾಹನವನ್ನು ಕಾರಿನಲ್ಲಿ ಬೆನ್ನುಹತ್ತಿತು.
ಬೆಂಗಳೂರು: ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಅಂತರರಾಜ್ಯ ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲೂರಿನ ಹೂವಿನಾಯಕನಹಳ್ಳಿ ಸಮೀಪ ಗುರುವಾರ ಮಧ್ಯಾಹ್ನ ನಡೆದಿದೆ.
ಅಜಿತ್ ಕುಮಾರ್ ಸಿಂಗ್ ಉರುಫ್ ಎ.ಕೆ ಸಿಂಗ್ (29) ಪೊಲೀಸರ ಗುಂಡಿಗೆ ಬಲಿಯಾದ ದರೋಡೆಕೋರ.
‘ದರೋಡೆ, ಅಪಹರಣ, ಕಳವು, ಸುಲಿಗೆ ಸೇರಿದಂತೆ ನಗರ ವಿವಿಧ ಠಾಣೆಗಳಲ್ಲಿ ಈತನ ಮೇಲೆ 29 ಪ್ರಕರಣಗಳಿವೆ. ಮಹಾರಾಷ್ಟ್ರ, ದೆಹಲಿ, ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಈತನ ವಿರುದ್ಧ ಸಾಕಷ್ಟು ಪ್ರಕರಣಗಳಿವೆ. ನೇಪಾಳದಲ್ಲಿ ಸಹ ಈತ ಅಪರಾಧ ಎಸಗಿದ್ದಾನೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಆಪರೇಷನ್ ಎ.ಕೆ. ಸಿಂಗ್: ಎ.ಕೆ.ಸಿಂಗ್ನ ಎನ್ಕೌಂಟರ್ ಘಟನಾವಳಿಗಳು ಸಿನಿಮೀಯ ರೀತಿಯಲ್ಲಿವೆ. ಸಿಂಗ್ ತನ್ನ ಸಹಚರರ ಜತೆ ಸಂಜಯನಗರದ ಅಶ್ವತ್ಥನಗರದ ಬಸ್ ನಿಲ್ದಾಣದ ಸಮೀಪ ಇರುವ ಬಗ್ಗೆ ಬುಧವಾರ ರಾತ್ರಿ ಮಾಹಿತಿ ಕಲೆ ಹಾಕಿದ ಫ್ರೇಜರ್ಟೌನ್ ಪೊಲೀಸರು ಆತನ ಬಂಧನಕ್ಕೆ ಮುಂದಾದರು. ಕಾನ್ಸ್ಟೆಬಲ್ಗಳಾದ ಸಿದ್ದಲಿಂಗಸ್ವಾಮಿ ಮತ್ತು ಕುಮಾರ್ ಅವರು ಬಸ್ ನಿಲ್ದಾಣದ ಸಮೀಪ ಹೋಗಿ ಶರಣಾಗುವಂತೆ ಸಿಂಗ್ ಮತ್ತು ಆತನ ಇಬ್ಬರು ಸಹಚರರಿಗೆ ಕೇಳಿದರು.
ಆದರೆ ಇದಕ್ಕೆ ಒಪ್ಪದ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ. ಕಟ್ಟಡದ ಗೋಡೆಯೊಂದಕ್ಕೆ ಬಡಿದು ಹಿಂದಕ್ಕೆ ಬಂದ ಗುಂಡು ಅಲ್ಲಿಯೇ ಇದ್ದ ವ್ಯಾಪಾರಿ ಸುಬ್ಬಾರೆಡ್ಡಿ ಎಂಬುವರಿಗೆ ತಗುಲಿತು. ಇಷ್ಟಕ್ಕೆ ಹೆದರದ ಸಿಬ್ಬಂದಿ ಮುನ್ನುಗ್ಗಿ ಸಿಂಗ್ನನ್ನು ಸೆರೆ ಹಿಡಿದರು. ಈ ಸಂದರ್ಭದಲ್ಲಿ ಆತನ ಇಬ್ಬರು ಸಹಚರರು ಕಾರಿನಲ್ಲಿ ಪರಾರಿಯಾದರು. ದುಷ್ಕರ್ಮಿಯನ್ನು ಜೀಪಿನಲ್ಲಿ ಕೂರಿಸಿಕೊಂಡ ಸಿಬ್ಬಂದಿ ಆತನನ್ನು ಠಾಣೆಗೆ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಸಿಬ್ಬಂದಿಯಿಂದ ತಪ್ಪಿಸಿಕೊಂಡ ಆತ ಪರಾರಿಯಾದ.
ಈ ಸಂದರ್ಭದಲ್ಲಿ ಆತ ಕಾನ್ಸ್ಟೆಬಲ್ ಬಳಿಯಿದ್ದ ಪಿಸ್ತೂಲನ್ನೂ ಕಿತ್ತುಕೊಂಡು ಹೋಗಿದ್ದ. ಆತ ತಪ್ಪಿಸಿಕೊಂಡ ನಂತರ ಕೂಡಲೇ ಕಾರ್ಯ ಪ್ರವೃತ್ತರಾದ ಪೂರ್ವ ವಿಭಾಗದ ಪೊಲೀಸರು ಬಂಧನಕ್ಕೆ ನಾಲ್ಕು ತಂಡ ರಚಿಸಿ ನಗರದಲ್ಲೆಲ್ಲಾ ಆತನಿಗಾಗಿ ಶೋಧ ತೀವ್ರಗೊಳಿಸಿದರು. ಸಿಂಗ್ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪರಾರಿಯಾಗಲು ಸಿದ್ಧನಾಗಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಅವರು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಏರ್ಪೋರ್ಟ್ಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲೂ ಕಾದು ಕುಳಿತರು.
ಆರೋಪಿ ಬಾಗಲೂರಿನ ಮೂಲಕ ಕಾರಿನಲ್ಲಿ ಪರಾರಿಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಫ್ರೇಜರ್ಟೌನ್ ಇನ್ಸ್ಪೆಕ್ಟರ್ ಗಿರೀಶ್ ನೇತೃತ್ವದ ತಂಡ ಚಾಕ್ಲೇಟ್ ಬಾಗಲೂರಿನಿಂದ ಆತನ ವಾಹನವನ್ನು ಕಾರಿನಲ್ಲಿ ಬೆನ್ನುಹತ್ತಿತು.
ಹೂವಿನಾಯಕನಹಳ್ಳಿ ತಿರುವಿನಲ್ಲಿ ಕಾರು ನಿಲ್ಲಿಸಿದ ಆತ ಸ್ವದೇಶಿ ನಿರ್ಮಿತ ಪಿಸ್ತೂಲ್ನಿಂದ ಗಿರೀಶ್ ಮೇಲೆ ಎರಡು ಸುತ್ತು ಗುಂಡು ಹಾರಿಸಿದ. ಪ್ರಾಣ ರಕ್ಷಣೆಗಾಗಿ ಗಿರೀಶ್ ಕೂಡ ಸಿಂಗ್ ಮೇಲೆ ಎರಡು ಗುಂಡು ಹಾರಿಸಿದರು. ಅವು ಗುರಿ ತಪ್ಪಲಿಲ್ಲ.
ಒಂದು ಆತನ ತಲೆಗೆ ಹೊಕ್ಕರೆ ಇನ್ನೊಂದು ಎದೆಯ ಭಾಗಕ್ಕೆ ಬಿತ್ತು. ‘ಕುಸಿದು ಬಿದ್ದ ಆತನನ್ನು ಸಿಬ್ಬಂದಿ ಕೂಡಲೇ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದರು. ಆತನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿದ್ದನ್ನು ಖಚಿತಪಡಿಸಿದರು’ ಶಂಕರ್ ಬಿದರಿ ತಿಳಿಸಿದರು.
‘ದರೋಡೆ, ಅಪಹರಣ, ಸುಲಿಗೆ ಮತ್ತು ದುಬಾರಿ ಬೆಲೆ ಬಾಳುವ ಕಾರುಗಳನ್ನು ಕಳವು ಮಾಡುವುದನ್ನೇ ಸಿಂಗ್ ವೃತ್ತಿ ಮಾಡಿಕೊಂಡಿದ್ದ. ಆರೋಪಿ ಕೆಲ ದಿನಗಳ ಹಿಂದೆ ಅಕ್ಬರ್ ಹುಸೇನ್ ಎಂಬಾತನನ್ನು ಬಂಧಿಸಿ ಆತನಿಂದ 64 ಲಕ್ಷ ರೂಪಾಯಿ ಮೌಲ್ಯದ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಕ್ಬರ್ ತಂಡದ ನಾಯಕ ಸಿಂಗ್ ಎಂದು ಆಗ ಮಾಹಿತಿ ಲಭ್ಯವಾಗಿತ್ತು. ಆ ಮಾಹಿತಿ ಆಧರಿಸಿ ಆತನ ಬಂಧನಕ್ಕೆ ಬಲೆ ಬೀಸಲಾಗಿತ್ತು’ ಎಂದು ಅವರು ಹೇಳಿದರು.
‘ಧೈರ್ಯ ಸಾಹಸ ತೋರಿ ಆರೋಪಿಯನ್ನು ಬಂಧಿಸಿದ್ದ ಕಾನ್ಸ್ಟೆಬಲ್ಗಳಾದ ಸಿದ್ದಲಿಂಗಸ್ವಾಮಿ ಮತ್ತು ಕುಮಾರ್ ಅವರಿಗೆ ತಲಾ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್, ಆಗ್ನೇಯ ವಿಭಾಗದ ಡಿಸಿಪಿ ರವಿಕಾಂತೇಗೌಡ, ಪೂರ್ವ ವಿಭಾಗದ ಡಿಸಿಪಿ ಎಂ. ಚಂದ್ರಶೇಖರ್, ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ರಾಮಚಂದ್ರಪ್ಪ, ಹಲಸೂರು ಉಪ ವಿಭಾಗದ ಎಸಿಪಿ ಜಿ.ಬಿ. ಮಂಜುನಾಥ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಬಲ್ ಪದವಿ, ಕುಕೃತ್ಯದಲ್ಲೂ ಮೇಧಾವಿ! ಎಂ. ನವೀನ್ ಕುಮಾರ್
ಬೆಂಗಳೂರು: ವಯಸ್ಸು 29, ಪಡೆದದ್ದು ಎರಡು ಸ್ನಾತಕೋತ್ತರ ಪದವಿ, ಹಣಕ್ಕಾಗಿ ಅಪರಾಧ ಕೃತ್ಯ, ದೇಶದಲ್ಲೇ ಕುಖ್ಯಾತಿ, ಪೊಲೀಸ್ ಗುಂಡಿನಿಂದ ಅಂತ್ಯ...
ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿ ಪೊಲೀಸರ ಗುಂಡಿನಿಂದಲೇ ಸಾವನ್ನಪ್ಪಿದ ಅಜಿತ್ ಕುಮಾರ್ ಸಿಂಗ್ ಉರುಫ್ ಎ.ಕೆ.ಸಿಂಗ್ನ ಜೀವನ ಕುತೂಹಲಕಾರಿಯಾಗಿದೆ.
ಉತ್ತರ ಪ್ರದೇಶ ಮೂಲದ ನಗರದ ಖಾಸಗಿ ಕಂಪೆನಿ ಉದ್ಯೋಗಿ ಸಿಂಗ್ ಎಂಬುವರ ಮಗನಾದ ಅಜಿತ್ ಕುಮಾರ್ ಸಿಂಗ್ ಬೆಂಗಳೂರಿನ ಪೀಣ್ಯ ನಿವಾಸಿಯಾಗಿದ್ದ. ನಗರದ ಪ್ರತಿಷ್ಠಿತ ಕಾಲೇಜಿನಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂಬಿಎ) ಪದವಿ ಪಡೆದ. ನಂತರ ದೆಹಲಿಯ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಸ್ನಾತಕೋತ್ತರ ಪದವಿ ಪಡೆದಿದ್ದ. ಆದರೆ ಆತ ಹಣ ಸಂಪಾದನೆಗೆ ಹಿಡಿದ ಮಾರ್ಗ ಅಪರಾಧ.
ದರೋಡೆ, ಅಪಹರಣದ ಮೂಲಕ ಮೂರು ವರ್ಷದ ಹಿಂದೆ ಕುಕೃತ್ಯ ಆರಂಭಿಸಿದ ಆತ, ಆ ನಂತರ ಅಪಹರಣ, ಅಕ್ರಮ ಶಸ್ತ್ರಾಸ್ತ್ರ ಮಾರಾಟ, ದುಬಾರಿ ಕಾರು ಕಳವು ಮಾಡಲಾರಂಭಿಸಿದ.
ಬೆಂಗಳೂರು ಒಂದರಲ್ಲೇ ಸಿಂಗ್ ಮೇಲೆ 29 ಪ್ರಕರಣಗಳು ದಾಖಲಾದವು. ಮೂರು ವರ್ಷದ ಹಿಂದೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದ ಸಿಂಗ್ ಜಾಮೀನು ಪಡೆದ ನಂತರ ತಲೆಮರೆಸಿಕೊಂಡಿದ್ದ.
ಆದ್ದರಿಂದ ಆತನನ್ನು ನ್ಯಾಯಾಲಯ ಘೋಷಿತ ಅಪರಾಧಿ ಎಂದು ಪರಿಗಣಿಸಿತ್ತು (ಪ್ರೊಕ್ಲೈಮ್ಡ್ ಅಫೆಂಡರ್). ಪೊಲೀಸರು ಸಹ ದುಷ್ಕರ್ಮಿಗಾಗಿ ಹುಡುಕಾಟ ನಡೆಸಿದರೂ ಫಲ ಸಿಗಲಿಲ್ಲ.
ನಗರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾದ ನಂತರ ತನ್ನದೇ ತಂಡವೊಂದನ್ನು ಕಟ್ಟಿಕೊಂಡ ಸಿಂಗ್ ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಅಪರಾಧ ಎಸಗುತ್ತಿದ್ದ. ಪಿಸ್ತೂಲ್ ಮತ್ತು ರಿವಾಲ್ವರ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ. ಈವರೆಗೆ ಸುಮಾರು ಮೂವತ್ತು ಪಿಸ್ತೂಲ್, ರಿವಾಲ್ವರ್ಗಳನ್ನು ಆತ ಮಾರಿದ್ದಾನೆ ಎಂಬ ಮಾಹಿತಿ ಇದೆ. ದುಬಾರಿ ಬೆಲೆಯ ಕಾರುಗಳನ್ನು ಮಾತ್ರ ಕಳವು ಮಾಡಿ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜಯನಗರದಲ್ಲಿ ಸಿಂಗ್ನನ್ನು ಪೊಲೀಸರು ಬಂಧಿಸಿದ ವೇಳೆ ಕಾರಿನಲ್ಲಿ ಪರಾರಿಯಾಗಿದ್ದ ದುಷ್ಕರ್ಮಿಗಳು ವಾಹನವನ್ನು ಮತ್ತೀಕೆರೆ ಸಮೀಪ ಬಿಟ್ಟು ಹೋಗಿದ್ದರು. ಆ ಕಾರಿನಲ್ಲಿಯೂ ಒಂದು ಪಿಸ್ತೂಲ್ ಪತ್ತೆಯಾಗಿದೆ.
ನೇಪಾಳದಲ್ಲಿ ಸಹ ಆತ ಅಪರಾಧ ಕೃತ್ಯ ಎಸಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆಗೆ ಸಿಂಗ್ಗೆ ನಂಟಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಬಗ್ಗೆ ಖಚಿತ ಸಾಕ್ಷಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಜೈಲಿನಿಂದ ಪರಾರಿಯಾಗಿದ್ದ: ಪ್ರಕರಣವೊಂದರಲ್ಲಿ ಎರಡು ವರ್ಷಗಳ ಹಿಂದೆ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಸಿಂಗ್, ಚಾಣಾಕ್ಷತನದಿಂದ ಜೈಲಿನಿಂದಲೇ ಪರಾರಿಯಾಗಿದ್ದ.
ಆ ನಂತರ ಅಲ್ಲಿನ ಪೊಲೀಸರೂ ಕಿಡಿಗೇಡಿಯ ಬಂಧನಕ್ಕೆ ಯತ್ನಿಸಿದ್ದರೂ ಆಸಾಮಿ ಸಿಕ್ಕಿರಲಿಲ್ಲ. ಸಿಂಗ್ ನಗರದ ಯುವ ಯೊಬ್ಬಳನ್ನು ವಿವಾಹ ಆಗಿದ್ದಾನೆ ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|