ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚರಿಯ ಫಲಿತಾಂಶಕ್ಕೆ ಭೂಮಿಕೆ ಸಿದ್ಧ |
ಪ್ರಕಟಿಸಿದ ದಿನಾಂಕ : 2010-09-10
ಕಡೂರು: ಅಚ್ಚರಿಯ ಫಲಿತಾಂಶಕ್ಕೆ ಭೂಮಿಕೆ ಸಿದ್ಧ ದಿನೇಶ ಪಟವರ್ಧನ್
ಚಿಕ್ಕಮಗಳೂರು : ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಆಯ್ಕೆಯಲ್ಲಿ ಸ್ವಲ್ಪ ಜಾಣತನ ತೋರಿದ್ದರೆ ಕಡೂರು ವಿಧಾನಸಭಾ ಕ್ಷೇತ್ರ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯುವ ಸಾಧ್ಯತೆಗಳು ಇತ್ತು. ಮೊದಲ ಮಹಿಳಾ ಪ್ರತಿನಿಯನ್ನು ಕ್ಷೇತ್ರಕ್ಕೆ ಕೊಟ್ಟ ಹೆಗ್ಗಳಿಕೆಯೂ ಇರುತ್ತಿತ್ತು.
ಚುನಾವಣೆಗೆ ಇನ್ನೂ ಮೂರು ದಿನ ಇದೆ. ಇಂದಿನ ವರೆಗೆ ಮಾಡಿದ ತಂತ್ರಗಳೇ ಬೇರೆ. ಮುಂದಿನ ತಂತ್ರಗಳೇ ಬೇರೆ. ಎಲ್ಲ ಲೆಕ್ಕಾಚಾರ ಬುಡಮೇಲು ಮಾಡುವ 'ಶಕ್ತಿ' ಈ ದಿನಗಳಿಗೆ ಇದೆ. ಈ ದಿನದ ಮಟ್ಟಿಗೆ ಮೂರೂ ಪಕ್ಷಗಳು ಸಮಬಲದ ಹೋರಾಟ ನೀಡುತ್ತಿವೆ.
ಕಾಂಗ್ರೆಸ್ನಿಂದ ಕೆ.ಎಂ.ಕೆಂಪರಾಜು, ಜೆಡಿಎಸ್ನಿಂದ ವೈ.ಎಸ್.ವಿ.ದತ್ತಾ, ಬಿಜೆಪಿಯಿಂದ ಡಾ.ವಿಶ್ವನಾಥ್ ಸ್ಪìಗಳು. ಕೆಂಪರಾಜುಗೆ ವಿಧಾನಸಭೆ ಚುನಾವಣೆ ಹೊಸತು. ಆದರೆ ಚುನಾವಣೆ ಪ್ರಕ್ರಿಯೆ ಹೊಸತಲ್ಲ. ತಮ್ಮ ಸಹೋದರ ಕೆ.ಎಂ. ಕೃಷ್ಣಮೂರ್ತಿ ಪರ ಚುನಾವಣೆ ದಿನಗಳಲ್ಲಿ ಟೊಂಕ ಕಟ್ಟಿ ನಿಂತವರು.
8 ಚುನಾವಣೆಗಳ ಅನುಭವ. ಹೀಗಾಗಿ ಎಲ್ಲ ಪಟ್ಟುಗಳೂ ಕರಗತ. ಜಾತ್ಯತೀತ ಜನತಾದಳದ ವೈ.ಎಸ್.ವಿ. ದತ್ತಾಗೆ ಇದು ಎರಡನೇಯ ಚುನಾವಣೆ. ಮಾತಿನ ಮಲ್ಲ. ಜನರಲ್ಲಿ ಹೊಸ ಭರವಸೆ ಮೂಡಿಸಿರುವ ವ್ಯಕ್ತಿ. ಬಿಜೆಪಿಯ ಡಾ.ವಿಶ್ವನಾಥ್ಗೆ ಮೂರನೇಯ ಚುನಾವಣೆ. ಸಭ್ಯತೆಯೇ ಮಾನದಂಡ.
ಈ ಕ್ಷೇತ್ರದಲ್ಲಿ ಫಲಿತಾಂಶದ ಅಳತೆಗೋಲು ಜಾತಿ. ಹಿಂದಿನ ಚುನಾವಣೆಗಳು ಇದಕ್ಕೆ ಸಾಕ್ಷಿ. ಹಿಂದೆಂದೂ ಕಾಣದಷ್ಟು ಸಂಪಲ್ಮೂಲ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಎಷ್ಟೇ ಸಭ್ಯರಂತೆ ಮಾತನಾಡಿದರೂ ಜಾತಿ, ಹಣ, ಹೆಂಡ ಮೂರೂ ಚುನಾವಣೆ ಫಲಿತಾಂಶ ನಿರ್ಧರಿಸುವ ಅಂಶಗಳು.
ಜಿಲ್ಲೆಯ ಉಳಿದ ತಾಲೂಕುಗಳಿಗೆ ಹೋಲಿಸಿದಲ್ಲಿ ಕಡೂರು ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ, ಸಾಧನೆ ಆಗಿರುವುದು ಸತ್ಯ. ಗುಣಮಟ್ಟ ಕೊರತೆ ಫಲವಾಗಿ ಕೆಲವು ಶಾಶ್ವತವಾಗಿ ಉಳಿದಿಲ್ಲ. ಸಮಸ್ಯೆಗಳಿಗೂ ಬರವಿಲ್ಲ. ಸಂಪರ್ಕ ರಸ್ತೆಗಳ ಅಭಿವೃದ್ಧಿ ಗಂಭೀರವಾಗಿ ಕಾಡುತ್ತಿದೆ. ಬಯಲು ಪ್ರದೇಶಕ್ಕೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವ ಕನಸು ಸಾಕಾರವಾಗಿಲ್ಲ.
ಶ್ರೀಮಂತಿಕೆ ಜೊತೆಗೆ ಬಡತನವೂ ಇದೆ. ಇದನ್ನೇ ಆಡಳಿತ ಪಕ್ಷ ಚುನಾವಣೆಯ ಪ್ರಮುಖ ಅಸ್ತ್ರವಾಗಿ ಮಾಡಿಕೊಂಡಿದೆ. ದತ್ತು ಸ್ವೀಕಾರದ ಮಾತುಗಳ ಮೂಲಕ ಮತದಾರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ.
ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳು ಗಣಿಹಗರಣ, ಭೂ ಹಗರಣ, ಕೆಲ ಸಚಿವರ ಲಂಪಟತನ, ಆಡಳಿತದಲ್ಲಿ ಹೆಚ್ಚಿದ ಭ್ರಷ್ಟಾಚಾರ ಹೀಗೆ ಹತ್ತು ಹಲವು ವಿಷಯಗಳನ್ನು ಹರಿದು ಬಿಡುತ್ತಿವೆ. ಇದೆಲ್ಲ ಮತದಾರರ ಮೇಲೆ ಪರಿಣಾಮ ಬೀರುವುದೇ ಎನ್ನುವುದೇ ಮುಖ್ಯ ಪ್ರಶ್ನೆ.
ಜನರಿಗೆ ರಾಜಕೀಯ ಒಂದು ರೀತಿ ರೋಸಿ ಹೋಗಿದೆ. ಸ್ವರ್ಗವನ್ನು ಧರೆಗೆ ಇಳಿಸುವ ಮಾತಿನಲ್ಲಿ ವಿತ್ವಾಸ ಕಳೆದುಕೊಂಡಿದ್ದಾರೆ. ಚುನಾವಣೆಗೂ ಕಾಲಿಟ್ಟ ಭ್ರಷ್ಟತೆ ಫಲವಾಗಿ ಜನರ 'ನಿರೀಕ್ಷೆ'ಗಳು ಅಪಾರ. ಮತಗಳು ಯಾರಿಗೆ ಎನ್ನುವ ಪ್ರಶ್ನೆಗೆ ಉತ್ತರ ನಮ್ಮನ್ನು 'ವಿಚಾರಿಸಿ' ಕೊಂಡವರಿಗೆ.
ಲಿಂಗಾಯಿತರು ಹಾಗು ಕುರುಬರ ಕದನದ ಮಧ್ಯೆ ಇತರೆ ವರ್ಗದ ಅಪಾರ ಮತದಾರರೂ ಇಲ್ಲಿದ್ದಾರೆ. ನಿರ್ಣಾಯಕರು ಇವರು. ಇಂದು ಯಾರೂ ಒಗ್ಗಟ್ಟಾಗಿ ಉಳಿದಿಲ್ಲ. ಉಳಿಯಲು ಬಿಟ್ಟಿಲ್ಲ.
ಮತದಾರರ ಕೈಯಲ್ಲಿ ಸಾವಿರ ರೂ. ನೋಟುಗಳು ನಲಿದಾಡುತ್ತಿವೆ. ಸಾರಾಯಿಯ ಕಮಟು ವಾಸನೆ ಸಭೆಗಳಲ್ಲಿ ಮೂಗಿಗೆ ಬಡಿಯುತ್ತಿದೆ. ಇದೆಲ್ಲ ರಾಜಕಾರಣಿಗಳ ಕೃಪಾಕಟಾಕ್ಷ.
ಭರವಸೆಗಳ ಮೂಲಕ ಆಸೆ- ಆಮಿಷಗಳ ಮಹಾಪೂರವೇ ಹರಿದಿದೆ. ಕೆಲ 'ಇಷ್ಟಾರ್ಥ'ಗಳೂ ನೆರವೇರಿವೆ. ಎಲ್ಲ ಅಭ್ಯರ್ಥಿ, ನಾಯಕರಲ್ಲಿ ಗೆಲುವಿನ ಉತ್ಸಾಹ. ವಿತ್ವಾಸದಿಂದ ಕೇಳಿದರೆ ಹೇಳಿಕೊಳ್ಳುವಷ್ಟು ಸುಲಭವಿಲ್ಲ ಎನ್ನುವ ಪಿಸು ಧ್ವನಿ. ಇದು ವಾಸ್ತವ. ಕಳೆದ ಚುನಾವಣೆಗೂ ಇಂದಿಗೂ ಸಾಕಷ್ಟು ಬದಲಾವಣೆ ಆಗಿದೆ.
ಅಂದು ಕೆಎಂಕೆ ಜೊತೆಗಿದ್ದವರು ಕಾಂಗ್ರೆಸ್ ಪರವಾಗಿಲ್ಲ. ಅದೇ ರೀತಿ ದತ್ತಾ ಕೈಹಿಡಿದವರೂ ದೂರ ನಿಂತಿದ್ದಾರೆ. ವಿಶ್ವನಾಥ್ ಬೇಡ ಎಂದವರು ಒಮ್ಮೆ ಬರಲಿ ಎನ್ನುತ್ತಿದ್ದಾರೆ. ಅಂತಿಮ ಕ್ಷಣದಲ್ಲಿ ನಡೆಯುವ ಮ್ಯಾಜಿಕ್ ಫಲಿತಾಂಶದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇಲ್ಲದಿಲ್ಲ.
ಕೆಎಂಕೆ ಸಾಧನೆ , 'ಅನುಕಂಪ 'ದ ಜೊತೆಗೆ ಸಾಂಪ್ರದಾಯಿಕ ಮತಗಳು ಸಾರಾಸಗಟು ಕೈಹಿಡಿದರೆ ಕೆಂಪರಾಜು ಅದೃಷ್ಟ ಖುಲಾಯಿಸಿದಂತೆ.
ಜೆಡಿಎಸ್ಗೂ ಅನೇಕ ತೊಡಕುಗಳು ಇಲ್ಲದಿಲ್ಲ. ಮಾಜಿ ಶಾಸಕ ಧರ್ಮೇಗೌಡ, ಎನ್.ದೇವರಾಜ್ ಬೆಂಬಲ ನಿಜಕ್ಕೂ ಸಹಕಾರಿ. ಗೆಲುವಿಗೆ ಇದೊಂದೆ ಸಾಲದು. ಲಿಂಗಾಯಿತ, ಕುರುಬರನ್ನು ಹೊರತುಪಡಿಸಿ ಉಳಿದವರ ಮನ ಗೆಲ್ಲಲೇ ಬೇಕು. ಜೊತೆಗೆ ಕೊನೆಯ ಮೂರು ದಿನಗಳನ್ನು ನಿಭಾಯಿಸುವ ' ಸಾಮರ್ಥ್ಯ'ವೂ ಅಗತ್ಯ. ಇಲ್ಲಿ ಯಶಸ್ವಿ ಆದಲ್ಲಿ ಕಳೆದ ಬಾರಿ ಗೆಲುವಿನ ಹತ್ತಿರಕ್ಕೆ ಬಂದ ದತ್ತಾ ಈ ಬಾರಿ ವಿಧಾನ ಸಭೆ ಪ್ರವೇಶಿಸುವುದು ನಿಶ್ಚಿತ.
ಬಿಜೆಪಿಗೆ ದೊಡ್ಡ ಶಕ್ತಿ ಸಂಪನ್ಮೂಲ. ದೊಡ್ಡ ನಾಯಕರೇ ಇದರ ಹೊಣೆ ಹೊತ್ತಿದ್ದಾರೆ. ಜಾತಿ ಸಮೀಕರಣವೂ ಕೆಲಸ ಮಾಡುವ ವಿತ್ವಾಸವೂ ಅವರಿಗೆ ಇದೆ. ಪ್ರಮುಖ ಜಾತಿ ಮತಗಳ ಜೊತೆಗೆ ಕೊಟ್ಟ ಮಾತಿನಂತೆ ಇತರೆ ಸಮುದಾಯಗಳು ನಡೆದುಕೊಂಡರೆ ಡಾ.ವಿಶ್ವನಾಥ್ ಮುಖದಲ್ಲಿ ನಗು ಮೂಡುವುದು ಖಚಿತ.
ಕಣದಲ್ಲಿ ಮೂರೂ ಕುದುರೆಗಳು ಸಮಬಲವಾಗಿ ಓಡುತ್ತಿವೆ. ಜೆಡಿಎಸ್- ಬಿಜೆಪಿ ಮಧ್ಯೆ ಹೆಚ್ಚು ತುರುಸು ಕಾಣುತ್ತಿದೆ. ಎಲ್ಲಿ ಯಾರು ಎಡವುತ್ತಾರೆ. ಜನ ಯಾರಿಗೆ ಕೈ ಕೊಡುತ್ತಾರೆ ಎನ್ನುವುದರ ಮೇಲೆ ನಿರ್ಧಾರ. ಅಚ್ಚರಿಯ ಫಲಿತಾಂಶದ ಸಾಧ್ಯತೆಗಳೇ ಅಕ.
ವಿಧಾನ ಸಭಾ ಕ್ಷೇತ್ರ: ಕಡೂರು.
ಒಟ್ಟು ಮತದಾರರು: 1,76,470.
ಪುರುಷರು: 90,515,
ಮಹಿಳೆಯರು: 85,955.
ಮತಗಟ್ಟೆಗಳು: 226.
ಸೂಕ್ಷ್ಮ-102 ,
ಅತೀ ಸೂಕ್ಷ್ಮ- 66
ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ ಎಂ.ಎನ್. ಗುರುಮೂರ್ತಿ
ಬೆಂಗಳೂರು : ಈ ತಿಂಗಳ 13 ರಂದು ನಡೆಯಲಿರುವ ಕಡೂರು ಹಾಗೂ ಗುಲ್ಬರ್ಗ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಾಲಿಗೆ ಪ್ರತಿಷ್ಠೆ ಮಾತ್ರವಲ್ಲ , ಸವಾಲು ಕೂಡ ಆಗಿದೆ.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ಈಗಿನದು ಮೂರನೇ ಉಪ ಚುನಾವಣೆ. ಲೋಕಸಭಾ ಚುನಾವಣೆಗೆ ಮುನ್ನ 8 ಹಾಗೂ ನಂತರ 5 ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು . ಈಗ ಮತ್ತೂಂದು ಉಪ ಚುನಾವಣೆ ಎದುರಾಗಿದೆ, ಈಗ ಸ್ಥಾನಗಳು ಖಾಲಿ ಆಗಿರುವುದು 'ಆಪರೇಷನ್ ಕಮಲ' ದಿಂದಲ್ಲ . ಕಡೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ನ ಕೆ.ಎಂ.ಕೃಷ್ಣಮೂರ್ತಿ ಹಾಗೂ ಗುಲ್ಬರ್ಗ ದಕ್ಷಿಣವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಚಂದ್ರಶೇಖರ ಪಾಟೀಲ್ ರೇವೂರ ಅವರ ನಿಧನದಿಂದ ತೆರವಾದವು. ಹಿಂದಿನ ಎರಡು ಉಪ ಚುನಾವಣೆಗಳಿಗೂ ಈಗಿನ ಉಪ ಚುನಾವಣೆಗೂ ಸಾಕಷ್ಟು ರಾಜಕೀಯ ಹಾಗೂ ಸಾಂದರ್ಭಿಕ ವ್ಯತ್ಯಾಸಗಳಿವೆ. ಕಳೆದ ಎರಡು ವರ್ಷಗಳ ಆಡಳಿತ ವೈಖರಿ ಮತ್ತಿತರ ಕಾರಣಗಳಿಂದ ಬಿಜೆಪಿಯ ವರ್ಚಸ್ಸು ಕುಂದಿದೆ, ಕುಂಭಕರ್ಣ ನಿದ್ರಾವಸ್ಥೆಯಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಕೊನೆಗೂ ರಣ ಕಹಳೆ ಮೊಳಗಿಸಿವೆ.
ಮೂರು ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆ ಹಾಗೂ ಸವಾಲು ಆಗಿದೆ, ಈ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪಣ ತೊಟ್ಟಿದ್ದರೆ, ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿ ಅದುºತ ಯಶಸ್ಸು ಕಂಡು ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಚುನಾವಣೆ ಗೆಲ್ಲಲು ಸಂಕಲ್ಪ ಮಾಡಿದೆ. ಅದೇ ರೀತಿ ತಮ್ಮ ಅಸ್ತಿತ್ವದ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ಸದಾ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರ ಕೊಡಲು ಎರಡು ಕ್ಷೇತ್ರಗಳಲ್ಲಿ ಒಂದು ಕಡೆಯಲ್ಲಾದರೂ ಗೆಲುವು ಸಾಧಿಸಲು ಜೆಡಿಎಸ್ ಕಾರ್ಯತಂತ್ರ ರೂಪಿಸಿ ಹೋರಾಡುತ್ತಿದೆ. ಸದ್ಯದಲ್ಲಿಯೇ ನಡೆಯಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದ ದಿಕೂÕಚಿಯೆಂದೇ ಹೇಳಲಾಗುವ ಈ ಉಪ ಚುನಾವಣೆ ಹಲವು ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ಆಡಳಿತಾರೂಢ ಬಿಜೆಪಿಗೆ ವಿಶೇಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಮತ್ತೂಂದು ಅಗ್ನಿ ಪರೀಕ್ಷೆ ಇದ್ದಂತೆ. ಈ ಚುನಾವಣೆಯ ಫಲಿತಾಂಶದಿಂದ ಸರ್ಕಾರದ ಭದ್ರತೆಗೆ ಅಪಾಯವೇನೂ ಆಗುವುದಿಲ್ಲ . ಸರ್ಕಾರ ಗಟ್ಟಿಯಾಗಿಯೇ ಇರುತ್ತದೆ. ಆದರೆ, ಯಡಿಯೂರಪ್ಪ ಅವರ ಆಡಳಿತ ವೈಖರಿ, ನೀತಿ ನಿಲುವುಗಳಿಂದಾಗಿ ಸರ್ಕಾರ ಹಾಗೂ ಪಕ್ಷದೊಳಗೆ ಇತ್ತೀಚೆಗೆ ಒಳಂಗಿಂದೊಳಗೆ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶೋಭಾ ಕರಂದ್ಲಾಜೆ ಹಾಗೂ ವಿ. ಸೋಮಣ್ಣ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಅಡ್ಡಗಾಲು ಹಾಕಿರುವುದೇ ಇದಕ್ಕೆ ನಿದರ್ಶನ.
ಇದುವರೆಗೆ ಯಡಿಯೂರಪ್ಪ ಹೇಳಿದ್ದೆಲ್ಲವೂ ನಡೆಯುತ್ತಿದ್ದವು, ಆದರೆ, ಇತ್ತೀಚೆಗೆ ಆ ರೀತಿ ಆಗುತ್ತಿಲ್ಲ. ಪಕ್ಷದ ವರಿಷ್ಠರು ಯಡಿಯೂರಪ್ಪ ನಾಗಾಲೋಟಕ್ಕೆ ಮೂಗುದಾರ ಹಾಕುತ್ತಿದ್ದಾರೆ. ಈಗ ಮತ್ತೆ ಎಲ್ಲವೂ ಅವರೇಳಿದಂತೆ ನಡೆಯಬೇಕಾದರೆ ಈ ಎರಡೂ ಉಪ ಚುನಾವಣೆಗಳಲ್ಲಿ ತಮ್ಮ ಜನಪ್ರಿಯತೆ ಸಾಬೀತುಪಡಿಸಬೇಕಾದ ಅನಿವಾರ್ಯತೆ ಯಡಿಯೂರಪ್ಪಗಿದೆ.
ಎರಡರ ಪೈಕಿ ಒಂದರಲ್ಲಿ ಗೆದ್ದರೂ ಬಿಜೆಪಿಗೆ ಲಾಭವೂ ಇಲ್ಲ , ನಷ್ಟವೂ ಇಲ್ಲ . ತನ್ನ ಸ್ಥಾನವನ್ನು ಉಳಿಸಿಕೊಂಡ ಗೌರವ ಇರುತ್ತದೆ. ಆ ಗೆಲುವು ಯಡಿಯೂರಪ್ಪ ಅವರನ್ನು ಕೈ ಬಲಪಡಿಸಿದಂತೆ ಆಗಲಿದೆ. ಒಂದು ವೇಳೆ ಚುನಾವಣೆ ಫಲಿತಾಂಶ ಏರುಪೇರಾದರೆ ಸರ್ಕಾರಕ್ಕೆ ಮುಖಭಂಗ ಮಾತ್ರವಲ್ಲ ,ಯಡಿಯೂರಪ್ಪಗೆ ಹಿನ್ನಡೆ ಅಲ್ಲಿಂದಲೇ ಶುರುವಾಗುತ್ತದೆ. ಶತ್ರುಗಳ ಕಾಟ ಜಾಸ್ತಿ ಆಗಲಿದೆ. ಯಡಿಯೂರಪ್ಪ ಅವರ ಬಾಯಿ ಮುಚ್ಚಿಸುವ ಶಕ್ತಿಗಳು ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ.
ಗೋಹತ್ಯೆ ನಿಷೇಧ ಕಾಯ್ದೆ, ಸರ್ಕಾರದ ವಿವಿಧ ಅಭಿವೃದ್ಧಿ ಕೆಲಸಗಳು, ಅಕ್ರಮ ಗಣಿಗಾರಿಕೆಯ ಆರೋಪ, ಅಕ್ರಮ ತಡೆಗೆ ಕೈಗೊಂಡ ಕ್ರಮಗಳಿಗೆ ಜನರ ಸ್ಪಂದನೆ ಏನು ಎಂಬುದು ಫಲಿತಾಂಶದಿಂದ ವ್ಯಕ್ತವಾಗಲಿದೆ. ಸಹಜವಾಗಿಯೇ ಇದು 'ಟ್ರೆಂಡ್ ಸೆಟ್ಟರ್' ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಪ್ರಮುಖ ಪ್ರತಿ ಪಕ್ಷ ವಾದ ಕಾಂಗ್ರೆಸ್ ಪಾಲಿಗೂ ಇದು ಸವಾಲಿನ ಚುನಾವಣೆ. ಗುಂಪುಗಾರಿಕೆ- ಒಳಜಗಳದಿಂದ ನರಳುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಬಳ್ಳಾರಿ ಪಾದಯಾತ್ರೆ ಒಗ್ಗೂಡಿಸಿದೆ. ಎಲ್ಲಾ ನಾಯಕರು ಹೆಜ್ಜೆಗೆ ಹೆಜ್ಜೆ ಹಾಕಿ ಪಾದಯಾತ್ರೆ ಯಶಸ್ವಿ ಗೊಳಿಸಿದರು. ಬಹುಕಾಲದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಶಕ್ತಿ ಪ್ರದರ್ಶಿಸಿದೆ. ಈ ಶಕ್ತಿಯ 'ಎಫೆಕ್ಟ್' ಏನು ಎಂಬುದು ಉಪ ಚುನಾವಣೆಗಳಲ್ಲಿ ಸಾಬೀತು ಆಗಲಿದೆ. ಒಂದು ವೇಳೆ ಗೆದ್ದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಯಕತ್ವಕ್ಕೆ ಮನ್ನಣೆ ಖಂಡಿತ, ಇಲ್ಲದಿದ್ದರೆ ಹಿನ್ನಡೆ. ಕಡೂರಿನಲ್ಲಿ ಹಠಕ್ಕೆ ಬಿದ್ದು ಕೃಷ್ಣಮೂರ್ತಿ ಸಹೋದರ ಕೆ.ಎಂ. ಕೆಂಪರಾಜುಗೆ ಟಿಕೆಟ್ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹಾಗಾಗಿ ಇಲ್ಲಿ ಸಿದ್ದರಾಮಯ್ಯ ಅವರ ಪ್ರತಿಷ್ಠೆ ಅಡಗಿದೆ. ತಮ್ಮ ನಾಯಕತ್ವದ ವರ್ಚಸ್ಸು ಹಾಗೂ ಪಾದಯಾತ್ರೆಯ 'ಎಫೆಕ್ಟ್' ಏನು ಎಂಬುದನ್ನು ಸಿದ್ದರಾಮಯ್ಯ ಓರೆಗೆ ಹಚ್ಚಿದ್ದಾರೆ.
ಅತ್ತ ಗುಲ್ಬರ್ಗದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಇಬ್ಬರೂ ತಮ್ಮ ವರ್ಚಸ್ಸು , ಪ್ರಭಾವವನ್ನು ಪಣಕ್ಕೆ ಇಟ್ಟಂತಿದೆ. ಧರ್ಮಸಿಂಗ್ ಅವರು 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ 2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್ನಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಈಗಿನ ಉಪ ಚುನಾವಣೆಗೆ ಪುತ್ರ ಡಾ. ಅಜಯ್ಸಿಂಗ್ ಅವರನ್ನು ಕಣಕ್ಕಿಳಿಸುವ ಮೂಲಕ ಕುಟುಂಬದ ರಾಜಕೀಯ ಭವಿಷ್ಯದ ಪರೀಕ್ಷೆಗೆ ಮುಂದಾಗಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆದ್ದರೆ ಖರ್ಗೆ-ಧರಂ ಜೋಡಿ ಹೈ ದರಾಬಾದ್ ಕರ್ನಾಟಕದಲ್ಲಿ ಇನ್ನೂ ಪ್ರಭಾವ ಶಾಲಿ ಎಂಬ ಸಂದೇಶ ಹೊರ ಬೀಳಲಿದೆ. ಇಲ್ಲದಿದ್ದರೆ ಇಬ್ಬರೂ ತೀವ್ರ ಮುಖಭಂಗಕ್ಕೆ ಒಳಗಾಗಲಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿನಿಧಿಸುವ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕಡೂರು ಸೇರಿರುವುದರಿಂದ ಗೌಡರಿಗೂ ಪ್ರತಿಷ್ಠೆ ಹಾಗೂ ಸವಾಲು . ಅದೇ ರೀತಿ ಗುಲ್ಬರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅನುಕಂಪ ಅಥವಾ ಲಿಂಗಾಯತ ಉಪ ಜಾತಿಗಳ ಒಡಕಿನ ಲಾಭ ಪಡೆಯಲೋ ಎಂಬಂತೆ ಚಂದ್ರಶೇಖರ ಪಾಟೀಲ ರೇವೂರ ಅವರ ಪತ್ನಿ ಅರುಣಾ ಪಾಟೀಲ್ ರೇವೂರ ಅವರನ್ನು ಕಣಕ್ಕಿಳಿಸಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಗುಲ್ಬರ್ಗದಲ್ಲಿ ಇಡೀ ಚುನಾವಣೆಯನ್ನು ಕುಮಾರಸ್ವಾಮಿ ತಮ್ಮ ಹೆಗಲಿಗೆ ಹಾಕಿಕೊಂಡು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಎರಡರಲ್ಲಿ ಒಂದು ಕಡೆ ಯದಾರೂ ಗೆಲುವು ಸಾಧಿಸಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಬೇಕೆಂದು ಅಪ್ಪ-ಮಗ ಛಲ ತೊಟ್ಟಿದ್ದಾರೆ. ಹೀಗಾಗಿ ಕದನ ಕುತೂಹಲ ಕೆರಳಿಸಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|