ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ! |
ಪ್ರಕಟಿಸಿದ ದಿನಾಂಕ : 2010-09-09
ಹೊಳೆ ದಾಟಲು ದೋಣಿ ಬಿಡಲಿಲ್ಲ ಎಂಬ ಕಾರಣಕ್ಕೆ ಇಲ್ಲಿ ತೂಗು ಸೇತುವೆಯೇ ನಿರ್ಮಾಣ ವಾಗಿದೆ.
ಸರಕಾರದ 1 ರೂ. ಬೀಳದೆ ರಚನೆ ಗೊಂಡಿರುವ ಈ ಸೇತುವೆಗೆ ಉಡುಪಿ ತಾಲೂಕು ಉಪ್ಪೂರು ಗ್ರಾಮ ಮತ್ತು 52 ನೇ ಹೇರೂರು ಗ್ರಾಮದ ಜನತೆ ಸಾಕ್ಷಿಯಾಗಿದ್ದಾರೆ.
ಸೇತುವೆ ಹಿಂದಿನ ಕತೆ
ಸುವರ್ಣ ನದಿಯ ಒಂದು ದಡದಲ್ಲಿ ಉಪ್ಪೂರು ಗ್ರಾಮವಿದ್ದರೆ, ಇನ್ನೊಂದು ದಡದಲ್ಲಿ 52 ನೇ ಹೇರೂರು ಗ್ರಾಮ ಇದೆ. ಉಪ್ಪೂರು ಗ್ರಾಮದ ಉಗ್ಗೆಳ್ಬೆಟ್ಟು ಮತ್ತು ಪಿಲಿಕಳದಲ್ಲಿ ಎರಡು ಬ್ರಹ್ಮ ಬೈದರ್ಕಳ ಗರಡಿಗಳಿವೆ. ಉಗ್ಗೆಳ್ಬೆಟ್ಟು ಗರಡಿಯಲ್ಲಿ ವರ್ಷಕ್ಕೆ ಎರಡು ಬಾರಿ, ಪಿಲಿಕಳದಲ್ಲಿ ಒಂದು ಬಾರಿ ಜಾತ್ರೆ ನಡೆಯುತ್ತದೆ. ಇದಕ್ಕೂ ಹೇರೂರು ಗ್ರಾಮದಲ್ಲಿರುವ ಕನ್ನರ್ತೋಟ ಸನಿಲ್ ಮೂಲಸ್ಥಾನಕ್ಕೂ ಸಂಬಂಧವಿದೆ. ಪ್ರತಿ ಬಾರಿ ಜಾತ್ರೆ ಸಮಯದಲ್ಲಿ ದೂರದ ಊರಿನಲ್ಲಿ ಇರುವ ಸ್ಥಳೀಯರು ಆಗಮಿಸುತ್ತಾರೆ. ಎರಡೂ ಗ್ರಾಮದವರೂ ಜಾತ್ರೆಯಲ್ಲಿ ಸಂಭ್ರಮದಲ್ಲಿ ಪಾಲ್ಗೊಳ್ಳು ತ್ತಾರೆ. ಎರಡೂ ಗ್ರಾಮದವರು ಆಚೀಚೆ ಹೋಗುವುದು ದೋಣಿ ಮೂಲಕವೇ. ದೋಣಿ ಇಲ್ಲದಿದ್ದರೆ ಸುಮಾರು 8 ಕಿಲೋಮೀಟರ್ ಸುತ್ತಿಕೊಂಡು ಬರಬೇಕಾಗುತ್ತದೆ.
2 ವರ್ಷದ ಹಿಂದೆ ಉಗ್ಗೆಳ್ಬೆಟ್ಟು ಗರಡಿ ಜಾತ್ರೆಯ ಸಮಯದಲ್ಲಿಯೇ ಇಲ್ಲಿ ಮರಳು ತೆಗೆಯುವವ ರಿಗೆ ಮತ್ತು ದೋಣಿಯವರಿಗೆ ಭಿನ್ನಾಭಿಪ್ರಾಯ ಉಂಟಾದ್ದರಿಂದ ನದಿಗೆ ದೋಣಿ ಇಳಿಸದೆ ದೋಣಿ ಯವರು ಪ್ರತಿಭಟನೆ ನಡೆಸಿದರು. ಇದರಿಂದ ತೊಂದರೆಗೀಡಾಗಿದ್ದು ಮಾತ್ರ ಜಾತ್ರೆಗೆ ಹೋಗುವ ವರು, ಜಾತ್ರೆಯಿಂದ ಬರುವವರು.
ಬೆಂಗಳೂರಿನಲ್ಲಿ ಜೆನಿತ್ ಡೈಮೇಕರ್ಸ್ ಪ್ರೈವೆಟ್ ಲಿಮಿಟೆಡ್ ನಡೆಸುವ ಕನ್ನರ್ತೋಟ ಸನಿಲ್ ಮನೆತನದ ಎ.ವಿಶ್ವನಾಥ ಸನಿಲ್ ಕೂಡಾ ಜಾತ್ರೆಗೆ ಬಂದಿದ್ದರು. ದೋಣಿಯವರ ಪ್ರತಿಭಟನೆ ಯಿಂದ ಜಾತ್ರೆಗೆ ಹೋಗುವವರಿಗೆ ತೊಂದರೆ ಉಂಟಾಗಿರುವುದನ್ನು ಕಂಡು ನೊಂದ ಅವರು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜಿಸಿದರು.
ತೂಗು ಸೇತುವೆ ನಿರ್ಮಿಸುವ ಬಗ್ಗೆ ಮನೆಯ ಹಿರಿಯರಲ್ಲಿ ಚರ್ಚಿಸಿದರು. ಕೆಲವೇ ದಿನಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ತೂಗು ಸೇತುವೆ ತಜ್ಞ ಸುಳ್ಯದ ಗಿರೀಶ್ ಭಾರಧ್ವಾಜ್ ಮತ್ತು ಬಳಗ ತೂಗು ಸೇತುವೆ ನಿರ್ಮಿಸಿಯೇ ಬಿಟ್ಟಿತು. ಎರಡೂ ಗ್ರಾಮದ ಜನತೆ, ಸ್ವಯಂ ಸೇವಾ ಸಂಘಗಳು ಈ ಕಾರ್ಯದಲ್ಲಿ ದುಡಿದರು.
18 ಲಕ್ಷ ರೂ. ವೆಚ್ಚ
ಉಡುಪಿಯಿಂದ 15 ಕಿಲೋಮೀಟರ್ ದೂರದಲ್ಲಿರುವ ಈ ತೂಗು ಸೇತುವೆಗೆ 18 ಲಕ್ಷ ರೂ. ವ್ಯಯವಾಗಿದೆ. ಯಾರಿಗೂ ಕೈಚಾಚದೆ ವಿಶ್ವನಾಥ ಸನಿಲ್ ಮತ್ತು ಕುಟುಂಬಸ್ಥರೇ ಈ ವೆಚ್ಚವನ್ನು ಭರಿಸಿದ್ದಾರೆ.
ಈ ಸೇತುವೆ 125 ಮೀಟರ್ ಉದ್ದ 2.5 ಅಡಿ ಅಗಲ ಇರುವ ಸೇತುವೆ 2008ರ ಏಪ್ರಿಲ್ನಿಂದ ಜನಪಯಣಕ್ಕೆ ಒದಗಿದೆ. ಇದರಲ್ಲಿ ಒಮ್ಮೆಗೆ 50 ಮಂದಿ ಚಲಿಸಬಹುದು. ಸೇತುವೆಯ ದೀರ್ಘ ಕಾಲಿನ ಬಾಳಿಕೆಗಾಗಿ ಒಮ್ಮೆಗೆ 50ಕ್ಕಿಂತ ಹೆಚ್ಚು ಮಂದಿ ಹೋಗುವುದನ್ನು ನಿರ್ಬಂಧಿಸಲಾಗಿದೆ.
ಸರಕಾರ ನಿರ್ಮಿಸುವುದಾಗಿದ್ದರೆ..
ಈ ಸೇತುವೆ ನಿರ್ಮಾಣಕ್ಕಾಗಿ ಸರಕಾರಕ್ಕೆ ಒಂದು ಮನವಿ ಕೂಡಾ ಸಲ್ಲಿಸಲಾಗಿಲ್ಲ. ಸರಕಾರ ನಿರ್ಮಿಸಬೇಕಿದ್ದರೆ ಕನಿಷ್ಠ ಐದು ವರ್ಷವಾದರೂ ಬೇಕಿತ್ತು. ಒಂದಷ್ಟು ಮೀಟಿಂಗ್ಗಳಾಗಿ ಜನಪ್ರತಿ ನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಅರ್ಪಿಸಿ. ಅವರನ್ನು ಒಪ್ಪಿಸಿ ಸೇತುವೆ ನಿರ್ಮಾಣವಾಗುವ ಹೊತ್ತಿಗೆ ಸ್ಥಳೀಯರು ಸುಸ್ತುಬಿದ್ದು ಹೋಗುತ್ತಿದ್ದರು. ಒಪ್ಪದಿದ್ದರೆ ಪ್ರತಿಭಟನೆ, ಧರಣಿ ಮಾಡಬೇಕಿ ತ್ತು. ಒಪ್ಪಿದರೂ ಅಂದಾಜು ವೆಚ್ಚ ತಯಾರಿಸಲು ಒಂದಷ್ಟು ಸಮಯ, ಬಳಿಕ ಟೆಂಡರ್ಗೆ ಒಂದ ಷ್ಟು ಸಮಯ. ಎಲ್ಲ ಸೇರಿ 5 ವರ್ಷದಲ್ಲಿ ಪೂರ್ಣಗೊಂಡರೆ ಅದೇ ಹೆಚ್ಚು. ಅಲ್ಲದೆ ಸರಕಾರ ನಿರ್ಮಿ ಸುವುದಾಗಿದ್ದಲ್ಲಿ ಈಗ ಖರ್ಚಾದ ಮೊತ್ತದ ಎರಡು ಪಟ್ಟಾದರೂ ಬೇಕಿತ್ತು.
ಈ ಸೇತುವೆಯಿಂದ ಶಾಲಾ ಕಾಲೇಜು ಮಕ್ಕಳಿಗೆ, ವಿವಿಧೆಡೆ ಕೆಲಸಕ್ಕೆ ಹೋಗುವವರಿಗೆ, ಮೀನು ಗಾರರಿಗೆ ಬಹಳ ಉಪಯೋಗವಾಗಿದೆ. ಮಳೆ ಜಾಸ್ತಿ ಬಂದರೆ ದೋಣಿ ಬಿಡಲಾಗುವುದಿಲ್ಲ. ಆಗ 8 ಕಿಲೋಮೀಟರ್ ಹೆಚ್ಚಿಗೆ ಸುತ್ತಬೇಕು. ರಿಕ್ಷಾ ಮಾಡಿಕೊಂಡು ಹೋಗುವುದಾದರೆ 70-80 ರೂ. ನೀಡಬೇಕಿತ್ತು. ಅದೆಲ್ಲದಕ್ಕೂ ಶಾಶ್ವತ ಪರಿಹಾರ ದೊರಕಿದೆ. ಶಕುಂತಳಾ ಕನ್ನಾರ್ತೋಟ ಸನಿಲ್ ಮನೆತನದ ಸದಸ್ಯೆ.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-09-09 00:00:00
|
|
| RAGHAV, ABU DHABI | 2010-09-10 | | Heartly thanks and good job you have done. God bless you and your family. |
| F.M.shabbir sagar, sagar | 2010-09-09 | | GOOD JOB BST OF LUCK |
|