ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ |
ಪ್ರಕಟಿಸಿದ ದಿನಾಂಕ : 2010-09-09
ಬೆಂಗಳೂರು, ಸೆ.8: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ವರದಿ ನೀಡಿದ ರೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ವಿರುದ್ಧ ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ರಾಜ್ಯ ಪಾಲ ಎಚ್. ಆರ್. ಭಾರದ್ವಾಜ್ ಕೆಂಡ ಮಂಡಲವಾಗಿದ್ದಾರೆ.
ಕಳಂಕಿತ ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಗಮನ ಬೇರೆಡೆಗೆ ಸೆಳೆಯಲು ಯಡಿಯೂರಪ್ಪ ವಿನಾ ಕಾರಣ ತನ್ನ ಮೇಲೆ ಆರೋಪ ಮಾಡಿ ದ್ದಾರೆ. ಅವರು ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ರಾಜ್ಯಪಾಲರು ಮುಖ್ಯ ಮಂತ್ರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿ ಸಿದಂತೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ರ ಹೆಸರನ್ನು ಕೈಬಿಟ್ಟಿದ್ದಾರೆ. ಆದರೆ, ಯಡಿಯೂರಪ್ಪ ತನ್ನ ಮೇಲೆ ನಿರಾಧಾರ ಆರೋಪ ಮಾಡಿರುವುದಕ್ಕಾಗಿ ಬಹಿರಂಗ ಕ್ಷಮೆ ಕೋರಬೇಕು ಎಂದು ಭಾರದ್ವಾಜ್ ಪತ್ರದಲ್ಲಿ ಆಗ್ರಹಿಸಿದ್ದಾರೆ. ಇದರಿಂದಾಗಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವಿವಾ ದ ಮತ್ತಷ್ಟು ಕುತೂಹಲ ಕೆರಳಿಸಿದೆ.
ಮತ್ತೆ ಅಕ್ರಮ ಗಣಿಗಾರಿಕೆಗೆ ಅರ್ಜಿ ರಾಜ್ಯದಲ್ಲಿ ಗಣಿಗಾರಿಕೆಗೆ ಅವಕಾಶ ಕೋರಿ ಸುಮಾರು 1200 ಅರ್ಜಿಗಳು ಬಂದಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗಣಿಗಾರಿಕೆಗೆ ಅವಕಾಶ ಕೋರಿ 1200 ಅರ್ಜಿಗಳು ಬಂದಿದ್ದು, ಈ ಪೈಕಿ ಹೂಡಿಕೆದಾರರ ಸಮಾವೇಶದಲ್ಲಿ ಬಂಡವಾಳ ಹೂಡಿರುವ ಸಚಿವ ಜನಾರ್ದನ ರೆಡ್ಡಿ ಒಡೆತನದ ಬ್ರಾಹ್ಮಿಣಿ ಕಂಪೆನಿ ಸೇರಿದಂತೆ ವಿವಿಧ ಉದ್ಯಮಿಗಳ 50 ಅರ್ಜಿ ಗಳು ಸೇರಿವೆ ಎಂದರು.
ಎಲ್ಲ ಅರ್ಜಿಗಳನ್ನು ಗಣಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೆ ಕೇಂದ್ರದ ಸಮ್ಮತಿಗೆ ಕಳುಹಿಸಲಾಗುವುದು. ಅದಿರು ರಫ್ತನ್ನು ನಿಷೇಧಿಸಿರುವ ರಾಜ್ಯ ಸರಕಾರವು ಮೌಲ್ಯ ವರ್ಧಿತ ಉದ್ದೇಶಗಳಿಗಾಗಿ ಮಾತ್ರ ಗಣಿಗಾರಿಕೆಗೆ ಅವಕಾಶ ನೀಡಲಿದೆ ಎಂದು ಅವರು ತಿಳಿಸಿ ದರು. ಕೈಗಾರಿಕಾಭಿವೃದ್ಧಿ ಆಯುಕ್ತ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕ ಡಾ.ರಾಜ್ಕುಮಾರ್ ಖತ್ರಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ. ಬಳಿಗಾರ ಉಪಸ್ಥಿತರಿದ್ದರು.
ಬಹಿರಂಗ ಕ್ಷಮೆ ಕೇಳಿ : ಮುಖ್ಯಮಂತ್ರಿಗೆ ರಾಜ್ಯಪಾಲರ ತಾಕೀತು; ನಿಮ್ಮ ಮೇಲೆ ಆರೋಪ ಮಾಡಿಲ್ಲ: ಸಿಎಂ
ಬೆಂಗಳೂರು, ಸೆ.೮ : ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಮಾಡಿದ ಆರೋಪದಿಂದ ಕ್ರುದ್ಧರಾಗಿರುವ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಈ ಬಗ್ಗೆ ಬಹಿರಂಗ ಕ್ಷಮೆಯಾಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಾಕೀತು ಮಾಡಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಆರೋಪ ಹಿಂದಿನ ರಾಜ್ಯ ಪಾಲರ ಕುರಿತದ್ದೇ ಹೊರತು ಇಂದಿನ ರಾಜ್ಯಪಾಲರ ವಿರುದ್ಧವಲ್ಲ ಎಂದು ಸಮಜಾಯಿಷಿ ನೀಡಿ ರುವ ಪ್ರಕರಣ ಬುಧವಾರ ನಡೆದಿದೆ.
ಗುಲ್ಬರ್ಗದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಅವರಿಂದ ರು. ೨೩ ಕೋಟಿ ವಸೂಲಿ ಮಾಡಬೇಕು ಎಂಬ ಲೋಕಾಯುಕ್ತರ ಶಿಫಾರಸನ್ನು ರಾಜ್ಯಪಾಲರು ಕಡೆಗಣಿಸಿದ್ದು, ಧರ್ಮಸಿಂಗ್ ಅವರನ್ನು ರಕ್ಷಿಸಲು ಯತ್ನಿಸಿದ್ದರು ಎಂದು ಆರೋಪಿ ಸಿದ್ದರು.
ಈ ಬಗ್ಗೆ ಮಾಧ್ಯಮಗಳ ವರದಿ ಕಂಡ ನಂತರ ಕ್ರುದ್ದರಾದ ರಾಜ್ಯಪಾಲ ಭಾರದ್ವಾಜ್ ಅವರು ಬುಧವಾರ ನೇರವಾಗಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ಲೋಕಾಯುಕ್ತರ ಶಿಫಾರಸು ತಮ್ಮ ಅವಧಿಯಲ್ಲಿ ಬಂದಿರಲಿಲ್ಲ. ಇದನ್ನು ತಿಳಿದಿದ್ದೂ ವಿನಾಕಾರಣ ತಮ್ಮ ತೇಜೋವಧೆ ಮಾಡುವಂ ತಹ ಹಾಗೂ ಅಕ್ರಮ ಗಣಿಗಾರಿಕೆ ವಿವಾದದಲ್ಲಿ ಅನಗತ್ಯವಾಗಿ ರಾಜಭವನವನ್ನು ಎಳೆದು ತಂದಿ ರುವ ನಿಮ್ಮ (ಯಡಿಯೂರಪ್ಪ) ಧೋರಣೆಯಿಂದ ತೀವ್ರ ನೋವಾಗಿದ್ದು, ನೀವು ಬಹಿರಂಗ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ಅಕ್ರಮ ಗಣಿಗಾರಿಕೆಯೂ ಸೇರಿದಂತೆ ನಿಮ್ಮ ಸಂಪುಟದ ಕೆಲ ಸದಸ್ಯರು ತೀವ್ರ ಭ್ರಷ್ಟಾ ಚಾರದಲ್ಲಿ ತೊಡಗಿದ್ದರೂ, ನಿರ್ಲಕ್ಷಿಸಿ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ವಿನಾಕಾರಣ ರಾಜಭವನ ಹಾಗೂ ನನ್ನ ವಿರುದ್ಧ ಆರೋಪ ಮಾಡಿರುವುದು ಮತ್ತು ಬಳಸಿರುವ ಭಾಷೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ.
ಹೀಗಾಗಿ ಕೂಡಲೇ ಈ ಬಗ್ಗೆ ಬಹಿರಂಗ ಕ್ಷಮಾಯಾಚನೆಯನ್ನು ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
ಲೋಕಾಯುಕ್ತರು ಧರ್ಮಸಿಂಗ್ ವಿರುದ್ಧ ಮಾಡಿದ ಶಿಫಾರಸನ್ನು ಹಿಂದಿನ ರಾಜ್ಯಪಾಲರು ೨೦೦೯ರ ಜೂ. ೨೩ರಂದೇ ವಿಲೇವಾರಿ ಮಾಡಿದ್ದರು. ನಾನು ೨೦೦೯ರ ಜೂ. ೨೦ರಂದು ರಾಜ್ಯಪಾಲನಾಗಿ ಅಧಿಕಾರ ವಹಿಸಿಕೊಂಡಿರುವೆ. ಈ ವಿಷಯ ಗೊತ್ತಿದ್ದೂ ಇಂತಹ ಗಂಭೀರ ಆರೋಪ ಮಾಡಿರುವು ದು ಅಕ್ಷಮ್ಯ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಕಾಂಗ್ರೆಸ್ಸಿಗ ಕೊಂಡಯ್ಯ ಅವರು ತಮಗೆ ಸಲ್ಲಿಸಿದ ಮನವಿಯಂತೆ ಸಚಿವ ಸಂಪುಟದ ಮೂವರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸುವ ಕುರಿತು ೨೦೧೦ರ ಫೆ. ೨ರಂದು ನಾನು (ರಾಜ್ಯಪಾಲರು) ಬರೆದ ಪತ್ರಕ್ಕೆ ನಿಮ್ಮಿಂದ ಏಳು ತಿಂಗಳಾದರೂ ಉತ್ತರ ಬಂದಿಲ್ಲ. ಅದೇ ರೀತಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಬಗ್ಗೆ ಮನವಿ ನೀಡಿದ ನಂತರ ನಿಮ್ಮ ಪತ್ರಿಕ್ರಿಯೆ ಕೇಳಿ ಏ. ೧ ರಂದು ಬರೆದ ಪತ್ರಕ್ಕೂ ನೀವು ಉತ್ತರಿಸಿಲ್ಲ. ಈ ನಡುವೆ ರಾಜಕೀಯ ಲಾಭಕ್ಕಾಗಿ ರಾಜಭವನದ ವಿರುದ್ಧ ಖುದ್ದು ನೀವೇ ಆರೋ ಪ ಮಾಡುವ ಮಟ್ಟಕ್ಕೆ ಇಳಿದಿದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಹಿಂದಿನ ರಾಜ್ಯಪಾಲರ ಕುರಿತು ಆರೋಪ- ಸಿಎಂ ಸ್ಪಷ್ಟನೆ: ಈ ಪತ್ರಕ್ಕೆ ಕೂಡಲೇ ರಾಜ್ಯ ಪಾಲರಿಗೆ ಪ್ರತಿ ಪತ್ರವನ್ನು ಬರೆದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಲ್ಬರ್ಗದಲ್ಲಿ ತಾವು ಮಾಡಿದ ಆರೋಪ ಹಿಂದಿನ ರಾಜ್ಯಪಾಲರ ಕುರಿತಾಗಿತ್ತೇ ಹೊರತು ತಮ್ಮ (ಇಂದಿನ ರಾಜ್ಯಪಾಲರ) ವಿರುದ್ಧ ಅಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಅಲ್ಲದೆ, ತಮ್ಮ ಆರೋಪದ ಬಗ್ಗೆ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿದ್ದೇ ಈ ಗೊಂದಲಕ್ಕೆ ಕಾರಣವಾಗಿದ್ದು, ಇಂದಿನ ರಾಜ್ಯಪಾಲರ ಬಗ್ಗೆ ತಮಗೆ ಅಪಾರ ಗೌರವವಿದೆ. ನಾನು ಯಾವ ಸಂದರ್ಭದಲ್ಲೂ ಯಾವ ಕಾರಣಕ್ಕೂ ಗೌರವಾನ್ವಿತ ರಾಜ್ಯಪಾಲರ ವಿರುದ್ಧ ವೈಯಕ್ತಿಕ ಆರೋಪ ಮಾಡಿಲ್ಲ. ಹೀಗಾಗಿ ಮಾಧ್ಯಮ ವರದಿಗಳಿಂದ ಉಂಟಾಗಿರುವ ತಪ್ಪು ಗ್ರಹಿಕೆ ಹಾಗೂ ಗೊಂದಲ ಗಳನ್ನು ಈ ಮೂಲಕ (ಪತ್ರದ ಮೂಲಕ) ನಿವಾರಿಸಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಇಷ್ಟಕ್ಕೂ ಗುಲ್ಬರ್ಗದಲ್ಲಿ ತಾವು ಲೋಕಾಯುಕ್ತರ ಶಿಫಾರಸನ್ನು ಕೈ ಬಿಡುವ ಹಿಂದಿನ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿದ್ದೆನೇ ಹೊರತು ಯಾವ ಆರೋಪ ಮಾಡಿರಲಿಲ್ಲ ಎಂದೂ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|