ಡಿವೈಎಫ್ಐ ನೇತೃತ್ವದಲ್ಲಿ ಏರ್ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್ |
ಪ್ರಕಟಿಸಿದ ದಿನಾಂಕ : 2010-09-09
ನ್ಯಾಯ ದೊರೆಯದಿದ್ದರೆ ‘ಸಂಸತ್ ಚಲೋ’: ಪಿ.ಕರುಣಾಕರನ್
ಮಂಗಳೂರು, ಸೆ.8: ಬಜ್ಪೆ ವಿಮಾನ ದುರಂತ ದಲ್ಲಿ ಮೃತಪಟ್ಟ ಎಲ್ಲ 158 ಮಂದಿಯ ವಾರಿಸು ದಾರರಿಗೆ ಕೇಂದ್ರ ವಿಮಾನ ಯಾನ ಸಚಿವರು ಈಗಾಗಲೆ ನೀಡಿರುವ ಭರವಸೆಯಂತೆ ಕನಿಷ್ಠ 76 ಲಕ್ಷ ರೂ.ಗಳ ಪರಿಹಾರವನ್ನು ಏರ್ ಇಂಡಿಯಾ ತಕ್ಷಣ ನೀಡ ಬೇಕು. ಇಲ್ಲವಾದಲ್ಲಿ ಪಾರ್ಲಿಮೆಂಟ್ ಚಲೋ ಚಳವಳಿ ನಡೆಸಲಾಗುವುದು ಎಂದು ಕಾಸರಗೋಡು ಸಂಸದ ಪಿ. ಕರುಣಾಕರನ್ ಎಚ್ಚರಿಸಿದ್ದಾರೆ.
ಸಂತ್ರಸ್ತರ ವಾರಿಸುದಾರರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಸಂತ್ರಸ್ತರ ಕುಟುಂಬಸ್ಥರು ಡಿವೈಎಫ್ಐ ಕೇರಳ ಹಾಗೂ ದ.ಕ. ಜಿಲ್ಲಾ ಘಟಕದ ನೇತೃತ್ವದಲ್ಲಿ ಇಂದು ಹಮ್ಮಿಕೊಂಡಿದ್ದ ನಗರದ ಲಾಲ್ಬಾಗ್ ನಲ್ಲಿರುವ ಏರ್ ಇಂಡಿಯಾ ಕಚೇರಿ ಚಲೋ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತಾರತಮ್ಯ: ವಿಮಾನ ದುರಂತದಲ್ಲಿ ಮಡಿದ ಹೆಚ್ಚಿನವರು ಕೆಳ ಮಧ್ಯಮ ಮತ್ತು ಕಡಿಮೆ ಆದಾಯದ ವರ್ಗಕ್ಕೆ ಸೇರಿದವರು. ಮಡಿದವ ರಲ್ಲಿ ಹೆಚ್ಚಿನವರು ದುಬೈಯಲ್ಲಿ ಸಣ್ಣಪುಟ್ಟ ನೌಕರಿ ಯಲ್ಲಿದ್ದವರು. ಅವರ ಉದ್ಯೋಗ ಪ್ರಮಾಣ ಪತ್ರವನ್ನು ನೀಡ ಬೇಕೆಂದು ಇದೀಗ ಪರಿಹಾರ ನೀಡುತ್ತಿರುವ ಸಂಸ್ಥೆ ಸತಾಯಿಸುತ್ತಿದೆ. ಆದರೆ ಅಲ್ಲಿ ಕಾರ್ಮಿಕ ಕಾನೂನು ಆಗಲಿ, ಕಾರ್ಮಿಕ ಅಧಿಕಾರಿ ಆಗಲಿ ಇಲ್ಲ. ಹಾಗಿರುವಾಗ ಉದ್ಯೋಗ ಪ್ರಮಾಣ ಪತ್ರ ತರುವುದು ಅಸಾಧ್ಯ. ಆದರೆ ಮೋಂಟ್ರಿಯಲ್ ಒಪ್ಪಂದದ ಪ್ರಕಾರ ಮಾನವೀಯ ನೆಲೆಯಲ್ಲಿ ಏರ್ ಇಂಡಿಯಾವು ಸಂತ್ರಸ್ತರಿಗೆ ಕನಿಷ್ಠ 76 ಲಕ್ಷ ರೂ.ಗಳ ಪರಿಹಾರ ನೀಡಬೇಕಾಗಿದೆ.
ಆದರೆ ಇನ್ಶೂರೆನ್ಸ್ ಕಂಪೆನಿಗಳ ಕೂಟದ ನೇತೃತ್ವ ವಹಿಸಿರುವ ರಿಲಾಯೆನ್ಸ್ ಮತ್ತು ಏರ್ ಇಂಡಿಯಾ ಜೊತೆ ಸೇರಿಕೊಂಡು ಸಂತ್ರಸ್ತ ಕುಟುಂಬಗಳಿಗೆ ವಂಚಿಸುತ್ತಿವೆ. ಮುಲ್ಲಾ ಆಯಂಡ್ ಮುಲ್ಲಾ ಸಂಸ್ಥೆಯೂ ಸಂತ್ರಸ್ತರ ಕುಟುಂಬಸ್ಥರ ಜೊತೆ ಅನಾಗರಿಕ ವಾಗಿ ವರ್ತಿಸುತ್ತಿದೆ. ಈ ಬಗ್ಗೆ ಸಂಸತ್ತಿ ನಲ್ಲಿಯೂ ಈಗಾಗಲೆ ಧ್ವನಿ ಎತ್ತಲಾಗಿದೆ. ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರೆಯದಿದ್ದರೆ ಮುಂದೆ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಕರುಣಾಕರನ್ ತಿಳಿಸಿದರು.
ಮಾನವೀಯ ನೆಲೆಯಲ್ಲಿ ಪರಿಹಾರ ನೀಡಿ: ಡಿವೈಎಫ್ಐ ಕಾಸರಗೋಡು ಘಟಕದ ನಾಯಕ ಡಿವೈಎಫ್ಐ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್, ಏರ್ ಇಂಡಿಯಾವು ಮಾನವೀಯ ನೆಲೆಯಲ್ಲಿ ಮೋಂಟ್ರಿಯಲ್ ಒಪ್ಪಂದದಂತೆ ನೀಡಬೇಕಾದ ಕನಿಷ್ಠ ಪರಿಹಾರವನ್ನು ತಕ್ಷಣ ಸಂತ್ರಸ್ತ ಕುಟುಂಬ ಗಳಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.
ಆದಾಯದ ಆಧಾರದಲ್ಲಿ ಟಿಕೆಟ್ ನೀಡಲಾಗಿತ್ತೇ? ಸಿಪಿಎಂನ ನಾಯಕ ಬಿ.ಮಾಧವ ಮಾತ ನಾಡಿ, ಏರ್ ಇಂಡಿಯಾವು ಪ್ರಯಾಣದ ಸಂದರ್ಭ ಆದಾಯದ ಆಧಾರದಲ್ಲಿ ಟಿಕೆಟ್ ನೀಡಿತ್ತೇ ಎಂದು ಪ್ರಶ್ನಿಸಿದರು, ಏರ್ ಇಂಡಿಯಾವು ಪ್ರಸ್ತುತ ಪರಿಹಾರ ವಿತರಣೆ ಕಾರ್ಯವನ್ನು ಸ್ಟಾರ್ ಹೊಟೇಲ್ ಗಳಲ್ಲಿ ನಡೆಸುತ್ತಿದೆ.
ಇಲ್ಲಿ ಇಂಗ್ಲಿಷ್ ಭಾಷೆ ಅರಿಯದವನು ಏನೂ ಮಾಡುವಂತಿಲ್ಲ. ಕನ್ನಡ, ಮಲಯಾಳಂ ಮಾತ್ರ ತಿಳಿದಿರುವ ಸಂತ್ರಸ್ತರ ವಾರಿಸು ದಾರರನ್ನು ಅಧಿಕಾರಿಗಳು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಪರಿಹಾರ ವಿತರಣೆ ಕಾರ್ಯ ನ್ಯಾಯಬದ್ಧವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರಕಾರಿ ಕಚೇರಿಗಳಲ್ಲಿ ನಡೆಯಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಕೇರಳ ರಾಜ್ಯ ಕಾರ್ಯದರ್ಶಿ ರಾಜಪ್ಪ, ಕೋಶಾಧಿಕಾರಿ ರಮೇಶ್, ಜಿಲ್ಲಾಧ್ಯಕ್ಷ ಬಾಬು ಅಬ್ರಹಾಂ, ಜಿಲ್ಲಾ ಕಾರ್ಯದರ್ಶಿ ಅಜಿತ್ಕುಮಾರ್, ಗುರುಚರಣ್, ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ ದಯಾನಂದ ಶೆಟ್ಟಿ, ಸಂತ್ರಸ್ತರ ಕುಟುಂಬಸ್ಥರ ನಾಯಕರಾದ ಮುಹಮ್ಮದ್ ಬ್ಯಾರಿ, ನಾರಾಯಣ್, ಮುಹಮ್ಮದ್ ಬಶೀರ್ ಮತ್ತಿತರರು ಉಪಸ್ಥಿತರಿದ್ದರು.
ಈ ಕುರಿತು ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಲಾಲ್ಬಾಗ್ನ ಏರ್ ಇಂಡಿಯಾ ಕಚೇರಿಯ ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕ ಅರುಣ್ ಕುಮಾರ್, ವಿಷಯವನ್ನು ಆಡಳಿತ ವರ್ಗಕ್ಕೆ ತಲುಪಿಸುವುದಾಗಿ ತಿಳಿಸಿದರು.
ಡಿವೈಎಫ್ಐ ಕಾಸರಗೋಡು ಜಿಲ್ಲಾ ಅಧ್ಯಕ್ಷ ಸಾಬು ಅಬ್ರಹಾಂ ಅವರು ಅಧ್ಯಕ್ಷತೆ ವಹಿಸಿದ್ದರು. ಬೇಡಿಕೆ ಈಡೇರುವ ತನಕ ಹೋರಾಟ ನಡೆಯಲಿದೆ ಎಂದವರು ತಿಳಿಸಿದರು.
ಡಿವೈಎಫ್ಐ ಅಖೀಲ ಭಾರತ ಉಪಾಧ್ಯಕ್ಷ ಟಿ. ವಿ. ರಾಜೇಶ್, ಕೇಂದ್ರ ಸಮಿತಿ ಸದಸ್ಯ ಪಿ.ವಿ. ರಮೇಶನ್, ಸಿಪಿಐ (ಎಂ) ದ. ಕನ್ನಡ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ ಮುಂತಾದವರು ಮಾತನಾಡಿದರು.
ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಸ್ತಾವನೆಗೈದರು. ಕಾರ್ಯದರ್ಶಿ ದಯಾನಂದ ಶೆಟ್ಟಿ, ಮುಖಂಡರಾದ ಬಿ. ಕೆ. ಇಮಿ¤ಯಾಜ್, ಮಹಾಬಲ, ಗುರುಚರಣ್ ರಾವ್, ವಿಜಯ ಕುಮಾರ್ ಹೆಗ್ಡೆ, ಪ್ರಮೀಳಾ ಕೆ. ಮುಂತಾದವರು ಉಪಸ್ಥಿತರಿದ್ದರು.
ನಗರದ ಜೈಲ್ ರೋಡ್ನಿಂದ ಏರ್ ಇಂಡಿಯಾ ಕಚೇರಿ ತನಕ ಮೆರವಣಿಗೆ ನಡೆಯಿತು. ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಡಿವೈಎಫ್ಐ ಕಾರ್ಯಕರ್ತರು ಹಾಗೂ ಸಂತ್ರಸ್ತ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಸಂಸದರ ನೇತೃತ್ವದ ನಿಯೋಗ ಏರ್ ಇಂಡಿಯಾ ಅಧಿ ಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|