ತಮಿಳು ಹಾಗೂ ಕನ್ನಡ ಚಿತ್ರನಟ ಮುರಳಿ ಇನ್ನಿಲ್ಲ; ಸಹ ನಟ ನಟಿಯರಿಂದ ಶ್ರದ್ಧಾಂಜಲಿ |
ಪ್ರಕಟಿಸಿದ ದಿನಾಂಕ : 2010-09-08
ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಮಿಂಚಿದ ನಟ ಮುರಳಿ (46) ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಿನ್ನೆ ತಡರಾತ್ರಿ ಮಗಳ ನಿಶ್ಚಿತಾರ್ಥ ಮುಗಿಸಿ ಮಲಗಿದ್ದ ಮುರಳಿ ಮತ್ತೆ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ. ರಾತ್ರಿ ಊಟ ಮುಗಿಸಿ ತನ್ನ ಕೊಠಡಿಯಲ್ಲಿ ಮಲಗಿದ್ದ ನಟ ಮುರಳಿ ಬೆಳಗ್ಗೆ ಎಷ್ಟು ಬೆಳಗಾದರೂ ಏಳದ್ದನ್ನು ನೋಡಿ ಮನೆಯವರು ಎಬ್ಬಿಸಲು ಹೋದಾಗ ಅವರು ತೀರಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಇವರು ಪತ್ನಿ ಶೋಭಾ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.


ಕನ್ನಡದಲ್ಲಿ ನಟಿ ತಾರಾ ಅವರ ಮೊದಲ ಚಿತ್ರದ ಹೀರೋ ಆಗಿದ್ದವರು ಇದೇ ಮುರಳಿ. ಅಜಯ್ ವಿಜಯ್, ಪ್ರೇಮ ಪರ್ವ, ಪ್ರೇಮ ಪ್ರೇಮ ಪ್ರೇಮ ಮತ್ತಿತರ ಹಲವು ಚಿತ್ರಗಳಲ್ಲಿ ನಟಿಸಿದ ಮುರಳಿ ಕನ್ನಡಕ್ಕಿಂತ ಹೆಚ್ಚು ಜನಪ್ರಿಯರಾಗಿದ್ದು ತಮಿಳಿನಲ್ಲಿ. 'ಹೀರೋ ಹೀರೋ ಹೀರೋ... ನಾನೇ ನಾನೇ ನಾನೇ...' ಅನ್ನೋ ಹಾಡು ಬಹುತೇಕರು ಕೇಳಿರಬಹುದು. ಇಂಥ ಹಲವು ಜನಪ್ರಿಯ ಹಾಡುಗಳಲ್ಲಿ ಹೆಜ್ಜೆ ಹಾಕಿದರೂ, ಕನ್ನಡದಲ್ಲಿ ಹೇಳಿಕೊಳ್ಳುವಂಥ ಅವಕಾಶ ಸಿಗಲಿಲ್ಲ. ಅದಕ್ಕಾಗಿಯೋ ಏನೋ, ಅದೇ ಸಮಯಕ್ಕೆ ತಮಿಳಿಂದ ಬಂದ ಅವಕಾಶಕ್ಕೆ ಮುರಳಿ ಬೇಡವೆನ್ನಲಿಲ್ಲ. ತಮಿಳಿನಲ್ಲಿ ಅದೃಷ್ಟವೂ ಕೈ ಹಿಡಿಯಿತು. ನಂತರ ಚೆನ್ನೈನಲ್ಲಿಯೇ ನೆಲೆಸಿ ತಮಿಳು ಚಿತ್ರಗಳಲ್ಲಿ ಈಗಿನವರೆಗೂ ನಟಿಸಿಕೊಂಡಿದ್ದರು.
50ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯಕ್ಕಾಗಿ ತಮಿಳು ನಾಡು ರಾಜ್ಯ ಸರ್ಕಾರದ ಪ್ರಶಸ್ತಿಯನ್ನೂ ಪಡೆದವರು.

ಪತ್ರಿಕಾಗೋಷ್ಠಿಯಲ್ಲಿ ಮಗ ಅಥರ್ವ ಹಾಗೂ ಅಪ್ಪ ಸಿದ್ಧಲಿಂಗಯ್ಯ ಜೊತೆಗೆ ನಟ ಮುರಳಿ

ಡಾ.ರಾಜ್ಕುಮಾರ್, ಭಾರತಿ ಅಭಿನಯದ ಬಂಗಾರದ ಮನುಷ್ಯ ಎಂಬ ಅಭೂತಪೂರ್ವ ಚಿತ್ರ ನೀಡಿದ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಪುತ್ರರಾದ ಮುರಳಿ ಅಪ್ಪಟ ಕನ್ನಡಿಗರು. ಇತ್ತೀಚೆಗಷ್ಟೇ ಮುರಳಿ ತಮ್ಮ ಮಗನನ್ನೂ ಚಿತ್ರರಂಗಕ್ಕೆ ತರುವ ಪ್ರಯತ್ನ ಮಾಡಿದ್ದರು. ಬಾನ ಕಾತಾಡಿ ಎಂಬ ತಮಿಳು ಚಿತ್ರದಲ್ಲಿ ತಮ್ಮ ಪುತ್ರ ಅಥರ್ವರನ್ನು ನಾಯಕ ನಟನನ್ನಾಗಿ ಪರಿಚಯಿಸಿದ್ದರು. ಜೊತೆಗೆ ಈ ತಮಿಳು ಚಿತ್ರದಲ್ಲಿ ಮಗನನ್ನು ಪರಿಚಯಿಸುತ್ತಿರುವ ಖುಷಿಯಲ್ಲೇ ಈಗ್ಗೆ ತಒಂದು ತಿಂಗಳ ಹಿಂದಷ್ಟೇ, ಬೆಂಗಳೂರಿ ನಲ್ಲೂ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೆ ತಮ್ಮ ಮಗನನ್ನು ಪರಿಚಯಿಸಿದ್ದರು. ಆ ಮೂಲಕ ಅಥರ್ವನಿಗೆ ಮೊದಲು ತಮಿಳಿ ನಲ್ಲಿ ಅವಕಾಶ ಸಿಕ್ಕಿದ್ದು, ಕನ್ನಡದಲ್ಲೂ ಆತ ನಟಿಸುವುದನ್ನು ನೋಡಬೇಕೆಂಬುದೇ ನನಗಾಸೆ ಎಂದು ಮುರಳಿ ತನ್ನ ಆಸೆಯನ್ನು ಬೆಂಗಳೂರಿನ ಪತ್ರಕರ್ತರ ಜೊತೆ ಹಂಚಿ ಕೊಂಡಿದ್ದರು. ಮಗ ಅಥರ್ವ ಚೆನ್ನೈನಲ್ಲೇ ಬೆಳೆದರೂ ಕೂಡಾ ಅಪ್ಪಟ ಕನ್ನಡದಲ್ಲೇ ಪತ್ರಕರ್ತರ ಜೊತೆ ಮಾತನಾಡಿದ್ದರು.
ನನಗೆ ಕನ್ನಡದಲ್ಲಿ ಅವಕಾಶ ಕಡಿಮೆಯಾಯಿತು. ಈಗಲೂ ಕನ್ನಡದಲ್ಲಿ ನಟಿಸುವ ಆಸೆಯಿದೆ. ನನ್ನ ಮಗನಾದರೂ ಕನ್ನಡ ನಟ ನಾಗುವುದನ್ನು ನೋಡುವ ಆಸೆ ನನ್ನದು. ಆತನಿಗೆ ನೀವು ಪ್ರೋತ್ಸಾಹ ನೀಡಬೇಕು ಎಂದು ಮುರಳಿ ಹೇಳಿದ್ದರು. ಆದರೆ ಮಗನ ಮೊದಲ ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಮುರಳಿ ಬರಲಾಗದ ಲೋಕಕ್ಕೆ ತೆರಳಿದ್ದಾರೆ. ಕನಸು ನನಸಾಗುವ ಮುನ್ನವೇ ಅವರು ಮರೆಯಾಗಿದ್ದಾರೆ. ತಮಿಳು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಅವರ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದು, ಶೋಕ ವ್ಯಕ್ತಪಡಿಸಿದ್ದಾರೆ.

ಮಗ ಅಥರ್ವ
ಅಪ್ಪನ ಸಾವು ನಿಜಕ್ಕೂ ಆಘಾತ ತಂದಿದೆ. ನಿನ್ನೆಯಷ್ಟೆ ಎಲ್ಲರೂ ನಾವು ಜೊತೆಗೆ ಕೂತು ಎಷ್ಟೋ ಹೊತ್ತು ಮಾತನಾಡಿದ್ದೆವು. ಆದರೆ ಮಲಗಿದವರು ಏಳಲೇ ಇಲ್ಲ. ನನಗೆ ನಂಬಲೇ ಆಗುತ್ತಿಲ್ಲ. ನಮ್ಮ ಮನೆಯ ಪ್ರತಿಯೊಂದು ವಿಚಾರವನ್ನು ನಿರ್ವಹಿಸುತ್ತಿ ದ್ದುದು ಅವರೇ. ಹಾಗಾಗಿ ಮುಂದೆ ಹೇಗೆ ಎಂಬುದೇ ನಮಗೆ ತಿಳಿಯುತ್ತಿಲ್ಲ ಎಂದು ಮಗ ಅಥರ್ವ ಕಂಬನಿ ಮಿಡಿದಿದ್ದಾರೆ.
ವರದಿಯ ವಿವರಗಳು |
 |
ಕೃಪೆ : WEB DUNIYA ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|