ಸಾಹಿತ್ಯ ಪರಿಷತ್ಗೂ ಅವಮಾನ : ಜವಾಬ್ದಾರಿ ಮರೆತ ಅಕ್ಕ : ತೀವ್ರ ಖಂಡನೆ |
ಪ್ರಕಟಿಸಿದ ದಿನಾಂಕ : 2010-09-08
ಅಮೆರಿಕದಲ್ಲಿ ಆಯೋಜಿಸಿದ ಅಕ್ಕ ಸಮ್ಮೇಳನಕ್ಕೆ ನಾಡಿನಿಂದ ತೆರಳಿರುವ ಕಲಾವಿದರು ಊಟಕ್ಕೂ ಪರದಾಡುವಂತಾಗಿರುವುದು ಬೇಸರದ ವಿಚಾರ. ಕಲಾವಿದರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಆಯೋಜಕರ ಜವಾಬ್ದಾರಿ
ಹಾಸನ: ‘ಅಮೆರಿಕದಲ್ಲಿ ಆಯೋಜಿಸಿದ ‘ಅಕ್ಕ’ ಸಮ್ಮೇಳನಕ್ಕೆ ನಾಡಿನಿಂದ ತೆರಳಿರುವ ಕಲಾವಿದರು ಊಟಕ್ಕೂ ಪರದಾಡು ವಂತಾಗಿರುವುದು ಬೇಸರದ ವಿಚಾರ. ಕಲಾವಿದರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಆಯೋಜಕರ ಜವಾಬ್ದಾರಿ‘ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಹೇಳಿದರು.
ವಚನ ಸಾಹಿತ್ಯ ಪರಿಷತ್ ಹಾಸನದಲ್ಲಿ ಆಯೋಜಿಸಿದ್ದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಪತ್ರಕರ್ತರ ಜತೆ ಮಾತನಾಡಿ, ‘ಅಪರಿಚಿತ ದೇಶದಲ್ಲಿ ನಮ್ಮ ಕಲಾವಿದರು, ಪ್ರತಿನಿಧಿಗಳು ಪರದಾಡುವಂತಾಗ ಬಾರದು. ಸಮ್ಮೇಳನದ ಆಯೋಜಕರೇ ಇಲ್ಲಿಂದ ಕಲಾವಿದರನ್ನು ಆಹ್ವಾನಿಸಿರುವುದರಿಂದ ಅವರ ಊಟ-ತಿಂಡಿ ಹಾಗೂ ವಸತಿ ವ್ಯವಸ್ಥೆಯನ್ನೂ ಮಾಡಬೇಕಾಗಿತ್ತು. ಸಮ್ಮೇಳನ ಆಯೋಜಕರಿಗೆ ಸಲಹೆ ಸೂಚನೆಗಳನ್ನು ನೀಡಲು ಸಾಹಿತ್ಯ ಪರಿಷತ್ಗೆ ಅಧಿಕಾರ ಇಲ್ಲ. ಆದರೆ ಕೆಲವು ಔಪಚಾರಿಕತೆಗಳನ್ನು ಸಮ್ಮೇಳನದ ಆಯೋಜಕರು ಪಾಲಿಸಬೇಕಾಗಿತ್ತು.
ಕನ್ನಡದ ಕೆಲಸಕ್ಕಾಗಿ ಸರ್ಕಾರ ಅವರಿಗೆ ಒಂದು ಕೋಟಿ ರೂಪಾಯಿ ನೆರವು ನೀಡಿದೆ ಎಂದು ನಲ್ಲೂರು ಪ್ರಸಾದ್ ಹೇಳಿದರು. ಐದು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಮಂತ್ರಣ ನೀಡುವ ಔಪಚಾರಿಕತೆ ಯನ್ನೂ ಅವರು ತೋರಿಸಿಲ್ಲ ಪರಿಷತ್ತಿನ ಅಧ್ಯಕ್ಷರು ಯಾರಿರುತ್ತಾರೆ ಎಂಬುದು ಗೌಣ. ಇಲ್ಲಿ ಆ ಸ್ಥಾನಕ್ಕೆ ಗೌರವ ನೀಡಬೇಕಿತ್ತು‘ ಎಂದು ಅವರು ವಿಷಾದಿಸಿದರು.
40 ವರ್ಷಗಳ ದೀರ್ಘ ಅವಧಿಯ ಬಳಿಕ ಡಿಸೆಂಬರ್ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಐಟಿ, ಬಿಟಿ, ಕ್ಷೇತ್ರದವರನ್ನೂ ತೊಡಗಿಸಿಕೊಳ್ಳಲಾಗುವುದು. ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಂದು ಗೋಷ್ಠಿ ಆಯೋಜಿಸುವ ಬಗೆಗೂ ಚಿಂತನೆ ನಡೆದಿದೆ. ಕನ್ನಡ ತಂತ್ರಾಂಶಕ್ಕೆ ಸಂಬಂಧಿಸಿದ ಗೊಂದಲಗಳಿಗೆ ಈ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು‘ ಎಂದು ತಿಳಿಸಿದರು.
ಪರಿಷತ್ತಿನ ಮಹತ್ವಾಕಾಂಕ್ಷಿ ಯೋಜನೆ ಕನ್ನಡ-ಕನ್ನಡ ನಿಘಂಟು ಎಂಟು ಸಂಪುಟಗಳ ಮರು ಮುದ್ರಣ ಯೋಜನೆ ಪೂರ್ಣಗೊಂಡಿದೆ. ಈ ತಿಂಗಳ ಅಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು ಎಂದು ನಲ್ಲೂರು ಪ್ರಸಾದ್ ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|