ರಾಜ್ಯ ನಿಯೋಗದ ನಾಯಿಪಾಡು; ನ್ಯೂಜೆರ್ಸಿ ಅಕ್ಕ ಸಮ್ಮೇಳನದಲ್ಲಿ ಅಗೌರವ |
ಪ್ರಕಟಿಸಿದ ದಿನಾಂಕ : 2010-09-07
ಹಿಂದೂಸ್ತಾನಿ ಗಾಯಕರು, ಕವಿಗಳು, ಚಲನಚಿತ್ರ ನಟರು, ವಿಶ್ವವಿದ್ಯಾಲಯದ ಕುಲಪತಿಗಳು ಹೀಗೆ ಸಾಂಸ್ಕೃತಿಕ ದಿಗ್ಗಜರೇ ನಿಯೋಗದಲ್ಲಿದ್ದರು. ಅವರನ್ನು ಹೋಟೆಲ್ನ ಮೂಲೆಯೊಂದರಲ್ಲಿ ನಿಲ್ಲಿಸಿ ಊಟದ ವ್ಯವಸ್ಥೆ ಕಲ್ಪಿಸಿದ ಹೆಗ್ಗಳಿಕೆ ಅಕ್ಕ ಸಮ್ಮೇಳನದ ವ್ಯವಸ್ಥಾಪಕರದ್ದು.
ಬೆಂಗಳೂರು: ಕಲಾವಿದರು ಹಾಗೂ ಲೇಖಕರಿಗೆ ದೊರೆಯದ ಮಾನ್ಯತೆ, ಸನ್ಮಾನವಿರಲಿ ಊಟಕ್ಕೂ ಪರದಾಟ, ಹಣ ತೆತ್ತರೂ ಸಾಧ್ಯವಾಗದ ಸ್ಥಳ ವೀಕ್ಷಣೆ. ಇದು ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನದ ಈ ಬಾರಿಯ ‘ವಿಶೇಷ’ಗಳು!
ಆರಂಭದ ದಿನವೇ ಸಮ್ಮೇಳನ ಗೊಂದಲಮಯ. ಶುಕ್ರವಾರ ಅಲ್ಲಿಗೆ ತೆರಳಿದ 40 ಸದಸ್ಯರ ನಿಯೋಗಕ್ಕೆ ಸೂಕ್ತವಾದ ಹೋಟೆಲ್ ವ್ಯವಸ್ಥೆ ಇರಲಿಲ್ಲ. ಹಿಂದೂಸ್ತಾನಿ ಗಾಯಕರು, ಕವಿಗಳು, ಚಲನಚಿತ್ರ ನಟರು, ವಿಶ್ವವಿದ್ಯಾಲಯದ ಕುಲಪತಿಗಳು ಹೀಗೆ ಸಾಂಸ್ಕೃತಿಕ ದಿಗ್ಗಜರೇ ನಿಯೋಗದಲ್ಲಿದ್ದರು. ಅವರನ್ನು ಹೋಟೆಲ್ನ ಮೂಲೆಯೊಂದರಲ್ಲಿ ನಿಲ್ಲಿಸಿ ಊಟದ ವ್ಯವಸ್ಥೆ ಕಲ್ಪಿಸಿದ ‘ಹೆಗ್ಗಳಿಕೆ’ ಅಕ್ಕ ಸಮ್ಮೇಳನದ ವ್ಯವಸ್ಥಾಪಕರದ್ದು.
ಇದು ಆರಂಭದ ದಿನದ ಚಿತ್ರಣವಾದರೆ ಸೋಮವಾರ ಊಟವಿಲ್ಲದೆ ಸ್ವಂತ ಹಣದಲ್ಲೇ ಬ್ರೆಡ್ ಖರೀದಿಸಿ ಹಸಿವನ್ನು ನೀಗಿಸಿಕೊಳ್ಳುವ ಸ್ಥಿತಿ ಬಂದಿದೆ ಎಂದು ನೊಂದ ಕಲಾವಿದರೊಬ್ಬರು ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ತಿಳಿಸಿದರು.
ಅಂದಹಾಗೆ ಆಯೋಜಕರೇನೂ ಸ್ವಂತ ಖರ್ಚಿನಲ್ಲಿ ಸಾಂಸ್ಕೃತಿಕ ಪ್ರತಿನಿಧಿಗಳನ್ನು ಆಹ್ವಾನಿಸಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ 45 ಲಕ್ಷ, ಪಾನೀಯ ನಿಗಮದಿಂದ 20 ಲಕ್ಷ, ಕೈಗಾರಿಕಾ ಇಲಾಖೆಯಿಂದ 10 ಲಕ್ಷ ಹೀಗೆ ... ಸರ್ಕಾರ ಬರೋಬ್ಬರಿ 1 ಕೋಟಿ ರೂ. ಹಣವನ್ನು ಸಮ್ಮೇಳನಕ್ಕೆ ನೀಡಿದೆ. ಇಷ್ಟು ಹಣ ಪಡೆದಿದ್ದರೂ ಕಲಾವಿದರನ್ನು ತಾತ್ಸಾರದಿಂದ ನಡೆಸಿಕೊಳ್ಳಲಾಗಿದೆ.
ಮೂಕಪ್ರೇಕ್ಷಕರು: ವೇದಿಕೆಯಲ್ಲೂ ತಾರತಮ್ಯ ಧೋರಣೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಮನ್ನಣೆ ನೀಡಿದ್ದು ಕಲಾವಿದರಿಗಲ್ಲ. ಆಯೋಜಕರ ಕುಟುಂಬದವರಿಗೆ. ಸರ್ಕಾರದ ವತಿಯಿಂದ ಆಯೋಜಿಸಿದ ಕಾರ್ಯಕ್ರಮಗಳಿಗಂತೂ ಮಲತಾಯಿ ಧೋರಣೆ. ಕಾರ್ಯಕ್ರಮ ನೀಡಬೇಕಾದವರೇ ಮೂಕಪ್ರೇಕ್ಷಕರಾಗಿ ಅವ್ಯವಸ್ಥೆಗಳನ್ನು ನೋಡಬೇಕಾದ ಸ್ಥಿತಿ ಅಲ್ಲಿತ್ತು.
ನಿಯೋಗದ ಸದಸ್ಯರು ಉಳಿದುಕೊಂಡಿದ್ದ ‘ಹಾಲಿಡೇ ಇನ್’ ಹೋಟೆಲ್ನಿಂದ ಎರಡು ಕಿ.ಮೀ ದೂರದಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ಸೂಕ್ತ ವಾಹನ ವ್ಯವಸ್ಥೆ ಇಲ್ಲದೇ ಕೆಲವರು ಅಲ್ಲಿಗೆ ತೆರಳಲು ಗೆಳೆಯರ ವಾಹನಗಳ ಮೊರೆಹೋಗಬೇಕಾದ ಸ್ಥಿತಿ ಎದುರಾಯಿತು.
ನಿಯೋಗದಲ್ಲಿ ಮಧುಮೇಹ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯರು ಹಾಗೂ ಇಬ್ಬರು ಮಕ್ಕಳು ಕೂಡ ಇದ್ದಾರೆ. ಪ್ರವಾಸವನ್ನು ಮೊಟಕುಗೊಳಿಸಲು ಕಲಾವಿದರಿಂದ ತಲಾ ಎಂಟು ಸಾವಿರ ರೂಪಾಯಿ ಶುಲ್ಕ ಪಡೆಯಲಾಗಿದೆ.
ನಿಯೋಗದಲ್ಲಿದ್ದ ಪ್ರತಿನಿಧಿಗಳಲ್ಲಿ ಸನ್ಮಾನದ ಭಾಗ್ಯ ಲಭಿಸಿದ್ದು ಕೇವಲ ಒಬ್ಬರಿಗೆ ಮಾತ್ರ. ತಿಳಿದೋ ತಿಳಿಯದೆಯೋ ನಾಡಿನಿಂದ ತೆರಳಿದ ನಿಯೋಗವನ್ನು ನಿರ್ಲಕ್ಷಿಸಲಾಗಿದೆ. ಇಲ್ಲಿಂದ ಬೇಗ ಕರ್ನಾಟಕಕ್ಕೆ ತೆರಳಿದರೆ ಸಾಕು ಎಂಬ ಭಾವನೆ ಮನೆ ಮಾಡಿದೆ’ ಎಂದು ಕೆಲವರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-07 00:00:00
|
|
|