ಅಕ್ಕ ಜಾತ್ರೆ ಎರಡನೆ ದಿನ ಇಮ್ಮಡಿಗೊಂಡ ಸಂಭ್ರಮ |
ಪ್ರಕಟಿಸಿದ ದಿನಾಂಕ : 2010-09-06
ಅಕ್ಕ ಸಮ್ಮೇಳನದ ಅವಿಭಾಜ್ಯ ಅಂಗ ಕಣ್ಮನ ತಣಿಸುವ ಮೆರವಣಿಗೆ. ಇದರಲ್ಲಿ ಅಮೆರಿಕದ ವಿವಿಧ ಪ್ರಾಂತ್ಯಗಳ ಕನ್ನಡ ಸಂಘಗಳ ಸದಸ್ಯರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ತಂತಮ್ಮ ಸಂಘ ಗಳ ಬ್ಯಾನರ್ ಹಿಡಿದುಕೊಂಡು ಮೆರವಣಿಗೆಯಲ್ಲಿ ಹೆಜ್ಜೆಗೆ ಹೆಜ್ಜೆಯಾಗುವುದು ಸಂಘ ಸದಸ್ಯರಿಗೆ ಅತೀವ ಹೆಮ್ಮೆ ಕೊಡುವ ಒಂದು ಘಳಿಗೆ.
ಈಬಾರಿ ಮೆರವಣಿಗೆಯ ಕೇಂದ್ರವಸ್ತು (ಥೀಮ್) ಕರ್ನಾಟಕದ ಹಬ್ಬಹರಿದಿನಗಳು. ಸಂಕ್ರಾಂತಿ ಯಿಂದ ಹಿಡಿದು ವಿಜಯದಶಮಿಯವರೆಗಿನ ಸಣ್ಣದೊಡ್ಡ ಹಬ್ಬಗಳೆಲ್ಲವೂ ವಿವಿಧ ಸಂಘಗಳು ಕಟ್ಟಿ ಕೊಟ್ಟ ಸ್ತಬ್ಧ ಚಿತ್ರಗಳ ಮೂಲಕ ಪ್ರತಿಬಿಂಬಿತವಾದವು. ಸಂಕ್ರಾಂತಿಯ ತಂಡ ಎಳ್ಳುಬೀರಿದರೆ ಯುಗಾದಿಯ ತಂಡ ಬೇವುಬೆಲ್ಲ ಹಂಚಿತು. ಬಸವನ ಪರಿಷೆಯ ತಂಡ ಕಳ್ಳೇಕಾಯಿ ಕೊಟ್ಟರೆ ಗಣೇಶಚೌತಿಯ ತಂಡ ಮೋದಕಪ್ರಿಯರ ಬಾಯಿಯನ್ನು ಸಿಹಿಯಾಗಿಸಿತು.
ವಿಡಿಯೋ ಕಾನ್ಫರೆನ್ಸ್ ಸಾಹಿತ್ಯಗೋಷ್ಠಿ
ಟೆಲಿಕಾನ್ಫರೆನ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಕರ್ನಾಟಕ ಮತ್ತು ಅನಿವಾಸಿ ಭಾರತೀಯರ ನಡು ವಿನ ಸಾಹಿತ್ಯ ಸಂವೇದನಗಳಿಗೆ ಸೇತುವೆ ನಿರ್ಮಿಸುವ `ಯಾವ ಮೋಹನ ಮುರಳಿ ಕರೆಯಿತು' ಶೀರ್ಷಿಕೆಯ ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿತು. ಬೆಂಗಳೂರಿನ ನಯನ ಸಭಾಂಗಣ ಮತ್ತು ನ್ಯೂ ಜೆರ್ಸಿಯ ಗುಬ್ಬಿ ವೀರಣ್ಣ ರಂಗಮಂಟಪದಲ್ಲಿ ಏಕಕಾಲಕ್ಕೆ ಉಪಸ್ಥಿತರಿದ್ದ ಕವಿಪುಂಗವರು ಮು ಖಾಮುಖಿಯಾದರು.
ನಯನದಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಶೋಭೆ ತಂದರೆ `ಅಕ್ಕ' ವೇದಿಕೆಯಲ್ಲಿ ನೆರೆದಿದ್ದ ಅನಿವಾಸಿ ಕನ್ನಡ ಸಾಹಿತಿಗಳ ಬಳಗ ಕವಿಕಾವ್ಯಕ್ಕೆ ಧ್ವನಿ ಯಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಅಕ್ಕ ಆಶಯಗೀತೆ ``ಅಲ್ಲೇ ಹುಟ್ಟಿದರೂ ಇಲ್ಲೇ ಹುಟ್ಟಿದರೂ..." ಅತ್ಯಂತ ಸುಶ್ರಾವ್ಯವಾಗಿ ಮೂಡಿಬಂತು. ಈ ಗೀತೆಯನ್ನು ಬರೆದವರು ಎಚ್ಚೆಸ್ವಿ ಮತ್ತು ಸಂಗೀತಕ್ಕೆ ಅಳವಡಿಸಿ ದವರು ಸುನೀತಾ ಅನಂತಸ್ವಾಮಿ. ಕನ್ನಡ ಸಾಹಿತ್ಯದ ಮೇಲಿನ ಪ್ರೀತಿಯಿಂದ ಇಂಡ್ಯಾಕಾಮಿಕ್ಸ್ ಡಾಟ್ ಕಾಮ್ ಪ್ರಾಯೋಜಿಸಿದ್ದ ಈ ಕಾರ್ಯಕ್ರಮ ಈ ಬಾರಿಯ `ಅಕ್ಕ' ಸಮ್ಮೇಳನದ ವಿಶೇಷಗಳಲ್ಲಿ ಒಂದಾಗಿ ಜನಮನ ಗೆದ್ದಿತು.
ಇದೇ ವೇದಿಕೆಯನ್ನು ಬಳಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರು `ಅಕ್ಕ' ಸಮ್ಮೇಳನದ ಸಂದರ್ಭದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಸುದೀರ್ಘವಾಗಿ ಮಾತನಾಡಿದರು. ಕಳೆದೆ ರಡು ಸಮ್ಮೇಳನಗಳಲ್ಲಿ ತಾವು ಪ್ರತ್ಯಕ್ಷವಾಗಿ ಭಾಗವಹಿಸಿದ್ದನ್ನು ನೆನೆಸಿಕೊಂಡರು. ಅಮೆರಿಕ ಒಂದು ನದಿ, ಕರ್ನಾಟಕ ಒಂದು ನದಿ. ಈ ಎರಡೂ ನದಿಗಳ ನಡುವೆ ಒಂದು ಅಮೃತವಾಹಿನಿ ಹರಿಯುತ್ತಿದೆ ಎಂದು ಮುಖ್ಯಮಂತ್ರಿಗಳು ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರ ನಂಟನ್ನು ಕಾವ್ಯಾತ್ಮಕವಾಗಿ ಬಣ್ಣಿಸಿದರು.
ನಯನ ಸಭಾಂಗಣದಲ್ಲಿ ಉಪಸ್ಥಿತರಿದ್ದ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಲಸೆ ಹಕ್ಕಿಗಳ ಕಲರವವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಈ ಹಿಂದಿನ ಎಲ್ಲ `ಅಕ್ಕ' ಸಮ್ಮೇಳನಗಳಲ್ಲಿ ತಾನು ಭಾಗವಹಿಸಿದ್ದುದಾಗಿ ಹೇಳಿ, ಪ್ರಸಕ್ತ ಸಮ್ಮೇಳನದಲ್ಲಿ ಕಾರಣಾಂತರಗಳಿಂದ ಪಾಲ್ಗೊಳ್ಳಲಾ ಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಆದರೆ ಈ ವಿಷಾದವನ್ನು ಟೆಲಿಕಾನ್ಫರೆನ್ಸ್ ನೀಗುತ್ತಿದೆ ಎಂದು ಸಮಾಧಾನಿಸಿಕೊಂಡರು.
ರಕ್ತದಾನ
ಈ ಬಾರಿಯ `ಅಕ್ಕ' ಸಮ್ಮೇಳನದ ಹಲವು ಪ್ರಥಮಗಳಲ್ಲಿ ಮತ್ತೊಂದಾಗಿ ಗಮನ ಸೆಳೆದದ್ದು ರಕ್ತ ದಾನ ಶಿಬಿರ. ಪಿಟ್ಸ್ಬರ್ಗ್ ಕನ್ನಡ ಸಂಘದ ಅಧ್ಯಕ್ಷ ಶಶಿಶೇಖರ ಅವರ ಮುತುವರ್ಜಿಯಿಂದ ಆಯೋಜಿತವಾದ ಈ ಶಿಬಿರಕ್ಕೆ `ಅಕ್ಕ' ಅಧ್ಯಕ್ಷ ರವಿ ಡಂಕಣಿಕೋಟೆಯವರು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.
ನ್ಯೂಯಾರ್ಕ್ನ `ಬ್ಲಡ್ ಪ್ರೊಗ್ರಾಂ' ಅಡಿಯಲ್ಲಿ ಈ ಶಿಬಿರ ನಡೆಯಿತು. ಒಟ್ಟು ನೂರೈವತ್ತು ದಾನಿಗಳಿಂ ದ ರಕ್ತ ಸಂಗ್ರಹಿಸುವ ಉದ್ದೇಶ ಈ ಕಾರ್ಯಕ್ರಮದ್ದು. ಶನಿವಾರ ಸಂಜೆಯ ಹೊತ್ತಿಗೆ ಮೂವತ್ತು ಅನಿವಾಸಿ ಕನ್ನಡಿಗರು ರಕ್ತದಾನ ಮಾಡುವುದರೊಂದಿಗೆ ಕರ್ನಾಟಕದ ರಕ್ತ ಅಮೆರಿಕ ರಕ್ತದಲ್ಲಿ ಬೆರೆಯಿತು.
ರಾಜಕಾರಣಿಗಳು
`ಅಕ್ಕ' ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಉತ್ಸಾಹ ಪ್ರದರ್ಶಿಸುವಲ್ಲಿ ಈ ಬಾರಿಯೂ ರಾಜಕಾರಣಿ ಗಳು ಹಿಂದೆ ಬೀಳಲಿಲ್ಲ. ರಾಜ್ಯದಿಂದ ಸರಿಸುಮಾರು ಮೂವತ್ತೆರಡು ಮಂದಿ ಶಾಸಕರು ಕುಟುಂಬ ಸಮೇತ ರಾಗಿ ಆಗಮಿಸಿ ಕಡಲಾಚೆಯ ಕನ್ನಡಿಗರ ಭಾವಬಿಂದುಗಳಲ್ಲಿ ಒಂದಾದರು.
ಸಭಾಪತಿ ಡಿ.ಎಸ್.ಶಂಕರಮೂರ್ತಿ, ಸಚಿವರುಗಳಾದ ಜಗದೀಶ ಶೆಟ್ಟರ್, ನರೇಂದ್ರ ಸ್ವಾಮಿ, ಕರಾರ ಸಾಸಂ ಅಧ್ಯಕ್ಷ ಜಗ್ಗೇಶ್, ಬೊಮ್ಮನಹಳ್ಳಿಯ ಶಾಸಕ ಸತೀಶ ರೆಡ್ಡಿ ವೇದಿಕೆಯನ್ನು ಹಂಚಿಕೊಂಡರೆ ಉಳಿದ ಶಾಸಕರು ನಾಲ್ಕುಸಾವಿರ ಸಮ್ಮೇಳನಾರ್ಥಿಗಳ ಸಾಲಿನಲ್ಲಿ ತಾವೂ ಒಬ್ಬರಾಗಿ ಕನ್ನಡ ಕಾರ್ಯಕ್ರಮಗಳಿಗೆ ಸಾಕ್ಷೀಭೂತರಾದರು. ತಮ್ಮ ಎಂದಿನ ಖಾದಿ ಉಡುಪಿಗೆ ತಾತ್ಕಾಲಿಕ ವಿರಾಮ ಘೋಷಿಸಿಕೊಂಡರು. ಶಾಸಕರ ತಂಡ ಅಮೆರಿಕದ ನಾನಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಟ್ಟು ಇನ್ನೆರಡು ವಾರಗಳಲ್ಲಿ ಕರ್ನಾಟಕಕ್ಕೆ ವಾಪಸಾಗುವ ನಿರೀಕ್ಷೆಯಿದೆ.
ಉತ್ಕೃಷ್ಟ ದರ್ಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು
ಉತ್ಕೃಷ್ಟ ದರ್ಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿಯ `ಅಕ್ಕ' ಸಮ್ಮೇಳನದ ಹಿರಿಮೆಗಳ ಲ್ಲಿ ಒಂದು ಎಂಬುದು ನಿಸ್ಸಂದೇಹವಾಗಿ ಸಾಬೀತಾಯಿತು. ಪ್ರಭಾತ ಕಲಾವಿದರು ಪ್ರಸ್ತುತಪಡಿಸಿದ `ಕೃಷ್ಣ ವೈಜಯಂತಿ' ನೃತ್ಯರೂಪಕ, ಅಮೆರಿಕದ ವಿವಿಧ ಕನ್ನಡಕೂಟಗಳ ಸದಸ್ಯರು ಒಟ್ಟಾಗಿ ಸಾದರ ಪಡಿಸಿದ `ಕರುನಾಡ ಕೊಡುಗೆ' ಎಂಬ ಸಮೂಹನೃತ್ಯ ಗಾನವೈಭವ ಸಮ್ಮೇಳನಾರ್ಥಿಗಳನ್ನು ಮಂತ್ರ ಮುಗ್ಧರನ್ನಾಗಿಸಿದವು.
ಕರ್ನಾಟಕದಿಂದ ಬಂದಿರುವ ಕಲಾವಿದರ ತಂಡಗಳ ಪ್ರದರ್ಶನಗಳು ತಮ್ಮ ಕಲಾತ್ಮಕತೆ ಮತ್ತು ವೈವಿಧ್ಯದಿಂದ `ಅಕ್ಕ' ಸಮ್ಮೇಳನಕ್ಕೆ ಸಾಂಸ್ಕ್ರೃತಿಕ ಮೆರಗು ತಂದುಕೊಟ್ಟವು. ಇವುಗಳ ಮಧ್ಯೆ ಸ್ಥಳೀಯ ಕಲಾವಿದರಿಂದ ಹಾಸ್ಯನಾಟಕಗಳು, ನೃತ್ಯರೂಪಕಗಳು ಮನರಂಜನೆಯ ರಸದೌತಣ ಉಣಬಡಿಸಿದವು. ಕನೆಕ್ಟಿಕಟ್ ಕನ್ನಡಕೂಟದ ಮಲ್ಲಿ ಸಣ್ಣಪ್ಪನವರ್ ಮತ್ತು ತಂಡದವರು ಪ್ರಸ್ತುತ ಪಡಿಸಿದ `ಅಮೆರಿಕದಲ್ಲಿ ಯಮಧರ್ಮರಾಯ' ಕಿರುಪ್ರಹಸನವಂತೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
ಶುಕ್ರವಾರ ಮತ್ತು ಶನಿವಾರ ಪ್ರದರ್ಶಿತವಾದ ಬಹುತೇಕ ಕಾರ್ಯಕ್ರಮಗಳಿಗೆ ದೃಶ್ಯವೈಭವದ ಸ್ಪರ್ಶ ಕೊಟ್ಟ ಬೆಳಕಿನ ಸಂಯೋಜನೆ, ಧ್ವನಿಗ್ರಹಣ, ಹಿನ್ನೆಲೆಗಾಯನ ಮತ್ತು ಔಚಿತ್ಯಪೂರ್ಣ ಕಾರ್ಯಕ್ರಮ ನಿರೂಪಣೆಗಳು ಅತ್ಯಂತ ಸಮರ್ಪಕವಾಗಿದ್ದು ರಸಾಸ್ವಾದನೆಯ ಆನಂದವನ್ನು ದುಪ್ಪಟ್ಟಾಗಿಸಿದವು.
ಸುಧಾರಣೆಗೊಂಡ ಭೋಜನ ವ್ಯವಸ್ಥೆ :
ಭೋಜನಶಾಲೆಯಲ್ಲಿ ಶನಿವಾರ ಮಧ್ಯಾಹ್ನದ ವರೆಗೂ ಕಂಡುಬಂದಿದ್ದ ಅವ್ಯವಸ್ಥೆ, ಗೊಂದಲಗಳು ಸಮ್ಮೇಳನ ಸಂಯೋಜಕ ಪ್ರಸನ್ನ ಕುಮಾರ್ ಮತ್ತು ಅಮರನಾಥ ಗೌಡ ಅವರ ಸಮಯೋಚಿತ ನಿರ್ದೇಶನದಿಂದಾಗಿ ನಿರಾಳವಾದವು. ಶನಿವಾರ ರಾತ್ರೆಯ ಊಟಕ್ಕೆ ಸರತಿಸಾಲಿನಲ್ಲಿ ಕಾಯುವ ಅವಶ್ಯಕತೆಯೇ ಇರಲಿಲ್ಲ. ಪೂರಿ-ಪಲ್ಯ, ಗೊಜ್ಜು, ಹುಳಿ, ಮೊಸರನ್ನ, ಬೂಂದಿಲಡ್ಡು ಸಹಿತ ಸ್ವಾದಿಷ್ಟ ಭೋಜನವನ್ನು ಎಲ್ಲ ಸಮ್ಮೇಳನಾರ್ಥಿಗಳೂ ಹೊಟ್ಟೆ ತುಂಬ ಸವಿದರು.
ಬಾಲಮುರಳೀಕೃಷ್ಣ ಗಾನಾಮೃತ :
ಶುಕ್ರವಾರ ಸಂಜೆ ಸಮ್ಮೇಳನ ಉದ್ಘಾಟನೆಯ ನಂತರ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮ ವಾಗಿದ್ದ ಬಾಲಮುರಳೀಕೃಷ್ಣ ಅವರ ಸಂಗೀತ ಕಛೇರಿ ಶಾಸ್ತ್ರೀ ಯ ಸಂಗೀತ ರಸಿಕರಿಗೆ ಮುದ ನೀಡಿತು. ಎಪ್ಪತ್ತಾರರ ಇಳಿವಯಸ್ಸಿನಲ್ಲೂ ಮನೋಜ್ಞ ಕಛೇರಿ ನೀಡಿದ ಬಾಲಮುರಳಿಯವರ ವಿದ್ವತ್ತಿಗೆ ತಲೆದೂಗದವರೇ ಇಲ್ಲ. `ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ' ಕೀರ್ತನೆ ಯನ್ನು ಅವರು ಸುಶ್ರಾವ್ಯವಾಗಿ ಹಾಡಿದಾಗ ಭಾರತೀಯ ಶಾಸ್ತ್ರೀಯ ಸಂಗೀತದ ಸಮ್ಮೋಹನವು ಗುಬ್ಬಿ ವೀರಣ್ಣ ರಂಗಮಂಟಪವನ್ನು ಆವರಿಸಿಕೊಂಡಿತು.
ಸಂಗೀತ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಪುರಂದರ ಸಭಾಂಗಣದಲ್ಲಿ ಇಡೀದಿನ ಒಂದಾದ ಮೇಲೊಂದರಂತೆ ಸಂಗೀತ ಕಾರ್ಯಕ್ರಮಗಳ ಝೇಂಕಾರ. ವಿದ್ಯಾಭೂಷಣರ ದೇವರ ನಾಮ ಗಳಿಗೆ ಅಮೆರಿಕದಲ್ಲಿ ಎಲ್ಲಿಲ್ಲದ ಬೇಡಿಕೆ. ಅವರ ಕಛೇರಿಯ ನಂತರ ವೇದಿಕೆ ಹತ್ತಿದ್ದು ಅವರ ಶಿಷ್ಯರೇ ಆದ ಶಂಕರ ಶಾನುಭಾಗ್ ಮತ್ತು ತಂಡ. ಶನಿವಾರ ಮಧ್ಯಾಹ್ನ ಸಂಗೀತಪ್ರಿಯರಿಗೆ ಮತ್ತೊಂದು ರಸ ದೌತಣ ಉಣಬಡಿಸಿದವರು ಸ್ಯಾಕ್ಸೊಫೋನ್ ವಾದಕ ಕದ್ರಿ ರಮೇಶನಾಥ್. ಶನಿವಾರದ ಸಾಂಸ್ಕೃ ತಿಕ ಕಾರ್ಯಕ್ರಮಗಳಿಗೆ ಶಿಖರಪ್ರಾಯವಾಗಿ ಮೂಡಿಬಂದದ್ದು ರಾತ್ರಿ ಭೋಜನಾನಂತರದ ``ಕನ್ನಡ ವೇ ಶ್ರೇಷ್ಠ" ಸಂಗೀತ ಸೌರಭ.
ಹತ್ತರೊಡನೆ ಹನ್ನೊಂದು `ಸಾಹಿತ್ಯ' : ಇಂಥ ಸಮ್ಮೇಳನಗಳಲ್ಲಿ ತಾನೇತಾನಾಗುವ ಜನಪ್ರಿಯ ಕಾರ್ಯಕ್ರಮಗಳ ನಡುವೆ ಸೊರಗುವ ಏಕೈಕ ಕಾರ್ಯಕ್ರಮವೆಂದರೆ ಕನ್ನಡ ಸಾಹಿತ್ಯ. ಆದರೆ ಕಾರ್ಯಕ್ರಮವನ್ನು ಮೂಲೆಗುಂಪಾಗಿಸಲು ಬಿಡದ ಸಾಹಿತ್ಯ ಕಮಿಟಿಯ ಮುಂದಾಳು ಸತ್ಯಪ್ರಸಾದ್ ಅವರ ಉಮೇದಿನಿಂದ ಕವಿಗೋಷ್ಠಿ ಅಂತೂ ಇಂತೂ ಡಿವಿಜಿ ಭವನದಲ್ಲಿ ನಡೆದೇಬಿಟ್ಟಿತು. ಹಿರಿಯ ಅನಿವಾಸಿ ಲೇಖಕರಾದ ಎಚ್.ವಿ.ರಂಗಾಚಾರ್ ಮತ್ತು ಮೈ.ಶ್ರೀ. ನಟರಾಜ್ ಅವರ ಮುಂದಾಳತ್ವದಲ್ಲಿ ಕವನವಾಚನ ಗೋಷ್ಠಿ ಸಾಕಾರಗೊಂಡಿತು.
ಬಿ.ಆರ್.ಲಕ್ಷ್ಮಣ ರಾವ್ ಅವರು ವಿಷಾದಗೀತೆಯನ್ನು ವಾಚಿಸಿದರೆ, ಎಚ್ಚೆಸ್ವಿಯವರು ಕವಿತೆಯ ಬದ ಲಾಗಿ ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ ಅನಾತ್ಮಕಥನ ಕೃತಿಯಿಂದ ಆಯ್ದ ಒಂದು ಹೃದ ಯಸ್ಪರ್ಶಿ ಪ್ರಸಂಗವನ್ನು ಸಭಿಕರೊಂದಿಗೆ ಹಂಚಿಕೊಂಡರು. ಈ ಹೃದಯಸ್ಪರ್ಶಿ ಪ್ರಸಂಗದ ಕೇಂದ್ರ ವ್ಯಕ್ತಿ ಪು.ತಿ.ನರಸಿಂಹಾಚಾರ್ ಮತ್ತು ಅವರ ಪ್ರಿಯ ಶಿಷ್ಯ, ಇಂತೀ ನಿಮ್ಮ ವಿಧೇಯ ಎಚ್.ಎಸ್. ವೆಂಕಟೇಶಮೂರ್ತಿ.
ವರದಿಯ ವಿವರಗಳು |
 |
ಕೃಪೆ : ಶ್ರೀವತ್ಸ ಜೋಶಿ ಮತ್ತು ಎಸ್ಕೆ ಶಾಮಸುಂದರ/ದಟ್ಸ್ ಕನ್ನಡ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-06 00:00:00
|
|
|