2 ಸಾವಿರ ಸಂಘ-ಸಂಸ್ಥೆಗಳ ಬ್ಯಾಂಕ್ ವಹಿವಾಟು ತಡೆಗೆ ಆರ್ಬಿಐ ಕ್ರಮ |
ಪ್ರಕಟಿಸಿದ ದಿನಾಂಕ : 2010-09-03
ಡಿ.ಎಸ್. ಶಿವರುದ್ರಪ್ಪ
ಬೆಂಗಳೂರು : ಹವಾಲ ದಂಧೆ ಹಾಗೂ ಭಯೋತ್ಪಾದನೆ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ 2 ಸಾವಿರ ಖಾಸಗಿ ಸಂಘ, ಸಂಸ್ಥೆಗಳ ಬ್ಯಾಂಕ್ ವಹಿವಾಟು ತಡೆಗೆ ಭಾರತೀಯ ರಿಸರ್ವ್ ಬ್ಯಾಂಕ್ ( ಆರ್ಬಿಐ) ಕ್ರಮ ಕೈಗೊಂಡಿದೆ.
ಹವಾಲ ದಂಧೆ, ವಿದೇಶಿ ವಿನಿಮಯ ಹಾಗೂ ವಿದೇಶಿ ವಹಿವಾಟು ಕಾಯ್ದೆ ಉಲ್ಲಂಘನೆ , ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿರುವ ಸಂಘ - ಸಂಸ್ಥೆಗಳ ಪಟ್ಟಿ ಸಿದ್ದಪಡಿಸಿ, ಕಳೆದ 5 ವರ್ಷದಿಂದ ಈ ಸಂಸ್ಥೆಗಳು ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ನಡೆಸಿರುವ ವಹಿವಾಟು ಪರಿಶೀಲಿಸಲಾಗುತ್ತಿದೆ ಎಂದು ಆರ್ಬಿಐ ಮೂಲಗಳು ತಿಳಿಸಿವೆ.
ಕೆಲವು ಸಂಘ - ಸಂಸ್ಥೆಗಳ ಹಣಕಾಸು ವ್ಯವಹಾರ ಕುರಿತು ಕೇಂದ್ರ ಹಣಕಾಸು ಇಲಾಖೆಯ ಆರ್ಥಿಕ ಅಪರಾಧ ನಿಯಂತ್ರಣ ವಿಭಾಗ ಶಂಕೆ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿತ್ತು. ಇದರ ಜತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಕೆಲವು ಸಂಘ - ಸಂಸ್ಥೆಗಳು ಅಕ್ರಮವಾಗಿ ಹವಾಲ ದಂಧೆ ಹಾಗೂ ಭಯೋತ್ಪಾದಕರಿಗೆ ಆರ್ಥಿಕ ನೀಡುತ್ತಿದ್ದು, ಖಾಸಗಿ ಬ್ಯಾಂಕ್ಗಳು ಪರೋಕ್ಷವಾಗಿ ಸಹಕರಿಸುತ್ತಿವೆ ಎಂದು ಕೇಂದ್ರ ಗುಪ್ತದಳ ಎಚ್ಚರಿಕೆ ನೀಡಿತು .
ಲಷ್ಕರ್- ಎ- ತೊಯ್ಬ, ಅಲ್ಕೈದಾ, ಹೂಜಿ, ಜೈಷೆ -ಎ- ವೊಹಮ್ಮದ್, ಸಿಮಿ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ವಿದೇಶದಿಂದ ಆರ್ಥಿಕ ನೆರವು ಹರಿದು ಬರುತ್ತಿದ್ದು, ಸ್ಥಳೀಯ ಸಂಘ -ಸಂಸ್ಥೆಗಳ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿವೆ. ಸಂಘ ಸಂಸ್ಥೆಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಅದರ ಮೂಲಕ ಭಯೋತ್ಪಾದಕರು ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ ಎಂಬ ಸ್ಪಷ್ಟ ಮಾಹಿತಿ ದೊರೆತ್ತಿರುವ ಹಿನ್ನೆಲೆಯಲ್ಲಿ 2000 ಸಂಘ -ಸಂಸ್ಥೆಗಳ ಬ್ಯಾಂಕ್ ವಹಿವಾಟನ್ನು ತಡೆ ಹಿಡಿದು, 22 ಖಾಸಗಿ ಬ್ಯಾಂಕ್ಗಳ ವಿರುದ್ಧ ತನಿಖೆಗೆ ಆರ್ಬಿಐ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಮಾಜಘಾತುಕ ಶಕ್ತಿಗಳಿಗೆ ಸಹಕರಿಸುತ್ತಿರುವ ಹಾಗೂ ಅಕ್ರಮ ದಂಧೆಯಲ್ಲಿ ತೊಡಗಿರುವ ಶಂಕಿತ ಸಂಘ - ಸಂಸ್ಥೆಗಳ ಖಾತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ , ಈ ಖಾತೆಯಿಂದ ಯಾರಿಗೆ , ಯಾವಾಗ ಹಾಗೂ ಎಲ್ಲಿಗೆ ಹಣ ರವಾನೆಯಾಗಿದೆ ಎಂಬುದರ ಕುರಿತು ಎರಡು ತಿಂಗಳೊಳಗೆ ಸ್ಪಷ್ಟ ವಿವರಣೆ ನೀಡುವಂತೆ ರಾಜ್ಯದ ಎಲ್ಲಾ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಆರ್ಬಿಐ ನಿರ್ದೇಶನ ನೀಡಿದೆ.
ಸೌದಿ ಅರೇಬಿಯಾ, ದುಬೈ, ಕುವೈತ್, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಿಂದ ಖಾಸಗಿ ಸಂಘ - ಸಂಸ್ಥೆಗಳ ಬ್ಯಾಂಕ್ ಖಾತೆಗೆ ಕಳೆದ ಎರಡು ವರ್ಷದಲ್ಲಿ ಕೋಟ್ಯಂತರ ರೂಪಾಯಿ ಹಣ ಜಮೆಯಾಗಿದೆ. ಅಷ್ಟು ದೊಡ್ಡ ಪ್ರಮಾಣದ ಹಣ ಯಾವ ಉದ್ದೇಶಕ್ಕೆ ಬಳಕೆಯಾಗಿದೆ ಎಂಬುದು ಸ್ಪಷ್ಟಗೊಂಡಿಲ್ಲ. ಆದರೆ ಬ್ಯಾಂಕ್ ಖಾತೆಗೆ ಜಮೆ ಯಾಗುವ ಹಣವನ್ನು ಶಂಕಿತ ಸಂಘ ಸಂಸ್ಥೆಗಳು ಒಂದು ತಿಂಗಳ ಅವಧಿಯೊಳಗೆ ಡ್ರಾ ಮಾಡಿರುವುದು ಪತ್ತೆಯಾಗಿದೆ.
ಕೇರಳ, ಕರ್ನಾಟಕ, ಮಹರಾಷ್ಟ್ರ, ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿರುವ ಹಲವು ಸಂಘ ಸಂಸ್ಥೆಗಳು ಭಯೋತ್ಪಾ ದಕರ ಹಿಡಿತದಲ್ಲಿವೆ. ಈ ಸಂಸ್ಥೆಗಳು ವಿದೇಶಿ ವಿನಿಮಯ ಕಾಯ್ದೆಯಿಂದ ವಿನಾಯಿತಿ ಪಡೆದಿರುವುದು ಹಣಕಾಸು ಅವ್ಯವಹಾರ ನಡೆಸಲು ವರವಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ಗಳ ಆಂತರಿಕ ತನಿಖೆಗೆ ಆರ್ಬಿಐ ಆದೇಶ ನೀಡಿ, ತನಿಖೆ ಪೂರ್ಣಗೊಳ್ಳು ವವರೆಗೆ ಶಂಕಿತ ಸಂಘ - ಸಂಸ್ಥೆಗಳ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಎಲ್ಲಾ ಬ್ಯಾಂಕ್ಗಳಿಗೆ ನಿರ್ದೇಶನ ನೀಡಿದೆ.
ವಿದೇಶದಿಂದ ಭಾರಿ ಪ್ರಮಾಣದ ನೆರವು ಪಡೆಯುತ್ತಿರುವ ಬಹುತೇಕ ಸಂಘ -ಸಂಸ್ಥೆಗಳು ಬಹುರಾಷ್ಟ್ರೀಯ ಖಾಸಗಿ ಬ್ಯಾಂಕ್ ಗಳಲ್ಲೇ ಖಾತೆ ಹೊಂದಿವೆೆ. ಕರ್ನಾಟಕ ಮತ್ತು ಕೇರಳದಲ್ಲಿರುವ ಕೆಲವು ಟ್ರಸ್ಟ್ ಹಾಗೂ ಎನ್ಜಿಓಗಳಿಗೆ ವಿದೇಶದಿಂದ ಭಾರಿ ಪ್ರಮಾಣದ ಆರ್ಥಿಕ ನೆರವು ದೊರೆತಿರುವುದು ಸಿಬಿಐ ತನಿಖೆಯಿಂದ ಈಗಾಗಲೇ ಪತ್ತೆಯಾಗಿದೆ.
ದೇಶಿಯ ಸಹಕಾರ ಹಾಗೂ ಖಾಸಗಿ ಬ್ಯಾಂಕ್ಗಳಿಗೆ ತೈಲ ರಾಷ್ಟ್ರಗಳಿಂದಲೇ ಭಾರಿ ಪ್ರಮಾಣದ ಹಣ ಸಂದಾಯವಾಗಿದ್ದು, ಇದರಲ್ಲಿ ಭಯೋತ್ಪಾದಕರ ಕೈವಾಡವಿರುವ ಕುರಿತು ಗುಪ್ತದಳ ವರದಿ ನೀಡಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆಗಳ ಹಣಕಾಸು ಮೂಲಕ್ಕೆ ಕಡಿವಾಣ ಹಾಕಲು ಶಂಕಿತ ಸಂಘ- ಸಂಸ್ಥೆಗಳ ಬ್ಯಾಂಕ್ ವಹಿವಾಟನ್ನು ತಡೆ ಹಿಡಿಯುವಂತೆ ಆರ್ಬಿಐಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
22 ಖಾಸಗಿ ಬ್ಯಾಂಕ್ಗಳು ಅಕ್ರಮದಲ್ಲಿ ಭಾಗಿ
ವಿದೇಶಿ ವಹಿವಾಟು ಮತ್ತು ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘಿಸಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿರುವ 22 ಖಾಸಗಿ ಬ್ಯಾಂಕ್ಗಳ ವಿರುದ್ಧ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ಕೇಂದ್ರ ಸರ್ಕಾರಕ್ಕೆ ಆರ್ಬಿಐ ತನ್ನ ಅಭಿಪ್ರಾಯ ತಿಳಿಸಿದೆ .
ಕಳೆದ ನಾಲ್ಕು ವರ್ಷದಿಂದ ಈ ಬ್ಯಾಂಕ್ಗಳಲ್ಲಿ ಅಕ್ರಮ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಫೆರಾ ಹಾಗೂ ಫೆಮಾ ಕಾಯ್ದೆಯನ್ನು ಉಲ್ಲಂಘಿಸಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವುದರ ಜತೆಗೆ ಹವಾಲ ದಂಧೆಯಲ್ಲಿ ಭಾಗಿ ಯಾಗಿವೆ. ಭೂಗತ ಪಾತಕಿಗಳು ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಟ್ರಸ್ಟ್ಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಹಣಕಾಸಿನ ಅಕ್ರಮ ವಹಿವಾಟಿಗೆ ಈ ಬ್ಯಾಂಕ್ಗಳು ಸಂಪೂರ್ಣ ಸಹಕಾರ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಗುಪ್ತದಳ ಮೂಲಗಳು ಸ್ಪಷ್ಟಪಡಿಸಿವೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|