ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ |
ಪ್ರಕಟಿಸಿದ ದಿನಾಂಕ : 2010-09-02
( ಪೋಟೋ ಆಲ್ಬಮ್ ತಪ್ಪದೆ ನೋಡಿ- ಕ್ಲಿಕ್)
ವಿಡಿಯೋ ವರದಿ - 1
ವಿಡಿಯೋ ವರದಿ - 2
ಉಡುಪಿ: ರಥಬೀದಿಯಲ್ಲಿ ಗುರುವಾರ ಕೃಷ್ಣ ಲೀಲೋತ್ಸವ ಸ೦ಭ್ರಮದಿ೦ದ ಆರಂಭವಾಗಿದೆ. ಪ್ರಸ್ತುತ ಪರ್ಯಾಯ ಪೀಠದಲ್ಲಿರುವ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು ಯೋಚನೆ- ಯೋಜನೆಯಲ್ಲಿ ಭಿನ್ನರಾಗಿರುವುದರಿಂದ ಸಹಜವಾಗಿಯೇ ಪ್ರತಿವರ್ಷಕ್ಕಿಂತ ಈ ಬಾರಿಯ ಲೀಲೋತ್ಸವ ಕೂಡ ಭಿನ್ನವಾಗಿದೆ.
ಅದಕ್ಕಾಗಿ ಕಳೆದ 10 ದಿನಗಳಿಂದ ಮಠದ ಪರಿಸರದಲ್ಲಿ ರಂಗೋಲಿ, ಕೃಷ್ಣ ರಸಪ್ರಶ್ನೆ, ಸಂಗೀತ, ನೃತ್ಯ, ಚಿತ್ರ, ಹೂವು ಕಟ್ಟುವುದು, ಬತ್ತಿ ಹೊಸೆಯುವುದು ಇತ್ಯಾದಿ ಮಾಮೂಲಿ ಸ್ಪರ್ಧೆಗಳ ಜೊತೆಗೆ ಚಿನ್ನಿದಾಂಡು, ಆಟೋ ರಿಕ್ಷಾದ ಟಯರು ಬದಲಾಯಿಸುವುದು, ಪೇಡಲ್ ಹೊಡೆಯು ವುದು, ಬಾಳೆ ಹಣ್ಣು ತಿನ್ನುವುದು, ಕೃಷ್ಣಮೂರ್ತಿ ರಚಿಸುವುದು, ಲಗೋರಿ, ಬೆರ್ಚಂಡು, ಪೋಕ್ಕು, ಮಲ್ಲಯುದ್ದ, ಪಗಡೆ... ಹೀಗೆ ಹತ್ತಾರು ಬಗೆಯ ಸ್ಪರ್ಧೆಗಳು ನಡೆದಿವೆ.
ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವದ ಮುಖ್ಯ ಅಂಗವಾದ ಮೊಸರು ಕುಡಿಕೆಯ ಆಟಗಳು ನಡೆದಿವೆ. ಶ್ರೀಗಳು ಉತ್ಸವ ವೀಕ್ಷಿಸಲು ಕುಳಿತುಕೊಳ್ಳುವ, ಪ್ರಸಾದ ವಿತರಿಸುವ ವೇದಿಕೆ ಹಾಗೂ ಶಿರೂರು ಮಠದ ಮುಂಭಾಗದಲ್ಲಿ ಭರ್ಜರಿ ಹುಲಿ ವೇಷ ಕುಣಿತಕ್ಕೆ ಭಾರಿ ಗಾತ್ರದ ವೇದಿಕೆ ನಿರ್ಮಾಣ ಮಾಡಿದ್ದಾರೆ.
ಶಿರೂರು ಶ್ರೀಗಳ ಸ್ಪೆಷಲ್:
ಪ್ರತಿವರ್ಷದಂತೆ ಈ ಬಾರಿಯೂ ಗುರುವಾರ ಮಧ್ಯಾಹ್ನ ಕೃಷ್ಣ ಲೀಲೋತ್ಸವದ ಸಂದರ್ಭದಲ್ಲಿ ನೂರಾರು ಹುಲಿ ವೇಷಧಾರಿಗಳನ್ನು ಶಿರೂರು ಶ್ರೀಗಳು ವಿಶೇಷವಾಗಿ ಕುಣಿಸಿ ಅದಕ್ಕಾಗಿಯೇ 8 ಲಕ್ಷ ರು. ಮೌಲ್ಯದ 5 ರು.ಗಳಿಂದ 1,000 ರು.ಗಳವರೆಗಿನ ನೋಟುಗಳ ಮಾಲೆ ತೊಡಿಸಿ ದ್ದಾರೆ. ಜೊತೆಗೆ ಮರಕಾಲು ಹಾಕುವವರಿಗೆ ಮತ್ತು ಇತರ ವೇಷಧಾರಿಗಳಿಗೂ ಬಹುಮಾನ ನೀಡಿದ್ದಾರೆ. ಇದು ಶಿರೂರು ಶ್ರೀ ಸ್ಪೆಷಲ್.
ಶ್ರೀಗಳ ಇನ್ನೊಂದು ಸ್ಪೆಷಲ್ ಎಂದರೆ ಇದೇ ವೇದಿಕೆಯಲ್ಲಿ ಶ್ರೀಗಳು ತಮ್ಮ ಸಂಗ್ರಹದಲ್ಲಿರುವ ಲಕ್ಷಾಂ ತರ ಬೆಲೆ ಬಾಳುವ ಅಮೂಲ್ಯ ವಾದ್ಯೋಪಕರಣಗಳ ಕಛೇರಿ ನಡೆಸಿದ್ದಾರೆ. ಇದು ಕೃಷ್ಣ ಲೀಲೋತ್ಸ ವದ ಹೈಲೈಟ್ಸ್ಗಳಲ್ಲೊಂದಾಗಲಿದೆ.
ಈ ಬಾರಿಯ ಕೃಷ್ಣ ಲೀಲೋತ್ಸವದಲ್ಲಿ ಉಡುಪಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸುಮಾರು 50ಹುಲಿ ವೇಷ ತಂಡಗಳು ಭಾಗವಹಿಸಿವೆ. ಕಳೆದ ಬಾರಿ ಇತಿಹಾಸದಲ್ಲಿಯೇ ಪ್ರಥಮ ಬಾರಿ ಮಹಿಳೆಯರೂ ಹುಲಿ ವೇಷ ಧರಿಸಿದ್ದು, ಈ ಬಾರಿ ಅದೇ ತಂಡ ವಿಷ್ಣುವಿನ 10 ಅವತಾರಗಳನ್ನು ಪ್ರದರ್ಶಿಸಿ ದ್ದಾರೆ. ಅವರು ಗರುಡನ ಬೃಹತ್ ಪ್ರತಿಕೃತಿಯಲ್ಲಿ ಕುಳಿತು ಉತ್ಸವದಲ್ಲಿ ಭಾಗವಹಿಸಿ ದ್ದಾರೆ.
ಸಂಭ್ರಮದ ವಿಟ್ಲಪಿಂಡಿ ಸಂಪನ್ನ
ಉಡುಪಿ: ಶ್ರೀಕೃಷ್ಣನ ಹುಟ್ಟನ್ನು ಸಂಭ್ರಮಿಸುವ ಶ್ರೀಕೃಷ್ಣಲೀಲೋತ್ಸವ (ವಿಟ್ಲಪಿಂಡಿ) ಗುರುವಾರ ಉಡುಪಿಯಲ್ಲಿ ಸಂಪನ್ನ ಗೊಂಡಿ ತು. ಬೆಳಗ್ಗೆ ಮಹಾಪೂಜೆ ನಡೆದ ಬಳಿಕ ಶ್ರೀಕೃಷ್ಣಮುಖ್ಯಪ್ರಾಣ ಸೇವಾ ಸಮಿತಿಯವರು ಆಯೋಜಿಸಿದ ಅನ್ನಸಂತರ್ಪಣೆ ಯನ್ನು ಪರ್ಯಾಯ ಶ್ರೀಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಉದ್ಘಾಟಿಸಿದರು. ಸಮಿತಿ ಮುಖ್ಯಸ್ಥ ಭುವನೇಂದ್ರ ಕಿದಿಯೂರು, ದಿವಾನ ಲಾತವ್ಯ ಆಚಾರ್ಯ ವೊದಲಾದವರು ಉಪಸ್ಥಿತರಿದ್ದರು.
ಅಪರಾಹ್ನ ನಡೆದ ವಿಟ್ಲಪಿಂಡಿ ಉತ್ಸವದಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ನವರತ್ನ ರಥದಲ್ಲಿರಿಸಿ ತೇರನ್ನು ಎಳೆಯಲಾ ಯಿತು. ಜೊತೆ ಜೊತೆಗೆ ರಥಬೀದಿಯ ಸುತ್ತ ಹುಗಿದ ಗುಜ್ಜಿಗಳಲ್ಲಿ ವೊಸರುಕುಡಿಕೆಯನ್ನು ಗೋವಳರು ಉತ್ಸಾಹದಿಂದ ಒಡೆದರು. ಒಂದೊಂದೆ ಕುಡಿಕೆ ಒಡೆಯುತ್ತಿದ್ದಂತೆ ಜನಸಾಗರದ ನಡುವೆ ರಥ ಮುನ್ನಡೆದು ಒಂದು ಸುತ್ತು ಬಂದ ಬಳಿಕ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು. ಉತ್ಸವದಲ್ಲಿ ಶ್ರೀಲಕ್ಷ್ಮೀವರತೀರ್ಥರಲ್ಲದೆ ಕೇಮಾರು ಸ್ವಾಮೀಜಿ ಉಪಸ್ಥಿತರಿದ್ದರು.
ಅಡಿಕೆ ಮರವೇರಿದ ವೀರದ್ವಯರು ಕನಕಗೋಪುರದ ಬಳಿ ನೆಟ್ಟ ಎರಡು ಅಡಿಕೆ ಮರವನ್ನು ಕಾರ್ಕಳದ ಜಗನ್ನಾಥ ಮತ್ತು ಬೆಳಗಾವಿಯ ಶಿವ ಏರಿದರು. ನುಣ್ಣಗೆ ಕೀಸುಳಿ ಹಾಕಿದ ಮರಕ್ಕೆ ಎಣ್ಣೆ ಸವರಿದ ಅಡಿಕೆ ಮರವೇರುವ ಪ್ರಯತ್ನವನ್ನು ಹಲವರು ಮಾಡಿದರೂ ಇಬ್ಬರು ಮಾತ್ರ ಸಫಲರಾದರು.
ಎಲ್ಲೆಲ್ಲೂ ದೈತ್ಯ-ದಾನವರು! ಹುಲಿವೇಷಗಳ ತಂಡಕ್ಕಿಂತ ಚಂಡಮುಂಡರೇ ವೊದಲಾದ ದೈತ್ಯ ದಾನವರ ವೇಷಗಳು ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದವು. ಬೈಕ್ನಲ್ಲಿ ಓಡಾಡುವ ದೈತ್ಯರು, ಹುಲಿಗಳನ್ನು ಕಂಡು ಹೊಸಬರಿಗೆ ಅಚ್ಚರಿಯಾಯಿತಾದರೂ ಬಳಿಕ ನಿಜಸ್ಥಿತಿ ತಿಳಿದು ಸಮಾಧಾನಚಿತ್ತರಾದರು. ವೇಷಗಳಿಗೆ ನೀಡುವ ದೇಣಿಗೆಯಿಂದ (ಅಥವ ವೇಷಗಳ ಹಾವಳಿಯಿಂದ) ತಪ್ಪಿಸಿಕೊಳ್ಳಲು ಕೆಲವು ಅಂಗಡಿಮುಂಗಟ್ಟುಗಳು ಬಾಗಿಲುಹಾಕಿದ್ದವು. ಸಂಜೆ ಬಳಿಕ ಹುಲಿವೇಷಗಳ ಕುಣಿತ ಪ್ರದರ್ಶನ ರಾಜಾಂಗಣದಲ್ಲಿ ನಡೆಯಿತು. ತಂಡಗಳಿಗೆ ಪರ್ಯಾಯ ಮಠದಿಂದ ಸಂಭಾವನೆ ನೀಡಲಾಯಿತು.
ತುಂಬಿದ ರಥಬೀದಿ ವಾಹನ ಸಂಚಾರವನ್ನು ನಿಷೇಧಿಸಿದ ಬಳಿಕ ಜನರಿಂದಲೇ ಸಂಪೂರ್ಣ ತುಂಬಿದ್ದು ವಿಟ್ಲಪಿಂಡಿಯಂದು ಎಂಬುದು ಅನುಭವವೇದ್ಯವಾಯಿತು.
ಚಿನ್ನದ ರಥದಲ್ಲಿ ಕೃಷ್ಣನ ಮೆರವಣಿಗೆ ಅಷ್ಟಮಠ ಬೀದಿಯಲ್ಲಿ ಶೋಭಾಯಾತ್ರೆ, ಚಿನ್ನದರಥ ಸುತ್ತಿ ಬಂದ ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸುವ ಮೂಲಕ ಲೀಲೋತ್ಸವ ಸಂಪನ್ನಗೊಂಡಿತು.
ಉಡುಪಿ: ಶ್ರೀಕೃಷ್ಣ ಲೀಲೋತ್ಸವ ‘ವಿಟ್ಲಪಿಂಡಿ’ ಮಹೋತ್ಸವ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಗುರುವಾರ ವಿಜೃಂಭಣೆ ಯಿಂದ ರಥಬೀದಿಯಲ್ಲಿ ಜರುಗಿತು.
ಮಿನುಗುತ್ತಿದ್ದ ಚಿನ್ನದ ರಥದಲ್ಲಿ ಮೋಹಕ ಮೃಣ್ಮಯ ಕೃಷ್ಣ ನಸುನಗುತ್ತ ವಿರಾಜಮಾನನಾಗಿದ್ದ. ಚಾತುರ್ಮಾಸ ನಿಮಿತ್ತ ಮಠದ ಉತ್ಸವ ಮೂರ್ತಿಯನ್ನು ಹೊರಗೆ ತೆಗೆಯದ ಕಾರಣ ವಿಟ್ಲಪಿಂಡಿ ವೈಭವದ ಮೆರವಣಿಗೆಗಾಗಿಯೇ ರೂಪಿಸಿದ್ದ ಮೃಣ್ಮಯ ಕೃಷ್ಣನ ಮೂರ್ತಿಯನ್ನು ಪೂಜಿಸಿ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.
ಹಲವು ಸಾವಿರ ಸಂಖ್ಯೆಯಲ್ಲಿದ್ದ ಕೃಷ್ಣ ಭಕ್ತರ ಜಯಘೋಷದೊಂದಿಗೆ ರಥ ಬೀದಿ ಮಾರ್ದನಿಸಿತು. ಹಾಡುತ್ತ, ಕುಣಿಯುತ್ತ ಕೃಷ್ಣನ ನಾಮಸ್ಮರಣೆ ನಡೆಸುತ್ತಿದ್ದ ಭಕ್ತರು ಚಿನ್ನದ ರಥದೊಂದಿಗೆ ಶೋಭಾಯಾತ್ರೆಯಲ್ಲಿ ಸಾಗಿದರು.
ರಥ ಬೀದಿ ಸುತ್ತ ನೆಡಲಾಗಿದ್ದ 15 ಗುರ್ಜಿಗಳಲ್ಲಿ ಎತ್ತರದಲ್ಲಿ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಒಂದೊಂದಾಗಿ ಗೋವಳರು ಒಡೆಯುತ್ತ ಸಾಗಿದಾಗ ಕುಡಿಕೆಯಲ್ಲಿದ್ದ ಮೊಸರು, ಲಡ್ಡು, ಚಕ್ಕುಲಿ, ಬಣ್ಣದ ನೀರು ಸುತ್ತೆಲ್ಲ ಚೆಲ್ಲಾಡಿ ಓಕುಳಿಯಾಡಿದವು. ಒಂದೊಂದೇ ಮೊಸರು ಕುಡಿಕೆಗಳನ್ನು ಒಡೆಯುತ್ತ ಸಾಗಿದಂತೆ ಉತ್ಸವ ಮುಂದೆ ಸಾಗುತ್ತಾ ಕೃಷ ್ಣಮಠದೆದುರು ಬಂದು ನಿಂತಿತು.
ರಥೋತ್ಸವ ಅಂತಿಮ ಘಟ್ಟದಲ್ಲಿ ಶೀರೂರು ಮಠದ ಬಳಿ ಬಂದಾಗ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪ್ರಸಾದ ರೂಪವಾಗಿ ಎಸೆದ ನಾಣ್ಯ, ಚಕ್ಕುಲಿ, ಲಡ್ಡುಗಳನ್ನು ಭಕ್ತರು ಮುಗಿಬಿದ್ದು ಸ್ವೀಕರಿಸಿದರು.
ವಿಶೇಷ ದಿರಿಸಿನಲ್ಲಿದ್ದ ಗೋವಳರು, ಹುಲಿವೇಷಧಾರಿಗಳು, ಚಂಡೆ-ಮದ್ದಳೆ ಸದ್ದು, ಯಕ್ಷಗಾನ, ಬಗೆಬಗೆಯ ವೇಷಧಾರಿಗಳ ಕುಣಿತ ವೈಭವಕ್ಕೆ ಮತ್ತಷ್ಟು ಕಳೆ ತಂದಿತು. ಅಷ್ಟಮಠ ಬೀದಿಯಲ್ಲಿ ಶೋಭಾಯಾತ್ರೆ, ಚಿನ್ನದರಥ ಸುತ್ತಿ ಬಂದ ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸುವ ಮೂಲಕ ಲೀಲೋತ್ಸವ ಸಂಪನ್ನಗೊಂಡಿತು.
ಶ್ರೀಕೃಷ್ಣ ಮಠದಲ್ಲಿ ಪ್ರಾತಃಕಾಲ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರಿಂದ ಪೂಜೆ ನಡೆಯಿತು. ಕೃಷ್ಣ ಮಠದ ಬಳಿಯ ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ ದೇಗುಲಗಳಿಗೂ ಪೂಜೆ ಸಲ್ಲಿಸಲಾಯಿತು. ವೈವಿಧ್ಯಮಯ ಕಾರ್ಯಕ್ರಮ, ಮಧ್ಯಾಹ್ನ ವಿಶೇಷ ಅನ್ನಸಂತರ್ಪಣೆ, ಭಕ್ತರಿಗೆ ಲಡ್ಡು ಚಕ್ಕುಲಿ ಪ್ರಸಾದ ವಿತರಣೆ ನಡೆಯಿತು.
ಶೀರೂರು ಮಠದೆದುರು ಬನ್ನಂಜೆ ಮಹಿಳಾ ತಂಡ ಪ್ರದರ್ಶಿಸಿದ ದಶಾವತಾರ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ವಿಷ್ಣುದೇವ ಗರುಡನ ಮೇಲೆ ಕುಳಿತು ಹಾರಿ ಬರುವ ದೃಶ್ಯ ಮನಸೂರೆಗೊಂಡಿತು. ರಥೋತ್ಸವ ಕಾರ್ಯಕ್ರಮ ಮುಗಿಯುತ್ತಿದ್ದಂತೇ ಮಳೆಯೂ ಬಿರುಸಾಗಿ ಸುರಿಯಿತು.
ಲೀಲೋತ್ಸವ: ಭಕ್ತರಲ್ಲಿ ಪೊಲೀಸ್ ಮನವಿ
ಉಡುಪಿ: ಉಡುಪಿಯಲ್ಲಿ ಗುರುವಾರ ನಡೆಯುವ ಶ್ರೀಕೃಷ್ಣ ಲೀಲೋತ್ಸವ ಸಂದರ್ಭ ಕಾನೂನು ಸುವ್ಯ ವಸ್ಥೆ ಕಾಪಾಡುವುದಕ್ಕಾಗಿ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ. ಆದರೂ ಈ ಉತ್ಸವ ದಲ್ಲಿ ಭಾಗವ ಹಿಸುವ ಭಕ್ತಾಭಿಮಾನಿಗಳು, ಮುಖ್ಯವಾಗಿ ಮಹಿಳೆಯರು ತಮ್ಮ ಚಿನ್ನಾಭರಣಗಳ ಬಗ್ಗೆ ವಿಶೇಷ ಎಚ್ಚರ ವಹಿಸುವಂತೆ ಉಡುಪಿ ನಗರ ಪೊಲೀಸ್ ಠಾಣೆ ಮನವಿ ಮಾಡಿದೆ.
ಬಹಳ ಕಡಿಮೆ ಚಿನ್ನಾಭರಣಗಳನ್ನು ಧರಿಸುವುದು ಉತ್ತಮ. ಧರಿಸಿರುವ ಚಿನ್ನಾಭರಣಗಳು ಹೊರಗೆ ಕಾಣದಂತೆ ಎಚ್ಚರಿಕೆ ವಹಿಸಬೇಕು, ಸೆರಗಿನಿಂದ, ಬಟ್ಟೆಯಿಂದ ಅದನ್ನು ಮುಚ್ಚಿರುವಂತೆ ನೋಡಿಕೊಳ್ಳ ಬೇಕು, ಮಕ್ಕಳಿಗೆ ಚಿನ್ನಾಭರಣಗಳನ್ನು ಹಾಕದೆ, ಜನಜಂಗುಳಿಯಲ್ಲಿ ಮಕ್ಕಳು ಸದಾ ತಮ್ಮೊಂದಿಗೆ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ರಥಬೀದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಸಾದಾ ಉಡುಪಿನಲ್ಲಿದ್ದು, ಸರಗಳ್ಳರ ಬಗ್ಗೆ ನಿಗಾ ವಹಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸ ಬೇಕು, ಶಿಸ್ತು ಸಂಯಮ ಪಾಲಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.
ವರದಿಯ ವಿವರಗಳು |
 |
ಕೃಪೆ : ದುರ್ಗಪ್ರಸಾದ್ ಕೆ. ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-09-02 00:00:00
|
|
|