'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ |
ಪ್ರಕಟಿಸಿದ ದಿನಾಂಕ : 2010-09-02
ಹೊಸದಿಲ್ಲಿ : ಕೇಸರಿ ಉಗ್ರವಾದ ಕುರಿತು ತಾನು ಆಡಿದ ಮಾತುಗಳು ಬಲಪಂಥೀಯ ಉಗ್ರವಾದದ ಸಂದೇಶವನ್ನು ಹೊರಹಾಕಿದೆ ಮತ್ತು ಉದ್ದೇಶ ಈಡೇರಿದೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬುಧವಾರ ಹೇಳಿದರು. ಆದರೆ ಪಕ್ಷ ಎಲ್ಲಕ್ಕಿಂತ ಉನ್ನತವಾದುದು ಮತ್ತು 'ಕೇಸರಿ ಉಗ್ರವಾದ' ಎಂಬ ನುಡಿಗಟ್ಟು ತನ್ನ ಸೃಷ್ಟಿಯಲ್ಲ ಎಂದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಈಚಿನ ಕೆಲ ಬಾಂಬ್ ಸ್ಫೋಟಗಳ ಹಿಂದೆ ಬಲಪಂಥೀಯ ಮೂಲಭೂತವಾದಿ ಗುಂಪುಗಳ ಕೈವಾಡವಿರುವ ಕುರಿತು ಸಂಕೇತಗಳು ಸಿಕ್ಕಿವೆ. 'ಇವು ಧಾರ್ಮಿಕ ಮೂಲಭೂತವಾದಿ ಗುಂಪುಗಳು. ನುಡಿಗಟ್ಟುಗಳಲ್ಲಿ ಸಂದೇಶ ಕಳೆದುಹೋಗಬಾರದು ಮತ್ತು ಆ ನುಡಿಗಟ್ಟಿನ ಬಳಕೆ ಸಂದೇಶವನ್ನು ಹೊರಹಾಕಿದೆ. ಆದ್ದರಿಂದ ಒಂದು ರೀತಿಯಲ್ಲಿ ಉದ್ದೇಶ ಈಡೇರಿದೆ' ಎಂದರು. ಅನೇಕ ಸ್ಫೋಟಗಳಲ್ಲಿ 'ಕೇಸರಿ ಉಗ್ರವಾದ' ಒಳಗೊಂಡಿರುವ ಹೊಸ ವಿದ್ಯಮಾನವನ್ನು ಪತ್ತೆ ಮಾಡಲಾಗಿದೆಯೆಂಬ ನಿಮ್ಮ ಈಚಿನ ಹೇಳಿಕೆಗೆ ನೀವು ಈಗಲೂ ಬದ್ಧರಾಗಿದ್ದೀರಾ? ಎಂದು ಕೇಳಿದಾಗ ಚಿದಂಬರಂ ಅವರಿಂದ ಈ ಪ್ರತಿಕ್ರಿಯೆ ಬಂದಿತು.
ಚಿದಂಬರಂ ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು ಮತ್ತು ಕಾಂಗ್ರೆಸ್ ಈ ಹೇಳಿಕೆಯಿಂದ ತನ್ನನ್ನು ದೂರವಿರಿಸಿಕೊಂಡಿತ್ತು. ಗೃಹ ಖಾತೆ ಮತ್ತು ಕಾಂಗ್ರೆಸ್ ಪಕ್ಷದ ನೀತಿಗಳಲ್ಲಿ ಭಿನ್ನತೆ ಇದೆಯೇ ಎಂಬ ಪ್ರಶ್ನೆಗೆ ಚಿದಂಬರಂ, 'ಪಕ್ಷ ಸರ್ವೋನ್ನತವಾದುದು' ಎಂದರು.
ಬಿಜೆಪಿ ಮತ್ತು ಶಿವಸೇನೆ ಸಂಸತ್ತಿನಲ್ಲಿ ಸಚಿವರ ಹೇಳಿಕೆಯನ್ನು ಪ್ರಸ್ತಾವಿಸಿದ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮಾಧ್ಯಮ ವಿಭಾಗ ಮುಖ್ಯಸ್ಥ ಜನಾರ್ದನ ದ್ವಿವೇದಿ ಅವರು ಉಗ್ರವಾದಕ್ಕೆ ಬಣ್ಣವಿಲ್ಲ ಮತ್ತು ಶಬ್ದಗಳ ಬಳಕೆ ವೇಳೆ ಎಚ್ಚರ ವಹಿಸಬೇಕೆಂದು ಹೇಳಿದ್ದರು.
ಈ ನುಡಿಗಟ್ಟನ್ನು ಹಿಂದೆ ಯುಪಿಎಯ ಕೆಲ ಸದಸ್ಯರ ಸಹಿತ ಅನೇಕ ಮಂದಿ ಬಳಸಿದ್ದಾರೆ ಮತ್ತು 2001ರಲ್ಲಿ ಸಂಸತ್ತಿನಲ್ಲಿ 'ಶಿಕ್ಷಣದ ಕೇಸರೀಕರಣ' ಎಂಬ ವಿಚಾರವಾಗಿ ಚರ್ಚೆ ನಡೆದಿತ್ತು. ಆದ್ದರಿಂದ ನುಡಿಗಟ್ಟು ನನ್ನ ಸೃಷ್ಟಿಯೆಂದು ನಾನು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಚಿದಂಬರಂ ಹೇಳಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-02 00:00:00
|
|
| Ashok, Mumbai | 2010-09-02 | | ಗ್ರಹ ಸಚಿವ ಪಿ ಚಿದಂಬರ ರವರ ಮಾತು ಕಾಂಗ್ರೆಸ್ ಪಕ್ಷದ ಇತರ ಲೀಡರ್ ಗಳು ಆಡುವಂತೆಯೇ ಇದೆಯಲ್ಲದೆ ಭಿನ್ನವಾಗಿ ಏನೂ ಇಲ್ಲ. ಸ್ವಾತಂತ್ರ್ಯ (?) ಸಿಕ್ಕಿ 63 ವರ್ಷಗಳಿಂದ ಈ ಪಕ್ಷ ಮಾಡುತ್ತಾ ಬಂದದ್ದು ಇದನ್ನೇ... ಬಾಯಿ ತೆರೆದರೆ ಅಲ್ಪಸಂಖ್ಯಾಕರು, ದಲಿತರು , ಹಿಂದುಳಿದವರು...ಇವರ ಬಗ್ಗೆ ಮಾತು ಆಶ್ವಾಸನೆಗಳು ಭರವಸೆಗಳು. ಕೇವಲ ಓಟಿಗಾಗಿ ಮಾತು. ಮಾಡಿದ್ದು ಬೇರೇನೂ ಇಲ್ಲ. ಅಲ್ಪ ಸಂಖ್ಯಾತರೆನಿಸಿಕೊಂಡವರಿಗೆ ಇದು ಅರ್ಥವಾಗುತ್ತಿಲ್ಲ. ಯಾರೇ ಆಗಲಿ ಹಿಂದುಧರ್ಮಕ್ಕೆ ಬಾಯಿಗೆ ಬಂದಂತೆ ಬೈದರೆ ಇವರು ಖುಷ್! ಈ ಮಂದಿ ಸ್ವಲ್ಪವಾದರೂ ಅವಲೋಕಿಸಿಕೊಳ್ಳಬೇಕು. ಈ ತನಕ ಇಷ್ಟೊಂದು ದೀರ್ಘ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರ ಅಭ್ಯುದಯಕ್ಕಾಗಿ ಏನು ಮಾಡಿದೆ? ಮಾತುಮಾತಿನಲ್ಲಿಯೂ ಹಿಂದೂ ಧರ್ಮ ಅಥವಾ ಬಿಜೆಪಿಗೆ ಸಹಸ್ರನಾಮ ಮಾಡಿದ್ದು ಮತ್ತು ನಿಮ್ಮ ಉದ್ದಾರಕ್ಕಾಗಿ ಮುಗಿಲೆತ್ತರದ ಆಶ್ವಾಸನೆಗಳ ಭರವಸೆ ಯಲ್ಲದೇ ಏನಾದರೂ ಕಾರ್ಯರೂಪಕ್ಕಿಳಿಸಿ ತೋರಿಸಿದ್ದಿದೆಯಾ? ಜಾತಿ, ಧರ್ಮದ ನಡುವೆ ವೈರತ್ವದ ಅಮಾನುಷ ಕಂದಕವನ್ನು ನಿರ್ಮಿಸಿ ಅಲ್ಪ ಸಂಖ್ಯಾತರ ಓಟು ಪಡೆದು ದೇಶದ ಆಡಳಿತವನ್ನು ಗಳಿಸಿ ರಾಜಕಾರಣಿಗಳು ಅವರವರ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ. ನಂಬಿಕೆಯಿಂದ ಓಟು ಕೊಟ್ಟ ಅಲ್ಪಸಂಖ್ಯಾತರೆನಿಸಿಕೊಂಡವರು ಇದ್ದಲ್ಲೇ ಇದ್ದಾರೆ. ಪ್ರತೀ ಚುನಾವಣೆ ಬಂದಾಗಲೂ ಇದೆ ಕಥೆ. ವರ್ಷಗಳು ಕಳೆದರೂ ಕಥೆ ಬದಲಾಗಲಿಲ್ಲ. ಈಗ ಈ ಚಿದಂಬರಂ ಸಾಹೇಬರು ಮಾಡಿದ್ದೂ ಇದನ್ನೇ. ಕೇಸರೀ ಉಗ್ರವಾದ ಹೆಸರು ಕೊಟ್ಟರು... ಅಲ್ಪಸಂಖ್ಯಾತರು ಖುಷ್. ಮುಂದಿನ ಚುನಾವಣೆಯಲ್ಲಿ ಅವರ ಓಟು ಇವರಿಗೇ ಗ್ಯಾರೆಂಟಿ!! ಆ ಪಕ್ಷ ಮಾಡುವುದು ಇದು ಮಾತ್ರಾ. |
|