ಚಿದಂಬರ ಬರೆಯುವ ವಡ್ಡರ್ಸೆ ಸರಣಿ-12 : ‘ಮುಂಗಾರು' ಮುನ್ನಡೆಗೆ ಅಡ್ಡಿಯಾದ ಆರ್ಥಿಕ ಮುಗ್ಗಟ್ಟು |
ಪ್ರಕಟಿಸಿದ ದಿನಾಂಕ : 2010-08-15
ಮುನ್ನಡೆಗೆ ಅಡ್ಡಿಯಾದ ಆರ್ಥಿಕ ಮುಗ್ಗಟ್ಟು
ಕನ್ನಡನಾಡಿನ ಒಂದು ತಲೆಮಾರಿನ ಪತ್ರಕರ್ತ ಸಮುದಾಯಕ್ಕೆ ಗುರಿಕಾರನಂತಿದ್ದ ವಡ್ಡರ್ಸೆ ರಘುರಾಮಶೆಟ್ಟರ ಕುರಿತು ಅವರ ಶಿಷ್ಯ ಚಿದಂಬರ ಬೈಕಂಪಾಡಿ ಬರೆಯುವ ಸರಣಿ ಈಗ ಗಲ್ಫ್ ಕನ್ನಡಿಗದಲ್ಲೂ ಪ್ರಕಟವಾಗುತ್ತದೆ. ಇದು ಈ ಸರಣಿಯ ಹನ್ನೆರಡನೇ ಲೇಖನ.
‘ಮುಂಗಾರು' ಎರಡು ವರುಷಗಳಲ್ಲಿ ಉಂಟುಮಾಡಿದ ಸಂಚಲನವನ್ನು ಮುಂದುವರಿಸುವ ನಿರೀಕ್ಷೆ ರಘುರಾಮ ಶೆಟ್ರಿಗಿತ್ತು. ಇದೇ ಟೆಂಡೆನ್ಸಿ ಮುಂದುವರಿಯುತ್ತದೆ ಎನ್ನಲು ಶೆಟ್ರಿಗಿದ್ದ ಬಲವಾದ ನಂಬಿಕೆ ಕಮಿಟೆಡ್ ಓದುಗರು ಪತ್ರಿಕೆ ತಡವಾದರೂ ಕಿರಿಕಿರಿ ಇಲ್ಲದೆ ಕೊಂಡು ಓದುತ್ತಿದ್ದುದು. ಓದುಗರ ಶೇರಿನ ಬಲದಿಂದಲೇ ಮುನ್ನಡೆಯುತ್ತಿದ್ದ ಪತ್ರಿಕೆಗೆ ಏನಾಯ್ತು ಎನ್ನುವ ಪ್ರಶ್ನೆಯನ್ನು ಈಗಲೂ ಅನೇಕರು ಎಸೆಯುತ್ತಾರೆ.
ಒಂದು ಪತ್ರಿಕೆ ಸಮರ್ಥವಾಗಿ ನಡೆಯಬೇಕಾದರೆ ಕಂಟೆಂಟ್ ಮತ್ತು ಅದನ್ನು ಮುನ್ನಡೆಸಲು ಬೇಕಾ ಗುವ ಹಣದ ಪಾತ್ರ ಬಹುಮುಖ್ಯ. ರಘುರಾಮ ಶೆಟ್ರು ಕೊಟ್ಟಂಥ ಕಂಟೆಂಟ್ ಅತ್ಯದ್ಭುತ. ಆದರೆ ಹಣಹೊಂದಿಸಿಕೊಳ್ಳುವುದು ಅಷ್ಟು ಸರಳವಾಗಿರಲಿಲ್ಲ. ಮುಂಗಾರು ಪ್ರಕಾಶನ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿದ್ದ ರಘುರಾಮ ಶೆಟ್ರು ಪತ್ರಿಕೆಯ ಸಂಪಾದಕರೂ ಆಗಿದ್ದರು. ಎರಡೂ ಜವಾಬ್ದಾರಿಗಳನ್ನು ನಿಭಾಯಿಸಬೇಕಾದಂಥ ಒತ್ತಡ ಶೆಟ್ರ ಮೇಲಿತ್ತು.
ಮುಂಗಾರು ಸಂಸ್ಥೆಯನ್ನು ಕಟ್ಟುವ ಸಂದರ್ಭದಲ್ಲೇ ಶೆಟ್ರು ಎಚ್ಚರಿಕೆಯಿಂದ ಅಧ್ಯಕ್ಷ ಮತ್ತು ಸಂಪಾ ದಕ ಎರಡೂ ಹುದ್ದೆಗಳನ್ನು ತಮ್ಮಲ್ಲಿಟ್ಟುಕೊಂಡಿದ್ದರು. ಬೆವರು ಸುರಿಸಿಕೊಂಡು ಓಡಾಡಿ ಶೇರು ಸಂಗ್ರಹಿಸಿದ ಮೇಲೆ ಸಂಸ್ಥೆಯ ಹಿಡಿತ ಬೇರೆಯವರ ಪಾಲಾದರೆ ಮುಂದೇನು ಎನ್ನುವ ಅಪಾಯ ವನ್ನು ಅರಿತೇ ಶೆಟ್ರು ಇಂಥ ಹೆಜ್ಜೆ ಇಟ್ಟಿದ್ದರು. ಅವರು ಹಾಕಿಕೊಂಡ ಯೋಜನೆಯಂತೆ ಇಂದೂಧರ ಮತ್ತವರ ತಂಡ ಉಳಿದಿದ್ದರೆ ಶೆಟ್ರು ಧೃತಿಗೆಡುವ ಪ್ರಶ್ನೆಯೇ ಇರಲಿಲ್ಲ. ಇಂದೂಧರ ಅವರ ತಂಡದ ನಿರ್ಗಮನ ಶೆಟ್ರ ಲೆಕ್ಕಾಚಾರವನ್ನು ಬುಡಮೇಲು ಮಾಡಿತ್ತು. ಅಂದುಕೊಂಡಂತೆ ನಡೆದಿದ್ದರೆ ಇಂದೂ ಧರ ಕಾರ್ಯನಿರ್ವಾಹಕ ಸಂಪಾದಕರಾಗಿ ಮುಂದುವರಿದು ದಿನದಿನದ ಪತ್ರಿಕೆ ನಿರ್ವಹಿಸಲು ಸಮಸ್ಯೆ ಇರಲಿಲ್ಲ. ಆಗ ಶೆಟ್ರು ಶೇರು ಸಂಗ್ರಹ ಮತ್ತು ಆಡಳಿತ ನಿರ್ವಹಣೆ ಮಾಡುತ್ತಿದ್ದರು, ಆದರೇ ನು ಎಲ್ಲವೂ ಉಲ್ಟಾ ಆಯ್ತು.
ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ಬೇರೆಯವರ ಹೆಗಲಿಗೆ ವಹಿಸಿ ಪತ್ರಿಕೆಯ ಸಂಪಾದಕರಾ ಗಿಯೇ ಗಮನ ಹರಿಸಿದ್ದರೆ ಒಳ್ಳೆಯದಾಗುತ್ತಿತ್ತು ಎನ್ನುವ ಸಹಜವಾದ ಅನಿಸಿಕೆ ನಿಮ್ಮಲ್ಲೂ ಮೂಡಬಹುದು. ಆದರೆ ಶೇರು ಸಂಗ್ರಹದ ಕೆಲಸ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.
ಶೆಟ್ರಿಗಿದ್ದ ಪ್ರಭಾವಕ್ಕೆ ಅವರ ಮೇಲೆ ವಿಶ್ವಾಸವಿಟ್ಟು ಶೇರು ಕೊಡುತ್ತಿದ್ದರೇ ಹೊರತು ಅದರಿಂದ ಲಾಭ ಬರುತ್ತದೆನ್ನುವ ನಂಬಿಕೆ ಶೇರುಕೊಡುತ್ತಿರಲಿಲ್ಲ. ಆದರೆ ಬೇರೆಯವರು ಈ ಹೊಣೆ ಹೊತ್ತು ಕೊಂಡರೆ ಹಣದ ಮುಗ್ಗಟ್ಟು ಎದುರಾಗುತ್ತಿತ್ತು. ಆದ್ದರಿಂದಲೇ ಶೆಟ್ರು ಕಷ್ಟವಾದರೂ ದ್ವಿಪಾತ್ರದಲ್ಲಿ ಮುಂದುವರಿದರು.
ಓದುಗರ ಒಡೆತನದ ಈ ಪತ್ರಿಕೆಯನ್ನು ಮುನ್ನಡೆಸಲು ಶೆಟ್ರು ಪ್ರಯಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾದದ್ದು ಶೇರು ಸಂಗ್ರಹದ ಹಣ ಕರಗಿದಾಗ. ಬ್ಯಾಂಕ್ ಹೆಚ್ಚುವರಿ ಸಾಲ ಕೊಡುವ ಸ್ಥಿತಿ ಯಲ್ಲಿರಲಿಲ್ಲ. ಸಿಬ್ಬಂದಿಗಳಿಗೆ ವೇತನ ಪಾವತಿಸುವುದು ತಿಂಗಳುಗಳು ಕಳೆದಂತೆ ಕಷ್ಟವಾಗ ತೊಡಗಿತು. ಜಾಹೀರಾತು ಮೂಲದಿಂದ ಬರುತ್ತಿದ್ದ ಹಣ ಏನೇನೂ ಸಾಲದಾಗಿತ್ತು. ಪತ್ರಿಕೆ ಮಾರಾಟ ದಿಂದ ಬರುತ್ತಿದ್ದ ಹಣ ಕಮಿಷನ್ ಕಳೆದು ನ್ಯೂಸ್ ಪ್ರಿಂಟ್ ತರಲು ಸಾಕಾಗುತ್ತಿರಲಿಲ್ಲ. ಶೇರು ಸಂಗ್ರಹವೂ ಇಳಿಮುಖವಾಯಿತು.
ಮತ್ತೊಂದೆಡೆಯಲ್ಲಿ ಪತ್ರಿಕೆ ಸಕಾಲದಲ್ಲಿ ಮಾರುಕಟ್ಟೆ ತಲಪುವುದು ವಿಳಂಭವಾಗುತ್ತಿತ್ತು. ಎಲ್ಲಾ ಕಡೆಗಳಿಂದಲೂ ಹೊಡೆತ. ಮೊಳೆಜೋಡಿಸುವ ಮಂದಿ ಇದ್ದಕ್ಕಿದ್ದಂತೆಯೇ ಗೋಸ್ಲೋ ನೀತಿ ಅನುಸರಿ ಸತೊಡಗಿದರು. ಮೊದಲಿನ ಲವಲವಿಕೆ ಕಾರ್ಮಿಕರಲ್ಲಿ ಇರಲಿಲ್ಲ. ಪಾಳಿಯಲ್ಲಿ ಕೆಲಸ ಮಾಡಿದರಾ ಯಿತು ಎನ್ನುವ ಮಟ್ಟಕ್ಕೆ ಪ್ರೆಸ್ ನಲ್ಲಿ ಕಾರ್ಮಿಕರ ಅಸಹಕಾರ ಆರಂಭವಾಯಿತು.
ಯಾವಾಗ ಆರ್ಥಿಕವಾಗಿ ಸಂಸ್ಥೆ ದುರ್ಬಲವಾಗಿರುವುದು ಅರಿವಿಗೆ ಬಂತೋ ಅದಾಗಲೇ ಸಂಪಾದ ಕೀಯ ಬಳಗದಲ್ಲಿದ್ದವರನ್ನು ಉದ್ಯೋಗದ ಚಿಂತೆ ಕಾಡತೊಡಗಿತು. ಎಲ್ಲಾದರೂ ಸರಿ ಬದುಕಿಗೆ ಭದ್ರತೆ ಒದಗಿಸುವ ನೌಕರಿ ಸಿಕ್ಕಿದರೆ ಸಾಕು ಎನ್ನುವಂತಾಯಿತು. ಬಹುತೇಕ ಮಂದಿ ಪರ್ಯಾಯ ಉದ್ಯೋಗದ ತಲಾಶ್ ನಲ್ಲಿ ತೊಡಗಿದರು. ಮೂರು ವರ್ಷ ತುಂಬುವುದರೊಳಗೆ ಮುಂಗಾರು ಸಂಪಾದಕೀಯ ಬಳಗದಲ್ಲಿದ್ದ ಹಳಬರು ಕಳಚಿಕೊಂಡರು. ಪಳಗಿದವರು ಗುಳೇ ಹೊರಟಾಗ ಶೆಟ್ರಿಗೆ ತಡೆಯುವಷ್ಟು ಬಲ ಇರಲಿಲ್ಲ. ಕಾರಣ ಪತ್ರಿಕೆಯನ್ನು ಆರ್ಥಿಕವಾಗಿ ಹಳಿಗೆ ತರುತ್ತೇನೆಂಬ ನಂಬಿಕೆ ಯನ್ನು ಕಳೆದುಕೊಂಡಿದ್ದರು.
ಹೊಸಬರು ಸಂಪಾದಕೀಯ ಬಳಗಕ್ಕೆ ಸೇರಿಕೊಳ್ಳುವುದು, ಹಳಬರು ಹೊರಹೋಗುವುದು ಮುಂದು ವರಿಯಿತು. ತಮಾಷೆಗಾಗಿ ಹೇಳುವುದಾದರೆ ಪ್ರಯಾಣಿಕರು ಸಿಟಿ ಬಸ್ಸನ್ನು ಒಂದು ಸ್ಟಾಪ್ ನಲ್ಲಿ ಹತ್ತಿ ಮತ್ತೊಂದು ಸ್ಟಾಪ್ ಬಂದಾಗ ಇಳಿದು ಹೋಗುವಂತೆ ಅಥವಾ ಟ್ರೈನಿಂಗ್ ಪಿರಿಯೆಡ್ ಮುಗಿಸಿ ಹೊರಟಂತೆ. ಅಂತೂ ಮುಂಗಾರು ಪತ್ರಕರ್ತರ ತರಬೇತಿ ಕೇಂದ್ರವಾಗಿ ಬಿಟ್ಟಿತು. ಆ ಸಂತೋಷ ಶೆಟ್ರಿಗೆ ಕೊನೆಯ ದಿನಗಳಲ್ಲಿ ತೃಪ್ತಿ ತಂದುಕೊಟ್ಟಿತ್ತು ಅನ್ನಿ.
ಮುಂಗಾರು ಪತ್ರಿಕೆಯನ್ನು ಮಾರಾಟ ಮಾಡುವಂತೆ ಶೆಟ್ರಿಗೆ ಒತ್ತಡವಿತ್ತು, ಆದರೆ ಅವರು ಆ ಕೆಲಸ ಮಾಡಲು ಒಪ್ಪಲಿಲ್ಲ. ಸಂಸ್ಥೆಯ ಯಜಮಾನ ಬಳಲಿದಾಗ ಅದರ ಇಂಪ್ಯಾಕ್ಟ್ ಉಳಿದವರ ಮೇಲೆ ಆಗುತ್ತದೆ. ಹಾಗೆಯೇ ಶೆಟ್ರು ದಿನಕಳೆದಂತೆ ಪಾತಾಳಕ್ಕಿಳಿಯತೊಡಗಿದರು ಮಾನಸಿಕ ವಾಗಿ. ಅವರ ಕಾನ್ಫಿಡೆನ್ಸ್ ಕಡಿಮೆಯಾಗತೊಡಗಿತು. ಕೂಲಿಕಾರ್ಮಿಕರು ಆ ದಿನ ದುಡಿದರೆ ಮನೆಯ ಒಲೆ ಉರಿಯುತ್ತದೆ, ಇಲ್ಲವಾದರೆ ಉಪವಾಸವೇ ಗತಿ. ಇದೇ ಸ್ಥಿತಿ ಮುಂಗಾರುಗೆ ಬಂತು.
ನ್ಯೂಸ್ ಪ್ರಿಂಟ್ ಕೊರತೆ ಎದುರಾಯಿತು. ಭದ್ರಾವತಿಯಲ್ಲಿ ಸಾಲವಾಗಿ ನ್ಯೂಸ್ ಪ್ರಿಂಟ್ ಕೊಡುವುದನ್ನು ನಿಲ್ಲಿಸಿದರು. ಕ್ಯಾಶ್ ಅಂಡ್ ಕ್ಯಾರಿ ಜ್ಯಾರಿಗೆ ಬಂತು. ದಿನಬೆಳಗಾದರೆ ಜಾಹೀರಾತು ವಿಭಾಗ ದವರು ಮತ್ತು ಪ್ರಸರಣ ವಿಭಾಗದವರು ಏಜಂಟರನ್ನು ಮುಂಗಡ ಹಣಕ್ಕಾಗಿ ಪೀಡಿಸತೊಡಗಿದರು. ಪತ್ರಿಕೆಗೆ ಜಾಹೀರಾತು ಕೊಡುತ್ತಿದ್ದ ಸಂಸ್ಥೆಗಳು, ಪತ್ರಿಕೆಯ ಏಜಂಟರು ಮುಂಗಡ ಹಣ ಕೊಡದಿರು ತ್ತಿದ್ದರೆ ಮುಂಗಾರು ಎಂದೋ ಮುಚ್ಚುತ್ತಿತ್ತು. ಆದರೆ ಈ ಪತ್ರಿಕೆಯ ಮೇಲಿದ್ದ ಮಮತೆಯಿಂದಾಗಿ ಕೇಳಿದಾಗಲೆಲ್ಲಾ ಮುಂಗಡ ಹಣಕೊಡುತ್ತಿದ್ದರು.
ಹಣ ಹೊಂದಿಕೆಯಾದ ಕೂಡಲೇ ೪೦೭ ವ್ಯಾನ್ ಭದ್ರಾವತಿ ಮಿಲ್ ಗೆ ದೌಡಾಯಿಸುತ್ತಿತ್ತು. ಅಲ್ಲಿ ತಡವಾಗಿ ತಲುಪಿದರೆ ಕೆಲಸಗಾರರು ನ್ಯೂಸ್ ಪ್ರಿಂಟ್ ರೀಲ್ ಲೋಡ್ ಮಾಡುವುದಿಲ್ಲ, ಅವರ ಮನವೊಲಿಸಬೇಕು ವ್ಯಾನ್ ನಲ್ಲಿ ಹೋದವರು. ಅಂತೂ ಪೇಪರ್ ಹೊತ್ತು ವ್ಯಾನ್ ಬರುವುದನ್ನೇ ಪ್ರೆಸ್ ನಲ್ಲಿ ಕಾಯಬೇಕು. ವ್ಯಾನ್ ಭದ್ರಾವತಿಯಿಂದ ಹೊರಟ ಕೂಡಲೇ ಫೋನ್ ಮಾಡಬೇಕು. ಆಗುಂಬೆ ಘಾಟಿ ಇಳಿದ ಮೇಲೆ ಫೋನ್ ಮಾಡಬೇಕು. ಅಂತೂ ಬೈಕಂಪಾಡಿ ಪ್ರೆಸ್ ತಲಪುವಾಗ ಬೆಳಕು ಹರಿದಿರುತ್ತಿತ್ತು. ಆದರೂ ಪತ್ರಿಕೆ ಪ್ರಿಂಟ್ ಆಗುತ್ತಿತ್ತು, ವಿತರಣೆಯೂ ಆಗುತ್ತಿತ್ತು. ಏಜೆಂಟರು ಬೈದುಕೊಂಡು ಪತ್ರಿಕೆ ಮಾರಾಟ ಮಾಡುತ್ತಿದ್ದರು.
ಹೀಗೆಯೇ ಮತ್ತೂ ಒಂದು ವರ್ಷ ಮುಂಗಾರು ನಡೆಯಿತು. ಏಜೆಂಟರು ಮುಂಗಡ ಹಣ ಕೊಡುವ ಷ್ಟು ಕೊಟ್ಟರು, ಆದರೆ ಈ ಸಮಸ್ಯೆ ಪರಿಹಾರ ಕಾಣದ ಮಟ್ಟಕ್ಕೆ ಬೆಳೆದು ನಿಂತಾಗ ಶೆಟ್ರು ಮತ್ತೂ ಅಧೀ ರರಾದರು. ಕೊನೆಯ ಅಸ್ತ್ರವಾಗಿ ಶೆಟ್ರು ಕೈಗೊಂಡ ಕ್ರಮಗಳು ನಾಡಿನ ಓದುಗರಿಗೆ ಖಂಡಿತಕ್ಕೂ ಗೊತ್ತಿಲ್ಲ. ಅದೆಂಥ ಕಠೋರ ಪರಿಸ್ಥಿತಿ ಎದುರಾಯಿತೆಂದರೆ ನ್ಯೂಸ್ ಪ್ರಿಂಟ್ ಇಲ್ಲದೆ ಯಾವುದೇ ಕ್ಷಣದಲ್ಲೂ ಪತ್ರಿಕೆ ನಿಲ್ಲಬಹುದು ಅನ್ನುವ ಸ್ಥಿತಿಗೆ ತಲುಪಿತು.
ಪತಿಯ ಹೆಗಲಿಗೆ ಹೆಗಲು ಕೊಟ್ಟವರು ಪತ್ನಿ ಪ್ರಫುಲ್ಲಾ
ರಘುರಾಮ ಶೆಟ್ರ ಜನಶಕ್ತಿ ಬೆಳೆ ತೆಗೆವ ಮುಂಗಾರು ಹುಟ್ಟು ಮತ್ತು ಅದರ ಮುನ್ನಡೆಯಲ್ಲಿ ಅವರ ಪತ್ನಿ ಪ್ರಫುಲ್ಲಾ ಅವರಿಗೂ ಪಾಲಿದೆ. ರಘುರಾಮ ಶೆಟ್ರು ಬೆಂಗಳೂರಿನಲ್ಲಿದ್ದ ದೊಡ್ಡ ಹುದ್ದೆಗೆ ರಾಜೀ ನಾಮೆ ಕೊಟ್ಟು ಹೊರಬಂದಾಗ ಅವರ ಇಬ್ಬರು ಮಕ್ಕಳಾದ ಮುರಳಿ ಮತ್ತು ಮಧುಕರ್ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು (ಈಗ ಮಧುಕರ್ ಶೆಟ್ಟಿ ಲೋಕಾಯುಕ್ತ ಎಸ್ಪಿ ಬೆಂಗಳೂರಲ್ಲಿ, ಮುರಳಿ ಗಲ್ಫ್ ನಲ್ಲಿದ್ದಾರೆ). ಮಂಗಳೂರಲ್ಲಿ ಮುಂಗಾರು ಆರಂಭವಾದಾಗ ಅವರಿಬ್ಬರೂ ಹೈಸ್ಕೂಲ್ ವಿದ್ಯಾರ್ಥಿಗಳು. ಮಕ್ಕಳ ಭವಿಷ್ಯ, ಅವರ ಮುಂದಿನ ಶಿಕ್ಷಣ, ಅದಕ್ಕೆ ಬೇಕಾದ ಹಣಕಾಸು ಎಲ್ಲಿಂದ ತರಬೇಕು? ಏನು ಕತೆ? ಶೆಟ್ರಿಗೆ ಇದ್ಯಾವುದರ ಗೊಡವೆಯೂ ಇತ್ತೋ-ಇರಲಿಲ್ಲವೋ ಗೊತ್ತಿಲ್ಲ, ಆದರೆ ಅವರ ಪತ್ನಿ ಮಾತ್ರ ಆ ಮಕ್ಕಳ ಲಾಲನೆ, ಪಾಲನೆ ಮಾಡುತ್ತಿದ್ದು ದನ್ನು ಕಣ್ಣಾರೆ ಕಂಡಿದ್ದೇನೆ. ಸ್ವಂತ ದುಡಿ ಮೆಯನ್ನು ಸಂಸ್ಥೆ ಕಟ್ಟಲು ಸುರಿದಾಗಲೂ ಪತ್ನಿ ಪ್ರಫುಲ್ಲಾ ಅವರು ಪತಿಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎನ್ನುವುದು ಸ್ಪಷ್ಟ.
ಮುಂಗಾರು ಸಂಸ್ಥೆಯ ನಮ್ಮಂಥ ಹುಡುಗರನ್ನು ತಮ್ಮ ಮಕ್ಕಳಂತೆ ಶೆಟ್ರು ನೋಡಿಕೊಂಡಿದ್ದರು ಮತ್ತು ಅವರ ಪತ್ನಿ ಕೂಡಾ. ಸಾಮಾನ್ಯವಾಗಿ ಶೆಟ್ರು ತಮಗೆ ತೋಚಿದ ಒಳ್ಳೆಯ ಸ್ಟೋರಿ ಬರೆಸ ಬೇಕು ಅಂತಾದರೆ ಮಾತನಾಡಲು ಬೆಳಗಿನ ಹೊತ್ತು ಮನೆಗೆ ಬರಲು ಹೇಳುತ್ತಿದ್ದರು. ನಾನು ಪತ್ರಿಕೆ ಯ ಮುಖ್ಯ ವರದಿಗಾರನಾಗಿದ್ದ ಕಾರಣ ಏನೇ ಪ್ರಮುಖ ಲೇಖನ ಬರೆಸುವುದಿದ್ದರೆ ನನ್ನೊಂದಿಗೆ ಚರ್ಚಿಸುತ್ತಿದ್ದರು. ಈ ಕಾರಣದಿಂದ ವಾರದಲ್ಲಿ ನಾಲ್ಕು ದಿನ ಶೆಟ್ರನ್ನು ಅವರ ಮನೆ ಯಲ್ಲಿ ಭೇಟಿ ಮಾಡುವ ಪರಿಪಾಠವಿತ್ತು.
ಶೆಟ್ರು ಆಗ ಮಂಗಳೂರಿನ ಹ್ಯಾಟ್ಹಿಲ್ನ ಬಾಡಿಗೆ ಮನೆಯಲ್ಲಿದ್ದರು. ಗುಡ್ಡೆಯ ತುತ್ತತುದಿಯಲ್ಲಿದ್ದ ಅವರ ಮನೆಗೆ ಹೋಗುವುದೇ ಪ್ರಯಾಸ. ಬೆಳಗಿನ ಹೊತ್ತು ಮನೆಯ ಮುಂದಿನ ವರಾಂಡದಲ್ಲಿ ಆರಾಮ ಕುರ್ಚಿ ಹಾಕಿಕೊಂಡು ಕುಳಿತು ಪತ್ರಿಕೆ ಓದುತ್ತಿದ್ದರು. ಅದೇ ಹೊತ್ತಿಗೆ ನಾನು ಮನೆಗೆ ಹೋದರೆ ನೇರವಾಗಿ ಅವರ ಮುಂದೆ ಕುಳಿತು ಮಾತಿಗೆ ತೊಡಗುವಂತಿಲ್ಲ. ಅವರಿಗೆ ಮೊದಲು ವಿಶ್ ಮಾಡಿದರೆ ‘ಬಂದೆಯಾ?' ಅಪರೂಪದ ನಗು(ರಘುರಾಮ ಶೆಟ್ರನ್ನು ನಗುವಿನೊಂದಿಗೆ ಕಂಡವರು ಬಹಳ ಮಂದಿ ಇರಲಾರರು. ಯಾಕೆಂದರೆ ಅವರು ನಗುತ್ತಿದ್ದುದೇ ಅಪರೂಪ), ‘ನೋಡೇ ಚಿದಂಬರ ಬಂದ' ಎನ್ನುತ್ತಿದ್ದರು ಅಷ್ಟೇ. ನಂತರ ಅಲ್ಲಿ ನಿಲ್ಲುವಂತಿಲ್ಲ. ನೇರವಾಗಿ ಮನೆಯ ಡೈನಿಂಗ್ ಟೇಬಲ್ ಮುಂದೆ ಕುಳಿತುಕೊಳ್ಳಬೇಕು.
ನಗುತ್ತಲೇ ಬಂದು ಆ ದಿನ ಮನೆಯಲ್ಲಿ ಬೆಳಗಿನ ಉಪಹಾರಕ್ಕೆ ಏನು ಮಾಡಿದ್ದರೋ ನನಗೂ ಬಡಿ ಸುತ್ತಿದ್ದರು. ಟೇಬಲ್ ಮುಂದಿನ ಕಾರ್ಯಾಚರಣೆ ಮುಗಿದ ಮೇಲೆ ಶೆಟ್ರ ಮುಂದೆ ಹಾಜರಾಗ ಬೇಕು, ಇದು ಶೆಟ್ರ ಕಟ್ಟಪ್ಪಣೆ ಆಗಿತ್ತು. ಮನೆಗೆ ಹೋದವರಿಗೆ ಮೊದಲು ಹೊಟ್ಟೆಗೆ ಕೊಟ್ಟ ಮೇಲೆಯೇ ಬಂದ ಕಾರ್ಯದ ಮಾತುಕತೆ. ಹೀಗೆ ಮಾತನಾಡುವಾಗ ಮಕ್ಕಳು ಅಲ್ಲಿ ನಿಂತು ಕಿವಿಕೊಡುವುದಾಗಲೀ, ಆಗಾಗ ಸುಳಿದಾಡುವುದಾಗಲೀ ಮಾಡಬಾರದು ಅವರಿಗೆ. ಇದು ಉತ್ಪ್ರೇಕ್ಷೆ ಖಂಡಿತಕ್ಕೂ ಅಲ್ಲ, ವಾಸ್ತವ. ಆದರೆ ಈಗ ಅಂದಿನಂತಿರಲು ಸಾಧ್ಯವೇ? ಅಂಥ ಸಂಬಂಧವಿದ್ದರೂ ಯಾವುದಾದರೂ ರೆಸಾರ್ಟ್ ಅಥವಾ ರೆಸ್ಟೋರೆಂಟ್ ಗೇ ಸೀಮಿತ ಅಪರೂಪಕ್ಕೆ.
ಶೆಟ್ರನ್ನು ತುಂಬಾ ಹತ್ತಿರದಿಂದ ಅರಿತ ಮತ್ತು ಅವರ ಮನೆಯಲ್ಲಿ ಅತೀ ಹೆಚ್ಚು ಸಲ ಭೇಟಿ ಮಾಡಿದ ವರಲ್ಲಿ ನಾನೇ ಅಂದುಕೊಂಡಿದ್ದೇನೆ. ಈ ಕಾರಣದಿಂದಲೇ ಮುಂಗಾರು ಪತ್ರಿಕೆಯ ಸಾಧನೆಯ ಹಿಂದೆ ಅವರ ಪತ್ನಿಯ ಪಾಲು ಇದೆ ಅಂದದ್ದು ಎನ್ನುವಷ್ಟಕ್ಕೇ ಸೀಮಿತವಲ್ಲ.
ಶೆಟ್ರು ಒಳ್ಳೆ ಮೂಡ್ ನಲ್ಲಿದ್ದಾಗ ಜೋಕ್ ಮಾಡುತ್ತಿದ್ದರು. ಕೆಲವೊಮ್ಮೆ ನನ್ನನ್ನು ರೇಗಿಸುತ್ತಿದ್ದರು ಕೂಡಾ. ಸಾರ್ ಇವುತ್ತು ಸ್ವಲ್ಪ ಬೇಗ ಮನೆಗೆ ಹೋಗಬೇಕು ಅಂದ್ರೆ ‘ನಿನಗೆ ಹೆಂಡ್ತಿ-ಮಕ್ಳಿದ್ದಾರೇ ನೋ? ಬೇಗ ಹೋಗಿ ಏನ್ ಮಾಡ್ತಿ?' ಅಂತಿದ್ರು.
‘ಪ್ರಫುಲ್ಲಾ ಇವನಿಗೆ ನಮ್ಮ ಊರಲ್ಲಿ ಮನೆ ಹತ್ರ ಇದ್ದಾಳಲ್ಲಾ ಅವಳನ್ನ ಮದುವೆ ಮಾಡಿಸೋಣವೇ?' ಎನ್ನುತ್ತಾ ನಗುತ್ತಿದ್ದರು. ಇವರ ಜೋಕ್ ಗೆ ಪತ್ನಿಯೂ ಸಾಥ್ ಕೊಡುತ್ತಿದ್ದರು. ಇಂತೆಲ್ಲಾ ಸಂಬಂಧ ಗಳನ್ನು ಈಗಿನ ಕಮರ್ಶಿಯಲ್ ಪತ್ರಿಕೋದ್ಯಮ ನುಂಗಿಬಿಟ್ಟಿದೆ ಅಥವಾ ಕುರುಹೂ ಇಲ್ಲದಂತೆ ಅಳಿಸಿ ಬಿಟ್ಟಿದೆ ಅನ್ನಿಸುವುದಿಲ್ಲವೇ?
ವಡ್ಡರ್ಸೆ ರಘುರಾಮ ಶೆಟ್ರಿಗೆ ಹಣದ ಲೆಕ್ಕಾಚಾರ ಇಡುವ ಅಭ್ಯಾಸವಿರಲಿಲ್ಲ. ಅವರು ತಮ್ಮ ಕಿಸೆ ಯಿಂದ ಸಹೋದ್ಯೋಗಿಗಳಿಗೆ ಕೊಡುತ್ತಿದ್ದ ಹಣವನ್ನು ಮತ್ತೆ ತೆಗೆದುಕೊಂಡ ಘಟನೆಗಳು ವಿರಳ. ಸಕಾಲದಲ್ಲಿ ವೇತನ ಆಗುವುದಿಲ್ಲ, ಖರ್ಚಿಗೆ ಹಣ ಬೇಕು ಅಂದ್ರೆ ಅಕೌಂಟೆಂಟ್ ಮುಂಗಡ ಕೊಡು ತ್ತಿರಲಿಲ್ಲ. ಶೆಟ್ರು ಯಾವುದೋ ಸ್ಟೋರಿ ಮಾಡಲು ಹೇಳ್ತಿದ್ರು, ಬೆಳ್ತಂಗಡಿಗೆ ಹೋಗಬೇಕು ಅಂದು ಕೊಳ್ಳಿ ಮುಂಗಡ ಹಣ ಕೇಳಿದ್ರೆ ಇಲ್ಲ. ಇಂಥ ಪ್ರಸಂಗಗಳಲ್ಲಿ ನಾನು ಶೆಟ್ರನ್ನೇ ಅವಲಂಬಿಸುತ್ತಿದ್ದೆ.
‘ಚಿದಂಬರ ಇವೊತ್ತೇ ಕಾರ್ಕಳಕ್ಕೆ ಹೋಗಿ ಹ್ಯೂಮನ್ ಇಂಟರೆಸ್ಟ್ ಸ್ಟೋರಿ ಮಾಡು' ಶೆಟ್ರ ಹುಕುಂ. ಕಿಸೆಯಲ್ಲಿ ಹಣವಿಲ್ಲ, ಹೋಗೋದು ಹೇಗೆ? ‘ಸಾರ್ ನಾನು ಹೋಗೋದಿಲ್ಲ'. ‘ಯಾಕೋ ಏನಾಯ್ತು ನಿನಗೆ?' ಹಣ ಇಲ್ಲ ಸಾರ್. ‘ಹಣನೆಲ್ಲ ಏನ್ ಮಾಡ್ತೀಯೋ ನೀನು? ತಗೋ ಅವಿವೇಕಿ' ಎನ್ನುತ್ತಾ ತಮ್ಮ ಪ್ಯಾಂಟಿನ ಹಿಂದಿನ ಕಿಸೆಯಿಂದ ನೂರು ರೂಪಾಯಿಯ ನೋಟು ಅಥವಾ ನೂರರ ಎರಡು ನೋಟು ಕೊಡ್ತಿದ್ರು. ಹೀಗೆ ತಿಂಗಳಲ್ಲಿ ಒಂದೆರಡು ಸಲ ಇದ್ದೇ ಇರುತ್ತಿತ್ತು. ಸಂಬಳ ಆದಮೇಲೆ ಅವರ ಚೇಂಬರ್ ಗೆ ಹೋದರೆ ‘ಏನ್ ಬಂದೆ? ಏನೂ ಕೆಲಸ ಇಲ್ವಾ?' ‘ಸಾರ್ ನೀವು ಕೊಟ್ಟ ಹಣ?' ಎನ್ನು ತ್ತಾ ಹಣ ತೋರಿಸಿದರೆ ‘ಯಾವ ಹಣ? ನಾನೇನು ಬಡ್ಡಿ ವ್ಯಾಪಾರ ಮಾಡ್ತೀನಾ? ಹೋಗು ಬೀರ್ ಕುಡಿದುಕೋ' ಗದರಿಸಿ ಕಳುಹಿಸುತ್ತಿದ್ದರು. ಹಾಗೆ ಅವರು ಕಿಸೆಯಿಂದ ಕೊಟ್ಟ ಹಣವನ್ನು ನನ್ನಿಂದ ಮತ್ತೆ ಪಡೆದುಕೊಂಡಿಲ್ಲ. ಇಂಥ ಘಟನೆಗಳನ್ನು ದಾಖಲಿಸಿದ ಉದ್ದೇಶ ರಘುರಾಮ ಶೆಟ್ರ ಮನಸ್ಸು, ಹೃದಯವಂತಿಕೆಯನ್ನು ಅನಾವರಣಗೊಳಿ ಸುವುದು.
ಇಂಥ ಮನಸ್ಸಿನ ಶೆಟ್ರು ಹುಟ್ಟುಹಾಕಿದ ‘ಮುಂಗಾರು' ಪ್ರಕಟಣೆ ನಿಲ್ಲಿಸುತ್ತದೆಂಬ ಗುಲ್ಲು ಎಲ್ಲೆಲ್ಲೂ. ಆದರೆ ರಘುರಾಮ ಶೆಟ್ರು ಮಾತ್ರ ಯಾವುದೇ ಕಾರಣಕ್ಕೂ ಪತ್ರಿಕೆ ನಿಲ್ಲಬಾರದೆಂದು ಪಣತೊಟ್ಟಿ ದ್ದರು. ಇದಕ್ಕಾಗಿ ತಮ್ಮ ಸ್ನೇಹಿತರು, ಆತ್ಮೀಯರನ್ನು ಮನವೊಲಿಸಿ ಹಣ ತರುತ್ತಿದ್ದರು. ‘ಶೆಟ್ರೇ ಶೇರು ಬೇಡ, ಈಗ ಹಣ ಕೊಡ್ತೀನಿ, ಆಮೇಲೆ ಕೊಡಿ' ಎಂದು ಹಣಕೊಟ್ಟವರೂ ಇದ್ದಾರೆ. ಇದೇ ರೀತಿ ಪತ್ರಿಕೆಯನ್ನು ಮುನ್ನಡೆಸುತ್ತಾ ಬಂದ ಶೆಟ್ರಿಗೆ ಯಾವ ಮೂಲದಿಂದಲೂ ಹಣ ಸಿಗದಿದ್ದಾಗ..!
ಹಣ ಎಲ್ಲೂ ಸಿಗಲಿಲ್ಲ ಸಾರ್, ಏಜೆಂಟರು ಮುಂಗಡ ಕೊಡಲು ಒಪ್ಪಲಿಲ್ಲ ಅಂತ ಸಿಬ್ಬಂದಿಗಳು ವರದಿ ಒಪ್ಪಿಸುತ್ತಿದ್ದರು. ಆ ಕ್ಷಣ ಶೆಟ್ರು ಯಾವ ಉದ್ವೇಗಕ್ಕೂ ಒಳಗಾಗುತ್ತಿರಲಿಲ್ಲ. ಬೀಡಿಗೆ ಬೆಂಕಿ ಹಚ್ಚಿ ಪುಂಕಾನುಪುಂಕವಾಗಿ ಹೊಗೆ ಬಿಡುತ್ತಾ ಮೌನವಾಗಿರುತ್ತಿದ್ದರು. ಮತ್ತೆ ಸ್ವಲ್ಪ ಹೊತ್ತು ಕಳೆದ ಮೇಲೆ ಕಠಿಣ ನಿರ್ಧಾರಕ್ಕೆ ಬಂದರು. ಅದು ನನಗೂ ಮೊದಲ ಅನುಭವ.
ತಮ್ಮ ಡ್ರೈವರ್ ನನ್ನು ಮನೆಗೆ ಕಳುಹಿಸಿ ಪತ್ನಿಯ ಚಿನ್ನಾಭರಣಗಳನ್ನು ತರಿಸಿ ಗಿರವಿ ಇಡಲು ಕೊಟ್ಟು ಆ ಹಣ ತಂದಮೇಲೆ ಭದ್ರಾವತಿಗೆ ನ್ಯೂಸ್ ಪ್ರಿಂಟ್ ತರಲು ಟೆಂಪೋ ಹೋಗುತ್ತಿತ್ತು. ಬೆಳಗಿನ ಜಾವ ಕ್ಕೆ ನ್ಯೂಸ್ ಪ್ರಿಂಟ್ ಬೈಕಂಪಾಡಿ ಪ್ರೆಸ್ ತಲುಪಿದ ಮೇಲೆ ‘ಮುಂಗಾರು' ಪತ್ರಿಕೆ ಮುದ್ರಣವಾಗಿ ಓದು ಗರ ಕೈಸೇರುತ್ತಿತ್ತು. ಈ ಕಾರಣಕ್ಕೇ ಹೇಳಿದ್ದು ‘ಮುಂಗಾರು' ಬೆಳೆಯ ಪೋಷಣೆಯ ಹಿಂದೆ ಅವರ ಪತ್ನಿಯದ್ದೂ ಪಾಲಿದೆ ಅಂತ.
ಹೀಗೆಯೇ ಹಲವು ಬಾರಿ ಅವರ ಪತ್ನಿಯ ಚಿನ್ನಾಭರಣಗ ದಿಸೆಯಿನದ ಮುಂಗಾರು ಓದುಗರ ಕೈ ಸೇರಿತ್ತು, ಆದರೆ ಎಂದೂ ಶೆಟ್ರು ಒಡವೆ ಅಡವಿಟ್ಟು ಪತ್ರಿಕೆ ಹೊರತಂದಿದ್ದೇನೆ ಎಂದು ಸಂಪಾದಕೀಯದಲ್ಲಿ ಹೇಳಿಕೊಂಡಿಲ್ಲ, ಬಹಿರಂಗ ಸಭೆಯಲ್ಲೂ ಬಾಯಿಬಿಟ್ಟಿಲ್ಲ.
ಒಬ್ಬ ಮುಖ್ಯ ವರದಿಗಾರನಾಗಿದ್ದ ನನಗೆ ‘ಮುಂಗಾರು' ಪತ್ರಿಕೆಯನ್ನು ಈಗಲೂ ಪ್ರೀತಿಸಲು ಅನೇಕ ಕಾರಣಗಳಿವೆ. ಆ ಪತ್ರಿಕೆ ನನಗೆ ಅನ್ನ ಕೊಟ್ಟಿತು, ವೃತ್ತಿಗೆ ಕೀರ್ತಿ ಸಂಪಾದಿಸಿಕೊಟ್ಟಿತು ಎನ್ನುವ ಹೆಮ್ಮೆ ಇದೆ. ಸಾಲ ಮಾಡಿ ಗೊತ್ತಿಲ್ಲದ ನಾನು ಪತ್ರಿಕೆಯ ನ್ಯೂಸ್ ಪ್ರಿಂಟ್ ತರಲು ಸಾಲ ಮಾಡ ಬೇಕಾದ ಸಂದರ್ಭವನ್ನು ಇಲ್ಲಿ ದಾಖಲಿಸುತ್ತೇನೆ.
ಚಿನ್ನಾಭರಣಗಳೆಲ್ಲವೂ ಗಿರವಿ ಅಂಗಡಿಯಲ್ಲಿದ್ದವು, ಆದ್ದರಿಂದಲೇ ಶೆಟ್ರು ಅದ್ಯಾಕೋ ಆದಿನ ತೀರಾ ಅಧೀರರಾಗಿದ್ದರು. ಶೆಟ್ರು ನನ್ನನ್ನು ಕರೆದು ಉಡುಪಿಗೆ ಹೋಗಿ ಒಬ್ಬರನ್ನು ಮೀಟ್ ಮಾಡಲು ಹೇಳಿ ದರು. ಅವರು ಹಣ ಕೊಡುತ್ತಾರೆ ಅದನ್ನು ಬೇಗ ತರಬೇಕು, ನ್ಯೂಸ್ ಪ್ರಿಂಟ್ ತರದೊದ್ದರೆ ನಾಳೆ ಪೇಪರ್ ಇರೋದಿಲ್ಲ ಅಂದ್ರು.
ಅವರು ಹೇಳಿದ ವ್ಯಕ್ತಿ ನನಗೂ ಪರಿಚಿತರು. ಉಡುಪಿಗೆ ಬಸ್ ಹತ್ತಿದೆ. ಶೆಟ್ರು ಹೇಳಿದ ವ್ಯಕ್ತಿ ಸಿಕ್ಕಿದ ರು. ಅವರೊಂದಿಗೆ ಮಾತಾಡುವುದಕ್ಕೆ ಎರಡು ಗಂಟೆ ಕಾಯಬೇಕಾಯಿತು, ಕಾಯದೆ ಉಪಾಯ ವಿಲ್ಲ. ಆದರೆ ಆ ವ್ಯಕ್ತಿ ತನ್ನ ಕಿಸೆಯ ಹಣಕೊಡುವ ಬದಲು ಒಬ್ಬ ಫೈನಾನ್ಸ್ ಕಂಪೆನಿಯ ವಿಳಾಸ ಕೊಟ್ಟು ಅಲ್ಲಿಗೆ ಹೋಗಿ ನಾನು ಹೇಳ್ತೇನೆ ಎಂದು ನನ್ನನ್ನು ಸಾಗ ಹಾಕಿದರು. ಶೆಟ್ರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಯಾರಿಂದಲಾದರೂ ಸರಿ ಹಣ ತಗೊಂಡು ಬಾ ಆಮೇಲೆ ಕೊಟ್ಟರಾ ಯಿತು ಅಂದರು.
ಕೊನೆಗೂ ಫೈನಾನ್ಸ್ ಕಂಪೆನಿ ಸಿಕ್ಕಿತು, ಆದರೆ ಅಲ್ಲಿ ಮಾಲೀಕರಿರಲಿಲ್ಲ. ಈಗ ಬರ್ತಾರೆ ಎಂದರು ಅಲ್ಲಿನ ಸಿಬ್ಬಂದಿ. ಮತ್ತೆ ಅಲ್ಲೂ ಕಾಯುವ ಕೆಲಸ. ಮಾಲೀಕರು ಬಂದರು. ನಾನು ಇಂಥವನೆಂದು ಪರಿಚಯಿಸಿಕೊಂಡು ಅವರಲ್ಲಿಗೆ ಕಳುಹಿಸಿದವರ ಹೆಸರು ಹೇಳಿದೆ. ಆಗ ಫೈನಾನ್ಸ್ ಕಂಪೆನಿಯ ಮಾಲೀಕರು ಅವರಿಗೆ ಫೋನ್ ಮಾಡಿ ಮಾತಾಡಿದ ಮೇಲೆ ಹಣಕೊಡುವ ಬದಲು ಸಾಲದ ಕಾಗದ ಪತ್ರಗಳನ್ನು ರೆಡಿ ಮಾಡಲು ಹೇಳಿದರು ಅವರ ಸಿಬ್ಬಂದಿಗಳಿಗೆ.
ಸರಿ ಸುಮಾರು ಇಪ್ಪತ್ತೈದು ಪುಟಗಳಿರಬಹುದಾದ ಪುಸ್ತಕ ಹಿಡಿದು ನನ್ನ ಮುಂದೆ ಕುಳಿತ ಸಿಬ್ಬಂದಿ ನನ್ನ ತಂದೆ, ತಾಯಿ ಕುಲ ಗೋತ್ರ ಸಹಿತ ಸಂಪೂರ್ಣ ಜಾತಕ ಬರೆದುಕೊಂಡು ಸುಮಾರು ಇಪ್ಪ ತ್ತೈದು ಪುಟಗಳಿಗೂ ಸಹಿಪಡೆದುಕೊಂಡರು. ಹತ್ತು ನಿಮಿಷಗಳ ನಂತರ ಹಣ ಕೈಗೆ ಕೊಟ್ಟರು ಫೈ ನಾನ್ಸ್ ಮಾಲೀಕರು. ಆ ಹಣವನ್ನು ಶೆಟ್ರ ಕೈಗೆ ತಲುಪಿಸಿದ ಮೇಲೆ ವ್ಯಾನ್ ಭದ್ರಾವತಿಗೆ ದೌಡಾಯಿ ಸಿತು, ಮರುದಿನ ತಡವಾದರೂ ಪತ್ರಿಕೆ ಓದುಗರ ಕೈ ಸೇರಿತು.
ಈ ವಿಷಯವನ್ನು ನಾನು ಯಾರಿಗೂ ಹೇಳಿರಲಿಲ್ಲ, ಆದರೆ ಎಲ್ಲಿಂದಲೋ ನಾನು ಹಣ ತಂದಿದ್ದೇನೆ ಎನ್ನುವುದು ಹಲವರಿಗೆ ಗೊತ್ತಿತ್ತು. ಕೆಲವು ತಿಂಗಳು ಕಳೆದ ಮೇಲೆ ಫೈನಾನ್ಸ್ ಕಂಪೆನಿಯಿಂದ ನನ್ನ ಮನೆಗೆ ನೋಟೀಸ್ ಬಂತು. ಅದರಲ್ಲಿದ್ದ ಒಕ್ಕಣೆಯ ಸಾರಾಂಶ ನಾನು ಪಡೆದುಕೊಂಡ ಸಾಲದ ಅಸಲು, ಬಡ್ಡಿ ಪಾವತಿಸಿಲ್ಲ, ತಕ್ಷಣ ಪಾವತಿಸಬೇಕು ಎಂಬುದು.
ಶೆಟ್ರಿಗೆ ಆ ನೋಟೀಸು ತೋರಿಸಿದೆ, ನೋಡೋಣ ಬಿಡೋ ಎಂದು ಸುಮ್ಮನಾದರು. ಮತ್ತೆ ಮೂರು ತಿಂಗಳಾದ ಮೇಲೆ ಮತ್ತೊಂದು ನೋಟೀಸ್ ಬಂತು. ಆಗ ಶೆಟ್ರು ಆ ನೋಟೀಸ್ ತೆಗೆದುಕೊಂಡರು. ಆಮೇಲೆ ಗೊತ್ತಾಯಿತು ಶೆಟ್ರು ಅವರ ಸ್ನೇಹಿತರೊಬ್ಬರಿಂದ ಆ ಹಣವನ್ನು ಫೈನಾನ್ಸ್ ಕಂಪೆನಿಗೆ ಪಾವತಿಸಿದರೆಂದು. ಒಂದು ಪತ್ರಿಕೆ ನಡೆಸುವುದು ಕಷ್ಟ ಎಷ್ಟೆಂದು ಶೆಟ್ರನ್ನು ಕೇಳಿದ್ದರೆ ಹೇಳುತ್ತಿದ್ದರು ಅಂದುಕೊಳ್ಳಬೇಡಿ. ತಾವು ಪಡುತ್ತಿದ್ದ ಸಂಕಟವನ್ನು ಯಾರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಅವರು ಕೊನೆ ಕೊನೆಗೆ ಪತ್ರಿಕೆಗೆ ಸಂಪಾದಕೀಯ ಬರೆಯುವುದನ್ನು ಬಿಟ್ಟು ಹಣಹೊಂದಿಸುವುದಕ್ಕೇ ಗಮನ ಕೊಡಬೇಕಾಯಿತು.
(ಮುಂದುವರೆಯುವುದು)

-ಚಿದಂಬರ ಬೈಕಂಪಾಡಿ
ವರದಿಯ ವಿವರಗಳು |
 |
ಕೃಪೆ : ಕೆ೦ಡ ಸ೦ಪಿಗೆ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-15
|
|
|