ಬೆ೦ಗಳೂರು: ಚುನಾವಣೆ ನಂತರವೇ ಸಂಪುಟಕ್ಕೆ ಸರ್ಜರಿ? |
ಪ್ರಕಟಿಸಿದ ದಿನಾಂಕ : 2010-07-30
ಬೆಂಗಳೂರು: ಪ್ರಸಕ್ತ ಆಷಾಢ ಮಾಸ ಮುಗಿದ ಕೂಡಲೇ ಸಂಪುಟಕ್ಕೆ ಸರ್ಜರಿ ಕೈಗೊಳ್ಳುತ್ತೇನೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಕೇವಲ ಆಶಯ ರೂಪದಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದ್ದು, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ವರೆಗೆ ಇದು ಕಾರ್ಯರೂಪಕ್ಕೆ ಬರುವುದು ಬಹುತೇಕ ಅಸಾಧ್ಯವಾಗಿದೆ.
ಈ ಹಂತದಲ್ಲಿ ಸಂಪುಟ ಸರ್ಜರಿ ಪ್ರಕ್ರಿಯೆ ಕೈಗೆತ್ತಿಕೊಂಡರೆ ಭಿನ್ನಮತ ಭುಗಿಲೆದ್ದು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬುದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸೇರಿ ದಂತೆ ಅನೇಕ ನಾಯಕರ ಸ್ಪಷ್ಟ ಅಭಿಪ್ರಾಯ.
ಯಡಿಯೂರಪ್ಪ ಅವರು ಕಳೆದ ವಾರ ದೆಹಲಿಗೆ ತೆರಳಿ ಆಷಾಢದ ನಂತರವೇ ಸಂಪುಟಕ್ಕೆ ಸರ್ಜರಿ ಕೈಗೆತ್ತಿಕೊಳ್ಳುವುದಾಗಿ ಪಕ್ಷದ ವರಿಷ್ಠರ ಕಿವಿಯಲ್ಲಿ ಉಸುರಿ ಬಂದಿದ್ದರೂ, ಅದರ ಬೆನ್ನಲ್ಲೇ ದೆಹಲಿಗೆ ದೌಡಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಸದ್ಯದ ಪರಿಸ್ಥಿತಿಯಲ್ಲಿ ಸಂಪು ಟಕ್ಕೆ ಸರ್ಜರಿ ಕೈಗೊಂಡರೆ ತೀವ್ರ ಆಂತರಿಕ ಭಿನ್ನಾಭಿಪ್ರಾಯ ಉದ್ಭವಿಸುವುದು ನಿಶ್ಚಿತ ಎಂಬ ಎಚ್ಚರಿಕೆಯ ಸಂದೇಶವನ್ನು ತಲುಪಿಸಿ ಬಂದಿದ್ದಾರೆ ಎನ್ನಲಾಗಿದೆ.
-ಮುಂದಿನ ವಾರ ಬಿಜೆಪಿ-ಸಂಘ ಪರಿವಾರದ ಮಹತ್ವದ ಸಭೆ: ಮುಂದಿನ ವಾರದ ವೇಳೆ (ಸದ್ಯದ ಪ್ರಕಾರ ಆ.೭) ರಾಜ್ಯ ಬಿಜೆಪಿ ಹಿರಿಯ ನಾಯಕರು ಹಾಗೂ ಸಂಘ ಪರಿವಾರದ ಹಿರಿಯ ಮುಖಂಡರನ್ನು ಒಳಗೊಂಡ ಮಹತ್ವದ ಸಭೆಯೊಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಆ ಸಭೆಯಲ್ಲಿ ಸಂಪುಟಕ್ಕೆ ಸರ್ಜರಿ ಕೈಗೊಳ್ಳುವ ಬಗ್ಗೆ ಸ್ಪಷ್ಟ ತೀರ್ಮಾನ ಹೊರಬೀಳುವ ಸಾಧ್ಯತೆ ಯಿದೆ.
ಸದ್ಯಕ್ಕೆ ಸಂಪುಟ ಸರ್ಜರಿಯ ಸಹವಾಸವೇ ಬೇಡ ಎಂಬುದನ್ನು ಪಕ್ಷದ ಹಿರಿಯ ನಾಯಕರೂ ಸೇರಿದಂತೆ ಸಂಘ ಪರಿವಾರದ ಮುಖಂಡರು ಯಡಿಯೂರಪ್ಪ ಅವರಿಗೆ ಸಲಹೆ ನೀಡಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಸಂಪುಟಕ್ಕೆ ಸರ್ಜರಿ ಎಂಬ ಮಾತನ್ನ ಹೇಳಿದರೂ ವಾಸ್ತವವಾಗಿ ಮುಖ್ಯಮಂತ್ರಿಗಳಿಗೆ ಸಂಪುಟ ವಿಸ್ತರಣೆಯಷ್ಟೇ ಬೇಕಾಗಿದೆ. ತಮಗೆ ಆಪ್ತರಾಗಿರುವ ಶೋಭಾ ಕರಂದ್ಲಾಜೆ ಹಾಗೂ ವಿ.ಸೋಮಣ್ಣ ಅವರನ್ನಷ್ಟೇ ತಕ್ಷಣ ಸಂಪುಟಕ್ಕೆ ತೆಗೆದುಕೊಳ್ಳುವುದು ಅವರ ಮುಖ್ಯ ಗುರಿಯಾಗಿದೆ ಎನ್ನಲಾಗಿದೆ.
ಶೋಭಾ ಅಥವಾ ಸೋಮಣ್ಣ ಸೇರ್ಪಡೆಗೆ ಪಕ್ಷದ ಇತರ ಹಿರಿಯ ನಾಯಕರ ವಿರೋಧವಿಲ್ಲ. ಅವರಿಬ್ಬರ ಸೇರ್ಪಡೆಗೆ ಹಸಿರು ನಿಶಾನೆಯನ್ನೂ ನೀಡಿದ್ದಾರೆ. ಆದರೆ, ಕೇವಲ ಇಬ್ಬರನ್ನಷ್ಟೇ ಸಂಪುಟಕ್ಕೆ ತೆಗೆದುಕೊಳ್ಳುವುದರ ಬದಲು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ನಂತರ ಹಲವು ಅಸಮರ್ಥ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳುವ ಮೂಲಕ ಸಂಪುಟಕ್ಕೆ ಹೊಸ ರೂಪು ನೀಡಬೇಕು ಎಂಬುದು ಅನೇಕ ಹಿರಿಯ ನಾಯಕರ ಅಭಿಪ್ರಾಯ.
‘ಸದ್ಯಕ್ಕೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯ ಬಿರುಗಾಳಿ ತೀವ್ರವಾಗಿ ಬೀಸುತ್ತಿದೆ. ಮೊದಲು ಇದರಿಂದ ಹೊರಬಂದು ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸಬೇಕು. ಈ ವೇಳೆಯಲ್ಲಿ ಸಂಪುಟ ಸರ್ಜರಿ ಹಾಗೂ ಭಿನ್ನಮತದ ರಾಡಿ ಅಂಟಿಸಿಕೊಂಡು ಪ್ರತಿಪಕ್ಷಗಳ ಟೀಕೆಗೆ ಪ್ರಬಲ ಅಸ್ತ್ರ ಒದಗಿಸುವುದು ಸರಿಯಲ್ಲ. ಜಿಲ್ಲಾ ಪಂಚಾಯ್ತಿ ಚುನಾವಣೆ ನಂತರ ಗಂಭೀರವಾಗಿ ಪರಾಮರ್ಶೆ ನಡೆಸಿ ಸರ್ಜರಿ ಕೈಗೆತ್ತಿಕೊಳ್ಳುವುದು ಸೂಕ್ತ. ಇದನ್ನು ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ಪ್ರಭಾವಿ ನಾಯಕರೊಬ್ಬರು ಅನಿಸಿಕೆ ವ್ಯಕ್ತಪಡಿಸಿದರು.
ಸಂಘ ಪರಿವಾರದ ಮೊರೆ ಹೋದ ಹಿರಿಯ ಶಾಸಕರು
ತಮಗೆ ಹಿಂದೆ ನೀಡಿದ ವಾಗ್ದಾನದಂತೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಪಕ್ಷದ ಹಲವಾರು ಶಾಸಕರು ಸಂಘ ಪರಿವಾರದ ಮುಖಂಡರಿಗೆ ಮನವಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಶಾಸಕ ಅಪ್ಪಚ್ಚು ರಂಜನ್, ಎ.ರಾಮದಾಸ್, ನಾರಾಯಣಸ್ವಾಮಿ ಮತ್ತಿತರರು ನಗರದಲ್ಲಿ ಸಂಘ ಪರಿವಾರದ ಮುಖಂಡರನ್ನು ಭೇಟಿ ಮಾಡಿ ಸುದೀರ್ಘ ಮಾತು ಕತೆ ನಡೆಸಿದರು ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಭಿನ್ನಮತ ಉಲ್ಬಣಿಸಿದ ವೇಳೆ ಈ ಹಿರಿಯ ಶಾಸಕರಿಗೆ ಬಜೆಟ್ ಅಧಿವೇಶನದ ನಂತರ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದರು.
ಅದನ್ನು ಈಡೇರಿಸಲು ಸೂಚಿಸುವಂತೆ ಸಂಘ ಪರಿವಾರದ ಮುಖಂಡರಿಗೆ ಈ ಶಾಸಕರು ಮನವಿ ಮಾಡಿದರು ಎಂದು ತಿಳಿದು ಬಂದಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-30 00:00:00
|
|
|