ಏಕವಚನ ಪ್ರಯೋಗ; ವೈಷಮ್ಯಕ್ಕೆ ತಿರುಗುತ್ತಿರುವ ಕಾಂಗ್ರೆಸ್ ರೆಡ್ಡಿ ಬಳಗದ ಸಮರ; ಅಕ್ರಮ ಸಾಬೀತಾದರೆ ಜನರೆದುರೇ ನೇಣು!- ಜನಾರ್ದನ ರೆಡ್ಡಿ |
ಪ್ರಕಟಿಸಿದ ದಿನಾಂಕ : 2010-07-30
ವೈಷಮ್ಯಕ್ಕೆ ತಿರುಗುತ್ತಿರುವ ಕಾಂಗ್ರೆಸ್ ರೆಡ್ಡಿ ಬಳಗದ ಸಮರ
ಬೆಂಗಳೂರು, ಜು. 19: ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಆರಂಭಿಸಿರುವ ಬಳ್ಳಾರಿ ಪಾದಯಾತ್ರೆ 5ನೇ ದಿನವಾದ ಇಂದಿಗೆ ನೂರು ಕಿ.ಮೀ. ಕ್ರಮಿಸಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ಕಾಂಗ್ರೆಸ್ ನಾಯಕರು ಪಾದ ಬೆಳೆಸಿದ್ದಾರೆ.
ಆಗಸ್ಟ್ 9 ರಂದು ಬಳ್ಳಾರಿ ತಲುಪಲು ಇನ್ನೂ 11ದಿನಗಳ ಪಾದಯಾತ್ರೆಯಲ್ಲಿ 110 ಕಿ.ಮೀ. ಸಾಗಬೇಕಿದೆ. ಸಾಕಷ್ಟು ಬೆವರು ಸುರಿಸಬೇಕಿದೆ, ಚಪ್ಪಲಿ, ಷೂ ಸವೆಸಬೇಕಿದೆ. ಮಳೆ ಸುರಿದರೆ ಮಳೆಯಲ್ಲೂ ತೊಯ್ಯಬೇಕಿದೆ. ತಣ್ಣನೆಯ ವಾತಾವರಣದಲ್ಲೂ ಪಾದಯಾತ್ರೆ ದಿನೇ ದಿನೇ ಕಾವೇರತೊಡಗಿದೆ.ಜತೆಗೆ ಹೊಸ ಹೊಸ ರಂಗು ಪಡೆದುಕೊಂಡು ಪಾದಯಾತ್ರೆ ಜನ ಜಾತ್ರೆ ರೂಪ ಪಡೆದುಕೊಳ್ಳುತ್ತಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಳ್ಳಾರಿಯತ್ತ ಕಾಂಗ್ರೆಸ್ಸಿಗರು ಇಟ್ಟ ದಿಟ್ಟ ಹೆಜ್ಜೆ ಭರದಿಂದ ಸಾಗಿದೆ.
ಈ ಮಧ್ಯೆ ಕಾಂಗ್ರೆಸ್ ಪಾದಯಾತ್ರೆಗೆ ಪರ್ಯಾಯವಾಗಿ ಬಳ್ಳಾರಿ ಗಣಿಧಣಿ ಸಚಿವರಾದ ಕರುಣಾಕರ ರೆಡ್ಡಿ , ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರು ಬುಧವಾರದಿಂದ ಬಳ್ಳಾರಿ ಜಿಲ್ಲೆಗೆ ಸೀಮಿತವಾಗಿ ಆರಂಭಿಸಿರುವ ಸ್ವಾಭಿಮಾನ ಸಮಾವೇಶ ಕಾಂಗ್ರೆಸ್ಗೆ ತಿರುಗೇಟು ನೀಡುವುದೇ ಆಗಿದೆ. ಆದರೆ, ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷವಿರಲಿ ಹಾಗೂ ರೆಡ್ಡಿ ಬಳಗದ ಸ್ವಾಭಿಮಾನಿ ಸಮಾವೇಶವಿರಲಿ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಬದಲಿಗೆ ವೈಯಕ್ತಿಕ ದ್ವೇಷಕ್ಕೆ ತಿರುಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ .

ಕಾಂಗ್ರೆಸ್ ಪಾದಯಾತ್ರೆ ವೈಖರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಳ್ಳಾರಿ ಸಚಿವರು ನೀಡಿರುವ ಹೇಳಿಕೆಗಳು, ಅದಕ್ಕೆ ಪ್ರತಿಯಾಗಿ ವಿಪಕ್ಷ ನಾಯಕರಾದ ಸಿದ್ದರಾಮಯ್ಯ , ಮೋಟಮ್ಮ , ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮೇಲ್ಮನೆ ಪ್ರತಿ ಪಕ್ಷದ ಮಾಜಿ ನಾಯಕ ವಿ.ಎಸ್. ಉಗ್ರಪ್ಪ ಅವರು ನೀಡುತ್ತಿರುವ ಹೇಳಿಕೆಗಳು ಈಗ ಕಾಂಗ್ರೆಸ್ ಹಾಗೂ ರೆಡ್ಡಿ ಬಳಗದ ನಡುವೆ ವೈಯಕ್ತಿಕ ದ್ವೇಷವನ್ನು ಹುಟ್ಟು ಹಾಕಿದೆ.
ಕಾಂಗ್ರೆಸ್ ಹಾಗೂ ರೆಡ್ಡಿ ಬಳಗದ ನಡುವೆ ವಿಧಾನಮಂಡಲದ ಒಳಗೆ ಆರಂಭವಾಗಿರುವ ಜಟಾಪಟಿ ಈಗ ಸದನದ ಹೊರಗಡೆಯೂ ಮುಂದುವರಿದಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರು ತಮ್ಮ ಕೇಶಮುಂಡನಕ್ಕೆ ನೀಡಿರುವ ಕಾರಣ ಕಾಂಗ್ರೆಸ್ಸಿಗರನ್ನು ಕೆರಳಿಸಿದೆ, ಪ್ರತಿಯಾಗಿ ಕಾಂಗ್ರೆಸ್ ನಾಯಕರು ಪಾಪದ ಕೊಡ ತುಂಬಿರುವುದಕ್ಕೆ ತಲೆ ಬೋಳಿಸಿಕೊಂಡಿ ದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುವ ಮೂಲಕ ವಾಕ್ಸಮರ ಮುಂದುವರಿಸಿದ್ದಾರೆ.
ತಮ್ಮನ್ನು ಟಾರ್ಗೆಟ್ ಮಾಡಿಯೇ ಕಾಂಗ್ರೆಸ್ಸಿಗರು ಪಾದಯಾತ್ರೆ ಆರಂಭಿಸಿದ್ದಾರೆ ಎಂಬುದನ್ನು ಅರಿತಿರುವ ರೆಡ್ಡಿ ಬಳಗ ಹತಾಶ ರಾದವರಂತೆ, ತಮ್ಮ ಕೋಟೆಗೆ ನುಗ್ಗುತ್ತಿದ್ದಾರೆ ಎಂಭ ಭಯ ಹಾಗೂ ಅಭದ್ರತೆ ಕಾಡತೊಡಗಿ ಅವರ ಮಾತಿನ ಧಾಟಿ ಬದ ಲಾಗುತ್ತಿದೆ. ವೈಯಕ್ತಿಕ ಮಟ್ಟಕ್ಕೆ ಅದರಲ್ಲೂ ತೀರ ಕೆಳಮಟ್ಟದ ಭಾಷೆಯಲ್ಲಿ ಏಕ ವಚನಗಳನ್ನು ಪ್ರಯೋಗಿಸುವ ಮೂಲಕ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಕೆರಳಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಎಲ್ಲಾ ಲಕ್ಷಣಗಳಿವೆ.
ಇನ್ನು 11 ದಿನದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ರೆಡ್ಡಿ ಬಳಗದ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತಷ್ಟು ವಾಗಾœಳಿ ನಡೆಸಲಿದ್ದಾರೆ. ಜತೆಗೆ ಹತ್ತು ಹಲವು ವಿಷಯಗಳ ಬಗ್ಗೆ ವಾದ- ಪ್ರತಿವಾದ ನಡೆಯುತ್ತಲೇ ಇರುತ್ತವೆ. ಇದು ಆಡಳಿತ ಮತ್ತು ವಿಪಕ್ಷದ ನಡುವೆ ಮಾತಿನ ಕಿಡಿಗಳು ನಡೆದು ಬೆಂಕಿ ಕಾಣಿಸಿಕೊಳ್ಳುವ ಲಕ್ಷಣಗಳಿವೆ. ಕಾಂಗ್ರೆಸ್ ಪಾದಯಾತ್ರೆ ಬಳ್ಳಾರಿ ತಲುಪುವ ಮುನ್ನವೇ ಜಿಲ್ಲೆಯಲ್ಲಿ ರೆಡ್ಡಿ ಬಳಗ ನಡೆಸಲಿರುವ ಸ್ವಾಭಿಮಾನ ಸಮಾವೇಶಗಳು ಕಾಂಗ್ರೆಸ್ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಇದು ಕಾಂಗ್ರೆಸ್ ಸಮಾವೇಶದ ವೇಳೆಗೆ ಕಾನೂನು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ .
ಅಕ್ರಮ ಸಾಬೀತಾದರೆ ಜನರೆದುರೇ ನೇಣು!

ಬಳ್ಳಾರಿ, ಜು. 29 : ಕೇಶಮುಂಡನ ಮಾಡಿಕೊಂಡು ಕಪ್ಪು ಬಟ್ಟೆ ಧರಿಸಿ ವರಮಹಾಲಕ್ಷ್ಮಿ ಪೂಜಾದಿನದವರೆಗೆ ಕಾಳುಕಡಿ ಗಳನ್ನಷ್ಟೇ ತಿನ್ನುವ ವ್ರತ ತೊಟ್ಟಿರುವ ಶ್ರೀರಾಮುಲು ಅವರ ಸ್ವಾಭಿಮಾನಿ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಶ್ರೀರಾಮುಲು ನೇತೃತ್ವದಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಯಾತ್ರೆಯ ಎರಡನೇ ದಿನ ಚೆಳ್ಳಗುರ್ಕಿ ಗ್ರಾಮದ ಆರಾಧ್ಯದೈವ ಶ್ರೀ ಎರ್ರಿತಾತನವರ ಜೀವಸಮಾಧಿ ಕ್ಷೇತ್ರದ ಮುಂಭಾಗದಲ್ಲಿ ಅವರು ಎರಡು ಸಾವಿರ ಅಭಿಮಾನಿಗಳೆದಿರು ಶ್ರೀರಾಮುಲು, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.



ನಮ್ಮನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರು ತಾಕತ್ತಿದ್ದರೆ ಅಕ್ರಮ ಗಣಿಗಾರಿಕೆಯ ದಾಖಲಾತಿಗಳನ್ನು ಹೊತ್ತು ಬಳ್ಳಾರಿಗೆ ಬರಲಿ. ಅಕ್ರಮ ಗಣಿಗಾರಿಕೆ ನಡೆಸಿದ್ದು ಸಾಬೀತಾದಲ್ಲಿ ಜನರೆದುರಿಗೇ ನೇಣು ಹಾಕಿಕೊಳ್ಳುತ್ತೇನೆ ಎಂದು ಗುಡುಗಿರುವ ಜಿ. ಜನಾರ್ದನ ರೆಡ್ಡಿ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಜರಿದಿದರು.
ಏಕವಚನ ಪ್ರಯೋಗ :
"ನಮ್ಮ ವಿರುದ್ಧ ಸಿದ್ಧರಾಮಯ್ಯ, ದೇವೇಗೌಡರಂಥಹ ನೂರಾರು ಜನರು ಬಂದರೂ ಕೂಡ ನಮ್ಮನ್ನು ಏನೇನೂಮಾಡಿಕೊಳ್ಳಲು ಸಾಧ್ಯವಿಲ್ಲ. ಸಿದ್ಧರಾಮಯ್ಯಾ ನಿನ್ನ 60 ವರ್ಷ ವಯಸ್ಸಿನಲ್ಲಿ 30 ವರ್ಷ ರಾಜಕೀಯ ಅನುಭವ ಹೊಂದಿದ್ದೀಯ. ಇನ್ನು ನೀನೇ ತೋಳ್ತಟ್ಟಿದಲ್ಲಿ 27 ವರ್ಷದ ಸುರೇಶ್ಬಾಬು ಉದ್ವೇಗಕ್ಕೆ ಒಳಗಾಗುವುದರಲ್ಲಿ ತಪ್ಪಿಲ್ಲ" ಎಂದು ಜನಾರ್ದನ ರೆಡ್ಡಿ ಸಿದ್ದರಾಮಯ್ಯ ನವರನ್ನು ಮೂದಲಿಸಿದರು.
ಜಿಲ್ಲೆಯಲ್ಲಿ ರೆಡ್ಡಿ ಸಹೋದರರು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗನ್ನು ನೋಡಿ ಕಾಂಗ್ರೆಸ್ ನಾಯಕರೇ ನೇಣು ಹಾಕಿಕೊಳ್ಳ ಬೇಕು. ಜಿಲ್ಲೆಯ ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೆಲ ಪದಗಳನ್ನು ಬಳಕೆ ಮಾಡಿದ್ದಾರೆ. ಬಳ್ಳಾರಿ ಜನರನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ನ ಈ ವರ್ತನೆಯಿಂದ ಬೇಸತ್ತ ಶ್ರೀರಾಮುಲು ಕಠಿಣವ್ರತವನ್ನು ಪಾಲಿಸುತ್ತಿದ್ದಾರೆ. ನಾವು ಜನಪರರು, ಅಪರಂಜಿಗಳು ಎಂದು ಹೇಳಿದರು.
ಸಿಬಿಐ ಕಾಂಗ್ರೆಸ್ ಏಜೆಂಟ್ :

ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ನಮ್ಮನ್ನು ಹಾಳುಮಾಡಲಿಕ್ಕಾಗಿಯೇ ಕಾಂಗ್ರೆಸ್ ಸಾಕಷ್ಟು ಹುನ್ನಾರ ನಡೆಸುತ್ತಿದೆ. ನಮ್ಮನ್ನು ದಿವಾಳಿ ಎಬ್ಬಿಸಲಿಕ್ಕಾಗಿ `ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್' ತನಿಖೆ ಆಗಬೇಕು ಎಂದು ಕಾಂಗ್ರೆಸ್ಸಿಗರು ಪಟ್ಟುಹಿಡಿದಿದ್ದಾರೆ. ಸಿಬಿಐ ಎಂಬ ತನಿಖಾ ಸಂಸ್ಥೆ ಕೇಂದ್ರದಲ್ಲಿ ಅಧಿಕಾರಕ್ಕೆ ಇರುವ ಪಕ್ಷಗಳ ಏಜೆಂಟರಂತೆ ಕಾರ್ಯನಿರ್ವಹಿಸುತ್ತದೆ. ಈ ದೇಶದ ಜನರು ಬ್ರಿಟೀಷರ ವಿರುದ್ಧ ಹೋರಾಡಿದಂತೆ ನಾನು ಕಾಂಗ್ರೆಸ್ ವಿರುದ್ಧ ಹೋರಾಡುತ್ತೇನೆ ಎಂದರು.
ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರ ಮೇಲೆ ಮತ್ತೊಮ್ಮೆ ಟೀಕಾಪ್ರಹಾರ ಮುಂದುವರೆಸಿದ ಬಿ. ಶ್ರೀರಾಮುಲು, ರಾಜ್ಯಪಾಲರು ಕಾಂಗ್ರೆಸ್ನ ಏಜೆಂಟರು. ಅವರು ತಮ್ಮ ಕಾನೂನಿನ ವ್ಯಾಪ್ತಿ - ಮಿತಿಯನ್ನು ಮೀರಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೋರಾಟ ಇಲ್ಲಿಗೇ ಮುಗಿಯುವುದಿಲ್ಲ. ಇದು ಆರಂಭ ಅಷ್ಟೇ ಎಂದು ಹೇಳಿದರು. ಶುಕ್ರವಾರ ಸಿರುಗುಪ್ಪ ಮತ್ತು ತೆಕ್ಕಲಕೋಟೆಯಲ್ಲಿ ಬಹಿರಂಗ ಸಭೆ ನಡೆಯಲಿವೆ.
ಅಭಿಮಾನಿಗಳೂ ಬೋಳು ಬೋಳು:


ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿಯಾಗಿ ಜಿಲ್ಲೆಯಾದ್ಯಂತ ಪಾದಯಾತ್ರೆ ಮಾಡುತ್ತಿರುವ ರೆಡ್ಡಿ ಸಹೋದರರು ಜನರ ಬೆಂಬಲ ಪಡೆಯಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ನಾಯಕ ನಿಷ್ಠೆ ತೋರಿರುವ ಶ್ರೀರಾಮುಲು ಹಿಂಬಾಲಕರು ಕೂಡ ಶ್ರೀರಾಮುಲು ವಂತೆ ಕೇಶಮುಂಡನ ಮಾಡಿಕೊಂಡು, ಕಪ್ಪು ಬಟ್ಟೆ ಧರಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಶ್ರೀರಾಮುಲುಗೆ ಹೋದಲ್ಲೆಲ್ಲ ಹೆಂಗಳೆಯರು ಆರತಿ ಎತ್ತಿ ಸ್ವಾಗತಿಸಿದರು.

ಕಬ್ಬಿಣ ಅದಿರು ರಫ್ತಿಗೆ ನಿಷೇಧ :
ಕರ್ನಾಟಕದ ಬಂದರುಗಳಿಂದ ಕಬ್ಬಿಣ ಅದಿರು ರಫ್ತು ಮಾಡುವುದನ್ನು ನಿಷೇಧಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಇರುವುದು ಇದೊಂದೇ ಮಾರ್ಗ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಕೈಗೊಂಡಿರುವ ಈ ದಿಟ್ಟ ಕ್ರಮ ರೆಡ್ಡಿ ಸಹೋದರರಿಗೆ ಇರುಸು ಮುರುಸು ಮಾಡುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಮೇಲ್ನೋಟಕ್ಕೆ ಪಾದಯಾತ್ರೆಯ ಪ್ರಹಸನ ಕಾಂಗ್ರೆಸ್ ಮತ್ತು ರೆಡ್ಡಿ ಸಹೋದರರ ನಡುವಿನ ಕದನ ಎಂಬಂತೆ ಕಂಡರೂ, ರೆಡ್ಡಿ ಸಹೋದರರು ಮತ್ತು ಯಡಿಯೂರಪ್ಪನವರ ನಡುವಿನ ವೈಮನಸ್ಸು ಬೂದಿ ಮುಚ್ಚಿದ ಕೆಂಡದಂತೆ ಉರಿಯುತ್ತಲೇ ಇದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ| ದಟ್ಸ್ ಕನ್ನಡ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-30
|
|
|