ಉಡುಪಿ: ಧಾರಕಾರ ಸುರಿದ ಮಳೆ: ಶಾಲೆಯೊ೦ದರ ಮೇಲೆ ಬಿದ್ದ ಮರ: 22 ಮ೦ದಿ ವಿದ್ಯಾರ್ಥಿಗಳಿಗೆ ಗಾಯ |
ಪ್ರಕಟಿಸಿದ ದಿನಾಂಕ : 2010-07-29
(ತುಂಬಾ ಚಿತ್ರಗಳಿವೆ)
ಮಣಿಪುರ, ಜು, 29: ಉಡುಪಿ ತಾಲೂಕಿನ ಕಟಪಾಡಿ ಸಮೀಪದ ಮಣಿಪುರ ಶಾಲೆಯ ಭಜನಾ ಮ೦ದಿರದಲ್ಲಿ ಸುಮಾರು 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಭಾರೀ ಗಾಳಿ ಮಳೆ ಯಿ೦ದಾಗಿ ಶಾಲೆಯ ಸಮೀಪದಲ್ಲಿದ್ದ ಮರವೊ೦ದು ಮಹಡಿಯ ಮೇಲೆ ಬಿದ್ದು, 15 ವಿದ್ಯಾರ್ಥಿ ಗಳಿಗೆ ಗಾಯಗಳಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಾಪು, ಜು.29: ಮಣಿಪುರ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ತರಗತಿ ನಡೆಯುವಾಗಲೇ ಗುರುವಾರ ಮರವೊಂದು ಬಿದ್ದು 22 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ತರಗತಿ ಕೋಣೆಗಳ ಕೊರತೆ ಇರುವುದರಿಂದ ಶಾಲೆಯ ಬಳಿ ಇರುವ ಧೂಮಾವತಿ ದೈವಸ್ಥಾನದ ಗಡುಬಾಡು ಬಯಲು ಮಂಟಪದಲ್ಲಿ ಆರನೆಯ ತರಗತಿಯನ್ನು ಶಿಕ್ಷಕಿ ನಿವೇದಿತಾ ನಡೆಸುತ್ತಿದ್ದರು. ಮಧ್ಯಾಹ್ನ 12.15ರ ಹೊತ್ತಿಗೆ ಬೀಸಿದ ಭಾರೀ ಗಾಳಿ ಮಳೆಗೆ ಮರವೊಂದು ಉರುಳಿ ಬಿತ್ತು. ತಗಡಿನ ಚಪ್ಪರವಾದ ಕಾರಣ ದೊಡ್ಡ ಪ್ರಮಾಣದ ಹಾನಿ ಆಗಲಿಲ್ಲ.
ಪಕ್ಕದ ಚೆಂಚಿನ ಮಾಡಿನ ಮೇಲೆ ಮರ ಬಿದ್ದಿದ್ದರೆ ಇನ್ನಷ್ಟು ಅಪಾಯ ಸಂಭವಿಸುತ್ತಿತ್ತು. ಘಟನೆ ನಡೆದ ಕೂಡಲೇ ಕಂದಾಯ ಇಲಾಖೆ, ಪೊಲೀಸರು, ಅಗ್ನಿಶಾಮಕದಳ ಇಲಾಖೆ ಸಿಬಂದಿಗಳು, ಸಿಬಂದಿಗಳು ಬಂದು ಗಾಯಗೊಂಡ ಮಕ್ಕಳನ್ನು ಆಸ್ಪೆತ್ರೆಗೆ ಕೊಂಡೊಯ್ಯುವಲ್ಲಿ ಸಹಕರಿಸಿದರು. ಕೆಲವು ಮಕ್ಕಳಿಗೆ ಮುಖ, ಕೈ, ಕಾಲುಗಳಿಗೆ ಗಾಯವಾದರೆ, ಕೆಲವು ಮಕ್ಕಳು ಹೆದರಿಕೊಂಡೇ ಮೂರ್ಛೆ ಬಿದ್ದರು ಎಂದು ತಿಳಿದುಬಂದಿದೆ.
ಗಾಯಗೊಂಡ ಮಕ್ಕಳ ಹೆಸರು ಇಂತಿವೆ: ಹರ್ಷದ್ (10), ನೌಪಲ್ (11), ರುಕ್ಷಾನ (11), ದುಹಾನ (12), ಸುಜಾನ್ (11), ಆಶಿಕಾ (12), ಶಮೀರ್ (11), ಆಫಿಯಾ (12), ಶಾಕಿರಾ (11), ಹಸೀನಾ (10), ಸನಾ (12), ಶಕಿನಾ (12), ಸುಮಯ್ಯ (11), ಸಮಿÅನ್ (11), ಸಚಿನ್ (11), ಜೀವನ್ (11), ಅಬ್ಟಾಸ್ (14), ಪವಿತ್ರಾ (12), ಸಪಿನ್ (11), ಸೂರಜ್ (11), ಇರ್ಫಾನ್ (11). ಇವರಲ್ಲಿ ಆಶಿಕಾ, ಇರ್ಫಾನ್, ಸುಹಾನ್ ಅವರು ಗಂಭೀರವಾಗಿ ಗಾಯಗೊಂಡರು. ಇವರಿಗೇನೂ ಅಪಾಯವಿಲ್ಲ.
21 ಮಂದಿ ಗುಣಮುಖ
22 ಮಂದಿಯಲ್ಲಿ 21 ಮಂದಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಗುಣಮುಖರಾಗಿ ಬಿಡುಗಡೆ ಮಾಡಲಾಗಿದೆ. ಒಬ್ಬ ಹುಡುಗನಿಗೆ ಮಾತ್ರ ಹೊಟ್ಟೆ ನೋವು ಇದೆ ಎಂದ ಕಾರಣಕ್ಕೆ ಒಳರೋಗಿಯಾಗಿ ದಾಖಲಿಸಿಕೊಂಡಿದ್ದೇವೆ. ಆತನಿಗೆ ಸ್ಕ್ಯಾನ್ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾ ಸರ್ಜನ್ ಡಾ. ದಯಾನಂದ ನಾಯಕ್ ತಿಳಿಸಿದ್ದಾರೆ.
ಭಾರೀ ಮಳೆ, ಕಡಲುಕೊರೆತ
ಜಿಲ್ಲೆಯಾದ್ಯಂತ ಗುರುವಾರ ಮಳೆ ವಿಪರೀತವಾಗಿದ್ದು ಎಲ್ಲೆಲ್ಲೂ ಮಳೆಯ ನೀರು ಹರಿದು ಹೋಗುತ್ತಿದೆ. ಉಡುಪಿ ರಥಬೀದಿಯಲ್ಲಿ ಯಾವತ್ತೂ ಕಾಣದ ನೀರು ಹರಿಯುವಿಕೆ ಗುರುವಾರ ಕಂಡುಬಂದಿದೆ. ಕಾಪು, ಮೂಳೂರು, ಮಟ್ಟು, ಪಡುಕರೆಯಲ್ಲಿ ಕಡಲು ಕೊರೆತ ಜಾಸ್ತಿಯಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-07-29 00:00:00
|
|
|