ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ |
ಪ್ರಕಟಿಸಿದ ದಿನಾಂಕ : 2010-07-29
-ಕಬಿನಿ, ಆಲಮಟ್ಟಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳ
-ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ
-ಬೆಳಗಾವಿ ಜಿಲ್ಲೆಯಲ್ಲಿ ಮಳೆಗೆ ಒಬ್ಬ ಸಾವು
ಬೆಂಗಳೂರು, ಜು. ೨೮ : ಅಂತೂ ಆತಂಕ ದೂರವಾದಂತಿದೆ. ಮಂಗಳವಾರ ತಡ ರಾತ್ರಿಯಿಂದೀ ಚೆಗೆ ಮತ್ತು ಬುಧವಾರ ಸಂಜೆಯವರೆಗೂ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಧಾರಾಕಾರ ಮಳೆಯಾ ಗಿದೆ. ಇದು ಜಲಾಶಯಗಳಲ್ಲಿನ ನೀರಿನ ಮಟ್ಟ ಹೆಚ್ಚುವಂತೆ ಮಾಡಿದೆ. ಆಲಮಟ್ಟಿ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ೧೯ ಗೇಟುಗಳನ್ನು ತೆರೆದು ಹೆಚ್ಚುವರಿ ೯೦ ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ತುಂಗಾ ಜಲಾಶಯದಿಂದಲೂ ನೀರು ಹೊರಬಿಡಲಾಗಿದೆ.
ಗುರುವಾರದಿಂದ ಆಲಮಟ್ಟಿ ಜಲಾಶಯದ ವಿದ್ಯುತ್ ಉತ್ಪಾದನಾ ಕೇಂದ್ರ ಕಾರ್ಯಾರಂಭ ಮಾಡಲಿದೆ. ಹಿಪ್ಪರಗಿ ಬ್ಯಾರೆಜ್ನ ೨೨ ಗೇಟ್ಗಳನ್ನು ತೆರೆಯಲಾಗಿದೆ.
ಜೀವ ನದಿ ಕಾವೇರಿ, ಕಬಿನಿ, ತುಂಗಭದ್ರಾ, ವರದಾ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯ ಗಳಲ್ಲಿ ನೀರಿನ ಮಟ್ಟ ಏರತೊಡಗಿದೆ. ಹೀಗಾಗಿ, ಯಾವುದೇ ಕ್ಷಣದಲ್ಲಿ ಕಬಿನಿ, ನಾರಾಯಣಪುರ, ಹಾರಂಗಿ ಜಲಾಶಯಗಳಿಂದ ನೀರನ್ನು ಹೊರ ಬಿಡುವ ಸಾಧ್ಯತೆ ಇರುವುದರಿಂದ ನದಿಪಾತ್ರದ ಜನರಿಗೆ ಸುರಕ್ಷಿತ ತಾಣಕ್ಕೆ ತೆರಳುವಂತೆ ಆಯಾ ಜಿಲ್ಲಾಡಳಿತ ಸೂಚಿಸಿದೆ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೂ, ಅಣೆಕಟ್ಟೆ ತುಂಬಲು ಇನ್ನೂ ೫೦ ಅಡಿ ನೀರು ಬರಬರಬೇಕು.
ಭಾಗಮಂಡಲದಲ್ಲಿ ಧಾರಾಕಾರ ಮಳೆಯಾದ್ದರಿಂದ ಆ ಪ್ರದೇಶ ಜಲಾವೃತವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಗೋಡೆ ಕುಸಿದು ೫ ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಕರಾವಳಿ ಸೇರಿದಂತೆ ರಾಜ್ಯದ ಎಲ್ಲೆಡೆ ಮುಂದಿನ ೪೮ ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾರಾಯಣಪುರ ಜಲಾಶಯ ತುಂಬಲು ಕೇವಲ ಒಂದು ಅಡಿ ಬಾಕಿ ಉಳಿದಿದೆ.
ಗೋಡೆ ಕುಸಿದು ಬಾಲಕ ಸಾವು: ಬೆಳಗಾವಿ ಜಿಲ್ಲೆಯಲ್ಲಿ ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬುಧವಾರ ಮುಂಜಾನೆ ಸುರಿದ ಮಳೆಗೆ ಕಣಬರ್ಗಿಯ ನಾಯಕ ಗಲ್ಲಿಯಲ್ಲಿ ಗೋಡೆ ಕುಸಿದ ಪರಿಣಾಮ ಪರಶುರಾಮ ನಾಗಪ್ಪ ಪರಸಣ್ಣವರ (೫) ಮೃತಪಟ್ಟಿದ್ದಾನೆ. ಕೃಷ್ಣಾ ನದಿ ಸೇರಿದಂತೆ ಜಿಲ್ಲೆಯ ವಿವಿಧ ನದಿಗಳ ಒಳಹರಿವು ಸುಮಾರು ಎರಡು ಅಡಿಯಷ್ಟು ಹೆಚ್ಚಿದೆ.


ಭಾಗಮಂಡಲ ಜಲಾವೃತ: ಕೊಡಗು ಜಿಲ್ಲೆಯ ಬಹುತೇಕ ಕಡೆ ಬುಧವಾರ ಧಾರಾಕಾರ ಮಳೆ ಯಾಗಿದೆ. ಮಡಿಕೇರಿ, ಭಾಗಮಂಡಲ, ತಲಕಾವೇರಿಗಳಲ್ಲಿ ಭಾರಿ ಮಳೆಯಾಗಿದ್ದು, ಭಾಗಮಂಡಲ ದಲ್ಲಿ ಕಾವೇರಿ ಪ್ರವಾಹ ಸ್ಥಿತಿ ಕಂಡುಬಂದಿದೆ. ಭಾಗಮಂಡಲದಿಂದ ಅಯ್ಯಂಗೇರಿಗೆ ತೆರಳುವ ರಸ್ತೆಯಲ್ಲಿ ನೀರು ಹರಿದು ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲ- ಮಡಿಕೇರಿ ರಸ್ತೆಯಲ್ಲೂ ನೀರು ಹರಿಯುತ್ತಿದೆ. ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದೆ.
ದ.ಕ, ಉಡುಪಿಯಲ್ಲಿ ವ್ಯಾಪಕ ಮಳೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಬುಧವಾರ ಉತ್ತಮ ಮಳೆಯಾಗಿದೆ. ನೇತ್ರಾವತಿ, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕುಮಾರಧಾರ ಸೇತುವೆ ಜಲಾವೃತವಾಗಿದೆ. ಕಡಬ ಸಮೀಪ ಹೊಸ್ಮಠ ಸೇತುವೆ ಸನಿಹಕ್ಕೆ ಗುಂಡ್ಯ ಹೊಳೆ ಹರಿಯುತ್ತಿದೆ.
ಜಲಾಶಯದಿಂದ ನೀರು ಹೊರಕ್ಕೆ: ರಾಜಾಪುರ ಪ್ರದೇಶದಿಂದ ಜಿಲ್ಲೆಯ ನದಿಗಳಿಗೆ ೧.೩೪ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು ನದಿಗಳ ನೀರಿನ ಪ್ರಮಾಣ ಹೆಚ್ಚಿದೆ. ಅಥಣಿ ಬಳಿಯ ಹಿಪ್ಪರಗಿ ಜಲಾಶಯದ ೨೨ ಗೇಟುಗಳನ್ನು ತೆರೆದು ನೀರನ್ನು ಹೊರಗೆ ಬಿಡಲಾಗಿದೆ. ಆಲಮಟ್ಟಿ ಜಲಾಶ ಯದ ೧೯ ಗೇಟುಗಳನ್ನು ತೆರೆದು ಸುಮಾರು ೯೦ ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ಆದರೆ ಜಲಾನಯನದ ಕೆಳ ಪ್ರದೇಶದಲ್ಲಿರುವ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನಜೀವನ ಅಸ್ತವ್ಯಸ್ತ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ತುಂಬಿದ ಕಬಿನಿ: ಮೈಸೂರಲ್ಲಿ ಬುಧವಾರ ಮುಂಜಾನೆಯಿಂದ ಬೆಳಗ್ಗೆ ೧೧ ರವರೆಗೂ ಭರ್ಜರಿ ಮಳೆ ಬಿದ್ದಿತು. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಕೇರಳದ ವೈನಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ಭರ್ತಿಯಾಗುತ್ತಿದೆ.
ಈಗಾಗಲೇ ೪ ಕ್ರೆಸ್ಟ್ ಗೇಟ್ಗಳ ಮೂಲಕ ೧೫ ಸಾವಿರ ಕ್ಯುಸೆಕ್ ನೀರನ್ನು ಹೊರಬಿಡ ಲಾಗುತ್ತಿದೆ. ಕೆಆರ್ಎಸ್ಗೆ ಒಳ ಹರಿವಿನ ಪ್ರಮಾಣ ೧೫,೦೨೭ ಕ್ಯುಸೆಕ್ನಷ್ಟಿದೆ. ಗುರುವಾರದ ಹೊತ್ತಿಗೆ ಒಳ ಹರಿವಿನ ಪ್ರಮಾಣ ೨೫ ಸಾವಿರ ಕ್ಯುಸೆಕ್ ದಾಟುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ ಯ ಮೂಲಗಳು ತಿಳಿಸಿವೆ.
ಸಂಪರ್ಕ ಕಡಿತ: ಕಳೆದೆರಡು ದಿನಗಳಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪ್ರದೇಶದಲ್ಲಿ ಸುರಿದ ಮಳೆಯಿಂದ ಹಿನ್ನೀರು ಪ್ರಮಾಣ ಹೆಚ್ಚಾಗಿದ್ದರಿಂದ ಬಾಗಲಕೋಟೆ ನಗರ ಹಾಗೂ ವಿದ್ಯಾಗಿರಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸಂಚಾರ ವ್ಯತ್ಯಯ: ರಾಯಚೂರು ಜಿಲ್ಲೆಯ ಬಹುತೇಕ ಕಡೆ ಮಂಗಳವಾರ ರಾತ್ರಿಯಿಂದೀ ಚೆಗೆ ಮಳೆಯಾಗುತ್ತಿದ್ದು ಸಂಚಾರಕ್ಕೆ ವ್ಯತ್ಯಯವಾಗಿದೆ.
ಹೆಚ್ಚಿದ ಒಳಹರಿವು: ಶಿವಮೊಗ್ಗ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ.ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಸುಮಾರು ೫೦ ಅಡಿ ನೀರು ಬರಬೇಕಿದೆ. ಭದ್ರಾ ಜಲಾಶಯದ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ೧೨,೩೨೭ ಕ್ಯೂಸೆಕ್ ಇತ್ತು. ತುಂಗಾ ಜಲಾಶಯದ ಒಳಹರಿ ವು ಹೆಚ್ಚುತ್ತಲೇ ಇದ್ದು, ಬುಧವಾರ ೩೩,೮೯೨ ಕ್ಯೂಸೆಕ್ ತಲುಪಿತ್ತು. ಈಗಾಗಲೇ ಜಲಾಶಯ ಭರ್ತಿಯಾಗಿರುವುದರಿಂದ ಇಷ್ಟೇ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಹಾಗೂ ತುಂಗಾ ಮೇಲ್ದಂಡೆಗೆ ಬಿಡಲಾಗುತ್ತಿದೆ.
ಗುಲ್ಬರ್ಗ, ಬಳ್ಳಾರಿ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ವರ್ಷಧಾರೆ ಮುಂದುವ ರೆದಿದೆ. ಉತ್ತರ ಕನ್ನಡ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತುಂತುರು ಮಳೆ ಬಿದ್ದಿದೆ.
ಭಾರಿ ಮಳೆ ಮುನ್ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಮಳೆ ಚುರುಕು ಪಡೆದಿದೆ. ಮುಂದಿನ ೩೬ ಗಂಟೆಗಳಲ್ಲಿ ರಾಜ್ಯದ ಬಹುತೇಕ ಕಡೆ ಉತ್ತಮ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಘಟ್ಟ ಪ್ರದೇಶ ಹಾಗೂ ರಾಜ್ಯದ ಒಳನಾಡಿನಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇತ್ತ ಬೆಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದಲೂ ಸೂರ್ಯನ ದರ್ಶನ ಪಡೆಯದ ಜನರಿಗೆ ಇನ್ನೆರಡು ದಿನ ಮೋಡ ಮುಸುಕಿದ ವಾತಾವರಣವನ್ನೇ ಕಾಣಬೇಕಿದೆ ಎಂದು ಇಲಾಖೆ ತಿಳಿಸಿದೆ.

ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-29
|
|
|