ಸುಪ್ರೀಂ ಕೋರ್ಟ್ ಮಹಿಳೆಯರಿಗೆ ತಡ ರಾತ್ರಿಯವರೆಗೂ ಕೆಲಸ ಮಾಡುವ ‘ಹಕ್ಕ’ನ್ನು ಕೊಟ್ಟಿ ದ್ದು, ಈ ಹಕ್ಕಿಗಾಗಿ ಒಂದು ವರ್ಗ ಸಂಭ್ರಮಿಸಿದ್ದೂ ನಡೆದು ವರ್ಷವೇ ಉರುಳಿದೆ. ಈ ತೀರ್ಪನ್ನು ಬಳಸಿಕೊಂಡು, ಮಹಿಳೆಯರನ್ನು ತಡ ರಾತ್ರಿಯವರೆಗೆ ಬಲವಂತವಾಗಿ ಕೆಲಸ ಮಾಡಿಸುವ ಪರಿಪಾಠ ಆರಂಭವಾಗಿ, ಅದು ಪರೋಕ್ಷವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಅಸ್ತ್ರವಾಗಿ ಮಾರ್ಪಟ್ಟದನ್ನೂ ಈ ಅವಧಿಯಲ್ಲಿ ನಾವು ಕಂಡಿದ್ದೇವೆ. ಇದೀಗ ಬಾರ್ಗಳಲ್ಲಿ ಮಹಿಳೆಯರನ್ನು ಮದ್ಯ ಸರಬರಾಜು ಅಥವಾ ‘ಗ್ರಾಹಕ ಸೇವೆ’ಗೆ ನೇಮಿಸುವ ವಿಷಯದಲ್ಲಿ ಚರ್ಚೆ ನಡೆದಿದೆ.
ಈ ಹಿಂದೆ ಲೈವ್ ಬ್ಯಾಂಡ್ಗಳ ವಿರುದ್ಧ ನಮ್ಮ ಸರಕಾರ ಕೆಂಗಣ್ಣು ಬೀರಿತ್ತು. ಅದೇ ಸರಕಾರ ಇದೀಗ ಪರೋಕ್ಷವಾಗಿ ಮತ್ತೆ ಬಾರ್ಗಳಲ್ಲಿ ಮಹಿಳೆಯರನ್ನು ತುರುಕಿಸುವ ಕೆಲಸದಲ್ಲಿ ಉತ್ಸಾಹ ತೋರಿಸುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಬಾರ್, ಕ್ಲಬ್ ಮತ್ತು ಮದ್ಯದಂಗಡಿಗಳಲ್ಲಿ ಮದ್ಯ ಸರಬರಾಜಿಗೆ ಮಹಿಳೆಯರನ್ನು ನೇಮಕ ಮಾಡುವುದಕ್ಕೆ ಅನುಮತಿ ದೊರೆತಂತೆ, ಈ ನೇಮಕಾತಿಗೆ ಪೊಲೀಸ್ ಆಯುಕ್ತ ಶಂಕರ ಬಿದರಿ ಕಟ್ಟುನಿಟ್ಟಿನ ಶರತ್ತುಗಳನ್ನು ವಿಧಿಸಿದ್ದಾರೆ. ಬಾರ್ ಮಾಲಕರು ಈ ಶರತ್ತುಗಳಿಗೆ ತಮ್ಮ ಆಕ್ಷೇಪಣೆಯನ್ನೂ ವ್ಯಕ್ತಪಡಿಸಿದ್ದಾರೆ.
ಮದ್ಯ ಸರಬರಾಜಿಗೆ ಮಹಿಳೆಯರನ್ನು ನೇಮಿಸಿಕೊಳ್ಳಲು ಮದ್ಯದಂಗಡಿ ಮಾಲಕರು ಕಡ್ಡಾಯ ವಾಗಿ ಪರವಾನಿಗೆ ಪಡೆದುಕೊಳ್ಳಬೇಕು. ನೇಮಕಗೊಳ್ಳುವ ಮಹಿಳೆಯರ ಸಂಖ್ಯೆಯನ್ನು ತಿಳಿಸ ಬೇಕು. ಪಾನ ಗೃಹಗಳಲ್ಲಿ ಕೆಲಸ ಮಾಡುವ ಮಹಿಳೆಯರು ಕಡ್ಡಾಯವಾಗಿ ಸಮವಸ್ತ್ರ ಧರಿಸ ಬೇಕು. ಅಂಗ ಪ್ರದರ್ಶನಕ್ಕೆ ಅವಕಾಶ ವಿರಬಾರದು...ಇತ್ಯಾದಿ ಇತ್ಯಾದಿ ಕಠಿಣ ಶರತ್ತುಗಳನ್ನು ಪೊಲೀಸ್ ಇಲಾಖೆ ವಿಧಿಸಿದೆ. ಇದು ಶ್ಲಾಘನೀಯವೇ ಆಗಿದೆ. ಬಾರ್ ಮಾಲಕರು ಈ ಶರತ್ತು ಗಳನ್ನು ವಿರೋಧಿಸಿದ್ದರೂ, ಅದನ್ನೇನೂ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳ ಬೇಕಾಗಿಲ್ಲ.
ಆದರೆ ಮುಖ್ಯವಾದ ಪ್ರಶ್ನೆ ಇನ್ನೊಂದಿದೆ. ಈ ಎಲ್ಲ ಶರತ್ತುಗಳನ್ನು ಪೂರೈಸಿದಾಕ್ಷಣ ಈ ಕೆಲಸದಲ್ಲಿ ಮಹಿಳೆ ಯರ ಶೋಷಣೆಯನ್ನು ತಡೆಯಲು ಸಾಧ್ಯವೇ? ಹಾಗೂ ಬಾರ್ಗಳಲ್ಲಿ ಮಹಿಳೆ ಯರನ್ನು ದುಡಿಸುವುದು ಎಷ್ಟರ ಮಟ್ಟಿಗೆ ಸರಿ?ಬಾರ್ಗಳಲ್ಲಿ ಮಹಿಳೆಯರನ್ನು ದುಡಿಸು ವುದರ ಹಿಂದೆ ದುರುದ್ದೇಶವಿದೆ. ಅದನ್ನು ನಾವು ಯಾವ ಕಾರಣಕ್ಕೂ ದುಡಿಮೆ ಎಂದು ಕರೆಯುವಂತಿಲ್ಲ. ಮಹಿಳೆಯ ಅಸಹಾಯಕತೆಯನ್ನು ಬಳಸಿಕೊಂಡು ಆಕೆಯನ್ನು ಅಲ್ಲಿ ಶೋಷಿಸಲಾಗುತ್ತದೆ. ಬಾರ್ಗಳಲ್ಲಿ ಮಹಿಳೆಯನ್ನು ನೇಮಿಸುವ ಉದ್ದೇಶ, ಗ್ರಾಹಕರನ್ನು ಆಕರ್ಷಿಸುವುದಾಗಿದೆ. '
ಅಲ್ಲಿ ಮುಖ್ಯವಾಗುವುದು ಆಕೆಯ ದುಡಿಮೆಯಲ್ಲ. ಬದಲಿಗೆ ದೈಹಿಕ ಆಕರ್ಷಣೆಯನ್ನೇ ಬಾರ್ ಮಾಲಕರು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ. ಪಾನಮತ್ತರಿಂದ ಆಕೆ ಯಾವ ಕ್ಷಣದಲ್ಲೂ ಕಿರುಕುಳವನ್ನು ಎದುರಿಸಲು ಸಿದ್ಧಳಿರಬೇಕಾಗುತ್ತದೆ. ಇಂತಹ ವಾತಾವರಣ ದಲ್ಲಿ ಮಹಿಳೆಯರನ್ನು ಕೆಲಸಕ್ಕೆ ನೇಮಿಸುವುದು ಪರೋಕ್ಷವಾಗಿ ಆಪತ್ತಿಗೆ ತಳ್ಳಿದಂತೆಯೇ ಸರಿ. ಶಂಕರ್ ಬಿದರಿ ಕಠಿಣ ಶರತ್ತುಗಳನ್ನೇನೋ ವಿಧಿಸಿದ್ದಾರೆ.
ಬಾರ್ ನೊಳಗೆ ಈ ಶರತ್ತುಗಳು ಗಾಳಿಗೆ ತೂರಿ ಹೋಗುವ ಎಲ್ಲ ಸಂದರ್ಭಗಳಿವೆ. ಒಂದು ವೇಳೆ ಈ ಶರತ್ತನ್ನು ಪಾಲಿಸಿದರೂ, ಅಲ್ಲಿ ಆಕೆಗೆ ಭದ್ರತೆ ಸಿಗಬೇಕೆಂದೇನೂ ಇಲ್ಲ. ಯಾಕೆಂದರೆ, ಬಾರ್ ನಲ್ಲಿ ಪಾನಮತ್ತರಾದ ವರಿಗೆ ವಿವೇಕ ವಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ತಮ್ಮ ಸೇವೆ ಮಾಡುವ ಮಹಿಳೆಯರಿಗೆ ಗೌರವ ನೀಡಬೇಕು ಎನ್ನುವ ವಿವೇಚನೆಯೂ ಗ್ರಾಹಕರಲ್ಲಿರುವುದಿಲ್ಲ. ಈ ಸಂದರ್ಭದಲ್ಲಿ ಮಹಿಳೆ ಶೋಷಣೆಗೊಳಗಾಗುವ ಸಂದರ್ಭ ಹೆಚ್ಚು. ಅದನ್ನು ತಪ್ಪಿಸುವುದಕ್ಕೆ ಸಾಧ್ಯವೇ ಇಲ್ಲ.
ಮಹಿಳೆಯ ದುಡಿಮೆಯ ಹಿಂದೆ ಸ್ವಾಭಿಮಾನದ ಬದುಕಿನ ಕನಸಿದೆ. ದುಡಿಮೆ ಆಕೆಯಲ್ಲಿ ಆತ್ಮ ವಿಶ್ವಾಸವನ್ನು ತುಂಬಬೇಕು. ಆಕೆಯನ್ನು ಸಮಾಜ ಹಾಗೂ ಕುಟುಂಬದೊಳಗಿನ ಶೋಷಣೆ ಯಿಂದ ಪಾರು ಮಾಡಬೇಕು. ಆದರೆ ಬಾರ್ನ ದುಡಿಮೆ ಆಕೆಯಲ್ಲಿ ಸ್ವಾಭಿಮಾನವನ್ನಾಗಲಿ, ಆತ್ಮ ವಿಶ್ವಾಸವನ್ನಾಗಲಿ ತುಂಬಲಾರದು. ಬದಲಿಗೆ, ಪುರುಷರಿಂದ ಇನ್ನಷ್ಟು ಶೋಷಣೆಯನ್ನು ಆಕೆ ಎದುರಿಸಬೇಕಾಗುತ್ತದೆ. ಜೀವ ಬೆದರಿಕೆಯ ನಡುವೆ ಆಕೆ ಕೆಲಸ ಮಾಡ ಬೇಕಾಗುತ್ತದೆ. ಇದನ್ನು ನಾವು ದುಡಿಮೆ ಎಂದು ಕರೆಯಲು ಸಾಧ್ಯವೇ?
ಇಂತಹ ದುಡಿಮೆ ಆಕೆಯನ್ನು ಇನ್ನಷ್ಟು ದುರ್ಬಲನ್ನಾಗಿಸುತ್ತದೆ. ಪೊಲೀಸ್ ಇಲಾಖೆ ವಿಧಿಸುವ ಶರತ್ತುಗಳನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಬೇಕು ಎನ್ನುವುದನ್ನು ಬಾರ್ ಮಾಲಕರಿಗೆ ಪ್ರತ್ಯೇಕ ವಾಗಿ ಕಲಿಸಿ ಕೊಡಬೇಕಾಗಿಲ್ಲ. ಹೊಟ್ಟೆಪಾಡು, ಹಸಿವು ಎಂಬಿತ್ಯಾದಿಗಳ ಮರೆಯಲ್ಲಿ ಬಾರ್ಗಳಲ್ಲಿ ಮಹಿಳೆಯ ಮೇಲೆ ನಡೆಯುವ ಶೋಷಣೆಯನ್ನು ಪೋಷಿಸುವುದು ಸಲ್ಲ. ಅದು ಸಮಾಜವನ್ನು ಇನ್ನಷ್ಟು ಕೆಡುಕಿನೆಡೆಗೆ ಮುನ್ನಡೆಸುತ್ತದೆ.
ಈ ಹಿನ್ನೆಲೆಯಲ್ಲಿ ‘ಸೇವೆ’ಯ ಹೆಸರಿನಲ್ಲಿ ಬಾರ್ನಲ್ಲಿ ಮಹಿಳೆಯ ಮೇಲೆ ನಡೆಯುವ ಶೋಷಣೆಗೆ ರಾಜ್ಯ ಮತ್ತು ಕೇಂದ್ರ ಸರಕಾರ ಯಾವ ಕಾರಣಕ್ಕೂ ಅವಕಾಶ ನೀಡ ಬಾರದು. ಬಾರ್ಗಳಲ್ಲಿ ಮಹಿಳೆ ಯರು ದುಡಿಯುವುದಕ್ಕೆ ನಿಷೇಧ ಹೇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸುಪ್ರೀಂಕೋರ್ಟ್ನ ತೀರ್ಪಿನ ವಿರುದ್ಧ ಕಾರ್ಯಪ್ರವೃತ್ತರಾಗಬೇಕು.