ಮಂಗಳೂರು: ನಗರದಲ್ಲೊಂದು ವಿಶಿಷ್ಟ ಹುಟ್ಟುಹಬ್ಬ ಆಚರಣೆ : ಬರ್ತ್ಡೆ ಬಾಲೆ ಅನ್ವಿತಳಿಂದ ಉಚಿತ ಹಣ್ಣಿನ ಸಸಿ ವಿತರಣೆ. |
ಪ್ರಕಟಿಸಿದ ದಿನಾಂಕ : 2010-07-29
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು,ಜು.28: ಇಂದಿನ ದಿನಗಳಲ್ಲಿ ಆಡಂಭರದ ಹುಟ್ಟುಹಬ್ಬ ಆಚರಣೆ ಸರ್ವೆಸಾಮಾನ್ಯವಾಗಿದೆ. ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುವವರು ಅದೇಷ್ಟೋ ಮಂದಿ. ಅದ್ದೂರಿಯಾಗಿ ಆಚರಿಸುವುದೇ ಒಂದು ಪ್ರತಿಷ್ಟೆ ಎಂದು ತಿಳಿದವರು ಇದ್ದಾರೆ.

ಅದರೆ ಈ ರೀತಿಯ ಆಡಂಭರದ ಆಚರಣೆಗೆ ಸಡ್ಡು ಹೊಡೆದು ತುಂಬಾ ಸರಳವಾಗಿ ಹಾಗೂ ವಿಶಿಷ್ಟ ರೀತಿಯಲ್ಲಿ ಇಂದು ತನ್ನ ಹುಟ್ಟುಹಬ್ಬವನ್ನು ನಗರದ ಪತ್ರಿಕಾಭವನದಲ್ಲಿ ಆಚರಿಸಿದ್ದಾಳೆ 10 ವರ್ಷದ ಬಾಲೆ ಅನ್ವಿತಾ.


ಕೋಡಿಕಲ್ ಸುಂಕದಕಟ್ಟೆ ನಿವಾಸಿ ನಾಗರಾಜ್ ಸುವರ್ಣ ಹಾಗೂ ಶ್ರಿಮತಿ ಅನಿತಾ ದಂಪತಿಗಳ ಪುತ್ರಿ ಅನ್ವಿತಳಿಗೆ ಇಂದು ಹತ್ತರ ಸಂಭ್ರಮ. ನಗರದ ಬ್ಯಾರೀಸ್ ಪಬ್ಲಿಕ್ ಸ್ಕೂಲನಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಅನ್ವಿತಾ ಬಾಲ್ಯದಿಂದಲೇ ಪರಿಸರ ಕಾಳಜಿ ಹೊಂದಿದ್ದವಳು.

ನಮ್ಮ ನಾಡಿನ ಹಸಿರು ನಶಿಸಿ ಹೋಗಬಾರದೆಂಬ ಅವಳ ತಂದೆಯ ಧ್ಯೇಯವನ್ನು ಅಳವಡಿಸಿಕೊಂಡು ಬೆಳೆದ ಅನ್ವಿತಾ ಬಾಲ್ಯದಿಂದಲೇ ಗಿಡಗಳನ್ನು ಬೆಳೆಸುವ ಹವ್ಯಾಸ ಹೊಂದಿದ್ದಳು. ಮಾತ್ರವಲ್ಲದೇ ಇದನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಕೂಡ ಮಾಡಿದ್ದಳು. ತನ್ನ ತಂದೆಯ ಮಾರ್ಗದರ್ಶನದಲ್ಲಿ ಗಿಡಗಳನ್ನು ಬೆಳೆಸುವ ವಿಧಾನವನ್ನು ಕಂಡುಕೊಂಡ ಅನ್ವಿತಾ ತನ್ನ ಮನೆಯಲ್ಲಿ ಸುಮಾರು 300ರಷ್ಟು ತರಕಾರಿ ಗಿಡಗಳನ್ನು ಬೆಳೆದು ತಮ್ಮ ಮನೆ ಪರಿಸರದ ಪ್ರತೀ ಮನೆಗಳಿಗೆ ಉಚಿತವಾಗಿ ನೀಡಿದ್ದಾಳೆ.
ದೊಡ್ಡ ದೊಡ್ಡ ಕಟ್ಟಡ, ಮಾಲ್ ಗಳ ನಿರ್ಮಾಣದೊಂದಿಗೆ ಮರಗಳು ಧರೆಗುರುಳಿ ಹಸಿರು ನಶಿಸುತ್ತಿರುವುದರ ಜೊತೆಗೆ ಇದೀಗ ಕಾಂಕ್ರೀಟ್ಕರಣಗೊಂಡು ಹೈಟೆಕ್ ನಗರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಹಸಿರು ಉಳಿಯ ಬೇಕೆಂಬ ನಿಟ್ಟಿನಲ್ಲಿ 4 ವರ್ಷದ ಹಿಂದೆ ಲೇಡಿಹಿಲ್ - ಉರ್ವಸ್ಟೋರ್ ರಸ್ತೆಯ ಎರಡು ಬದಿಗಳಲ್ಲಿ ಸುಮಾರು 150 ಸಸಿಗಳನ್ನು ನೆಡುವ ಮೂಲಕ ಅನ್ವಿತಾ ತನ್ನ ಹಸಿರುಕ್ರಾಂತಿಗೆ ಚಾಲನೆ ನೀಡಿದ್ದಾಳೆ. ಆದರೆ ಮಾರ್ಗದ ಬದಿಯಲ್ಲಿ ಪ್ರಚಾರ ಫಲಕ ಹಾಕುವವರು ತಮ್ಮ ಫಲಕಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಕೆಲವೊಂದು ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ ಎಂಬ ನೋವನ್ನು ಅನ್ವಿತಾ ತಂದೆ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಸುತ್ತಮುತ್ತಲಿನ ಪರಿಸರ ಹಸಿರಿನಿಂದ ಕೂಡಿದರೆ ಎಲ್ಲರಿಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಉತ್ತಮ ಮಳೆಯೂ ಅಗುತ್ತದೆ ಎಂಬ ದ್ರಷ್ಠಿಕೋನದಿಂದ ತನ್ನ ಹುಟ್ಟುಹಬ್ಬವನ್ನು ಪತ್ರಿಕಾಭವನದಲ್ಲಿಂದು ವಿಶಿಷ್ಟ ರೀತಿಯಲ್ಲಿ ಆಚರಿಸಿದ ಅನ್ವಿತಾ, ಪತ್ರಕರ್ತರೂ ಸೇರಿದಂತೆ ಹಲವರಿಗೆ ಸುಮಾರು 150 ಉತ್ತಮ ತಳಿಯ ಫಲಬರುವ ಹಣ್ಣಿನ ಗಿಡಗಳನ್ನು ವಿತರಿಸಿದರು. ತಾನು ಓದುತ್ತಿರುವ ಬ್ಯಾರೀಸ್ ಪಬ್ಲಿಕ್ ಸ್ಕೂಲ್ ನ ಸುಮಾರು 120ಮಕ್ಕಳಿಗೆ ನಿನ್ನೆ (ಮಂಗಳವಾರ) ಸಸಿಗಳನ್ನು ವಿತರಿಸಿದ್ದಾಳೆ.

ಈ ಸಂದರ್ಭದಲ್ಲಿ ಅನ್ವಿತಾಳ ತಂದೆ ನಾಗರಾಜ್ ಅವರು ಮಾತನಾಡಿ, ಅರಣ್ಯ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಪ್ರಚಾರಕ್ಕಾಗಿ ವನಮಹೋತ್ಸವ ಆಚರಣೆ ನಡೆಸುತ್ತಾರೆ. ಆದರೆ ಯಾರೂ ಇದನ್ನು ಕಾಳಜಿ ವಹಿಸಿ ಪಾಲನೆ ಪೋಷನೆ ಮಾಡುತ್ತಿಲ್ಲ. ಗಿಡಗಳನ್ನು ನೆಡುವುದರ ಜೊತೆಗೆ ಅವುಗಳ ಪಾಲನೆ ಪೋಷಣೆ ಕೂಡ ಅತೀ ಅಗತ್ಯ. ಗಿಡ ಬೆಳೆಸಿ ನಾಡು ಉಳಿಸಿ, ಹಸಿರು ಉಳಿಯಲಿ, ಎಂಬುವುದು ಬರೀ ಘೋಷಣೆಯಾಗದೇ ಆಚರಣೆಗೆ ಬರಬೇಕು. ಇಂದಿನ ದಿನಗಳಲ್ಲಿ "ವನ ಮಹೋತ್ಸವ" ಕಾರ್ಯಕ್ರಮ ನಡೆದು ಕೆಲವುದಿನಗಳ ನಂತರ "ಒಣ ಮಹೋತ್ಸವ" ಅಗಿರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ತಾನು ತನ್ನ ಮಗಳ ಪ್ರತೀ ವರ್ಷದ ಹುಟ್ಟು ಹಬ್ಬವನ್ನು ಇದೇ ರೀತಿಯಲ್ಲಿ ಆಚರಿಸುವ ಸಲುವಾಗಿ ತನ್ನ ತಿಂಗಳ ಅದಾಯದಲ್ಲಿ ರೂ.500, ನ್ನು ಉಳಿಸುತ್ತಿರುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನ್ವಿತಾ ಪೋಷಕರದ ನಾಗರಾಜ್ ಅನಿತಾ ದಂಪಂತಿ, ಅಜ್ಜ ಭಾಸ್ಕರ್. ಹಾಗೂ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ ಉಪಸ್ಥಿತರಿದ್ದರು. ರಾಜೇಂದ್ರ ಸ್ವಾಗತಿಸಿದರು.
(ಹಸಿರು ಉಳಿಸುವಲ್ಲಿ ಇತರರಿಗೆ ಮಾದರಿಯಾಗಿ ನಿಲ್ಲುವ ಈ ಬಾಲೆಯ ಕನಸಿಗೆ, ಕಲ್ಪನೆಗೆ ಎಲ್ಲರ ಪ್ರೋತ್ಸಾಹ ಅತೀ ಅಗತ್ಯ.)
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-07-29
|
|
|