ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ |
ಪ್ರಕಟಿಸಿದ ದಿನಾಂಕ : 2010-07-29
‘ಆರ್ಥಿಕ ಹಿಂಜರಿತದಿಂದ ಉಳಿದ ರಾಷ್ಟ್ರಗಳಂತೆ ಬ್ರಿಟನ್ ಕೂಡ ತತ್ತರಿಸಿದೆ. ಯುದ್ಧ ಪರಿಣಾಮಗಳ ನಂತರದ ಅತಿದೊಡ್ಡ ಹೊಡೆತ ಈ ಹಿಂಜರಿತ. ಇದರಿಂದ ಈಗಷ್ಟೇ ಹೊರಬರುತ್ತಿದ್ದೇವೆ. - ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್
ಬೆಂಗಳೂರು: ಮೂರು ಪ್ರಮುಖ ಜಾಗತಿಕ ಸವಾಲುಗಳನ್ನು ಕೂಡಿ ಎದುರಿಸುವ ಮೂಲಕ ಭಾರತ ಮತ್ತು ಬ್ರಿಟನ್ ನಡುವಣ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯಬಹುದು ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅಭಿಪ್ರಾಯಪಟ್ಟರು.
ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಬೃಹತ್ ನಿಯೋಗದೊಂದಿಗೆ ಭೇಟಿ ನೀಡಿರುವ ಅವರು, ಬುಧವಾರ ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಆಯ್ದ ಮಾಹಿತಿ ತಂತ್ರಜ್ಞರನ್ನು ಉದ್ದೇಶಿಸಿ ಮಾತನಾಡಿದರು.

ಆರ್ಥಿಕ ಹಿಂಜರಿತ, ಭದ್ರತೆಗೆ ಬೆದರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು ಇಡೀ ಜಗತ್ತನ್ನು ಕಾಡುತ್ತಿವೆ. ಇವುಗಳನ್ನು ಕೂಡಿ ಎದುರಿಸಬೇಕಾದ ಜವಾಬ್ದಾರಿ ಉಭಯ ರಾಷ್ಟ್ರಗಳಿಗೂ ಇದೆ ಎಂದು ಅವರು ಪ್ರತಿಪಾದಿಸಿದರು.
‘ಆರ್ಥಿಕ ಹಿಂಜರಿತದಿಂದ ಉಳಿದ ರಾಷ್ಟ್ರಗಳಂತೆ ಬ್ರಿಟನ್ ಕೂಡ ತತ್ತರಿಸಿದೆ. ಯುದ್ಧ ಪರಿಣಾಮಗಳ ನಂತರದ ಅತಿದೊಡ್ಡ ಹೊಡೆತ ಈ ಹಿಂಜರಿತ. ಇದರಿಂದ ಈಗಷ್ಟೇ ಹೊರಬರುತ್ತಿದ್ದೇವೆ. ಭಾರತದ ಅಭಿವೃದ್ಧಿ ದರ ಕೂಡ ಇದರಿಂದ ಮಂದಗೊಂಡಿದೆ. ಹೀಗಾಗಿ ಅರ್ಥವ್ಯವಸ್ಥೆಯನ್ನು ಸಾಧ್ಯವಾದ ಮಟ್ಟಿಗೆ ಮುಕ್ತಗೊಳಿಸಬೇಕಾಗಿದೆ. ಕೆಂಪು ಪಟ್ಟಿಯಿಂದ ಬಿಡುಗಡೆ, ಕಾರ್ಪೊರೇಟ್ ತೆರಿಗೆ ದರದಲ್ಲಿ ಇಳಿಕೆ ಮತ್ತು ಮೂಲ ಸೌಕರ್ಯ ವೃದ್ಧಿ ಮೂಲಮಂತ್ರ ಆಗಬೇಕಾಗಿದೆ’ ಎಂದರು.
‘ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಸಹಕಾರ ಇನ್ನಷ್ಟು ವಿಸ್ತರಿಸಬೇಕಾಗಿದೆ. ಸಾರಿಗೆ ಮತ್ತು ಇಂಧನ ಕ್ಷೇತ್ರದಲ್ಲಿ ಪರಿಣತಿಯ ವಿನಿಮಯ ಆಗಬೇಕಾಗಿದೆ. ಎರಡೂ ರಾಷ್ಟ್ರಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಶಿಕ್ಷಣ, ಸಂಶೋಧನಾ ಕ್ಷೇತ್ರದಲ್ಲಿನ ಅನುಕೂಲಕರ ಅಂಶಗಳು ಮಿಳಿತವಾಗಬೇಕು. ಈ ಎಲ್ಲದರ ಕುರಿತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರೊಂದಿಗೆ ಸಮಾಲೋಚಿಸಲಿದ್ದೇನೆ’ ಎಂದು ಅವರು ಹೇಳಿದರು.
ಬ್ರಿಟನ್ನಲ್ಲಿ ಭಾರತದ ಹೂಡಿಕೆ ಹಾಗೂ ಭಾರತದಲ್ಲಿ ಬ್ರಿಟನ್ ಹೂಡಿಕೆ ಹೆಚ್ಚಬೇಕು. ವ್ಯಾಪಾರ ಸಂಬಂಧಗಳು ಮತ್ತಷ್ಟು ಗಟ್ಟಿಕೊಳ್ಳಬೇಕು. ಬ್ಯಾಂಕಿಂಗ್, ವಿಮೆ, ರಕ್ಷಣೆ, ಕಾನೂನು ಸೇವೆ ಮತ್ತು ಉತ್ಪಾದನಾ ವಲಯದಲ್ಲಿ ವಿದೇಶಿ ಹೂಡಿಕೆಗೆ ಭಾರತದಲ್ಲಿ ಇರುವ ಅಡೆತಡೆಗಳು ನಿವಾರಣೆ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಭದ್ರತೆಗೆ ಒತ್ತು: ಭಯೋತ್ಪಾದಕರು ಗಡಿಗಳನ್ನು ದಾಟಿ ಬರುತ್ತಿದ್ದಾರೆ. ಉಭಯ ರಾಷ್ಟ್ರಗಳು ಕೂಡಿ ಕೆಲಸ ಮಾಡಿದರೆ ಮಾತ್ರ ಇವರ ಉಪಟಳ ನಿಗ್ರಹಿಸಲು ಸಾಧ್ಯ. ಈ ವರ್ಷ ದೆಹಲಿಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯಲಿದೆ.
ಎರಡು ವರ್ಷಗಳಲ್ಲಿ ಲಂಡನ್ನಲ್ಲಿ ಒಲಿಂಪಿಕ್ ಕ್ರೀಡಾಕೂಟ ಜರುಗಲಿದೆ. ಈ ಹಿನ್ನೆಲೆಯಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಡುವೆ ಮೈತ್ರಿ ಇನ್ನಷ್ಟು ಗಟ್ಟಿಗೊಳ್ಳಬೇಕು ಎಂದರು.
ಹವಾಮಾನ ಬದಲಾವಣೆಯ ಪರಿಣಾಮಗಳು ಕೂಡ ಭೀಕರವಾಗಿರುತ್ತವೆ. ಈಗಲೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಪ್ರವಾಹ, ಬರ ಅಂತಹ ವಿಕೋಪಗಳನ್ನು ಎದುರಿಸಬೇಕಾಗುತ್ತದೆ.
ವಲಸೆ, ಬಡತನ ಮತ್ತು ಹಸಿವಿನ ತಾಂಡವವನ್ನು ನೋಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಒಪ್ಪಂದ ಇಂದಿನ ತುರ್ತು ಅಗತ್ಯ ಎಂದು ಕ್ಯಾಮರಾನ್ ಹೇಳಿದರು.
ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಬ್ರಿಟನ್ ಪ್ರಧಾನಿಯ ಪರಿಚಯ ಮಾಡಿಕೊಟ್ಟರು. ‘ವಿಪ್ರೊ’ ಮುಖ್ಯಸ್ಥ ಅಜೀಂ ಪ್ರೇಮ್ಜಿ, ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಷಾ, ನಾರಾಯಣ ಹೃದಯಾಲಯದ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಾನ ಆಸಕ್ತಿ
ಬೆಂಗಳೂರು: ಕ್ರಿಕೆಟ್ ಕುರಿತ ಆಸಕ್ತಿ, ತಿಂಡಿ-ತಿನಿಸು ಒಳಗೊಂಡಂತೆ ಭಾರತ ಮತ್ತು ಬ್ರಿಟನ್ ಜನರು ಅನೇಕ ಸಮಾನ ಆಸಕ್ತಿಗಳನ್ನು ಹೊಂದಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಹೇಳಿದರು.
ಸಚಿನ್ ತೆಂಡೂಲ್ಕರ್ ಶತಕ ಯಾರಲ್ಲಿ ಕುತೂಹಲ ಕೆರಳಿಸುವುದಿಲ್ಲ ಎಂದು ಕೇಳಿದ ಅವರು, ಭಾರತೀಯ ಮೂಲದ 20 ಲಕ್ಷ ಜನರು ಬ್ರಿಟನ್ನಲ್ಲಿ ನೆಲೆಸಿದ್ದಾರೆ. ಬ್ರಿಟನ್ಗೆ ಅವರ ಕೊಡುಗೆ ಬಹಳ ದೊಡ್ಡದು. ಅವರಿಗೆಲ್ಲ ಶಾರೂಖ್ಖಾನ್ ಅಭಿನಯದ ಸಿನಿಮಾ ಅಚ್ಚುಮೆಚ್ಚು ಎಂದರು.
‘ನನ್ನ ತಲೆಮಾರಿನ ಭಾರತೀಯರು ಕಪಿಲ್ ದೇವ್ ಅವರ ಆಟ ನೋಡುತ್ತಾ ಬೆಳೆದರು. ನಾನು ಇಯಾನ್ ಬಾಥಮ್ ಆಟ ನೋಡುತ್ತಾ ಕ್ರಿಕೆಟ್ ಕುರಿತು ಆಸಕ್ತಿ ರೂಪಿಸಿಕೊಂಡೆ’ ಎಂದರು.
‘ಎರಡು ದೇಶಗಳ ನಡುವಣ ಸಂಬಂಧ ರೂಪಿಸುವಲ್ಲಿ ಸಂಸ್ಕೃತಿಯ ಪಾತ್ರ ಮಹತ್ವದ್ದು. ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೊಂದಿಗಿನ ನನ್ನ ಮಾತುಕತೆಯಲ್ಲಿ ಇದು ಕೂಡ ಪ್ರಧಾನ ಅಂಶ ಆಗಲಿದೆ’ ಎಂದು ಕ್ಯಾಮರಾನ್ ಹೇಳಿದರು.
ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ

ಭಾರತ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಸ್ಥಾನ ಪಡೆಯಲು ಈಗ ಕಾಲ ಪಕ್ವವಾಗಿದೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅಭಿಪ್ರಾಯಪಟ್ಟರು.
ಬೆಂಗಳೂರು: ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ರೂಪುಗೊಂಡಿರುವ ಭಾರತ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಸ್ಥಾನ ಪಡೆಯಲು ಈಗ ಕಾಲ ಪಕ್ವವಾಗಿದೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅಭಿಪ್ರಾಯಪಟ್ಟರು.
ಸಂಪುಟ ಸಹೋದ್ಯೋಗಿಗಳು, ವಿವಿಧ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತಿತರರನ್ನು ಒಳಗೊಂಡ ಬೃಹತ್ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಿರುವ ಅವರು ಬುಧವಾರ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಮಾಹಿತಿ ತಂತ್ರಜ್ಞರನ್ನು ಉದ್ದೇಶಿಸಿ ಮಾತನಾಡಿದರು.
‘ಆಫ್ಘಾನಿಸ್ತಾನಕ್ಕೆ ಭಾರತ ನೀಡಿರುವ ಬೆಂಬಲವನ್ನು ನಾವು ಸ್ವಾಗತಿಸಿದ್ದೇವೆ. ನೇಪಾಳ, ಭೂತಾನ್ಗೂ ಭಾರತ ನೆರವಿನಹಸ್ತ ಚಾಚಿದೆ. ‘ಜಿ-20’ ರಾಷ್ಟ್ರಗಳ ಸಮಾವೇಶದಲ್ಲಿ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಬೌದ್ಧಿಕ ನಾಯಕತ್ವ ಒದಗಿಸಿದ್ದನ್ನು ನಾನೇ ಕಂಡಿದ್ದೇನೆ. ಹೀಗಾಗಿ ಭಾರತ, ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯಲು ಇದು ಸಕಾಲ’ ಎಂದು ಅವರು ವಿಶ್ಲೇಷಿಸಿದರು.
‘ಭಯೋತ್ಪಾದನೆಯನ್ನು ರಫ್ತು ಮಾಡುವ ಪಾಕಿಸ್ತಾನದ ಹುನ್ನಾರಗಳನ್ನು ಬ್ರಿಟನ್ ಸಹಿಸುವುದಿಲ್ಲ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಗೊಳ್ಳಬೇಕು ಎಂಬುದು ನಮ್ಮ ಆಶಯ. ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಖಡಾಖಂಡಿತವಾಗಿ ನುಡಿದರು. ‘ಭಾರತಕ್ಕೆ ಆಗಿರಲಿ, ಆಫ್ಘಾನಿಸ್ತಾನಕ್ಕೆ ಆಗಿರಲಿ ಭಯೋತ್ಪಾದಕರನ್ನು ನುಸುಳಿಸುವುದನ್ನು ಸಹಿಸಲು ಆಗದು. ವಿದೇಶಿ ನೆರವನ್ನು ಇಂತಹ ಚಟುವಟಿಕೆಗಳಿಗೆ ಬಳಸುವುದಕ್ಕೆ ನಮ್ಮ ವಿರೋಧ ಇದೆ. ಈ ವಿಚಾರದಲ್ಲಿ ನಮ್ಮ ನಿಲುವು, ಸಂದೇಶ ಸ್ಪಷ್ಟವಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
ಎಚ್ಎಎಲ್ಗೆ ಕ್ಯಾಮರಾನ್ ಭೇಟಿ


ಬೆಂಗಳೂರು, ಜು. 28 : ರಾಜ್ಯಕ್ಕೆ ಭೇಟಿ ನೀಡಿರುವ ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಇಂದು ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಭೇಟಿ ನೀಡಿದ್ದರು.
ಎಚ್ಎಎಲ್ಗೆ ಭೇಟಿ ನೀಡಿದ ಇಂಗ್ಲೆಂಡ್ ಪ್ರಧಾನಿಗೆ ಎಚ್ಎಎಲ್ ನ ಅಧ್ಯಕ್ಷರಾದ ಅಶೋಕ್ ನಾಯಕ್, ಎಚ್ಎಎಲ್ನ ಹಾಕ್ 132, ಲಘು ಯುದ್ಧ ವಿಮಾನ (ಎಲ್ಸಿಎ), ಇಂಟರ್ಮೀಡಿಯೇಟ್ ಜೆಟ್ ಟ್ರೈನರ್, ಹಗುರ ಯುದ್ಧ ಹೆಲಿಕಾಪ್ಟರ್, ಎಎಲ್ಎಚ್ ಹೆಲಿಕಾಪ್ಟರ್ಗಳ ಬಗ್ಗೆ ವಿವರ ನೀಡಿದರು.
ಏರ್ಕ್ರಾಫ್ಟ್, ಇಂಜಿನ್ಸ್ ಹಾಗೂ ಸರ್ವಿàಸ್ನ ವಿಷಯದಲ್ಲಿ ಪರಸ್ಪೆರ ಸಹಕರಿಸುವ ಒಪ್ಪಂದಕ್ಕೆ ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ಮೂಲದ ಬಿಎಇ ಸಿಸ್ಟಮ್ಸ್, ರೋಲ್ಸ್ ರೈಸ್ ಜೊತೆಗೆ ಎಚ್ಎಎಲ್ ಸಹಿ ಮಾಡಿತು.
ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರು ಇನ್ಫೋಸಿಸ್ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಬೆಳಿಗ್ಗೆ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರೊಂದಿಗೆ ಚರ್ಚಿಸಿದರು.
ಇದೇ ವೇಳೆ ಇಂಗ್ಲೆಂಡ್ ಪ್ರಧಾನಿ ನೇತೃತ್ವದ ನಿಯೋಗದ ಸದಸ್ಯರಲ್ಲಿ ಒಬ್ಬರಾದ ನ್ಯಾನ್ಸಿ ನೋಬಲ್ ಅವರು ನಾರಾಯಣ ಹೃದಯಾಲಯ ಹಾಗೂ ಸ್ಪೆರ್ಶ ಆಸ್ಪೆತ್ರೆ ಹಾಗೂ ಡಾ ಕಿರಣ್ ಮಜುಂದಾರ್ ಅವರ ಕ್ಯಾನ್ಸರ್ ಆಸ್ಪೆತ್ರೆಗೆ ಭೇಟಿ ನೀಡಿದರು. ಡಾ. ದೇವಿ ಶೆಟ್ಟಿ , ಡಾ ಶರಣ್ ಪಾಟೀಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-29 00:00:00
|
|
|