‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’ |
ಪ್ರಕಟಿಸಿದ ದಿನಾಂಕ : 2010-07-28
ಪಾದಯಾತ್ರೆ ಸುದ್ದಿ ಪತ್ರಿಕೆಗಳಲ್ಲಿ ಪ್ರಮುಖವಾಗಿ ಪ್ರಕಟವಾಗಿದ್ದರಿಂದ ಮುಖಂಡರ ಹುಮ್ಮಸ್ಸು ಇಮ್ಮಡಿ ಯಾಯಿತು. ಪತ್ರಿಕೆಗಳಲ್ಲಿನ ವರದಿಗಳ ಬಗ್ಗೆಯೂ ವಿಶ್ಲೇಷಣೆ ನಡೆಯಿತು.
ಬೆಂಗಳೂರು: ಪಾದಯಾತ್ರೆಯ ಮೂರನೇ ದಿನವೂ ಅದೇ ಉತ್ಸಾಹ, ಅದೇ ಹುಮ್ಮಸ್ಸು. ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿ.ಬೇಗೂರಿನಿಂದ ಆರಂಭವಾದ ‘ನಾಡ ರಕ್ಷಣಾ ನಡಿಗೆ’ಗೆ ಉತ್ತಮ ಜನಬೆಂಬಲ ವ್ಯಕ್ತವಾಯಿತು. ಇದರಿಂದ ಪುಳಕಗೊಂಡ ಕಾಂಗ್ರೆಸ್ ಮುಖಂಡರು ಹಿಂದಿಗಿಂತ ಹೆಚ್ಚು ಜೋಷ್ನಲ್ಲಿದ್ದರು.

ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಬೆಂಗಳೂರಿನಿಂದ ಬಳ್ಳಾರಿವರೆಗಿನ ಎರಡನೇ ದಿನದ ಪಾದಯಾತ್ರೆ ಸೋಮವಾರ ಟಿ.ಬೇಗೂರಿನಲ್ಲಿ ಕೊನೆಗೊಂಡಿತ್ತು. ಅಲ್ಲೇ ಕಲ್ಯಾಣ ಮಂಟಪವೊಂದರಲ್ಲಿ ತಂಗಿದ್ದ ಮುಖಂಡರು ಮಂಗಳವಾರ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಸೇವಿಸುತ್ತಲೇ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು.
ಪಾದಯಾತ್ರೆ ಸುದ್ದಿ ಪತ್ರಿಕೆಗಳಲ್ಲಿ ಪ್ರಮುಖವಾಗಿ ಪ್ರಕಟವಾಗಿದ್ದರಿಂದ ಮುಖಂಡರ ಹುಮ್ಮಸ್ಸು ಇಮ್ಮಡಿಯಾಯಿತು. ಪತ್ರಿಕೆಗಳಲ್ಲಿನ ವರದಿಗಳ ಬಗ್ಗೆಯೂ ವಿಶ್ಲೇಷಣೆ ನಡೆಯಿತು. ಕಾರ್ಯಕರ್ತರು ಕೂಡ ಪತ್ರಿಕೆಗಳಲ್ಲಿನ ಸುದ್ದಿಗಳ ಬಗ್ಗೆ ಮುಖಂಡರಿಗೆ ಮಾಹಿತಿ ನೀಡಿದರು.
ಇವೆಲ್ಲವನ್ನೂ ಆಲಿಸಿದ ಮುಖಂಡರು, ಪಾದಯಾತ್ರೆಗೆ ನಿರೀಕ್ಷೆಗೂ ಮೀರಿದ ಜನ ಬೆಂಬಲ ಸಿಗುತ್ತಿದೆ ಎಂದು ಹಿಗ್ಗಿದರು. ಕಾಲು ನೋವು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಮೂರನೇ ದಿನದ ಪಾದಯಾತ್ರೆಗೆ 18 ಕಿ.ಮೀ. ನಿಗದಿ ಮಾಡಿದ್ದು, ಮಧ್ಯಾಹ್ನ ಕುಲುವನಹಳ್ಳಿಯಲ್ಲಿ ಊಟ ಸೇವಿಸಿದರು. ವಿಶ್ರಾಂತಿ ಪಡೆದರು. ಸಂಜೆ 4ಕ್ಕೆ ಪುನಃ ಆರಂಭವಾದ ಯಾತ್ರೆ 5.45ಕ್ಕೆ ದಾಬಸ್ಪೇಟೆ ತಲುಪಿತು. ಅಲ್ಲಿ ಸಾರ್ವಜನಿಕ ಸಮಾರಂಭ. ನಂತರ ರಾತ್ರಿ ಅಲ್ಲೇ ವಾಸ್ತವ್ಯ.
ಮುಖಂಡರಿಗೆ ಹಳ್ಳಿಗಳಲ್ಲಿ ಜನರು ಭವ್ಯ ಸ್ವಾಗತ ಕೋರಿದರು. ದೊಡ್ಡೇರಿಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಎಲ್ಲರೂ ಗುಲಾಬಿ ಹಿಡಿದು ಮುಖಂಡರನ್ನು ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿದರು.
ಸಿದ್ದುಗೆ ವಿಶೇಷ:


ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಂಗಳವಾರದ ವಾಕಿಂಗ್ ವಿಶೇಷವಾಗಿತ್ತು. ಬೆಳಗಿನ ತಿಂಡಿ ತಿನ್ನುವಷ್ಟರಲ್ಲಿ ತಮ್ಮ ತವರು ಜಿಲ್ಲೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ನೂರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರೆಲ್ಲರೂ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು. ಇದು ಸಹಜವಾಗಿಯೇ ಅವರ ನಡಿಗೆಯ ವೇಗ ಹೆಚ್ಚಿಸಿತು. ಮೈಸೂರು ಕಡೆಯಿಂದ ಬಂದವರ ಕುಶಲೋಪರಿ ವಿಚಾರಿಸಿದರು. ಅವರೊಂದಿಗೆ ಪ್ರತ್ಯೇಕವಾಗಿ ಹರಟಿದರು.
ಮೈಸೂರು ಭಾಗದ ಶಾಸಕರಾದ ಡಾ.ಎಚ್.ಸಿ.ಮಹದೇವಪ್ಪ, ಎಚ್.ಎಸ್.ಮಹದೇವ ಪ್ರಸಾದ್, ಮಂಜುನಾಥ ಸೇರಿದಂತೆ ಇತರರು ಮೈಸೂರು ಭಾಗದ ಜನರ ನೇತೃತ್ವವನ್ನು ವಹಿಸಿದ್ದರು.
ಹಳೆ ಶೂ:
ಪಾದಯಾತ್ರೆ ಸಲುವಾಗಿ ಸಿದ್ದರಾಮಯ್ಯ ಭರ್ಜರಿ ತಯಾರಿ ನಡೆಸಿದ್ದರು. ಹೊಸ ಶೂ ಖರೀದಿಸಿದ್ದರು. ಆದರೆ, ಹೊಸ ಶೂ ಅಡ್ಜೆಸ್ಟ್ ಆಗಲಿಲ್ಲವಂತೆ. ‘ಯಾಕೊ ಅದನ್ನು ಹಾಕಿಕೊಂಡ್ರೆ ಕಾಲು ನೋವು ಬರುತ್ತಿತ್ತು.
ಹೀಗಾಗಿ ಮನೆಯಿಂದ ಹಳೆ ಶೂ ತರಿಸಿಕೊಂಡೆ. ಅದನ್ನೇ ಹಾಕಿಕೊಂಡು ಇವತ್ತು ವಾಕ್ ಮಾಡುತ್ತಿದ್ದೇನೆ. ಚೆನ್ನಾಗಿದೆ. ನಿನ್ನೆ ಸ್ವಲ್ಪ ಸಮಸ್ಯೆ ಇತ್ತು. ಇವತ್ತಿನಿಂದ ಅಂತಹ ಸಮಸ್ಯೆ ಏನೂ ಇರುವುದಿಲ್ಲ’ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.
ಎಲ್ಲಿವರೆಗೊ ಗೊತ್ತಿಲ್ಲ:

ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮೂರನೇ ದಿನದ ಪಾದಯಾತ್ರೆಯಲ್ಲೂ ಸಕ್ರಿಯವಾಗಿದ್ದರು. ‘ಕಾಲು ನೋವಿದ್ದರೂ ಅಭೂತಪೂರ್ವ ಜನ ಬೆಂಬಲದಿಂದ ಅದೆಲ್ಲವೂ ಮಾಯವಾಗಿದೆ. ಹೀಗಾಗಿ ಖುಷಿಯಿಂದ ವಾಕ್ ಮಾಡುತ್ತಿದ್ದು, ಎಲ್ಲಿಯವರೆಗೆ ಸಾಧ್ಯನೊ ಅಲ್ಲಿಯವರೆಗೂ ನಡೆಯುತ್ತೇನೆ. ದೇವರ ಇಚ್ಛೆ ಇದ್ದರೆ, ಬಳ್ಳಾರಿವರೆಗೂ ನಡೆಯಬಹುದು. ನೋಡೋಣ ಪರಿಸ್ಥಿತಿಗೆ ಹೇಗಿರುತ್ತದೊ’ ಎಂದು ಹೇಳಿದರು.
ಡಿಕೆಶಿಗೆ ಗಾಯ:
ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಎಡಗಾಲಿನ ಹೆಬ್ಬೆಟ್ಟಿಗೆ ಗಾಯ ಆಗಿದ್ದು, ಬ್ಯಾಂಡೇಜ್ ಸುತ್ತಿಕೊಂಡೇ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಷೂ ಹಾಕಿಕೊಂಡು ನಡೆದಿದ್ದಕ್ಕೆ ಹೆಬ್ಬೆಟ್ಟಿನಲ್ಲಿ ಬೊಬ್ಬೆ ಬಂದು ಗಾಯ ಆಗಿದೆ. ಇದಕ್ಕೆ ಔಷಧಿ ಹಚ್ಚಿಕೊಂಡು ಪಾದಯಾತ್ರೆ ಮುಂದುವರಿಸಿದ್ದಾರೆ. ಒಂದೆರಡು ದಿನ ಈ ರೀತಿಯ ಸಮಸ್ಯೆ ಇರುತ್ತೆ. ನಂತರ ಎಲ್ಲವೂ ಸರಿಯಾಗುತ್ತೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಉಳಿದಂತೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಮಾಜಿ ಶಾಸಕಿ ಮಲ್ಲಾಜಮ್ಮ ಸೇರಿದಂತೆ ಇನ್ನೂ ಅನೇಕರು ಸಕ್ರಿಯವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಟಿ-ಷರ್ಟ್ ತೊಟ್ಟಿದ್ದ ವಿ.ಎಸ್.ಉಗ್ರಪ್ಪ ಅವರು ತಲೆಗೆ ಪೇಟ ಸುತ್ತಿಕೊಂಡು ರಭಸವಾಗಿ ನಡೆಯುತ್ತಿದ್ದರು. ಶೂ ಬದಲಿಗೆ, ಚಪ್ಪಲಿ ಹಾಕಿಕೊಂಡಿದ್ದ ಅವರು ಚಪ್ಪಲಿಯೇ ಕಂಫರ್ಟ್ ಎಂದರು.


ಕೃಷ್ಣಬೈರೇಗೌಡರ ಪಡೆ:
ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಎಲ್ಲರ ಗಮನ ಸೆಳೆದರು.
ಶಾಸಕರು ವಿರಳ:
ಮೊದಲ ಎರಡು ದಿನ ಹೆಚ್ಚಿನ ಸಂಖ್ಯೆಯಲ್ಲಿದ್ದ ಶಾಸಕರು ಮೂರನೇ ದಿನ ಸ್ವಲ್ಪ ಕಡಿಮೆಯಾಗಿದ್ದರು. ಅನೇಕ ಯುವ ಶಾಸಕರು ಕೂಡ ಮಂಗಳವಾರದ ಪಾದಯಾತ್ರೆಯಲ್ಲಿ ‘ಮಿಸ್’ ಆಗಿದ್ದು ವಿಶೇಷ.
ಸಂಚಾರ ದಟ್ಟಣೆ:
ಪಾದಯಾತ್ರೆಯಿಂದ ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಒಂದು ಭಾಗದ ರಸ್ತೆಯಲ್ಲಿ ಎರಡೂ ಕಡೆಯ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.
ಪಾದಯಾತ್ರೆಯಲ್ಲಿ ನಡೆಯುತ್ತಿದ್ದ ಜನ ಪ್ರತ್ಯೇಕವಾಗಿ ಒಂದು ರಸ್ತೆಯಲ್ಲಿ ನಡೆದಿದ್ದು ಸಮಸ್ಯೆಗೆ ಕಾರಣವಾಯಿತು.
‘ಅಕ್ರಮ ಅದಿರು ಸಾಗಣೆ ನಿಷೇಧಿಸಿ’: - ಸರಕಾರಕ್ಕೆ ಕಾಂಗ್ರೆಸ್ ಆಗ್ರಹ - ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ - ಮುಂದುವರಿದ ಪಾದಯಾತ್ರೆ
ಬೆಂಗಳೂರು, ಜು.27:ಸಣ್ಣಪುಟ್ಟ ಬಂದರುಗಳಲ್ಲಿ ಅದಿರು, ಗ್ರಾನೈಟ್ ರಫ್ತು ನಿಷೇಧ ಮಾಡಿರುವ ಸರಕಾರದ ಕ್ರಮದಿಂದ ಮೀನುಗಾರಿಕೆಗೆ ತೊಂದರೆಯಾಗಲಿದೆ. ಮೊದಲು ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆಯಾಗುತ್ತಿರುವ ಅದಿರನ್ನು ನಿಷೇಧಿಸಿ, ಅಕ್ರಮ ಗಣಿಗಾರಿಕೆಯನ್ನು ತಡೆಯುವ ಬದ್ಧತೆಯನ್ನು ತೋರಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಅಕ್ರಮ ಗಣಿಗಾರಿಕೆ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸರಕಾರವನ್ನು ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಬೆಂಗಳೂರು-ಬಳ್ಳಾರಿ ಪಾದಯಾತ್ರೆಯು ಮಂಗಳವಾರ ಮೂರನೆ ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖಂಡ ವಿ.ಎಸ್.ಉಗ್ರಪ್ಪ, ಶಾಸಕ ಸಂತೋಷ್ ಲಾಡ್ ಮುಂತಾದವರು, ಸರಕಾರ ಮಂಗಳೂರು, ಕಾರವಾರ ಮತ್ತು ಬೇಲೆಕೇರಿ ಬಂದರುಗಳಲ್ಲಿ ಅದಿರು ಮತ್ತು ಗ್ರಾನೈಟ್ ಬ್ಲಾಕ್ಗಳ ರಫ್ತು ನಿಷೇಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿದರು.
ಮನೆಯಲ್ಲಿರುವ ಅದಿರು ಕಳ್ಳರನ್ನು ಮೊದಲು ಶಿಕ್ಷಿಸಲಿ:
ಮೀನುಗಾರರಿಗೆ ತೊಂದರೆಯಾಗುವ ರೀತಿಯಲ್ಲಿ ಸರಕಾರ ಅದಿರು ರಫ್ತು ನಿಷೇಧಿಸಿದರೆ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ಸಾಧ್ಯವೇ?, ಸರಕಾರ ಭ್ರಮೆಯಲ್ಲಿದೆ. ಅದಿರು ಕಳ್ಳರು ಯಡಿಯೂರಪ್ಪ ನವರ ಮನೆಯ(ಸರಕಾರ)ಲ್ಲೇ ಇದ್ದಾರೆ. ಅವರನ್ನು ಹಿಡಿದು ಮೊದಲು ಶಿಕ್ಷಿಸಲಿ. ಅದನ್ನು ಬಿಟ್ಟು, ಮೀನುಗಾರಿಕೆಗೆ ತೊಂದರೆಯಾಗುವ ರೀತಿಯಲ್ಲಿ ರಫ್ತು ನಿಷೇಧ ಮಾಡುವುದು ಸರಿಯಲ್ಲ. -ಸಿದ್ದರಾಮಯ್ಯ.
ಯಡಿಯೂರಪ್ಪನವರಿಗೆ ತಾಕತ್ತಿದ್ದರೆ ಅಕ್ರಮ ಗಣಿಗಾರಿಕೆ ತಡೆಯಲಿ:
ತಮಿಳುನಾಡು, ಆಂಧ್ರಪ್ರದೇಶ, ಗೋವಾ ಮುಂತಾದ ರಾಜ್ಯಗಳಿಗೆ ಅಕ್ರಮವಾಗಿ ಅದಿರು ಸಾಗಣೆ ಯಾಗುತ್ತಿದೆ. ಇದನ್ನು ಸರಕಾರ ಏಕೆ ನಿಷೇಧಿಸಿಲ್ಲ?. ರಾಜ್ಯದ 10 ಸಣ್ಣ ಪುಟ್ಟ ಬಂದರುಗಳಲ್ಲಿ ಸರಕಾರ ಅದಿರು ರಫ್ತು ನಿಷೇಧಿಸುವ ಮೂಲಕ ಮೀನುಗಾರಿಕೆಗೆ ತೊಂದರೆ ಮಾಡಿದೆ. ಬೇಲೆಕೇರಿ, ಕಾರವಾರ, ಮಂಗಳೂರು ಬಂದರುಗಳಲ್ಲಿ ಏಕೆ ರಫ್ತು ನಿಷೇಧ ಮಾಡಲಿಲ್ಲ. ಇದಕ್ಕೆ ಸರಕಾರ ಉತ್ತರ ನೀಡಬೇಕು.
ಸರಕಾರ ಅದಿರು ರಫ್ತು ನಿಷೇಧದ ಹೆಸರಿನಲ್ಲಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಗಣಿ ಹಾಗೂ ಅರಣ್ಯ ಖಾತೆಗಳನ್ನು ಹೊಂದಿರುವ ಯಡಿಯೂರಪ್ಪನವರಿಗೆ ತಾಕತ್ತಿದ್ದರೆ, ಸಂಪೂರ್ಣವಾಗಿ ರಫ್ತುನ್ನು ನಿಷೇಧಿಸಿ, ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಸಿಬಿಐಗೆ ವಹಿಸಲಿ -.ಆರ್.ವಿ.ದೇಶಪಾಂಡೆ.
ಹೇಡಿತನದ ಕ್ರಮ:
ಅದಿರು ರಫ್ತು ನಿಷೇಧ ಮಾಡಿರುವುದು ಸರಕಾರದ ಹೇಡಿತನದ ಕ್ರಮವಾಗಿದೆ. ಕಳ್ಳರನ್ನು ಹಿಡಿಯಿರಿ ಎಂದರೆ, ಕಳ್ಳ ವ್ಯವಹಾರವನ್ನು ನಿಲ್ಲಿಸಲು ಹೊರಟಿದ್ದಾರೆ. ರಾಜ್ಯದ ಜನತೆಯೇ ಗಣಿ ಲೂಟಿ ಮಾಡುತ್ತಿರುವ ಭ್ರಷ್ಟ ಬಿಜೆಪಿ ಸರಕಾರವನ್ನು ಅಧಿಕಾರದಿಂದ ಶೀಘ್ರದಲ್ಲೇ ಕಿತ್ತೊಗೆಯಲಿದೆ. - ಡಿ.ಕೆ.ಶಿವಕುಮಾರ್.
ರೆಡ್ಡಿಗಳಿಗೆ ಅನುಕೂಲ:
ಯಡಿಯೂರಪ್ಪ 10 ಬಂದರುಗಳಲ್ಲಿ ಮಾತ್ರ ಅದಿರು ರಫ್ತು ನಿಷೇಧ ಮಾಡಿರುವುದರಿಂದ, ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಣೆಯಾಗುತ್ತಿರುವುದನ್ನು ತಡೆಯಲು ಸಾಧ್ಯವಿಲ್ಲ. ಆಂಧ್ರಪ್ರದೇಶದಲ್ಲಿರುವ ರೆಡ್ಡಿಗಳ ಒಡೆತನದ ಎಎಂಸಿ, ಒಎಂಸಿ ಮುಂತಾದ ಗಣಿಗಾರಿಕೆ ಕಂಪನಿಗಳಿಂದ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆದು, ಅಕ್ರಮವಾಗಿ ಅದಿರು ಹೊರ ರಾಜ್ಯಗಳ ಮೂಲಕ ರಫ್ತಾಗುತ್ತಿದೆ.
ಇದನ್ನು ತಡೆಯುವುದನ್ನು ಬಿಟ್ಟು, ಸಣ್ಣ ಬಂದರುಗಳಲ್ಲಿ ಅದಿರು ರಫ್ತು ನಿಷೇಧ ಮಾಡಿರುವ ಯಡಿಯೂರಪ್ಪ ಕ್ರಮ ಕೇವಲ ರಾಜ್ಯದ ಜನತೆಯನ್ನು ದಾರಿ ತಪ್ಪಿಸುವ ತಂತ್ರವಾಗಿದೆ. -ವಿ.ಎಸ್.ಉಗ್ರಪ್ಪ.
ನ್ಯಾಯಾಲಯಕ್ಕೆ ಹೋಗುತ್ತೇನೆ:
10 ಬಂದರುಗಳಲ್ಲಿ ಅದಿರು ರಫ್ತು ನಿಷೇಧ ಮಾಡಿರುವ ಸರಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇನೆ. ಈ ಆದೇಶದಿಂದ ಸಕ್ರಮವಾಗಿ ಗಣಿಗಾರಿಕೆ ನಡೆಸಿ, ಅದಿರು ರಫ್ತು ಮಾಡುತ್ತಿರುವವ ಗಣಿ ಮಾಲಕರಿಗೆ ತೊಂದರೆಯಾಗಲಿದೆ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ ಅನುಕೂಲವಾಗಲಿದೆ.
ಹೀಗಾಗಿ ಸರಕಾರದ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರ ಜೊತೆಗೆ, ಪ್ರಧಾನಮಂತ್ರಿಗೂ ದೂರು ನೀಡುತ್ತೇನೆ. ಸರಕಾರದ ಆದೇಶದ ವಿರುದ್ಧ ನಾನು ನಡೆಸಲಿರುವ ಕಾನೂನು ಹೋರಾಟಕ್ಕೆ ರೆಡ್ಡಿಗಳನ್ನು ಹೊರತುಪಡಿಸಿ ಬಳ್ಳಾರಿಯಲ್ಲಿನ ಇತರ ಗಣಿಮಾಲಕರ ಸಹಕಾರ ಪಡೆಯುತ್ತೇನೆ.
ಅಕ್ರಮ ಗಣಿಗಾರಿಕೆ ನಡೆಸದ ನನ್ನಂತಹ ಗಣಿಮಾಲಕರನ್ನು ಸರಕಾರದ ಈ ಆದೇಶದಿಂದ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆಗೆ ಸಿಬಿಐಗೆ ವಹಿಸಲೇಬೇಕೆಂದು ಸರಕಾರಕ್ಕೆ ಒತ್ತಾಯಿಸಲಾಗುವುದು. -ಸಂತೋಷ್ ಲಾಡ್.

| |
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-28 00:00:00
|
|
|