ಸೊಹ್ರಾಬುದ್ದೀನ್ ಪ್ರಕರಣ: ಮಾಫಿ ಸಾಕ್ಷಿಯಾಗಲು ಅಮೀನ್ ನಿರ್ಧಾರ; ಅಮಿತ್ ಷಾಗೆ ಇನ್ನಷ್ಟು ಕಷ್ಟ |
ಪ್ರಕಟಿಸಿದ ದಿನಾಂಕ : 2010-07-26
ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಎನ್.ಕೆ. ಅಮೀನ್ ಸೋಮವಾರ ಮಾಫಿ ಸಾಕ್ಷಿದಾರನಾಗಲು ನಿರ್ಧರಿಸಿದ್ದಾರೆ.
ಅಹ್ಮದಾಬಾದ್, ಜು.26: ಸೊಹ್ರಾಬು ದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ಆರೋಪಿ, ಮಾಜಿ ಪೊಲೀಸ್ ಅಧಿಕಾರಿ ಎನ್.ಕೆ. ಅಮೀನ್ ಸಿಬಿಐ ಪರ ಮಾಫಿ ಸಾಕ್ಷಿಯಾಗಲು ಸೋಮವಾರ ನಿರ್ಧರಿಸಿರುವುದರೊಂದಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಇನ್ನೂ ಹೆಚ್ಚಿನ ಬಲ ಬಂದಿದೆ. ಇದರೊಂದಿಗೆ ಪ್ರಕರಣದ ಮುಖ್ಯ ಆರೋಪಿ,ಬಂಧಿತ ಮಾಜಿ ಸಚಿವ ಅಮಿತ್ ಶಾ ಇನ್ನೂ ಹೆಚ್ಚಿನ ತೊಂದರೆಗೆ ಸಿಲುಕುವ ಸಾಧ್ಯತೆಗಳು ದಟ್ಟವಾಗಿವೆ.
ಗಾಂಧಿನಗರದ ಸಿಬಿಐ ಕಚೇರಿಯಲ್ಲಿ ತನಿಖಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಮೀನ್ ವಕೀಲ ಜಗದೀಶ್ ರಾಮಾನಿ ‘‘ಸೊಹ್ರಾ ಬುದ್ದೀನ್ ಪ್ರಕರಣದಲ್ಲಿ ಅಮೀನ್ರನ್ನು ಮಾಫಿ ಸಾಕ್ಷಿದಾರನಾಗಿ ಮಾಡಲು ಅವರ ಪರವಾಗಿ ನಾವು ಸಿಬಿಐ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದೇವೆ’’ ಎಂದು ತಿಳಿಸಿದರು.
ಗುಜರಾತ್ನ ಮಾಜಿ ಸಹಾಯಕ ಗೃಹ ಸಚಿವ ಅಮಿತ್ ಶಾರನ್ನು ಸಿಬಿಐ ಬಂಧಿಸಿದ ಮಾರನೆ ದಿನವೇ, ಮಾಜಿ ಉಪ ಪೊಲೀಸ್ ಆಯುಕ್ತ ಅಮೀನ್ ಈ ನಿರ್ಧಾರ ಕೈಗೊಂಡಿರುವುದು ವಿಶೇಷ. ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿರುವ ಎಲ್ಲ 15 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಸಂಚು, ಕೊಲೆ, ಅಪಹರಣ ಮತ್ತು ಸುಲಿಗೆ ಆರೋಪಗಳನ್ನು ಹೊರಿಸಲಾಗಿದೆ.
ಅಮೀನ್ ನಿರ್ಧಾರದಿಂದಾಗಿ ಉಂಟಾಗಲಿರುವ ಪರಿಣಾಮದ ಬಗ್ಗೆ ಚರ್ಚಿಸಲು ಗುಜರಾತ್ ಸರಕಾರದ ವಕ್ತಾರ ಜಯನಾರಾಯಣ್ ವ್ಯಾಸ್ ನಿರಾಕರಿಸಿದ್ದು, ನ್ಯಾಯಾಂಗ ಪ್ರಕ್ರಿಯೆಯು ಅದರದೇ ಆದ ಹಾದಿಯಲ್ಲಿ ಸಾಗಲಿದೆ ಎಂದು ತಿಳಿಸಿದರು.
ಈಗ ಜೈಲಿನಲ್ಲಿರುವ ಅಮೀನ್, ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ 2007ರಲ್ಲಿ ಬಂಧಿತರಾದ ಸಂದರ್ಭದಲ್ಲಿ ಅವರು ನಗರ ಕ್ರೈಂ ಬ್ರಾಂಚ್ನಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಗಿದ್ದರು. ಸೊಹ್ರಾಬುದ್ದೀನ್ ಹಾಗೂ ಅವರ ಪತ್ನಿ ಕೌಸರ್ಬಿಯ ಅಪಹರಣ ಕಾರ್ಯದಲ್ಲಿ ಭಾಗಿಯಾಗಿದ್ದ ಸಾಕ್ಷಿದಾರನೊಬ್ಬ ನೀಡಿದ ಹೇಳಿಕೆಯನ್ನು ಆಧರಿಸಿ ಅಮೀನ್ರನ್ನು ಸಿಬಿಐ ಬಂಧಿಸಿತ್ತು.
ಏತನ್ಮಧ್ಯೆ ಪ್ರಕರಣದ ಇತರ ಆರೋಪಿಗಳಿಂದ ತನ್ನ ಕಕ್ಷಿದಾರನ ಪ್ರಾಣಕ್ಕೆ ಅಪಾಯವಿದೆಯೆಂದು ಅಮೀನ್ರ ಇನ್ನೋರ್ವ ವಕೀಲ ರಾಜೇಶ್ ಮೋದಿ ತಿಳಿಸಿದ್ದಾರೆ. ‘‘ಸಬರಮತಿ ಜೈಲಿನಲ್ಲಿ ಒಟ್ಟಿಗೆ ಇರಿಸಲಾಗಿರುವ ಇತರ ಆರೋಪಿಗಳಿಂದ ಅಮೀನ್ರ ಜೀವಕ್ಕೆ ಅಪಾಯವಿದೆ. ಅಮೀನ್ರನ್ನು ಬೇರೆ ಜೈಲಿಗೆ ವರ್ಗಾಯಿಸಲು ಕೋರಿ ಅರ್ಜಿಯೊಂದನ್ನು ಸಲ್ಲಿಸಲು ನಾವು ನಿರ್ಧರಿಸಿದ್ದೇವೆ’’ ಎಂದು ರಾಜೇಶ್ ಮೋದಿ ಹೇಳಿದ್ದಾರೆ.
ಈ ನಡುವೆ ರಾಜ್ಯ ಸಿಐಡಿ ಇಲಾಖೆಯ ವರಿಷ್ಠರಾಗಿದ್ದ ಸಮಯದಲ್ಲಿ ನಕಲಿ ಎನ್ಕೌಂಟರ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಇಬ್ಬರು ನಿವೃತ್ತ ಐಪಿಎಸ್ ಅಧಿಕಾರಿಗಳಿಗೆ ಸಿಬಿಐ ಇಂದು ಸಮನ್ಸ್ ಜಾರಿಗೊಳಿಸಿದೆ.
ಜಿ.ಸಿ.ರಾಯ್ಘರ್ ಮತ್ತು ಓ.ಪಿ. ಮಾಥುರ್ ಸಿಬಿಐನಿಂದ ಸಮನ್ಸ್ ಪಡೆದವರು. ಅವರನ್ನು ಈ ಮೊದಲು ಸಹ ಸಿಬಿಐ ಪ್ರಶ್ನಿಸಿತ್ತಾದರೂ, ಇನ್ನೂ ಹೆಚ್ಚಿನ ವಿಚಾರಣೆಗಾಗಿ ಸಮನ್ಸ್ ನೀಡಲಾಗಿದೆ ಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಈ ವರ್ಷದ ಜನವರಿಯಲ್ಲಿ ಸಿಬಿಐಗೆ ಹಸ್ತಾಂತರಿಸುವುದಕ್ಕೆ ಮುನ್ನ ಇವರಿಬ್ಬರು ರಾಜ್ಯ ಸಿಐಡಿಯ ವರಿಷ್ಠಾಧಿಕಾರಿಗಳಾಗಿದ್ದರು.
ಜೈಲಿನಲ್ಲಿ ಅಮಿತ್ ವಿಚಾರಣೆಗೆ ಅನುಮತಿ
ಅಹ್ಮದಾಬಾದ್, ಜು.26: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂ ಧಿಸಿ ನ್ಯಾಯಾಂಗ ಬಂಧನದಲ್ಲಿರುವ ಗುಜರಾತ್ನ ಮಾಜಿ ಸಹಾಯಕ ಗೃಹ ಸಚಿವ ಅಮಿತ್ ಶಾರನ್ನು ಜೈಲಿನಲ್ಲಿ ಮೂರು ದಿನಗಳವರೆಗೆ ಪ್ರಶ್ನಿಸುವುದಕ್ಕೆ ಸಿಬಿಐ ನ್ಯಾಯಾಲಯವು ಸೋಮ ವಾರ ಕೇಂ ದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ಅನುಮತಿ ನೀಡಿದೆ.
ಜುಲೈ 28, 29,30ರಂದು ಬೆಳಗ್ಗೆ 9:00ರಿಂದ ಸಂಜೆ 5:00 ಗಂಟೆಯ ನಡುವೆ ಶಾರನ್ನು ಸಬರ ಮತಿ ಜೈಲಿನಲ್ಲಿ ವಿಚಾರಣೆಗೊಳಪಡಿಸಲು ಸಿಬಿಐಗೆ ಅನುಮತಿ ದೊರೆತಿದೆ. ಮಾತ್ರವಲ್ಲದೆ ವಿಚಾರಣೆಯನ್ನು ಆಡಿಯೋ ಮತ್ತು ವಿಡಿಯೋದಲ್ಲಿ ದಾಖಲಿಸಿಕೊಳ್ಳಬೇಕೆಂದು ಸಿಬಿಐ ನ್ಯಾಯಾಧೀಶ ಎ.ವೈ. ದಾವೆ ಆದೇಶಿಸಿದ್ದಾರೆ. ಶಾರನ್ನು ಪ್ರಶ್ನಿಸಲು ಅನುಮತಿ ನೀಡಬೇಕೆಂದು ಕೋರಿ ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಇಂದು ಬೆಳಗ್ಗೆ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಶಾ ಪರವಾಗಿ ವಾದಿಸಿದ ಖ್ಯಾತ ನ್ಯಾಯವಾದಿ ರಾಮ್ಜೇಠ್ಮಲಾನಿ, ಸಿಬಿಐ ಮನವಿಯನ್ನು ವಿರೋಧಿಸಿದರು. ತನ್ನ ಕಕ್ಷಿದಾರನಿಗೆ ದೋಷಾರೋಪ ಪಟ್ಟಿಯ ಪ್ರತಿಯನ್ನು ಸಿಬಿಐ ನೀಡಿದ ಬಳಿಕವಷ್ಟೇ ಅದಕ್ಕೆ ವಿಚಾರಣೆ ನಡೆಸುವುದು ಸಾಧ್ಯವೆಂದು ಅವರು ಪ್ರತಿಪಾದಿಸಿದರು. ಶಾ ಅವರ ವಿಚಾರಣೆಯನ್ನು ವಿಡಿಯೋದಲ್ಲಿ ಚಿತ್ರೀಕರಿಸಬೇಕೆಂದು ಅವರು ಆಗ್ರಹಿಸಿದರು.
ಈ ಮಧ್ಯೆ ಜಾಮೀನು ಬಿಡುಗಡೆ ಕೋರಿ ಅಮಿತ್ ಶಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸಿಬಿಐ ನ್ಯಾಯಾಲಯವು ಆಗಸ್ಟ್ 2ಕ್ಕೆ ಮುಂದೂಡಿದೆ.ಇದರೊಂದಿಗೆ ಶಾ ಕನಿಷ್ಠ ಪಕ್ಷ ಅಲ್ಲಿಯವ ರೆಗಾದರೂ ಜೈಲಿನಲ್ಲಿರುವುದು ಖಚಿತಪಟ್ಟಿದೆ.
ಈ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಕೊಲೆ ಮತ್ತು ಸುಲಿಗೆ ಆರೋಪಗಳನ್ನು ಎದುರಿಸುತ್ತಿರುವ ಶಾರನ್ನು ರವಿವಾರ ಸಿಬಿಐ ಬಂಧಿಸಿದ್ದು, ಅವರಿಗೆ ವಿಶೇಷ ಸಿಬಿಐ ಮ್ಯಾಜಿಸ್ಟ್ರೇಟ್ ಎ.ವೈ. ದಾವೆ ಆಗಸ್ಟ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಶಾರನ್ನು ಜೈಲಿನ ಆವರಣದಲ್ಲಿ ಪ್ರಶ್ನಿಸುವುದಕ್ಕೆ ಅನುಮತಿ ನೀಡಬೇಕೆಂದು ಇಲ್ಲಿನ ಸಿಬಿಐ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿದೆ.
ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ಬಗ್ಗೆ ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿ ಯಲ್ಲಿ ಅಮಿತ್ ಶಾರನ್ನು ಹಾಗೂ ಐಪಿಎಸ್ ಅಧಿಕಾರಿಗಳಾದ ಡಿ.ಜಿ.ವಂಝಾರ, ರಾಜ್ಕುಮಾರ್ ಪಾಂಡ್ಯನ್, ಎಂ.ಎನ್.ದಿನೇಶ್ ಮತ್ತು ಅಭಯ್ ಚೂಡಾಸಮಾ ಮುಖ್ಯ ಆರೋಪಿಗಳೆಂದು ಹೆಸರಿಸಿದೆ.
ಸೋಹ್ರಾಬುದ್ದೀನ್ ಶೇಖ್ರನ್ನು ಹತ್ಯೆಗೈಯಲು ಅಮಿತ್ ಶಾ, ಪೊಲೀಸ್ ಅಧಿಕಾರಿಗಳಾದ ವಂಝಾರಾ, ಪಾಂಡ್ಯನ್ ಮತ್ತು ಚೂಡಾಸಮಾರಿಗೆ ಸುಪಾರಿ ನೀಡಿದ್ದರೆಂದು ಚಾರ್ಜ್ಶೀಟ್ ಆಪಾದಿಸಿದೆ.
ವರದಿಯ ವಿವರಗಳು |
 |
ಕೃಪೆ : ವಾ ಬಾ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-26 00:00:00
|
|
|