ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್ಗೆ `ತಾರಾ'ಬಲ? (ಸ೦ಗ್ರಹ) |
ಪ್ರಕಟಿಸಿದ ದಿನಾಂಕ : 2009-02-19
ಉಡುಪಿ, ಜ. ೨೮: ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ದಿನದಿಂದ ದಿನಕ್ಕೆ ಹೊಸ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಕೊನೆಗೂ ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ. ಸದಾನಂದ ಗೌಡರಿಗೆ ಹಸಿರುನಿಶಾನೆ ತೋರಿಸಿದ್ದು ಹಲವು ದಿನಗಳಿಂದ ಇದ್ದ ಊಹಾಪೋಹಕ್ಕೆ ತೆರೆಬಿದ್ದಿದೆ.
ಜ. ೨೮ರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದಾನಂದ ಗೌಡರು ರಾಜ್ಯಾಧ್ಯಕ್ಷರಾದ ಕಾರಣ ಸುರಕ್ಷಿತ ಕ್ಷೇತ್ರವನ್ನೇ ಆರಿಸಬೇಕೆಂಬುದು ಪಕ್ಷದವರ ಅಭಿಪ್ರಾಯವೆನ್ನಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳೂ ಒಲವು ತೋರಿದ್ದರೆನ್ನಲಾಗಿದೆ.
ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎಲ್. ಶಂಕರ್ಗೋ ಡಿ.ಕೆ.ತಾರಾದೇವಿ ಯವರಿಗೋ ಎಂಬ ಪ್ರಶ್ನೆ ಇನ್ನೂ ಬಗೆಹರಿದಂತಿಲ್ಲ. ಉಡುಪಿ ಜಿಲ್ಲೆಯ ನಾಯಕರಿಗಂತೂ ಸ್ಪರ್ಧಿಸಲು ಮನಸ್ಸಿಲ್ಲ. ಶಂಕರ್ಗೆ ಟಿಕೆಟ್ ದೊರಕದೆ ಇರಲು ಸ್ವಪಕ್ಷಕ್ಕಿಂತಲೂ ಪರಪಕ್ಷದ ಸಮಸ್ಯೆ ಹೆಚ್ಚೆಂದು ಸ್ವಪಕ್ಷದ ಮೂಲಗಳೇ ಹೇಳುತ್ತಿವೆ. ರಾಜ್ಯದಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಶಂಕರ್ಗೆ ಟಿಕೆಟ್ ಕೊಡಲು ಜೆಡಿಎಸ್ `ಪರಮಾಚಾರ್ಯ' ಯಾನೆ `ಜಗದ್ಗುರು' ಎಚ್.ಡಿ.ದೇವೇ ಗೌಡರು ಕಡು ವಿರೋಧ ವ್ಯಕ್ತಪಡಿಸುತ್ತಿದ್ದಾರಂತೆ. ಶಂಕರ್ ಹಿಂದೆ ಜೆಡಿಎಸ್ ಗರೋಡಿಯಲ್ಲಿದ್ದು ಬಳಿಕ ಕಾಂಗ್ರೆಸ್ಗೆ ಬಂದಿರುವುದರಿಂದ ದೇವೇಗೌಡರು ಶತಾಯಗತಾಯ ವಿರೋಧವಿದ್ದಾರೆ. ಹೀಗೇನಾದರೂ ಆದಲ್ಲಿ ತಾರಾದೇವಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ತಾರಾದೇವಿಯವರಿಗೆ ಟಿಕೆಟ್ ನೀಡಿದರೆ ಮಹಿಳಾ ಕೋಟಾ ಈಡೇರಿಸಿದಂತಾಗುತ್ತದೆಂಬುದು ಪಕ್ಷದ ನಾಯಕರ ಚಿಂತನೆ ಎನ್ನಲಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ಉಭಯ ಜಿಲ್ಲೆಗಳ ಕಾಂಗ್ರೆಸ್ ನಾಯಕರು ಸಭೆ ನಡೆಸಿದಂತೆ. ಜ.೩೦ರಂದು ಶೃಂಗೇರಿಯಲ್ಲಿ ಸಭೆ ನಡೆಸಲಿದ್ದಾರೆ.
ಹ್ಯಾಟ್ರಿಕ್ ಸೋಲಿನ ಅಡ್ಡಿ?
ಮಂಗಳೂರಿನಲ್ಲಿ ಕಾಂಗ್ರೆಸ್ನಿಂದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರ ಹೆಸರು ಕೇಳಿಬರುತ್ತಿದ್ದರೂ ತಲಾ ಮೂರು ಬಾರಿ ಸೋತವರಿಗೆ ಟಿಕೆಟ್ ಕೊಡಬಾರದೆಂಬ ಪಕ್ಷದ ಆಂತರಿಕ ನಿಯಮ ಇವರಿಗೆ ಅಡ್ಡಿ ಎನ್ನಲಾಗುತ್ತಿದೆ. ಉಡುಪಿಯ ಮಾಜಿ ಸಂಸದ ವಿನಯಕುಮಾರ ಸೊರಕೆ ಅವರ ಅದೃಷ್ಟ ಮಂಗಳೂರಿನಲ್ಲಿ ಖುಲಾಯಿಸುವ ಸಾಧ್ಯತೆ ಹೆಚ್ಚಿಗೆ ಇದೆ.
ಉಡುಪಿ ಲೋಕಸಭಾ ಕ್ಷೇತ್ರದಿಂದ ಬೈಂದೂರು, ಸುರತ್ಕಲ್, ಮೂಲ್ಕಿ ಮೂಡಬಿದಿರೆ ಕ್ಷೇತ್ರ ಕೈಬಿಟ್ಟು ಹೋದ ಕಾರಣ ಸೊರಕೆಯವರು ಉಡುಪಿ ಕ್ಷೇತ್ರದಲ್ಲಿ ಮತ್ತೆ ನಿಲ್ಲಲು ಮನಸ್ಸು ಮಾಡುತ್ತಿಲ್ಲ. ಮಂಗಳೂರಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನದ ಅಂಗವಾಗಿ ಸೊರಕೆಯವರು ಜ.೨೮ರ ಬೆಳಗ್ಗೆ ದಿಲ್ಲಿಗೆ ಹೋಗಿದ್ದಾರೆ. ಹೈಕಮಾಂಡ್ ಪ್ರಭಾವದಲ್ಲಿ ಮೊಯ್ಲಿಯವರ ಕೈ ಮಿಗಿಲಾಗಿದೆ, ಅನಂತರ ಸೊರಕೆಯವರದ್ದು ಎಂಬ ಮಾತೂ ಪಕ್ಷದಲ್ಲಿ ಕೇಳಿಬರುತ್ತಿದೆ.
ಒಟ್ಟಾರೆ ಉಡುಪಿ ಕ್ಷೇತ್ರದ ಟಿಕೆಟ್ಗೆ ಕಾಂಗ್ರೆಸ್ನಲ್ಲಿ ಚಿಕ್ಕಮಗಳೂರಿನವರದ್ದೇ ಪ್ರಾಬಲ್ಯ, ಮಂಗಳೂರಿನ ಟಿಕೆಟ್ ಗಿಟ್ಟಿಸಿಕೊಳ್ಳಲು ಉಭಯ ಜಿಲ್ಲೆಗಳ ನಾಯಕರು ತೀವ್ರ ಪೈಪೋಟಿಯಲ್ಲಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿಯಂತಹ ಕ್ಷೇತ್ರಗಳು ಸೇರ್ಪಡೆಗೊಂಡಿರುವುದು, ಅಲ್ಪಸಂಖ್ಯಾಕರ ಮತಗಳು ದೊಡ್ಡ ಸಂಖ್ಯೆಯಲ್ಲಿರುವುದು, ಮಂಗಳೂರಿನ ಪಬ್ ದಾಳಿ ಪ್ರಕರಣ ಇತ್ಯಾದಿ ಕಾಂಗ್ರೆಸಿನ ಪೈಪೋಟಿಗೆ ಕಾರಣವೆನ್ನಲಾಗಿದೆ.
ಎರಡೂ ಜಿಲ್ಲೆಗಳಲ್ಲಿ ಒಂದು ಕ್ಷೇತ್ರದಿಂದಂತೂ ಬಿಲ್ಲವ ಅಭ್ಯರ್ಥಿಗಳನ್ನು ನಿಲ್ಲಿಸುವುದು ಬಹುತೇಕ ಖಾತ್ರಿ. ಮಂಗಳೂರಿನಿಂದ ಬಿಜೆಪಿ ಅಭ್ಯರ್ಥಿಗಳಾಗಿ ಕಾರ್ಕಳದ ಮಾಜಿ ಶಾಸಕ ವಿ.ಸುನೀಲ್ಕುಮಾರ್, ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಯವರ ಹೆಸರು ಕೇಳಿಬರುತ್ತಿದೆ.
ಚಿಂತನ ಬೈಠಕ್: ಹೆಬ್ರಿ ಸಮೀಪದ ಸಂತೆಕಟ್ಟೆಯಲ್ಲಿ ಜ.೨೮ರಂದು ನಡೆದ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ೮ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಪ್ರಮುಖ ನಾಯಕರ `ಚಿಂತನ ಭೈಠಕ್' ಸಭೆಯನ್ನು ಡಿ.ವಿ. ಉದ್ಘಾಟಿಸಿದರು. ಎಂಟೂ ಕ್ಷೇತ್ರಗಳ ಪ್ರಮುಖರು ಡಿ.ವಿ.ಯವರ ಹೆಸರನ್ನು ಅನುಮೋದಿಸಿದರು.
ಡಿ.ವಿ. ಉಮೇದುವಾರಿಕೆ: ಬಿಜೆಪಿ ಸಭೆ ನಿರ್ಣಯ
ಉಡುಪಿ, ಜ. ೨೯: ಕ್ಷೇತ್ರ ಪುನರ್ವಿಂಗಡನೆ ಬಳಿಕ ರೂಪುಗೊಂಡಿರುವ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಡಿ.ವಿ. ಸದಾನಂದ ಗೌಡರ ಹೆಸರನ್ನು ಅಂತಿಮಗೊಳಿಸಿ ಚುನಾವಣಾ ಸಮಿತಿಗೆ ಕಳುಹಿಸಲಾಗಿದೆ.
ಡಿ.೨೮ ಮತ್ತು ೨೯ರಂದು ಹೆಬ್ರಿ ಸಂತೆಕಟ್ಟೆಯಲ್ಲಿ ನಡೆದ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಪ್ರಮುಖರ ಚಿಂತನಾ ಸಭೆಯಲ್ಲಿ ಡಿ.ವಿ. ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಸಿ.ಟಿ.ರವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
`ಕಾರ್ಯಕರ್ತರು ಕರೆದರು': ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಎಚ್. ಶಂಕರ ಮೂರ್ತಿ ಅವರು, ಉಡುಪಿಯನ್ನು ಹಿಂದೆಯೂ ಬಿಜೆಪಿ ಗೆದ್ದಿತ್ತು. ಉಡುಪಿ - ಚಿಕ್ಕಮಗಳೂರಿನ ಕಾರ್ಯ ಕರ್ತರ ಒತ್ತಾಸೆ ಮೇರೆಗೆ ಸದಾನಂದ ಗೌಡರು ಇಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ ಎಂದರು.
ಡಾ| ಆಚಾರ್ಯ, ಕೆ.ಎಸ್. ಈಶ್ವರಪ್ಪ, ಎ.ಜಿ. ಕೊಡ್ಗಿ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜೇ ಗೌಡ, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಉಪಸ್ಥಿತರಿದ್ದರು
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-19
|
|
|