ನ್ಯಾ.ಸಂತೋಷ್ ಹೆಗ್ಡೆ ಮಾಡಿದ ಸುದ್ದಿ |
ಪ್ರಕಟಿಸಿದ ದಿನಾಂಕ : 2010-03-22
ಕಳೆದ ನಾಲ್ಕು ವರ್ಷಗಳಿಂದಲೂ ಲೋಕಾಯುಕ್ತ ದಾಳಿಗಳು ಸರ್ಕಾರದ ಅಧಿಕಾರಿಗಳು - ನೌಕರರ ಮೇಲೆ ನಿರಂತರವಾಗಿ ನಡೆದಿವೆ. ಎಲ್ಲ ಪ್ರಕರಣಗಳಲ್ಲೂ ವಶಪಡಿಸಿಕೊಂಡ ಹಣ, ದಾಖಲೆಗಳ ಸಮೇತ ಸರ್ಕಾರಕ್ಕೆ ವರದಿ ಹೋಗುತ್ತದೆ.
ಈ ಕೆಲಸದ ಸ್ವರೂಪವೇ ನಿಧಾನಗತಿಗೆ ಹೇಳಿ ಮಾಡಿಸಿದಂತಿದೆ. ಎಲ್ಲ ವಿವರಗಳನ್ನು ಸಿದ್ಧಪಡಿಸಿ, ಆರೋಪಗಳ ಪಟ್ಟಿಗಳನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ದಾಖಲೆಗಳು ರವಾನೆಯಾಗುವ ವೇಳೆಗೆ ತಿಂಗಳುಗಳೇ ಕಳೆದಿರುತ್ತವೆ. ಇಷ್ಟೆಲ್ಲ ಆದ ಅನಂತರ, ಸರ್ಕಾರ ಮೊಕದ್ದಮೆಯನ್ನು ದಾಖಲು ಮಾಡಲು ಅನುಮತಿ ನೀಡುವುದರಲ್ಲಿ ಇನ್ನಷ್ಟು ವಿಳಂಬ. ಆ ವೇಳೆಗೆ ಎಲ್ಲ ಪ್ರಕರಣಗಳೂ ತಮ್ಮ ಬಿಸಿಯನ್ನು ಕಳೆದುಕೊಂಡು ಹಳಸಲಾಗಿರುತ್ತವೆ. ಇದು ಲೋಕಾಯುಕ್ತ, ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಸ್ವಂತ ಅನುಭವ ಆಧರಿತ ಅಳಲು.
ತಿಂಗಳುಗಳ ಹಿಂದೆಯೇ ಸಂತೋಷ್ ಹೆಗ್ಡೆ ಅವರು ಸರ್ಕಾರಕ್ಕೆ ಪತ್ರ ಬರೆದು, ಆಯೋಗದ ವ್ಯಾಪ್ತಿಯಲ್ಲಿ ಶಾಸಕರ ಜತೆಯಲ್ಲೇ ಚುನಾಯಿತ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳನ್ನು ಸೇರಿಸಬೇಕೆಂದು ಸಲಹೆ ಮಾಡಿದ್ದರು. ಲೋಕಾಯುಕ್ತ ಕಾಯಿದೆಗೆ ಆ ಸಣ್ಣ ಮಾರ್ಪಾ ಟನ್ನು ಸರ್ಕಾರ ಇನ್ನೂ ಮಾಡಿಲ್ಲ.
ಈಗ ಮತ್ತೊಮ್ಮೆ ಲೋಕಾಯುಕ್ತರು ಹತ್ತು ಮಂದಿ ಅಧಿಕಾರಿಗಳು - ನೌಕರರ ಮನೆ ಮೇಲೆ ದಾಳಿ ನಡೆಸಿ ಹೊಸ ವರ್ಷದಲ್ಲಿ (ಉಗಾದಿಯ ಅನಂತರ) ಎಂಟು ಕೋಟಿ ರುಪಾಯಿಗಳಷ್ಟು ಶಂಕಿತ ಅಕ್ರಮ ಸಂಪತ್ತನ್ನು ಬಯಲಿಗೆ ಎಳೆದಿದ್ದಾರೆ. ಈ ಪ್ರಕರಣವೂ ದೊಡ್ಡ ರೀತಿಯಲ್ಲಿ ಸುದ್ದಿಯಾಗಿ ದ್ದರೂ, ಇದರಿಂದ ಭ್ರಷ್ಟಾಚಾರದ ಮೇಲೆ ಪರಿಣಾಮ ಬೀರುವ ಭ್ರಮೆ ಜನರಿಗೂ ಇಲ್ಲ, ಲೋಕಾ ಯುಕ್ತರಿಗೂ ಇಲ್ಲ ಎನ್ನುವಂತಾಗಿದೆ.
ಸರ್ಕಾರ ಲೋಕಾಯುಕ್ತ ಸ್ಥಾನದಿಂದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನಿವೃತ್ತರಾಗುವ ದಿನವನ್ನೇ ಕಾಯುತ್ತಿದೆಯೇನು ಎನ್ನುವ ಉದ್ಗಾರ ಈಗ ಲೋಕಾಯುಕ್ತರಿಂದಲೇ ಹೊರಗೆ ಬಿದ್ದಿದೆ.
ಇಂತಹ ಪರಿಸ್ಥಿತಿ ಯಾವ ಸರ್ಕಾರಕ್ಕೂ ಮರ್ಯಾದೆ ತರುವಂತಹ ವಿಚಾರವಲ್ಲ. ನಿಜ, ಆಡಳಿತ ವ್ಯವಸ್ಥೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ಆಳವಾಗಿ ಬೇರು ಬಿಟ್ಟಿರುವುದಕ್ಕೆ ಈಗಿನ ಸರ್ಕಾರವೇ ಕಾರಣ ಎಂದೇನೂ ಅಲ್ಲ. ಲೋಕಾಯುಕ್ತವೇ ಆಗಲಿ ಅಥವಾ ಬೇರೆ ಯಾವ ವ್ಯವಸ್ಥೆಯೇ ಆಗಲಿ ಎಲ್ಲ ಸರ್ಕಾರಿ ಕಾರ್ಯಾಲಯಗಳಲ್ಲೂ ಬಲೆಯನ್ನಿಟ್ಟು ಮಿಕಗಳಿಗೆ ಕಾದು ಕೂಡುವಂತಹ ಪರಿಸ್ಥಿತಿ ಈಗ ಇಲ್ಲ.ಇಂತಹ ಸನ್ನಿವೇಶದಲ್ಲಿ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದವರ ವಿರುದ್ಧದ ಆರೋಪಗಳ ತನಿಖೆ ಶೀಘ್ರವಾಗಿ ಮುಗಿಯುವ ವ್ಯವಸ್ಥೆ ರೂಪಗೊಳ್ಳದಿದ್ದರೆ, ಲೋಕಾಯುಕ್ತರ ಆಯೋಗ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎನ್ನುವ ಸ್ಥಿತಿ ನಿರ್ಮಾಣವಾಗಬಹುದು.
ಭ್ರಷ್ಟಾಚಾರವನ್ನು ತಡೆಗಟ್ಟುವ ದಿಕ್ಕಿನಲ್ಲಿ ಯಡಿಯೂರಪ್ಪ ಸರ್ಕಾರ ತನ್ನ ೨೧ ತಿಂಗಳ ಆಳ್ವಿಕೆ ಯಲ್ಲಿ ಹೇಳಿಕೊಳ್ಳುವಂತಹ ದಿಟ್ಟ ಹೆಜ್ಜೆಯನ್ನೇನೂ ಇಟ್ಟಿಲ್ಲ. ಈಗ ಲೋಕಾಯುಕ್ತರು ಮಾಡಿರುವ ಹಲವಾರು ಸಲಹೆಗಳು, ಸಲ್ಲಿಸಿರುವ ಅನೇಕ ವರದಿಗಳು ಸರ್ಕಾರದ ಮುಂದಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದೆರಡು ದಿನಗಳ ಕಾಲ ಭೂಗತರಾಗಿ, ಆ ಎಲ್ಲ ಸಲಹೆಗಳ ವಿಚಾರ ದಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದರೆ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಬಿರುಸಿನಿಂದ ಸಾಗುವುದು ಸಾಧ್ಯ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|