ಕಿಂಗ್ಫಿಷರ್ ವಿಮಾನದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ; ಭದ್ರತಾ ಲೋಪ ಸಾಧ್ಯತೆ; ತನಿಖೆಗೆ ಆದೇಶ |
ಪ್ರಕಟಿಸಿದ ದಿನಾಂಕ : 2010-03-22
ಬೆಂಗಳೂರಿನಿಂದ ಆಗಮಿಸಿದ ಕಿಂಗ್ಫಿಷರ್ ವಿಮಾನದಲ್ಲಿ ಭಾನುವಾರ ನಾಡ ಬಾಂಬ್ ಹೋಲುವ ವಸ್ತು ಪತ್ತೆಯಾಗಿದ್ದು, ಭದ್ರತಾ ಲೋಪವಾಗಿರುವ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ತನಿಖೆಗೆ ಆದೇಶಿಸಿದೆ.
ತಿರುವನಂತಪುರ (ಪಿಟಿಐ): ವಿಮಾನವು ಬೆಳಿಗ್ಗೆ 8 ಗಂಟೆಗೆ ತಿರುವನಂತಪುರ ವಿಮಾನನಿಲ್ದಾಣಕ್ಕೆ ಆಗಮಿಸಿತು. ಪ್ರಯಾಣಿಕರೆಲ್ಲ ಇಳಿದ ಬಳಿಕ ಎಂದಿನಂತೆ ಭದ್ರತಾ ತಪಾಸಣೆ ಮಾಡಲಾಯಿತು. ಆಗ ವಿಮಾನದ ಕಾರ್ಗೊ ಕಂಪಾರ್ಟ್ಮೆಂಟಿನಲ್ಲಿ ಕ್ರಿಕೆಟ್ ಚೆಂಡಿನ ಗಾತ್ರದ ಬಾಂಬ್ ಹೋಲುವ ವಸ್ತು ಪತ್ತೆಯಾಯಿತು. ಕೂಡಲೇ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಇದನ್ನು ಮಲೆಯಾಳಂ ಮನೋರಮಾ ಪತ್ರಿಕೆಯ ಜನವರಿ ತಿಂಗಳ ತಿರುವನಂತಪುರ ಆವೃತ್ತಿಯಲ್ಲಿ ಸುತ್ತಿಡಲಾಗಿತ್ತು ಎಂದು ತಿರುವನಂತಪುರ ಪೊಲೀಸ್ ವರಿಷ್ಠಾಧಿಕಾರಿ ಎಂ.ಆರ್.ಅಜಿತ್ ಕುಮಾರ್ ತಿಳಿಸಿದ್ದಾರೆ.
ಇದರಲ್ಲಿ ಗನ್ಪೌಡರ್ ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿಧಿವಿಜ್ಞಾನ ಪರೀಕ್ಷೆ ಬಳಿಕವಷ್ಟೇ ಸತ್ಯ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ. ಖಂಡಿತವಾಗಿಯೂ ಇದು ಭದ್ರತಾ ಲೋಪ ಎಂದಿರುವ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ಯು.ಕೆ.ಬನ್ಸಾಲ್, ಲಗ್ಗೇಜ್ಗಳನ್ನು ಹಾಕುವಾಗ ಅಥವಾ ಅವುಗಳನ್ನು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಇಳಿಸುವಾಗ ಈ ವಸ್ತುವನ್ನು ಇಟ್ಟ ಸಾಧ್ಯತೆಗಳು ಇವೆ ಎಂದು ಹೇಳಿದ್ದಾರೆ. ಬೆಳಿಗ್ಗೆ 6.25 ಕ್ಕೆ ಬೆಂಗಳೂರಿನಿಂದ ಹೊರಟ ಈ ವಿಮಾಣದಲ್ಲಿ 27 ಪ್ರಯಾಣಿಕರು ಇದ್ದರು.
ಏರ್ಲೈನ್ ಜವಾಬ್ದಾರಿ:
ಇನ್ನೊಂದೆಡೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಈ ಘಟನೆಗೆ ಸಂಬಂಧಪಟ್ಟ ಏರ್ಲೈನ್ ಹೊಣೆಯಾಗಿರುತ್ತದೆ ಎಂದು ಹೇಳಿದ್ದಾರೆ.
‘ಇದೊಂದು ಗಂಭೀರ ವಿಷಯವಾಗಿದೆ. ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ’ ಎಂದು ಕೇರಳ ಕಾನೂನು ಸಚಿವ ಎಂ.ವಿಜಯ ಕುಮಾರ್ ತಿಳಿಸಿದ್ದಾರೆ.
ನವದೆಹಲಿ ವರದಿ:
ಉಗ್ರರು ವಿಮಾನಯಾನದ ಮೇಲೆ ಮುಖ್ಯವಾಗಿ ಕಣ್ಣಿಟ್ಟಿದ್ದಾರೆ ಎಂದು ಎಚ್ಚರಿಕೆ ನೀಡಿರುವ ಬಿಜೆಪಿ, ಬೆಂಗಳೂರು-ತಿರುವನಂತಪುರ ಕಿಂಗ್ಫಿಷರ್ ವಿಮಾನದಲ್ಲಿ ಭದ್ರತಾಲೋಪವಾಗಿರುವ ಬಗ್ಗೆ ಸರ್ಕಾರ ತನಿಖೆ ನಡೆಸಬೇಕೆಂದು ಹೇಳಿದೆ.
ತನಿಖೆಗೆ 5 ತಂಡ
ಬೆಂಗಳೂರು: ‘ಕಿಂಗ್ ಫಿಷರ್ ವಿಮಾನದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾದ ಬಗ್ಗೆ ತನಿಖೆ ನಡೆಸಲು ಐದು ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ತಿರುವನಂತಪುರಕ್ಕೆ ಭೇಟಿ ನೀಡಿ ಅಲ್ಲಿ ಮಾಹಿತಿ ಕಲೆ ಹಾಕಲಿದೆ. ಉಳಿದ ತಂಡಗಳು ಇಲ್ಲಿಯೇ ತನಿಖೆ ನಡೆಸಲಿವೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಸವರಾಜ ಮಾಲಗತ್ತಿ ತಿಳಿಸಿದ್ದಾರೆ.
ವಿಮಾನದಲ್ಲಿ ಬಾಂಬ್ ಮಾದರಿ ವಸ್ತು ಹೇಗೆ ಬಂತು, ಅದನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಡಲಾಗಿತ್ತೇ ಅಥವಾ ಎಲ್ಲಿಂದ ಅದು ಬಂತು ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|