ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ |
ಪ್ರಕಟಿಸಿದ ದಿನಾಂಕ : 2010-03-21
ಶ್ರೀರಾಮ ನಾಮ ತಾರಕ ಮಂತ್ರ, ಜಪ-ಯಜ್ಞದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ಸಚಿವ ಪಾಲೆಮಾರ್ ಪಾಲ್ಗೊಂಡರು.
ಬಂಟ್ವಾಳ, ಮಾ. ೨೦: ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಗೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ನಾಮ ತಾರಕ ಮಂತ್ರ, ಜಪ-ಯಜ್ಞದ ಅಂಗವಾಗಿ ಶ್ರೀರಾಮ ವಿದ್ಯಾಕೇಂದ್ರದ ಮುಖ್ಯಪ್ರಾಣ ವೇದಿಕೆಯಲ್ಲಿ ಶನಿವಾರ ಸಂಜೆ ನಡೆದ ಧರ್ಮ ಜಿಜ್ಞಾಸೆ ಸಭೆಯಲ್ಲಿ ಮಾತನಾಡಿದರು.
ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಿದ್ಯುತ್ ಸಹಿತ ಮೂಲ ಸೌಲಭ್ಯಗಳ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.
ಗೋಹತ್ಯೆ ನಿಷೇಧ ಮಸೂದೆ ಮಂಡನೆ ಅತ್ಯಂತ ಕಠಿನ ಸಂದರ್ಭವಾಗಿತ್ತು. ಅದರ ಜೊತೆಗೆ ಸಂಸ್ಕೃತ ವಿದ್ಯಾಲಯ ಸ್ಥಾಪನೆಯ ದಿಟ್ಟ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಸರಕಾರದ ಮೇಲೆ ಜನ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಆಗದಂತೆ ಆಡಳಿತ ನಡೆಸುತ್ತೇವೆ ಎಂದು ಯಡಿಯೂರಪ್ಪ ನುಡಿದರು.
ಸಮಾಜದಲ್ಲಿ ಸಾಮರಸ್ಯ ಉಳಿಸಿಕೊಳ್ಳುವ ಕೆಲಸ ಆಗಬೇಕು. ಸಂತರ ಸಂದೇಶ ನಮಗೆ ಶ್ರೀರಕ್ಷೆ. ಭವಿಷ್ಯದಲ್ಲಿ ಭಾರತ ಜಗತ್ತಿಗೆ ಮಾರ್ಗದರ್ಶಕವಾಗಲಿರುವುದು ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ರಾಜ್ಯ ಬಿಜೆಪಿ ಸರಕಾರ ಕೃಷಿ -ಋಷಿ ಪರಂಪರೆಯ ರಕ್ಷಣೆಗೆ ಬದ್ಧವಾಗಿ ನಡೆದುಕೊಳ್ಳುವುದು ಎಂದರು.
ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೊಲ್ಯದ ಶ್ರೀ ಜಗದ್ಗುರು ರಮಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಬೊಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಆದಿಚುಂಚನಗಿರಿ ಕಾವೂರು ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಒಡಿಯೂರು ಶ್ರೀ ಮಾತಾನಂದಮಯಿ, ಮರಕಡದ ಶ್ರೀ ಯೋಗೇಶ್ವರೇಶ್ವರ ನರೇಂದ್ರನಾಥ ಸ್ವಾಮೀಜಿ, ಶ್ರೀ ಉಮಾಮಹೇಶ್ವರ ಸ್ವಾಮೀಜಿ ಬಾಯಾರು, ಶ್ರೀ ಮುಕ್ತಾನಂದ ಸ್ವಾಮಿ ಕರಿಂಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರ್ಮ ಜಿಜ್ಞಾಸೆ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಎಂ.ಬಿ. ಪುರಾಣಿಕ್ ಪ್ರಸ್ತಾವನೆ ನೀಡಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಿಂದೂ ಧರ್ಮ, ಸಂಸ್ಕೃತಿ ಮರು ಸಂಸ್ಥಾಪಿಸುವಲ್ಲಿ ಸಂತರು ಸಮಾಜಕ್ಕೆ ದಾರಿ ತೋರಿಸಬೇಕು ಎಂದರು.
ಧರ್ಮದ ಮೂಲಕ ಜಗತ್ತಿನಲ್ಲಿ ಶಾಂತಿ ನೀಡಬಹುದು. ಧರ್ಮವೇ ನಮ್ಮ ಗೊಂದಲಗಳನ್ನು ನಿವಾರಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ಉದ್ಯಮಿ ದಯಾನಂದ ಪೈ ಬೆಂಗಳೂರು, ಸಂಚಾಲಕರಾದ ಎ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಯಾಗಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಕೃಷ್ಣ ಜೆ. ಪಾಲೆಮಾರ್ ಮುಂತಾದವರು ಉಪಸ್ಥಿತರಿದ್ದರು.
ಯಜ್ಞ ಸಮಿತಿ ಪ್ರಧಾನ ಡಾ| ಪ್ರಭಾಕರ ಭಟ್ ಕಲ್ಲಡ್ಕ ಸ್ವಾಗತಿಸಿ, ಕಲ್ಲಡ್ಕ ಶ್ರೀರಾಮ ಭಜನಾ ಮಂದಿರ ಒಳ್ಳೆಯ ಕೆಲಸಕ್ಕೆ ಪ್ರೇರಣಾ ಕೇಂದ್ರವಾಗಿದೆ. ರಾಮ ಎಂದರೆ ಒಳ್ಳೆಯದನ್ನು ಪ್ರೇರೇಪಿಸಿ ಕೆಟ್ಟದ್ದನ್ನು ತೊಲಗಿಸುವುದಾಗಿದೆ. ಜಾತಿ-ಮತ, ಸ್ತ್ರೀ-ಪುರುಷ ಎನ್ನದೆ ಎಲ್ಲರೂ ಯಜ್ಞದಲ್ಲಿ ಪಾಲ್ಗೊಳ್ಳುತ್ತಿರುವುದು ವೈಶಿಷ್ಟ್ಯವಾಗಿದೆ. ಇದು ತಪಸ್ಸಿನ ಕಾರ್ಯ, ಸಾಮರಸ್ಯದ ಸಮಾಜ ನಿರ್ಮಾಣ ಯಾಗದ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಸಂಚಾಲಕ ಸಮಿತಿ ಕಾರ್ಯದರ್ಶಿ ಡಾ| ಸೋಂದಾ ಭಾಸ್ಕರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಯಜ್ಞ ಸಮಿತಿ ಪ್ರ. ಕಾರ್ಯದರ್ಶಿ ಜಿತೇಂದ್ರ ಎಸ್. ಕೊಟ್ಟಾರಿ ವಂದಿಸಿದರು.
ಕಲ್ಲಡ್ಕ: ಶ್ರೀರಾಮನಾಮ ತಾರಕ ಯಜ್ಞಕ್ಕೆ ಚಾಲನೆ
ಯಾಗಾಧ್ಯಕ್ಷ ನಳಿನ್ಕುಮಾರ್ ಕಟೀಲು ಅವರು ಯಾಗಭೂಮಿಕೆಯಲ್ಲಿ ದೀಪ ಪ್ರಜ್ವಲನ ಮಾಡಿದರು.
ಬಂಟ್ವಾಳ, ಮಾ. ೨೦: ಕಲ್ಲಡ್ಕ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀರಾಮ ನಾಮ ತಾರಕ ಮಂತ್ರ ಜಪ ಯಜ್ಞಕ್ಕೆ ಯಾಗ ಪ್ರಧಾನ ಡಾ| ಪ್ರಭಾಕರ ಭಟ್ ಅವರು ತುಪ್ಪದ ದೀಪ ಹಚ್ಚುವ ಮೂಲಕ ಮಾ. ೨೦ರ ಮುಂಜಾನೆ ೮.೧೫ಕ್ಕೆ ಚಾಲನೆ ನೀಡಿದರು.
ಪ್ರಭಾಕರ ಭಟ್ ಮತ್ತು ಡಾ| ಕಮಲಾ ಭಟ್ ದಂಪತಿ ನಾಂದಿ ಪುಣ್ಯಾಹ ಗಂಗಾಹರಣ ಪ್ರಾರ್ಥನೆ ಮಾಡುವ ಮೂಲಕ ಬಾವಿಯಿಂದ ಶುದ್ಧ ಜಲವನ್ನು ಸೇದಿ ಜಲಪೂರಣ ವಿಧಿ ನೆರವೇರಿಸಿದರು. ಬಳಿಕ ಶ್ರೀರಾಮ ನಾಮ ತಾರಕ ಮಂತ್ರ ಘೋಷದೊಂದಿಗೆ ಯಾಗ ಪ್ರಧಾನರ ನಿವಾಸದಿಂದ ಮಂದಿರಕ್ಕೆ ನೂರಾರು ಜನ ಮೆರವಣಿಗೆಯಲ್ಲಿ ತೆರಳಿದರು.
ಅಲ್ಲಿ ದೇವರಿಗೆ ಪ್ರಾರ್ಥನೆ ಮಾಡುವ ಮೂಲಕ ಅರಣಿ ಮಥನ ಮಾಡಿ ನಾಲ್ಕು ಯಜ್ಞ ಕುಂಡಗಳಲ್ಲಿ ಅಗ್ನಿಯನ್ನು ಪ್ರಜ್ವಲನ ಮಾಡಲಾಯಿತು. ಯಾಗಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರು ಯಾಗ ಭೂಮಿಕೆಯಲ್ಲಿ ದೀಪ ಪ್ರಜ್ವಲನ ಮಾಡಿದರು. ಯಾಗ ಮೀಮಾಂಸಕ ಕೆ.ಎಸ್. ನಿತ್ಯಾನಂದ ಅವರ ನಿರ್ದೇಶನದಲ್ಲಿ ನಿರಂತರ ಯಜ್ಞಕ್ಕೆ ಚಾಲನೆ ದೊರೆಯಿತು. ನೂರಕ್ಕೂ ಮಿಕ್ಕಿದ ಋತ್ವಿಜರ ಪಾಲ್ಗೊಳ್ಳುವಿಕೆಯಲ್ಲಿ ಯಜ್ಞ ನಡೆಯುತ್ತಿದೆ. ಸರತಿ ಸಾಲಿನಲ್ಲಿ ಸಾರ್ವಜನಿಕರಿಗೆ ಯಜ್ಞ ಕುಂಡಕ್ಕೆ ಹವಿಸ್ಸು ಸಮರ್ಪಣೆಗೆ ನಿರಂತರ ಅವಕಾಶ ಮಾಡಿಕೊಡಲಾಗಿದೆ. ಅಹೋರಾತ್ರಿ ಹವಿಸ್ಸು ಸಮರ್ಪಣೆ, ಅನ್ನದಾನ, ಭಜನೆ, ಹೋಮ ಹವನ, ಮಂತ್ರಪಠಣ ನಡೆದಿದೆ.
ಕಲ್ಲಡ್ಕವಿಂದು ಸಹಸ್ರಾರು ಸಂಖ್ಯೆಯ ಶ್ರೀರಾಮ ಭಕ್ತರಿಂದ ತುಂಬಿದ್ದು ಅಚ್ಚುಕಟ್ಟಾದ ಯಾವುದೇ ಗೊಂದಲಕ್ಕೆ ಎಡೆಯಾಗದ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ.
ಬಂದ ಭಕ್ತರೆಲ್ಲರಿಗೂ ಇಲ್ಲಿ ಉತ್ತಮ ಊಟೋಪಚಾರ ನೀಡಲಾಗುತ್ತಿದೆ. ಹಲವು ಸಾವಿರ ಜನರು ಇಲ್ಲಿ ಸೇರಿದ್ದರೂ ಸ್ವಚ್ಚತೆಯತ್ತ ವಿಶೇಷ ಗಮನ ನೀಡಲಾಗುತ್ತಿದೆ.
ಮಾ. ೨೧ರಂದು ಸಂಜೆ ಮೂರು ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಸಂಜೆ ೫.೩೦ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಪೇಜಾವರ ಮಠಾಧೀಶರ ಭಾಗವಹಿಸುವಿಕೆಯಲ್ಲಿ ಧರ್ಮಸಭೆ ನಡೆಯಲಿದೆ.
‘ನೈಸ್’ ತಂದೆ ಮಕ್ಕಳ ವೃಥಾ ಆರೋಪ: ಯಡಿಯೂರಪ್ಪ
ಮಂಗಳೂರು, ಮಾ.೨೦: ನೈಸ್ ಬಗ್ಗೆ ಈಗಾಗಲೆ ಸಾಕಷ್ಟು ಚರ್ಚೆಯಾಗಿದೆ. ಈ ಬಗ್ಗೆ ತಂದೆ ಮಕ್ಕಳನ್ನು ಮಾತುಕತೆಗೆ ಆಹ್ವಾನಿಸಲಾಗಿದ್ದರೂ ಅವರು ಮಾತು ಕತೆಗೆ ಬಂದಿಲ್ಲ. ಆದರೆ ತಂದೆ ಮಕ್ಕಳು ವೃಥಾ ಆರೋಪವನ್ನು ಮಾತ್ರ ಮುಂದು ವರಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸುವ ಸಲುವಾಗಿ ಇಂದು ಸಂಜೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭ ನೈಸ್ ಬಗ್ಗೆ ದೇವೇಗೌಡರು ತಮ್ಮನ್ನು ವಚನ ಭ್ರಷ್ಟರು ಎಂದು ಟೀಕಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿದರು.
ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಅವರು ಹೇಳಿದರು.
ಬಜ್ಪೆ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮೇಯರ್ ರಜನಿ ದುಗ್ಗಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೆಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಶಾಸಕ ಯೋಗೀಶ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ ಮೊದಲಾದವರು ಸ್ವಾಗತಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|