ಕಬ್ಬನ್ ಪಾರ್ಕ್ನಲ್ಲಿ ಮಳೆ ನೀರ ಮೇಳ |
ಪ್ರಕಟಿಸಿದ ದಿನಾಂಕ : 2010-03-20
ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಕಬ್ಬನ್ ಪಾರ್ಕ್ ಬಾಲಭವನದಲ್ಲಿ ಮಳೆ ನೀರು ಸಂಗ್ರಹ ಮೇಳ ನಡೆಯುತ್ತಿದೆ. ಬೆಂಗಳೂರೆಂಬ ಮಹಾನಗರಿಯ ಮೇಲೆ ವಾರ್ಷಿಕ ಸರಾಸರಿ 900 ಮಿಲಿಮೀಟರ್ ಮಳೆ ಸುರಿಯುತ್ತದೆ.
ಹೆಬ್ಬಾಳ ಕೃಷಿ ವಿಶ್ವ ವಿದ್ಯಾಲಯದ ಭಾಗದಲ್ಲಿ ಇನ್ನೂ ತುಸು ಹೆಚ್ಚು. ವರ್ಷದಲ್ಲಿ ಒಟ್ಟು ನೂರ ರಿಂದ ನೂರೈವತ್ತು ದಿನಗಳ ಕಾಲ ಮಳೆ ಸುರಿಯುತ್ತದೆ.ಇಲ್ಲಿ ಒಂದು ಗಂಟೆ ಗಟ್ಟಿಯಾಗಿ ಮಳೆ ಸುರಿದರೆ ಬಡಾವಣೆಗಳು ಸಮುದ್ರವಾಗುತ್ತವೆ. ರಸ್ತೆಗಳು ಹೊಂಡಗಳಾಗುತ್ತವೆ. ಬಸ್ ನಿಲ್ದಾಣ ಗಳು, ತಗ್ಗು ಪ್ರದೇಶಗಳು ಕೆರೆಗಳಾಗುತ್ತವೆ.
ಇಷ್ಟೆಲ್ಲ ಭರ್ಜರಿ ಮಳೆ ಸುರಿದರೂ ಮಾರ್ಚ್- ಏಪ್ರಿಲ್ ತಿಂಗಳೊತ್ತಿಗೆ ಅನೇಕ ಬಡಾವಣೆಗಳು ನೀರಿಲ್ಲದೆ ಬಿಕ್ಕಳಿಸುತ್ತವೆ. ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆ, ಭಾರತ್ ನಗರದಂತಹ ಪ್ರದೇ ಶಗಳಲ್ಲಿ ನೀರಿದ್ದರೂ ಕಲುಷಿತವಾಗಿರುತ್ತವೆ. ಕುಡಿಯುವ ನೀರು ಸರಬರಾಜಾಗುವ ಕೊಳವೆ ಗಳಲ್ಲಿ ಹಾವಿನ ಮರಿ, ಕಪ್ಪೆ, ಚೇಳುಗಳು ಇಣುಕುತ್ತವೆ. ಪರಿಣಾಮ ನೀರಿಗಾಗಿ ಸಾರ್ವಜನಿಕರ ಪ್ರತಿಭಟನೆ, ಧರಣಿ, ಜಾಥಾ...
ಅಭಿವೃದ್ಧಿಯೆಂಬ ಅಂಧಯುಗದೊಂದಿಗೆ ನಗರದಲ್ಲಿ ಕುಡಿವ ನೀರಿನ ಹಾಹಾಕಾರ ಆರಂಭವಾ ಯಿತು. ವಾಡಿಕೆಯ ಮಳೆ ಪ್ರಮಾಣ ಇಳಿಕೆಯಾಗದಿದ್ದರೂ ಸುರಿವ ಮಳೆ ನೀರನ್ನು ಹಿಡಿದಿಟ್ಟು ಕೊಳ್ಳುವ, ಭೂಮಿಗೆ ಇಂಗಿಸುವ ಕೆರೆ, ಕಟ್ಟೆ, ಕಲ್ಯಾಣಿಗಳು ಕಳೆದು ಹೋದವು. ಮರ-ಗಿಡಗಳ ನಾಪತ್ತೆಯಾದವು. ನಗರದ ಜೀವನಾಡಿಯಾಗಿದ್ದ ವೃಷಭಾವತಿ ಎಂಬ ನೈದಿಲೆಯ ಹಾದಿ ಬೆಂಗಳೂರಿನ ಹೊಲಸು ಸಾಗಿಸುವ ಕೊಳವೆಯಾಯಿತು. ಪರಿಮಳ ಸೂಸುತ್ತಿದ್ದ ನದಿ ಪಾತ್ರ ದುರ್ನಾತ ಬೀರುವ ಕೊಳೆಗೇರಿಯಾಯಿತು. ಇದು ಬೆಂಗಳೂರಿನ ನೀರಿನ ಸಮಸ್ಯೆಯ ಕಥೆ.
ಮಳೆ ನೀರು ಸಂಗ್ರಹ ಕಡ್ಡಾಯ
ಪ್ರತಿ ವರ್ಷ ಎದುರಿಸುತ್ತಿರುವ ಈ ನೀರಿನ ಸಮಸ್ಯೆಗೆ ಬೆಂಗಳೂರು ಜಲ ಮಂಡಳಿ ಶಾಶ್ವತ ಪರಿಹಾರ ಕಂಡು ಹಿಡಿಯಲು ಹರಸಾಹಸ ಪಟ್ಟಿದೆ. ಅದಕ್ಕಾಗಿ ದೂರದ ಕಾವೇರಿಯನ್ನು ತಂದು ಬೆಂಗಳೂರಿನಾದ್ಯಂತ ಹಂಚುವ ಪ್ರಯತ್ನ ಮಾಡಿದೆ. ನಾಗಾಲೋಟದಲ್ಲಿ ಬೆಳೆಯುತ್ತಿರುವ ಮಹಾ ನಗರಿಗೆ ಈ ಸೌಲಭ್ಯ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ.
ಆದರೆ ಈ ಸಮಸ್ಯೆಗೆ ಮಳೆ ನೀರು ಸಂಗ್ರಹವೊಂದೇ ಪರಿಹಾರ ಎನ್ನುತ್ತದೆ ಜಲಮಂಡಳಿ. ನಗರ ದಲ್ಲಿ ಸ್ವಂತ ಕಟ್ಟಡವುಳ್ಳ ಪ್ರತಿಯೊಬ್ಬರೂ ತಮ್ಮ ಸೂರಿನ ಮೇಲೆ ಸುರಿಯುವ ಮಳೆ ನೀರನ್ನು ಸಂಗ್ರಹಿಸುವುದನ್ನು ಕಡ್ಡಾಯ ಮಾಡುತ್ತಿದೆ. ಈಗಾಗಲೇ 2400 ಚದರ ಅಡಿ ನಿವೇಶನದಲ್ಲಿ (6040) ಮನೆ ನಿರ್ಮಿಸಿಕೊಂಡಿರುವವರು ಹಾಗೂ ಹೊಸದಾಗಿ 1200 ಚದರ ಅಡಿ ವಿಸ್ತೀರ್ಣ ದಲ್ಲಿ (30 40) ಮನೆ ಕಟ್ಟುವವರು ಕಡ್ಡಾಯವಾಗಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿ ಕೊಳ್ಳಬೇಕು ಎಂಬ ಕಾನೂನು ಅಂಗೀಕಾರವಾಗಿದೆ. ಈ ವರ್ಷದ ಮೇ 27ರಿಂದ ಇದು ಜಾರಿಗೆ ಬರಲಿದೆ.
ಮೇಳದಲ್ಲಿ ಯಾರಿರುತ್ತಾರೆ
ಫ್ಲಂಬರ್ಗಳು, ಗುತ್ತಿಗೆದಾರರು, ಜಲಸಂರಕ್ಷಣೆಯಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಜೊತೆಗೆ ಗ್ರಾಹಕರು ಮಳೆ ನೀರ ಮೇಳದಲ್ಲಿ ಭಾಗವಹಿಸುತ್ತಾರೆ. ಇವರನ್ನೆಲ್ಲ ಒಂದೇ ಸೂರಿನಡಿ ಸೇರಿಸಿ ಮಳೆ ನೀರ ಮಾಹಿತಿ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು ಈ ಮೇಳದ ಉದ್ದೇಶ ಎನ್ನುತ್ತಾರೆ ಜಲ ಮಂಡಳಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅ.ನಾ. ಪ್ರಹ್ಲಾದ ರಾವ್.
ಅದಕ್ಕಾಗಿ ಜಲ ಮಂಡಳಿ ಮಳೆ ನೀರ ಮಾಹಿತಿ ವಿಭಾಗವನ್ನೇ ತೆರೆದಿದೆ. ಜೊತೆಗೆ ಮಳೆ ನೀರು ಸಂಗ್ರಹ ವಿಧಾನವನ್ನು ಅಳವಡಿಸಲು ಬೇಕಾಗುವ ಫಿಲ್ಟರ್ಗಳು, ಅವುಗಳ ಜೋಡಣೆ, ಮಾದರಿ ಗಳು ಪ್ರದರ್ಶನ್ನೊಳಗೊಂಡ ವಿಭಿನ್ನ ಮಳಿಗೆಗಳು ಇಲ್ಲಿರುತ್ತವೆ.

ಮಳೆ ನೀರು ಸಂಗ್ರಹ ಅಳವಡಿಸುವವರಲ್ಲದೇ, ಅದರ ಬಗ್ಗೆ ಮಾಹಿತಿ ಪಡೆಯುವವರಿಗೂ ಈ ಮೇಳ ವೇದಿಕೆಯಾಗಲಿದ್ದು, ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಹಾಗಾದರೆ ಇನ್ನೇಕೆ ತಡ, ಬನ್ನಿ ಕಬ್ಬನ್ ಉದ್ಯಾನದ ಬಾಲಭವನಕ್ಕೆ. ಅಲ್ಲಿ ಮಳೆ ನೀರ ಮಾಹಿತಿ ನೀಡಲು ತಜ್ಞರ ತಂಡ ನಿಮಗಾಗಿ ಕಾಯುತ್ತಿದೆ. ಬರುವಾಗ ಮಳೆ ನೀರ ಸಂಗ್ರಹದ ಬಗ್ಗೆ ನಿಮ್ಮ ಮನದಲ್ಲಿ ಬಿಡಿ ಬಿಡಿಯಾಗಿರುವ ಪ್ರಶ್ನೆಗಳನ್ನು ಒಪ್ಪಮಾಡಿಕೊಂಡು ಬನ್ನಿ!
ಸಂಪರ್ಕ ಸಂಖ್ಯೆ: ಜಲ ಮಂಡಳಿಯ ಮಂಜುನಾಥ್ 98454 44015, ಸಹಾಯ ಕೇಂದ್ರ 2334 1652/ 2334 8848/49, ಅರ್ಘ್ಯಂ: 4169 8941.
ಮಾಹಿತಿ ವಿನಿಮಯ
ಮಳೆ ನೀರು ಸಂಗ್ರಹಣೆ ಕಡ್ಡಾಯ ಕುರಿತ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದೆ. ಮಳೆ ನೀರು ಸಂಗ್ರಹ ವಿಧಾನ ಅಳವಡಿಸುವ ಪರಿಣಿತರು ಯಾರಿದ್ದಾರೆ? ಅವರನ್ನು ಗುರುತಿಸು ವುದು ಹೇಗೆ ? ಅವರಿಗೆ ಜಲಮಂಡಳಿಯಿಂದ ಅನುಮತಿ ದೊರೆತಿದೆಯೇ? ನೀರು ಶೋಧಿಸಲು ಯಾವ ಫಿಲ್ಟರ್ ಅಳವಡಿಸಬೇಕು? ವಿಧಾನ ಅಳವಡಿಸಲು ಎಷ್ಟು ಹಣ ಖರ್ಚಾಗುತ್ತದೆ? ಇಂಥ ಹಲವು ಮಾಹಿತಿಗಳ ಕೊರತೆ ಸಾರ್ವಜನಿಕರನ್ನು ಕಾಡುತ್ತಿದೆ.
ಈ ಗೊಂದಲ ನಿವಾರಣೆ ಹಾಗೂ ಮಳೆ ನೀರು ಸಂಗ್ರಹದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ವಿವಿಧ ಸಂಘಟನೆಗಳು ಕಬ್ಬನ್ ಪಾರ್ಕ್ ಬಾಲಭವನದಲ್ಲಿ ಶನಿವಾರ ಮಳೆ ನೀರು ಸಂಗ್ರಹ ಮೇಳವನ್ನು ಆಯೋಜಿಸಿವೆ.
ಮಾರ್ಚ್ 22ರ ವಿಶ್ವ ಜಲ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಜಲಮಂಡಳಿ ಎಂಜಿನಿಯರ್ಗಳ ಸಂಘ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ‘ಅರ್ಘ್ಯಂ’ ಸಂಸ್ಥೆ ಈ ಕಾರ್ಯಕ್ರಮ ರೂಪಿಸಿದೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|