ದಲಿತರನ್ನು ಪೂಜಿಸುವ ವಿಶಿಷ್ಟ ಆಚರಣೆ! |
ಪ್ರಕಟಿಸಿದ ದಿನಾಂಕ : 2010-03-20
ಚಾಮರಾಜನಗರ ತಾಲ್ಲೂಕಿನ ಹಳ್ಳಿಕೆರೆಹುಂಡಿಯ ಸವರ್ಣೀಯರ ಮನೆಯಲ್ಲಿ ದಲಿತರಿಗೆ ( ‘ಕಲಿಬಲಿ’ಯವರು) ಗುರುವಾರ ಸಂಜೆ ಪೂಜಿಸುವ ವಿಶಿಷ್ಟ ಆಚರಣೆ ನಡೆಯಿತು ಪೂಜಿಸಿಕೊಳ್ಳುವ ‘ಕಲಿಬಲಿ’ಯವರು ಸವರ್ಣೀಯ ಮಹಿಳೆಯರು ತಂದ ದವಸವನ್ನು (ರಾಗಿ) ನಾಲ್ಕೂ ದಿಕ್ಕುಗಳಿಗೆ ತೂರುವ ಸಂದರ್ಭ . ಸವರ್ಣೀಯರ ಮನೆಗೆ ಪ್ರವೇಶ ಮಾಡುತ್ತಿರುವ ‘ಕಲಿಬಲಿ’ಯವರು. ಸಹಸ್ರಾರು ವರ್ಷಗಳ ಹಿಂದೆ ದಲಿತರಿಗೆ ಮಾಡಿದ ಅಪಮಾನಕ್ಕೆ ಪ್ರಾಯಃಶ್ಚಿತವಾಗಿ ಸವರ್ಣೀಯರು ದಲಿತರನ್ನು ಪೂಜಿಸುವ ಒಂದು ಪರಿಪಾಠ ಚಾಮರಾಜನಗರ ತಾಲ್ಲೂಕಿನ ಗಣಗನೂರು, ಗಣಗನೂರುಪುರ, ಹಳ್ಳಿಕೆರೆಹುಂಡಿ ಗ್ರಾಮಗಳಲ್ಲಿದೆ.
ಚಾಮರಾಜನಗರ: ಯುಗಾದಿ ಹಬ್ಬದ ಆಸುಪಾಸಿನ ದಿನದಲ್ಲಿ ಪ್ರತಿ ವರ್ಷ ಆಚರಿಸುವ ‘ಬಜ್ಜಮ್ಮ’ನ ಹಬ್ಬದ ಸಮಯದಲ್ಲಿ ಈ ವಿಶಿಷ್ಟ ಆಚರಣೆ ನಡೆಸಲಾಗುತ್ತದೆ. ಈ ಸಾರಿಯ ಆಚರಣೆಯು ಗುರುವಾರ ಸಂಜೆ ನಡೆಯಿತು.
ಈ ದಲಿತರು (‘ಕಲಿಬಲಿ’ಯವರು) ಶರಣರ ರೂಪಿಗಳು ಎಂಬ ನಂಬಿಕೆ ಇದೆ. ಗಣಗನೂರಿನ ಮಾರಿ ಹಬ್ಬದ ಮನೆತನದವರಾದ ಇಬ್ಬರು ದಲಿತರೇ ಆಚರಣೆಯ ದಿನ ‘ಕಲಿಬಲಿ’ಯವರಾಗಿತ್ತಾರೆ. ಇವರನ್ನು ಸವರ್ಣೀಯರು ತಮ್ಮ ಮನೆಗೆ ಬರಮಾಡಿಕೊಂಡು ಪೂಜಿಸಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಜೊತೆಗೆ ರಾಗಿಯ ಪಡಿಯನ್ನು ನೀಡಿದರು. " ಈ ಆಚರಣೆಯ ದಿನ ‘ಕಲಿಬಲಿ’ಯವರು ತಮ್ಮ ಮೈಗೆ ಹರಳೆಣ್ಣೆ ಜೊತೆಗೆ ‘ಕರಕಲು’ ಬೂದಿಯನ್ನು ಬಳಿ ದುಕೊಂಡು ಗಣನೂರು ಕ್ರಾಸ್ನಿಂದ ಸಂಜೆ ಮೆರವಣಿಗೆಯಲ್ಲಿ ಬರುತ್ತಾರೆ.
ಈ ಮೆರವಣಿಗೆ ಮೊದಲು ಹಳ್ಳಿಕೆರೆಹುಂಡಿಗೆ ಬಂದು, ತದನಂತರ ಗಣಗನೂರು, ಗಣಗನೂರುಪುರಕ್ಕೆ ತೆರಳುತ್ತದೆ. ಈ ರಿವಾಜು ನಡೆಯುವ ದಿನ ಊರಿನ ಪ್ರತಿಯೊಬ್ಬರ ಮನೆ ಮುಂದೆ ಸಾರಿಸಿ ರಂಗವಲ್ಲಿ ಹಾಕಿರುತ್ತಾರೆ.
‘ಕಲಿಬಲಿ’ಯವರು ಮುಂದೆ ಬರುವವನೊಬ್ಬ ಜಾಗಟೆ ಬಾರಿಸಿಕೊಂಡು ಬರುತ್ತಾ ಎಚ್ಚರಿಕೆ ಕೊಡುತ್ತಾನೆ. ಈ ‘ಕಲಿಬಲಿ’ಯವರಿಗೆ ನೇರವಾಗಿ ಎದುರಿಗೆ ಯಾರು ಹೋಗುವಂತಿಲ್ಲ ಮತ್ತು ಅವರು ಬಂದು ಹೋಗುವವರಗೆ ಊರಿನಲ್ಲಿ ಚಪ್ಪಲಿಗಳನ್ನು ಮೆಟ್ಟುವಂತಿಲ್ಲ.
ಬಿರಬಿರನೆ ಬರುವ ‘ಕಲಿಬಲಿ’ಯ ವರು ಊರಿನಲ್ಲಿ ಗೊತ್ತಾದ ಒಂದು ಸ್ಥಳಕ್ಕೆ ಬರುತ್ತಾರೆ. ಆಗ ಮಹಿಳೆಯರು ಮೊರದಲ್ಲಿ ರಾಗಿ ಮತ್ತು ಹೊಸ ಹರಳೆಣ್ಣೆ (ಹರಳು ತಂದು ಸ್ವತಃ ಎಣ್ಣೆ ತೆಗೆದಿರುವುದು) ನೀಡುತ್ತಾರೆ.
‘ಕಲಿಬಲಿ’ಯವರು ಒಂದೆರೆಡು ನಿಮಿಷ ಪಠಣ ಮಾಡಿ ಮೊರದಲ್ಲಿರುವ ರಾಗಿಯನ್ನು ಅಂಗೈನಲ್ಲಿ ತೆಗೆದುಕೊಂಡು ನಾಲ್ಕು ದಿಕ್ಕಿಗೂ ತೂರುತ್ತಾರೆ. ನಂತರ ‘ಕಲಿಬಲಿ’ಯವರಿಗೆ ಹೂ ಮಾಲೆ ಹಾಕಿ ಪೂಜೆ ಮಾಡಲಾಗುತ್ತದೆ. ಆಗ ಅವರು ‘ಕರಕಲು’ವಿನಿಂದ ಸಂಗ್ರಹಿಸಿದ ಕಪ್ಪನ್ನು ಎಲ್ಲರ ಹಣೆಗೆ ಹಚ್ಚುತ್ತಾರೆ. ಮೊರದಲ್ಲಿ ಉಳಿದ ರಾಗಿ ಮತ್ತು ಬಟ್ಟಲಿನ ಕೈ ಎಣ್ಣೆಯನ್ನು ‘ಕಲಿಬಲಿ’ಯವರ ಜೊತೆಗೆ ಬಂದವರು ಸಂಗ್ರಹಿಸುತ್ತಾರೆ. ಹೀಗೆ ಗ್ರಾಮದ ಪ್ರತಿಯೊಂದು ಮನೆಗೂ ‘ಕಲಿಬಲಿ’ಯವರು ಭೇಟಿ ನೀಡಿ ಪಡಿ ಪಡೆಯುತ್ತಾರೆ.
ಬಜ್ಜಮ್ಮನ ಹಬ್ಬ ಒಂದು ವಾರ ಕಾಲ ನಡೆಯುವ ಜಾತ್ರೆ. ಇದನ್ನು ಚಾಮರಾಜನಗರ ತಾಲ್ಲೂಕಿನ ಗಣ ಗನೂರು, ಗಣಗನೂರುಪುರ, ಹಳ್ಳಿಕೆರೆಹುಂಡಿ, ನಂಜನಗೂಡು ತಾಲ್ಲೂಕಿನ ಗೊದ್ಲೆಹುಂಡಿ, ಸೊತ್ತನಹುಂಡಿ ಗ್ರಾಮದವರು ಒಟ್ಟಾಗಿ ಆಚರಿಸುತ್ತಾರೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ | ಶಶಿಧರ ಗರ್ಗೇಶ್ವರಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20
|
|
|