ತಪ್ಪೊಪ್ಪಿಗೆ ನೀಡಿದ ಉಗ್ರ ಹೆಡ್ಲಿಗೆ ಮರಣದಂಡನೆ ಮತ್ತು ಗಡೀಪಾರಿಲ್ಲ |
ಪ್ರಕಟಿಸಿದ ದಿನಾಂಕ : 2010-03-19
ಅಮೆರಿಕಾ ಡಬ್ಬಲ್ ಏಜೆಂಟ್ ಹೆಡ್ಲಿ ರಕ್ಷಣಾ ತಂತ್ರ ಯಶಸ್ವಿ
ವಾಷಿಂಗ್ಟನ್, ಶುಕ್ರವಾರ, 19 ಮಾರ್ಚ್ 2010
2008ರ ಮುಂಬೈ ಭಯೋತ್ಪಾದನಾ ದಾಳಿ ಸಂಚು ಸೇರಿದಂತೆ ತನ್ನ ಮೇಲೆ ಹೊರಿಸಲಾಗಿದ್ದ ಎಲ್ಲಾ ಆಪಾದನೆಗಳಿಗೂ ತಪ್ಪೊಪ್ಪಿಗೆ ನೀಡಿರುವ ಪಾಕಿಸ್ತಾನಿ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಗಿಲಾನಿ ಮರಣದಂಡನೆ ಮತ್ತು ಭಾರತ ಗಡೀಪಾರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಭಾರತ ಈತನನ್ನು ಅಮೆರಿಕಾದಲ್ಲಿ ನೇರ ವಿಚಾರಣೆ ನಡೆಸಬಹುದಾಗಿದೆ.
ಗುರುವಾರ ಚಿಕಾಗೋ ನ್ಯಾಯಾಲಯಕ್ಕೆ ಹೆಡ್ಲಿಯನ್ನು ಹಾಜರುಪಡಿಸಿದ ನಂತರ ತನ್ನ ಮೇಲಿದ್ದ ಎಲ್ಲಾ 12 ಆಪಾದನೆಗಳನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಅಮೆರಿಕಾ ಜತೆ ಒಪ್ಪಂದವೊಂದಕ್ಕೆ ಬಂದಿರುವ ಆತನನ್ನು ಭಾರತಕ್ಕೆ ಗಡೀಪಾರು ಮಾಡ ಲಾಗುವುದಿಲ್ಲ ಎಂಬ ಭರವಸೆಯನ್ನು ನೀಡಲಾಗಿದೆ. ಅಲ್ಲದೆ ಉಗ್ರನಿಗೆ ಮರಣದಂಡನೆಯನ್ನೂ ವಿಧಿಸಲಾಗುತ್ತಿಲ್ಲ.
ಈ ಒಪ್ಪಂದದಂತೆ ಭಾರತದ ಅಧಿಕಾರಿಗಳು ಅಮೆರಿಕಾದಲ್ಲಿ ಹೆಡ್ಲಿಯನ್ನು ನೇರವಾಗಿ ವಿಚಾರಣೆ ನಡೆಸಬಹುದಾಗಿದೆ. ಅಮೆರಿಕಾ ಪ್ರಾಸಿಕ್ಯೂಟರುಗಳು ಮತ್ತು ಹೆಡ್ಲಿ ನಡುವೆ ಈ ಒಪ್ಪಂದ ನಡೆಸಲಾಗಿದ್ದು, ಅಮೆರಿಕಾ ಕಸ್ಟಡಿಯಲ್ಲಿರುವಾಗಲೇ ವಿದೇಶಿ ನ್ಯಾಯಾಲಯವೊಂದರಲ್ಲಿ (ಬಹುತೇಕ ಇದು ಮುಂಬೈ ದಾಳಿ ವಿಶೇಷ ನ್ಯಾಯಾಲಯ) ಇದನ್ನು ಹೆಡ್ಲಿ ಪ್ರಮಾಣೀಕರಿಸ ಬೇಕಾಗುತ್ತದೆ.
ಹೆಡ್ಲಿ ತಪ್ಪೊಪ್ಪಿಗೆ ನೀಡಿರುವ 12 ಆರೋಪಗಳು..
* ಭಾರತದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಇಡಲು ಸಂಚು. * ಭಾರತದಲ್ಲಿನ ಪ್ರಮುಖ ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಶಕ್ತಿಗುಂದಿಸುವುದು. * ಭಾರತದಲ್ಲಿ ಅಮೆರಿಕಾ ಪ್ರಜೆಗಳನ್ನು ಕೊಲ್ಲಲು ಸಹಕಾರ ಮತ್ತು ಪ್ರಚೋದನೆ. (ಆರು ಆರೋಪ) * ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕಚ್ಚಾವಸ್ತುಗಳ ಪೂರೈಕೆ. * ಡೆನ್ಮಾರ್ಕ್ನ ಪ್ರಮುಖ ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಶಕ್ತಿಗುಂದಿಸುವುದು. * ಡೆನ್ಮಾರ್ಕ್ನಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕಚ್ಚಾವಸ್ತುಗಳ ಪೂರೈಕೆ. * ಲಷ್ಕರ್ ಇ ತೋಯ್ಬಾ ಭಯೋತ್ಪಾದಕರಿಗೆ ಕಚ್ಚಾವಸ್ತುಗಳ ಪೂರೈಕೆ.
ಡಬ್ಬಲ್ ಏಜೆಂಟ್ ರಕ್ಷಿಸಿದ ಅಮೆರಿಕಾ?
ಇಂತಹದ್ದೊಂದು ಆರೋಪ ಅಮೆರಿಕಾದ ಮೇಲೆ ಕಳೆದ ಹಲವಾರು ಸಮಯಗಳಿಂದ ಕೇಳಿ ಬರುತ್ತಿತ್ತು. ಇದೀಗ ಹೆಡ್ಲಿಯನ್ನು ಗಡೀಪಾರು ಮಾಡದೇ ಇರಲು ನಿರ್ಧರಿಸುವುದರೊಂದಿಗೆ ಅದು ಬಹುತೇಕ ರುಜುವಾತಾಗಿದೆ ಎಂದು ಹೇಳಲಾಗುತ್ತಿದೆ.
ಹಿಂದೊಮ್ಮೆ ಮಾದಕ ದ್ರವ್ಯ ಕಳ್ಳ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಹೆಡ್ಲಿಯನ್ನು ಅಮೆರಿಕಾ ತನ್ನ ಗುಪ್ತಚರ ಏಜೆಂಟನನ್ನಾಗಿ ಬಳಸಿಕೊಂಡಿತ್ತು. ಆದರೆ ಹೆಡ್ಲಿ ಇದರ ಜತೆ ಲಷ್ಕರ್ ಇ ತೋಯ್ಬಾಕ್ಕೂ ಸಹಕಾರ ನೀಡುತ್ತಿದ್ದ.
ಹೆಡ್ಲಿ ಅಮೆರಿಕಾ ಪರ ಏಜೆಂಟನಾಗಿ ಕೆಲಸ ಮಾಡಿದ್ದ ಎನ್ನುವುದು ಜಗತ್ತಿಗೆ ಅಧಿಕೃತವಾಗಿ ತಿಳಿಯಬಾರದು ಎಂಬ ಉದ್ದೇಶದಿಂದ ಅಮೆರಿಕಾವು ಆತನ ಜತೆ ಒಪ್ಪಂದಕ್ಕೆ ಬಂದಿದ್ದು, ಗಡೀಪಾರು ಮಾಡದೇ ಇರುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಇದೀಗ ಅಮೆರಿಕಾ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಭಾರತಕ್ಕೆ ಹೆಡ್ಲಿಯನ್ನು ಅಲ್ಲೇ ವಿಚಾರಣೆ ನಡೆಸಬಹುದಾಗಿದೆ. ಆದರೆ ಇಲ್ಲಿ ಎಷ್ಟರ ಮಟ್ಟಿಗಿನ ಸ್ವಾತಂತ್ರ್ಯ ನೀಡಲಾಗುತ್ತದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲು ಮಾತ್ರ ಅಮೆರಿಕಾ ಅವಕಾಶ ನೀಡಬಹುದು ಮತ್ತು ವಿಚಾರಣೆ ಸಂದರ್ಭದಲ್ಲಿ ಅಮೆರಿಕಾ ಅಧಿಕಾರಿಗಳೂ ಜತೆಗಿರಬಹುದು ಎಂಬುದು ಸಂಶಯಾತೀತವಾಗಿದೆ.
ಉಗ್ರ ಹೆಡ್ಲಿಗೆ ಜೀವಾವಧಿ ಶಿಕ್ಷೆಯಾದರೂ ಸಾಕು: ಭಾರತ
ನವದೆಹಲಿ, ಶುಕ್ರವಾರ, 19 ಮಾರ್ಚ್ 2010 ಮುಂಬೈ ದಾಳಿ ಸಂಚಿನಲ್ಲಿ ಪಾಲ್ಗೊಂಡಿರುವ ಬಗ್ಗೆ ಅಮೆರಿಕಾ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ನೀಡಿರುವ ಪಾಕಿಸ್ತಾನಿ ಸಂಜಾತ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಗಿಲಾನಿಗೆ ಜೀವಾವಧಿ ಶಿಕ್ಷೆ ನೀಡಿದರೆ ಭಾರತ ಸರಕಾರವು ತೃಪ್ತಗೊಳ್ಳಲಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ತಿಳಿಸಿದ್ದಾರೆ.
ಅಮೆರಿಕಾ ಅಟಾರ್ನಿ ಜನರಲ್ ಅವರು ಹೆಡ್ಲಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಸಲಹೆ ನೀಡಿದ್ದಾರೆ. ಆತ ಜೀವಾವಧಿ ಶಿಕ್ಷೆ ಪಡೆದುಕೊಂಡರೆ ಭಾರತ ಸರಕಾರವು ಅಸಮಾಧಾನಗೊಳ್ಳುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಅವರು ತನ್ನ ಹೇಳಿಕೆಯಲ್ಲಿ ಹೇಳಿದ್ದಾರೆ.
ಹೆಡ್ಲಿಯ ವಿಚಾರಣೆ ಅಥವಾ ಆತ ಭಾರತದ ನ್ಯಾಯಾಲಯದ ಮೂಲಕ ಮಾಡಲಿರುವ ಪ್ರಮಾಣದ ಕುರಿತು ಮುಂಬರುವ ದಿನಗಳಲ್ಲಿ ನಿರ್ಧಾರಕ್ಕೆ ಬರಲಾಗುತ್ತದೆ. ಈ ಬಗ್ಗೆ ಈಗಲೇ ಯಾವುದೇ ಮಾಹಿತಿಯಿಲ್ಲ ಎಂದೂ ತಿಳಿಸಿದ್ದಾರೆ.
ಲಷ್ಕರ್ ಇ ತೋಯ್ಬಾ ಭಯೋತ್ಪಾದಕನಾಗಿರುವ ಹೆಡ್ಲಿ ತಪ್ಪೊಪ್ಪಿಗೆ ನೀಡಿರುವುದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಿ ರುವ ಭಾರತ ಸರಕಾರವು, ಆತನ ಜತೆಗಿನ ಅಮೆರಿಕಾ ಸರಕಾರದ ಒಪ್ಪಂದವು ಅಸಮಾಧಾನ ತಂದಿಲ್ಲ ಎಂದು ಸರಕಾರದ ಕೆಲವು ಉನ್ನತ ಮೂಲಗಳು ಹೇಳಿವೆ.
ಅದೇ ಹೊತ್ತಿಗೆ ಅಮೆರಿಕಾದ ಫೆಡರಲ್ ಕಾನೂನಿನಲ್ಲಿ ಮಧ್ಯ ಪ್ರವೇಶಿಸಲು ಭಾರತ ಸರಕಾರ ನಿರಾಕರಿಸಿದ್ದು, ಈ ಬೆಳವಣಿಗೆ ಯಿಂದ ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧದ ಮೇಲೆ ಯಾವುದೇ ದುಷ್ಪರಿಣಾಮ ಬೀರದು ಎಂಬ ವಿಶ್ವಾಸದಿಂದಿದೆ. ಮುಂಬರುವ ದಿನಗಳಲ್ಲಿ ಹೆಡ್ಲಿಯನ್ನು ವಿಚಾರಣೆ ನಡೆಸುವ ಮೂಲಕ ಭಯಾನಕ ಮುಂಬೈ ದಾಳಿಯ ಕುರಿತು ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ ಎಂದು ಸರಕಾರ ತಿಳಿಸಿದೆ.
ಗುರುವಾರ ಅಮೆರಿಕಾದ ನ್ಯಾಯಾಲಯದಲ್ಲಿ ತನ್ನ ಮೇಲಿದ್ದ ಎಲ್ಲಾ 12 ಆರೋಪಗಳಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡುವ ಮೂಲಕ ಹೆಡ್ಲಿ ಮರಣದಂಡನೆ ಮತ್ತು ಗಡೀಪಾರು ಶಿಕ್ಷೆಯಿಂದ ಪಾರಾಗಿದ್ದಾನೆ.
ಆದರೆ ಭಾರತವು ಅಮೆರಿಕಾಕ್ಕೆ ಹೋಗಿ ಆತನ ವಿಚಾರಣೆ ನಡೆಸುವ ಅವಕಾಶವನ್ನು ನೀಡಲಾಗಿದ್ದು, ಈ ಸಂಬಂಧ ಭಾರತವು ತನಗಿರುವ ಅವಕಾಶಗಳನ್ನು ಬಳಸಿಕೊಳ್ಳುವ ಬಗ್ಗೆ ಅಮೆರಿಕಾದ ಕಾನೂನುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|