| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ವಿಪಕ್ಷಗಳ ವಿರೋಧದ ನಡುವೆ ಅಝೀಂ ಪ್ರೇಂಜೀ ವಿವಿ ವಿಧೇಯಕ ಅಂಗೀಕಾರ: ಸದನ ಸಮಿತಿ ರಚನೆಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ |
ಪ್ರಕಟಿಸಿದ ದಿನಾಂಕ : 2010-03-19
ಬೆಂಗಳೂರು, ಮಾ.೧೮: ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಸರಕಾರ ೨೦೧೦ನೆ ಸಾಲಿನ ಅಝೀಂ ಪ್ರೇಂಜೀ ವಿಶ್ವವಿದ್ಯಾಲಯದ ವಿಧೇಯಕಕ್ಕೆ ಅಂಗೀಕಾರ ಪಡೆದ ಪ್ರಸಂಗ ವಿಧಾನಪರಿಷತ್ನಲ್ಲಿ ಗುರುವಾರ ನಡೆಯಿತು.
ವಿಧಾನಪರಿಷತ್ ಸದನ ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಅಝೀಂ ಪ್ರೇಂಜೀ ವಿವಿ ವಿಧೇಯಕವನ್ನು ಅಂಗೀಕರಿಸಬೇಕೆಂದು ಮನವಿ ಮಾಡಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಪ್ರೇಂಜೀಗೆ ವಿವಿ ಸ್ಥಾಪನೆಗೆ ಅವಕಾಶ ನೀಡಲಾಗಿದೆ.
ಪ್ರೇಂಜೀ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ವಿವಿ ಸ್ಥಾಪನೆಗೆ ಅವಕಾಶ ಕಲ್ಪಿಸಲು ತೀರ್ಮಾನ ಕೈಗೊಳ್ಳಲಾಯಿತು. ಹೀಗಾಗಿ ಈ ವಿಧೇಯಕಕ್ಕೆ ಅಂಗೀಕಾರ ನೀಡಬೇಕೆಂದು ಲಿಂಬಾವಳಿ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಸರಕಾರ ಖಾಸಗಿ ವಿಶ್ವವಿದ್ಯಾಲಯ ಗಳ ಸ್ಥಾಪನೆಗೆ ಅವಕಾಶ ನೀಡುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ದೂರಿದರು.
ಸರಕಾರ ಖಾಸಗಿಯವರಿಗೆ ಶಿಕ್ಷಣ ವ್ಯವಸ್ಥೆಯನ್ನು ಪರಭಾರೆ ಮಾಡಲು ಹೊರಟಿದೆ. ಅಲ್ಲದೆ ಬಂಡವಾಳ ಶಾಹಿಗಳ ಗುಲಾಮರಾಗಿ ವರ್ತಿಸುತ್ತಿದೆ ಎಂದು ಮೋಟಮ್ಮ ಟೀಕಿಸಿದರು.
ಅಝೀಂ ಪ್ರೇಂಜೀ ಮಾಡುವಂತಹ ಕೆಲಸವನ್ನು ಸರಕಾರವೆ ಮಾಡಬಹುದಿತ್ತು. ಅದರೆ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ವಿವಿ ಸ್ಥಾಪನೆಗೆ ಅನುಮತಿ ನೀಡಲು ಮುಂದಾಗಿದೆ. ಈಗಿರುವ ವಿಶ್ವವಿದ್ಯಾಲಯಗಳ ಪರಿಸ್ಥಿತಿಯನ್ನು ಸುಧಾರಣೆಗೊಳಿಸುವುದು ಬಿಟ್ಟು, ಶಿಕ್ಷಣವನ್ನು ವ್ಯಾಪಾರೀಕರಣ ಮಾಡಲು ಹೊರಟಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ವಿವಿ ಸ್ಥಾಪನೆಯಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನತೆಗೆ ಯಾವುದೆ ಪ್ರಯೋಜನವಿಲ್ಲ. ಹೀಗಿರುವಾಗ ಇಂತಹ ವಿವಿಗಳ ಸ್ಥಾಪನೆಗೆ ಅವಕಾಶ ನೀಡುವುದು ಸರಿಯೆ ಎಂದು ಮೋಟಮ್ಮ ಪ್ರಶ್ನಿಸಿದರು.
ಖಾಸಗಿ ವಿವಿಗಳಿಗೆ ಸಮಗ್ರ ನೀತಿಯನ್ನು ರೂಪಿಸಬೇಕು. ಇದಕ್ಕಾಗಿ ತಜ್ಞರು ಒಳಗೊಂಡಂತೆ ವಿಧಾನಮಂಡಲದ ಜಂಟಿ ಸದನ ಸಮಿತಿಯನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಜೆಡಿಎಸ್ ಸದಸ್ಯ ಎಂ.ಸಿ.ನಾಣಯ್ಯ ಮಾತನಾಡಿ, ಯುಜಿಸಿ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮುಂತಾದವುಗಳ ಮೂಲಕ ಶಿಕ್ಷಣ ಮಾರಾಟ ತಡೆಯುವುದನ್ನು ಬಿಟ್ಟು, ಖಾಸಗಿ ವಿವಿಗಳ ಸ್ಥಾಪನೆಗೆ ಅವಕಾಶ ನೀಡುವ ವಿಧೇಯಕವನ್ನು ಸದನಕ್ಕೆ ತಂದಿರುವ ಸರಕಾರದ ಕ್ರಮ ಖಂಡನೀಯ ಎಂದು ಟೀಕಿಸಿದರು.
ನೂರಾರು ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿರುವ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ, ಸ್ವತಂತ್ರತೆ ನೀಡಲು ತಡಮಾಡಿದ ಸರಕಾರ ಈಗ ಖಾಸಗಿ ವಿವಿ ಸ್ಥಾಪನೆಗೆ ಅವಕಾಶ ನೀಡಲು ಮುಂದಾಗಿ ರುವುದು ಖಾಸಗಿ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ ಎಂದು ನಾಣಯ್ಯ ಆರೋಪಿಸಿದರು.
ಖಾಸಗಿ ವಿವಿ ಸ್ಥಾಪನೆಗೆ ಅವಕಾಶ ನೀಡುವುದಕ್ಕೂ ಮೊದಲು, ಖಾಸಗಿ ವಿವಿಗಳಿಗೆ ಸಾಮಾನ್ಯ ಮಾರ್ಗಸೂಚಿಗಳನ್ನು ಸಿದ್ಧಪಡಿಸ ಬೇಕು. ಈ ಮಾರ್ಗಸೂಚಿ ಸಿದ್ಧಪಡಿಸಲು ಜಂಟಿ ಸದನ ಸಮಿತಿಯನ್ನು ರಚಿಸಬೇಕು ಎಂದು ನಾಣಯ್ಯ ಒತ್ತಾಯಿಸಿದರು.
ಕಾಂಗ್ರೆಸ್ನ ವಿ.ಆರ್.ಸುದರ್ಶನ್, ಎಸ್.ಆರ್.ಪಾಟೀಲ್, ವೈ.ಎಸ್.ವಿ.ದತ್ತಾ ಮುಂತಾದವರು ಮೋಟಮ್ಮ ಹಾಗೂ ನಾಣಯ್ಯ ಅವರೊಂದಿಗೆ ಧ್ವನಿಗೂಡಿಸಿದರು.
ಸರಕಾರ ಜಂಟಿ ಸದನ ಸಮಿತಿ ರಚನೆಗೆ ನಿರಾಕರಿಸಿತು. ಇದರಿಂದ ಆಕ್ರೋಶಗೊಂಡ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದರು.
ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದ ಸಂದರ್ಭದಲ್ಲೆ ಅರವಿಂದ ಲಿಂಬಾವಳಿ ಅಝೀಂ ಪ್ರೇಂಜೀ ವಿವಿ ವಿಧೇಯಕಕ್ಕೆ ಅಂಗೀಕಾರ ಪಡೆದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
|