ಭಡ್ತಿಯಲ್ಲಿ ದಲಿತರಿಗೆ ಮೀಸಲಾತಿ: ಎನ್ಸಿಎಸ್ಸಿ ಶಿಫಾರಸು
ಪ್ರಕಟಿಸಿದ ದಿನಾಂಕ : 2010-03-19
ಹೊಸದಿಲ್ಲಿ, ಮಾ.೧೮: ಎ ಮತ್ತು ಬಿ ಗುಂಪಿನ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸಾಕಷ್ಟು ಪ್ರಾತಿನಿಧ್ಯವಿಲ್ಲವೆಂಬುದನ್ನು ಮನಗಂಡಿರುವ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಎಲ್ಲ ಹಂತಗಳಲ್ಲೂ ಭಡ್ತಿಯಲ್ಲಿ ಮೀಸಲಾತಿಯನ್ನು ಮುಂದುವರಿಸುವಂತೆ ತನ್ನ ಮೊದಲ ವಾರ್ಷಿಕ ವರದಿಯಲ್ಲಿ ಶಿಫಾರಸು ಮಾಡಿದೆ.
ಖಾಸಗಿ ವಲಯದಲ್ಲೂ ಮೀಸಲಾತಿ ವಿಸ್ತರಿಸುವಂತೆ ಅದು ಸಲಹೆ ನೀಡಿದೆ.
ನೀತಿ ಜಾರಿಯಲ್ಲಿ ಏಕರೂಪತೆ ತರಲು ಹುದ್ದೆ ಹಾಗೂ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಮೀಸಲಾತಿ ನೀಡುವ ಸಂಬಂಧ ಮಸೂದೆಯೊಂದನ್ನು ಮಂಜೂರುಗೊಳಿಸಬೇಕೆಂದು ಆಯೋಗ ಕರೆ ನೀಡಿದೆ.
ಹುದ್ದೆಗಳನ್ನು ತುಂಬುವಲ್ಲಿ ಸುಧಾರಣೆಯಾಗದಿರುವುದರಿಂದ ಬ್ಯಾಕ್ಲಾಗ್ ವೃದ್ಧಿಸಿದೆ ಎಂಬುದನ್ನು ಕಳವಳದಿಂದ ಗಮನಿಸಿರುವ ಆಯೋಗ ಬ್ಯಾಕ್ಲಾಗ್ ಹುದ್ದೆಗಳನ್ನು ಲೆಕ್ಕಹಾಕಿ ಸಮಯ ಮಿತಿಯೊಳಗೆ ವಿಶೇಷ ನೇಮಕಾತಿ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಕೋರಿದೆ.
ಸಂಸತ್ನ ಬಜೆಟ್ ಅಧಿವೇಶನದ ವೇಳೆ ಮಂಡಿಸಲಾಗಿರುವ ಈ ವರದಿಯನ್ನು ‘ಸೂಕ್ತ ಅಭ್ಯರ್ಥಿ ದೊರಕಿಲ್ಲ’ ಎಂಬ ನೆಪದಿಂದ ಹುದ್ದೆ ತುಂಬದೆಯೇ ಇರುವ ಅಭ್ಯಾಸವನ್ನು ಬಲವಾಗಿ ಖಂಡಿಸಿದೆ.
ಸಂದರ್ಶನಕ್ಕೆ ಕರೆಯಲಾದ ಅರ್ಹ ಅಭ್ಯರ್ಥಿಗಳಲ್ಲೇ ಎಸ್ಸಿ ಅಭ್ಯರ್ಥಿಗಳನ್ನು ಆರಿಸಬೇಕು ಹಾಗೂ ‘ಅರ್ಹರಿಲ್ಲ’ ಎಂಬ ನೆಪವನ್ನು ಹೇಳದಿರುವಂತೆ ಎಲ್ಲ ಸಚಿವಾಲಯಗಳು, ಇಲಾಖೆಗಳು ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ಸಲಹೆ ನೀಡುವಂತೆ ಆಯೋಗವು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ಸೂಚಿಸಿದೆ.
ಪರಿಶಿಷ್ಟ ಜಾತಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಿರಿಸುವ ನಿಧಿಯಲ್ಲಿ ಶೇ. ೫೦-೭೦ರಷ್ಟು ಕೂಡ ವಿನಿಯೋಗಿಸದ ರಾಜ್ಯಗಳ ಬಗ್ಗೆ ಅದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅನೇಕ ರಾಜ್ಯಗಳು ಇದಕ್ಕಾಗಿ ಕೇಂದ್ರ ನೀಡುವ ನಿಧಿಯ ಸಂಪೂರ್ಣ ಬಳಕೆ ಮಾಡುವುದಿಲ್ಲ. ವಿದ್ಯಾರ್ಥಿ ವೇತನ ಯೋಜನೆಗಳ ಸಾಧನೆಯೂ ದುರ್ಬಲವಾಗಿದೆ. ಇದರಿಂದಾಗಿ ಪರಿಶಿಷ್ಟ ಜಾತಿಗಳ ಶಿಕ್ಷಣ ಪ್ರಗತಿ ನಿರೀಕ್ಷೆಯಂತೆ ಆಗುತ್ತಿಲ್ಲ ಎಂದು ವರದಿ ಹೇಳಿದೆ.
ಸರಿಯಾದ ಸಮಯಕ್ಕೆ ವಿದ್ಯಾರ್ಥಿ ವೇತನ ದೊರೆಯದ ಕಾರಣ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶಾಲೆ ತೊರೆದ ಅನೇಕ ದೂರುಗಳು ಬಂದಿವೆಯೆಂದು ಅದು ತಿಳಿಸಿದೆ.