ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ತನಿಖೆ: ಸಿಎಂ |
ಪ್ರಕಟಿಸಿದ ದಿನಾಂಕ : 2010-03-17
ಬ್ಯಾಲಾಳು ಇಸ್ರೋ ಕೇಂದ್ರ ಆವರಣದಲ್ಲಿ ಪತ್ತೆಯಾದ ಬುಲೆಟ್.
ಮಾ.೧೬: ಬೆಂಗಳೂರು ನಗರದ ಹೊರವಲಯದಲ್ಲಿರುವ ಬ್ಯಾಲಾಳುವಿನಲ್ಲಿರುವ ಭಾರೀ ಭದ್ರತೆ ಇರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಬಳಿ ಮಂಗಳವಾರ ಬೆಳಗ್ಗಿನ ಜಾವ ಏರ್ಪಟ್ಟ ಗುಂಡಿನ ಚಕಮಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ತಾನು ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದ್ದೇನೆ ಎಂದು ಅವರು ಹೇಳಿದರು.
ಇದೊಂದು ಭಯೋತ್ಪಾದಕ ದಾಳಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಎಲ್ಲದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ನಿರ್ಣಯಕ್ಕೆ ಬರಲು ತನ್ನಿಂದ ಸಾಧ್ಯವಿಲ್ಲ. ನಮ್ಮ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದರು.
ಘಟನೆ ಕುರಿತು ಕೇಂದ್ರ ಸರಕಾರ ವರದಿ ಯಾಚಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ವರದಿಯನ್ನು ಶೀಘ್ರವೇ ಕೇಂದ್ರಕ್ಕೆ ನೀಡಲಾಗುವುದು ಎಂದರು. ಘಟನೆ ಹಿನ್ನೆಲೆಯಲ್ಲಿ ರಾಜ್ಯದ ಭದ್ರತಾ ಪರಿಸ್ಥಿತಿ ಕುರಿತು ಅವಲೋಕಿಸುವ ಸಲುವಾಗಿ ಬುಧವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ಕರೆದಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ಬೆಂಗಳೂರು, ಮಾ.೧೬: ನಗರದ ಹೊರವಲಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ಅಪರಿಚಿತರು ಮಂಗಳವಾರ ಬೆಳಗ್ಗಿನ ಜಾವ ಸಂಸ್ಥೆಯ ಭದ್ರತಾ ಸಿಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಸಿಬಂದಿ ಪ್ರತಿದಾಳಿ ನಡೆಸಿದಾಗ ಕತ್ತಲಲ್ಲಿ ಪರಾರಿಯಾದರು ಎಂದು ಇಸ್ರೋ ಮೂಲಗಳು ತಿಳಿಸಿವೆ.
ಬ್ಯಾಲಾಳು ಬಳಿಯ ಸಂಸ್ಥೆಯ ಗೇಟ್ ಎದುರು ಖಾಕಿ ಸಮವಸ್ತ್ರದಲ್ಲಿದ್ದ ಇಬ್ಬರು ಆಗಂತುಕರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಭದ್ರತಾ ಸಿಬಂದಿ ಅವರನ್ನು ಪ್ರಶ್ನಿಸಲು ಮುಂದಾದರು. ಈ ಸಂದರ್ಭ ತಮ್ಮಲ್ಲಿದ್ದ ಚಿಕ್ಕ ಪಿಸ್ತೂಲಿನಿಂದ ಅವರು ಭದ್ರತಾ ಸಿಬಂದಿಯತ್ತ ಗುಂಡು ಹಾರಿಸಿದರು. ರಕ್ಷಣಾ ಸಿಬಂದಿ ಕೂಡ ಪ್ರತಿದಾಳಿ ನಡೆಸಿದಾಗ ಬಂದಿದ್ದ ಆಗಂತುಕರು ಕತ್ತಲಲ್ಲಿ ಪರಾರಿಯಾದರು. ಮಂಗಳವಾರ ಬೆಳಗ್ಗಿನ ಜಾವ ೩.೩೦ರಿಂದ ೪ರ ಮಧ್ಯೆ ಈ ಘಟನೆ ನಡೆದಿದೆ ಎಂದು ಇಸ್ರೋ ಮೂಲಗಳು ಹೇಳಿವೆ.
ಈ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉಪಗ್ರಹಗಳ ಅಧ್ಯಯನ ಕೇಂದ್ರವು ಕಾರ್ಯನಿರ್ವ ಹಿಸುತ್ತಿದೆ. ಕೇಂದ್ರದ ಮೇಲೆ ದಾಳಿ ನಡೆಸುವ ದುಷ್ಕರ್ಮಿಗಳ ಪ್ರಯತ್ನವನ್ನು ಭದ್ರತಾ ಸಿಬಂದಿ ವಿಫಲಗೊಳಿಸಿದ್ದಾರೆ ಎಂದು ಸಂಸ್ಥೆಯ ವಕ್ತಾರ ಎಸ್. ಸತೀಶ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ದೂರು ದಾಖಲಾಗಿದೆ.
ಅಧಿಕಾರಿಗಳ ಭೇಟಿ ಘಟನಾ ಸ್ಥಳಕ್ಕೆ ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ ಹಾಗೂ ವಿಮಾನನಿಲ್ದಾಣ ಮತ್ತು ಇತರ ಸ್ಥಾವರಗಳ ರಕ್ಷಣೆ ಉಸ್ತುವಾರಿ ವಹಿಸಿಕೊಂಡಿರುವ ಸಿಐಎಸ್ಎಫ್ನ ಡಿಐಜಿ ಭೇಟಿ ನೀಡಿದ್ದಾರೆ.
ಭಾರತದ ಪ್ರಪ್ರಥಮ ಚಂದ್ರಯಾನ ಅಭಿಯಾನ ಚಂದ್ರಯಾನ-೧ಕ್ಕೆ ಬಾಹ್ಯಾಕಾಶ ತಂತ್ರeನದ ನೆರವು ಒದಗಿಸಲು ೨೦೦೮ರಲ್ಲಿ ಬೆಂಗಳೂರು ಬಳಿಯ ಬ್ಯಾಲಾಳುವಿನಲ್ಲಿ ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್ (ಐಡಿಎಸ್ಎನ್) ಸ್ಥಾಪನೆ ಗೊಂಡಿತ್ತು. ೩೨ ಮೀಟರ್ ವ್ಯಾಸದ ಡೀಪ್ ಸ್ಪೇಸ್ ಆಂಟೆನಾ, ೧೮ ಮೀಟರ್ ಆಂಟೆನಾ ಟರ್ಮಿನಲ್, ೧೧ ಮೀಟರ್ ಆಂಟೆನಾ ಟರ್ಮಿ ನಲ್, ಇಂಡಿಯನ್ ಸ್ಪೇಸ್ ಡಾಟಾ ಸೆಂಟರ್ ,ಟೆಕ್ನಿಕಲ್ ಸರ್ವಿಸ್ ಕಾಂಪ್ಲೆಕ್ಸನ್ನು ಐಡಿಎಸ್ಎನ್ ಒಳಗೊಂಡಿದೆ. ಇಸ್ರೋ ಸ್ಥಾವರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಗುಪ್ತಚರ ವರದಿಯ ಬೆನ್ನಲ್ಲಿಯೇ ಬ್ಯಾಲಾಳು ಪ್ರಕರಣ ನಡೆದಿರುವುದು ಸಾಕಷ್ಟು ಮಹತ್ವ ಪಡೆದಿದೆ.
ಮರುಪರಿಶೀಲನೆ:
ಇಸ್ರೋಗೆ ನೀಡಲಾಗಿರುವ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಸಿಐಎಸ್ಎಫ್ಗೆ ಗೃಹಸಚಿವ ಪಿ.ಚಿದಂಬರಂ ಸೂಚಿಸಿದ್ದಾರೆ. ಆಗಂತುಕರು ಸ್ವದೇಶಿ ನಿರ್ಮಿತ ಪಿಸ್ತೂಲು ಬಳಸಿ ದಾಳಿ ಮಾಡಿದ್ದು, ದಾಳಿಯಲ್ಲಿ ಯಾವುದೇ ಭಯೋತ್ಪಾದಕರ ಕೈವಾಡ ಸಾಧ್ಯತೆಯಿಲ್ಲ ಎಂದು ತಿಳಿಸಿದ್ದಾರೆ.
ಹೇಗಾಯಿತು ? ಇಬ್ಬರು ಅಪರಿಚಿತ ವ್ಯಕ್ತಿಗಳು ಮಂಗಳವಾರ ಬೆಳಗ್ಗಿನ ಜಾವ ೩.೩೦ರ ವೇಳೆ ಬೈನಾಕ್ಯುಲರ್ ನೆರವಿನಿಂದ ಸ್ಥಾವರವನ್ನು ಪರಿಶೀಲಿಸುತ್ತಿದ್ದುದನ್ನು ಸಿಐಎಸ್ಎಫ್ನ ಸಿಬಂದಿ ಜಾದವ್ ಗಮನಿಸಿದರು . ಇದನ್ನು ತಡೆಯಲು ಮುಂದಾದ ಜಾದವ್ ಮೇಲೆ ಆಗಂತುಕರು ಎರಡು ಸುತ್ತು ಗುಂಡು ಹಾರಿಸಿದರು. ಗುಂಡಿನ ಶಬ್ದ ಕೇಳಿದ ಇತರ ಇಬ್ಬರು ಸಿಐಎಸ್ಎಫ್ ಸಿಬಂದಿ ಸ್ಥಳಕ್ಕೆ ಧಾವಿಸಿ ಆಗಂತುಕರತ್ತ ಪ್ರತಿದಾಳಿ ನಡೆಸಿದ್ದು, ಘಟನಾ ಸ್ಥಳಕ್ಕೆ ಹೆಚ್ಚುವರಿ ಪಡೆ ಆಗಮಿಸುವ ಮುನ್ನ ಆಗಂತುಕರಿಬ್ಬರೂ ಪರಾರಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಸಿದ್ಧತೆಯೇ ? ಮಂಗಳವಾರ ಬೆಳಗ್ಗಿನ ಜಾವ ಇಬ್ಬರು ಆಗಂತುಕರು ಇಸ್ರೋ ಕೇಂದ್ರದ ಬಳಿ ಬೈನಾಕ್ಯುಲರ್ ಹಿಡಿದು ಕಟ್ಟಡವನ್ನು ಪರೀಕ್ಷಿಸುತ್ತಿದ್ದುದು ಕಂಡು ಬಂತು. ಸಂಭಾವ್ಯ ಭಯೋತ್ಪಾದಕ ದಾಳಿಗೆ ಉಗ್ರರು ಕೈಗೊಂಡಿರುವ ಪೂರ್ವ ಸಿದ್ಧತೆ ಇದಾಗಿರಬೇಕು ಎಂದು ಇಸ್ರೋ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಇಬ್ಬರಿಗೆ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಇರಲೇಬೇಕು. ಇದೊಂದು ಪೂರ್ವಸಿದ್ಧತೆ ಇರಬೇಕು. ಇದಲ್ಲವಾದಲ್ಲಿ ಬೆಳಗ್ಗಿನ ಜಾವದಲ್ಲಿ ಅವರೇಕೆ ಸಂಸ್ಥೆಯ ಬಳಿ ಬರಬೇಕಿತ್ತು ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಸಂಶಯಗಳ ಹುತ್ತ
ಬೆಂಗಳೂರು, ಮಾ. ೧೬: ಅಪರಿಚಿತರು ಹಾಗೂ ಸಿಐಎಸ್ಎಫ್ ನಡುವೆ ನಡೆದಿದೆ ಎನ್ನಲಾದ ಗುಂಡಿನ ಚಕಮಕಿ ಬಗ್ಗೆ ಪೊಲೀಸರು ಹಲವು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ.
ಗುಂಡಿನ ಚಕಮಕಿ ನಡೆದಿದೆ ಎನ್ನಲಾದ ಪ್ರದೇಶದಲ್ಲಿ ತಡೆಗೋಡೆಯ ಮೇಲೆ ಯಾವುದೇ ಗುಂಡು ತಗುಲಿದ ಚಿಹ್ನೆಗಳು ಹಾಗೂ ಖಾಲಿ ಮದ್ದುಗುಂಡುಗಳು ಕಂಡು ಬರದೇ ಇರುವುದು ಇಡೀ ಪ್ರಕರಣದ ಬಗ್ಗೆ ಸಂಶಯ ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ. ಬ್ಯಾಲಾಳುವಿನ ಇಸ್ರೋ ಕೇಂದ್ರದ ಹೊರಾವಣದಲ್ಲಿ ಗುಂಡಿನ ಚಕಮಕಿ ನಡೆದಿ ರುವ ಯಾವುದೇ ಚಿಹ್ನೆಗಳು ಕಾಣಿಸುತ್ತಿಲ್ಲ . ಈ ಹಿನ್ನೆಲೆಯಲ್ಲಿ ಇದು ಖಂಡಿತವಾಗಿಯೂ ಭಯೋತ್ಪಾದಕರ ಕೃತ್ಯವಲ್ಲ ಎಂದು ಎಡಿಜಿಪಿ ಎ.ಆರ್.ಇನ್ಫ್ಯಾಂಟ್ ತಿಳಿಸಿದ್ದಾರೆ.
ಮಂಗಳವಾರ ಇಬ್ಬರು ಖಾಕಿಧಾರಿಗಳು ಶಂಕಾಸ್ಪದ ರೀತಿಯಲ್ಲಿ ಸಂಸ್ಥೆಯ ಹೊರಾವರಣದಲ್ಲಿ ನಿಂತಿದ್ದುದನ್ನು ತಾನು ನೋಡಿದ್ದಾಗಿ ಕೇಂದ್ರದ ಮುಖ್ಯದ್ವಾರದ ಬಳಿ ಕರ್ತವ್ಯದಲ್ಲಿದ್ದ ಸಿಐಎಸ್ಎಫ್ ಕಾನ್ಸ್ಟೇಬಲ್ ಜಾಧವ್ ಹೇಳಿಕೊಂಡಿ ದ್ದಾರೆ.ಅವರನ್ನು ಪ್ರಶ್ನಿಸಲು ತೆರಳಿದ ಜಾಧವ್ ಮೇಲೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಜಾಧವ್ ಕೂಡ ಎಂಟು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಇರದಿದ್ದ ಇತರ ಇಬ್ಬರು ಸಿಐಎಸ್ಎಫ್ ಯೋಧರು ಅಲ್ಲಿಗೆ ಧಾವಿಸಿ ಗುಂಡಿನ ದಾಳಿ ನಡೆಸಿದರೆಂದು ಹೇಳಲಾಗುತ್ತಿದೆ.
ಎಂಟು ಸುತ್ತಿನ ಗುಂಡಿನ ದಾಳಿ ನಡೆಸಲಾಗಿತ್ತು ಎಂದು ಜಾಧವ್ ಹೇಳಿಕೊಂಡಿದ್ದರೂ ಅಲ್ಲಿ ಕೇವಲ ಆರು ಖಾಲಿ ಮದ್ದುಗುಂಡುಗಳು ಪತ್ತೆಯಾಗಿವೆ. ಕಾಂಪೌಂಡ್ನ ಹೊರಗಡೆ ಯಾವುದೇ ಖಾಲಿ ಮದ್ದುಗುಂಡುಗಳು ಸಿಕ್ಕಿಲ್ಲ ಎಂದು ಇನ್ಫ್ಯಾಂಟ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಕಮಲ್ನಾಥ್, ರಾಮನಗರ ಎಸ್ಪಿ ಬಿ.ಎಸ್.ಬಿಸ್ನಾಲಿ ಮತ್ತಿತರರು ಭೇಟಿ ನೀಡಿದ್ದಾರೆ.
ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿ ಜಾಧವ್ ಹಾಗೂ ಇತರ ಇಬ್ಬರು ಸಿಐಎಸ್ಎಫ್ ಯೋಧರನ್ನು ಪ್ರಶ್ನಿಸಲಾಗುತ್ತಿದ್ದು, ಘಟನೆ ಬಗ್ಗೆ ಮಾಹಿತಿ ನೀಡಲು ಕಾಲ ಪಕ್ವವಾಗಿಲ್ಲ ಎಂದು ಇನ್ಫ್ಯಾಂಟ್ ತಿಳಿಸಿದ್ದಾರೆ.
ಘಟನೆ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳದೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.
ಎಂಸಿಎಫ್: ಕಟ್ಟೆಚ್ಚರ
ಹಾಸನ,ಮಾ.೧೬: ಇಸ್ರೋ ಕೇಂದ್ರದ ಬಳಿ ಗುಂಡಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಇಲ್ಲಿನ ಬಾಹ್ಯಾಕಾಶ ನಿಯಂತ್ರಣ ಕೇಂದ್ರ (ಎಂ.ಸಿ.ಎಫ್.) ದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಎಂ.ಸಿ.ಎಫ್.ಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ರಕ್ಷಣೆಯನ್ನು ಒದಗಿಸಲಾಗಿದೆ. ಯಾವಾಗಲೂ ಸಿ.ಐ.ಎಸ್.ಎಫ್. ರಕ್ಷಣೆ ಪಡೆದಿರುವ ಎಂ.ಸಿ.ಎಫ್. ನಲ್ಲಿ ಭಯೋತ್ಪಾದಕರ ದಾಳಿ ರಾಷ್ಟ್ರದಲ್ಲಿ ನಡೆದಾಗ ಭದ್ರತೆಯನ್ನು ಬಿಗಿಗೊಳಿಸಲಾಗುತ್ತದೆ. ಅಂತೆಯೇ ಇಂದಿನಿಂದ ಎಂ.ಸಿ.ಎಫ್.ಗೆ ಭದ್ರತೆ ಹೆಚ್ಚಿಸಿದ್ದು, ಸಿ.ಐ.ಎಸ್.ಎಫ್. ಯೋಧರು ಹದ್ದಿನ ಕಣ್ಣಿಟ್ಟು ಎಂ.ಸಿ.ಎಫ್. ನ ಕಾವಲು ಕಾಯುತ್ತಿದ್ದಾರೆ.
ಹಾಸನ- ಹಳೆಬೀಡು ರಸ್ತೆಯಲ್ಲಿ ಸಾಲಗಾಮೆ ಸಮೀಪ ಇರುವ ಎಂ.ಸಿ.ಎಫ್. ಕೇಂದ್ರದ ಪಕ್ಕದಲ್ಲಿಯೇ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಅಲ್ಲಿ ಸಂಚರಿಸುವ ವಾಹನಗಳ ಮೇಲೂ ಸಿ.ಐ.ಎಸ್.ಎಫ್. ಯೋಧರು ಕಣ್ಗಾವಲು ಇಟ್ಟಿದ್ದಾರೆ. ಅಲ್ಲಿ ಯಾವುದೇ ವ್ಯಕ್ತಿ ಅನುಮಾನಾಸ್ಪದವಾಗಿ ಸಂಚರಿಸಿದರೂ ತಕ್ಷಣವೇ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ದೂರ ವ್ಯೋಮ ಜಾಲ ?
ಬೆಂಗಳೂರು, ಮಾ.೧೬: ಭಾರತದ ಮೊದಲ ಚಂದ್ರಯಾನ ಅಭಿಯಾನ ಚಂದ್ರಯಾನ-೧ಕ್ಕೆ ನೆಲದಿಂದ ಬಾಹ್ಯಾಂತರಿಕ್ಷ ನೆರವು ಒದಗಿಸುವ ಸಲುವಾಗಿ ೨೦೦೮ರಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಬ್ಯಾಲಾಳುವಿನಲ್ಲಿ ಭಾರತೀಯ ದೂರ ವ್ಯೋಮ ಜಾಲ (ಐಡಿಎಸ್ಎನ್)ಅಸ್ತಿತ್ವಕ್ಕೆ ಬಂದಿತ್ತು.
೩೨ ಮೀಟರ್ ಬಾಹ್ಯಾಂತರಿಕ್ಷ ಆಂಟೆನಾ, ೧೮ ಮೀಟರ್ ಆಂಟೆನಾ ಟರ್ಮಿನಲ್, ೧೧ ಮೀಟರ್ ಆಂಟೆನಾ ಟರ್ಮಿನಲ್, ಭಾರತೀಯ ಬಾಹ್ಯಾಕಾಶ ವಿeನ ದತ್ತಾಂಶ ಕೇಂದ್ರ (ಐಎಸ್ಎಸ್ಡಿಸಿ) ಹಾಗೂ ತಾಂತ್ರಿಕ ಸೇವಾ ಕಾಂಪ್ಲೆಕ್ಸನ್ನು ಐಡಿಎಸ್ಎನ್ ಒಳಗೊಂಡಿದೆ.
ಇಸ್ರೋಗೆ ಬಾಹ್ಯಾಂತರಿಕ್ಷ ಅಭಿಯಾನ ಕೈಗೊಳ್ಳುವ ಸಾಮರ್ಥ್ಯ ಹಾಗೂ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಇತರ ಬಾಹ್ಯಾಂತರಿಕ್ಷ ಅಭಿಯಾನಕ್ಕೆ ನೆರವು ಒದಗಿಸಲು ಭಾರತದಲ್ಲಿ ಆರಂಭಗೊಂಡ ಮೊದಲ ಯೋಜನೆ ಇದಾಗಿದೆ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-17
|
|
|