ವಿದೇಶಿ ವಿವಿ ಮಸೂದೆ ಕೇಂದ್ರ ಅಸ್ತು: ವಿದೇಶಿ ವಿವಿಗೆ ಕೆಂಪುಹಾಸು |
ಪ್ರಕಟಿಸಿದ ದಿನಾಂಕ : 2010-03-16
ಕಠಿಣ ಷರತ್ತುಗಳಿಗೆ ಒಳಪಟ್ಟು ವಿದೇಶಿ ವಿವಿಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಸಮ್ಮತಿ ಸೂಚಿಸಿದೆ.
ನವದೆಹಲಿ (ಪಿಟಿಐ): ವಿದೇಶಿ ವಿಶ್ವವಿದ್ಯಾಲಯವೊಂದು ಭಾರತದಲ್ಲಿ ಕ್ಯಾಂಪಸ್ ತೆರೆಯಬೇಕು ಎಂದರೆ 50 ಕೋಟಿ ರೂಪಾಯಿ ಮೂಲಧನ ಇಡಬೇಕು ಹಾಗೂ ಶಿಕ್ಷಣ ಚಟುವಟಿಕೆಯಿಂದ ಬರುವ ಹೆಚ್ಚುವರಿ ಹಣಅಥವಾ ಲಾಭವನ್ನು ತೆಗೆದುಕೊಂಡು ಹೋಗುವಂತಿಲ್ಲ ಎನ್ನುವ ಕಠಿಣ ಷರತ್ತುಗಳಿಗೆ ಒಳಪಟ್ಟು ವಿದೇಶಿ ವಿವಿಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಸಮ್ಮತಿ ಸೂಚಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ಕಟು ಟೀಕೆಗೆ ಒಳಗಾಗಿರುವ ‘ವಿದೇಶಿ ಶಿಕ್ಷಣ ಸಂಸ್ಥೆ (ಪ್ರವೇಶ ಮತ್ತು ಕಾರ್ಯಾಚರಣೆ ನಿಯಂತ್ರಣ) ಮಸೂದೆ-2010’ಗೆ ಅಂತಿಮವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದು, ಸಂಸತ್ನಲ್ಲಿ ಮಂಡಿಸಲು ಅವಕಾಶ ನೀಡಲಾಗಿದೆ.
ಭಾರತಕ್ಕೆ ಪ್ರವೇಶಿಸಿ ಕಾರ್ಯಚಟುವಟಿಕೆ ಆರಂಭಿಸಲು ಇಚ್ಛಿಸುವ ವಿವಿಗಳು ಪ್ರಮುಖವಾಗಿ ಐವತ್ತು ಕೋಟಿ ರೂಪಾಯಿ ಮೂಲಧನವನ್ನು ಠೇವಣಿಯಾಗಿ ಇಡಬೇಕು. ನಂತರ ಅದರ ಕಾರ್ಯಚಟುವಟಿಕೆಗೆ ಅವಕಾಶ ನೀಡಲಾಗುವುದು. ಭಾರತದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಪ್ರತಿಯೊಂದು ವಿದೇಶಿ ವಿವಿಯೂ ಸಹ ತಾನು ಕಾರ್ಯನಿರ್ವಹಿಸಲು ಇಚ್ಛಿಸುವ ಪ್ರದೇಶದ ಬಳಿ ಇರುವ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಅಥವಾ ಇನ್ನಿತರ ನಿಯಂತ್ರಣ ಸಂಸ್ಥೆಗಳ ಬಳಿ ನೋಂದಾಯಿಸಿಕೊಳ್ಳಬೇಕು. ವಿದೇಶಿ ವಿವಿಯ ಉದ್ದೇಶ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕಂಡು ಬಂದರೆ ಕೇಂದ್ರ ಸರ್ಕಾರ ಅಂತಹ ವಿವಿಯ ನೋಂದಣಿ ಅರ್ಜಿಯನ್ನು ತಿರಸ್ಕರಿಸಬಹುದು.
ಹಲವಾರು ಅವಕಾಶಗಳಿಗೆ ನಾಂದಿ ಹಾಡುವ ಈ ಮಸೂದೆಯು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೈಲಿಗಲ್ಲಾಗಿದ್ದು, ಗುಣಮಟ್ಟದ ಶಿಕ್ಷಣ ಪಡೆಯಲು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸಂಪುಟದ ಅನುಮತಿ ದೊರೆತ ನಂತರ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೇಳಿದರು.
ಕಂಪನಿ ಕಾಯಿದೆಯ ‘ಸೆಕ್ಷನ್ 25’ ವಿದೇಶಿ ಶಿಕ್ಷಣ ಸಂಸ್ಥೆಗೆ ಅನ್ವಯವಾಗುತ್ತಿದ್ದು, ಈ ಕಾಯಿದೆ ಪ್ರಕಾರ ಶೈಕ್ಷಣಿಕ ಚಟುವಟಿಕೆಯಿಂದ ಬರುವ ಹೆಚ್ಚುವರಿ ಆದಾಯ ಇಲ್ಲವೇ ಲಾಭವನ್ನು ಸಂಸ್ಥೆ ತೆಗೆದುಕೊಂಡು ಹೋಗುವಂತಿಲ್ಲ. ಬದಲಾಗಿ ಆ ಹಣವನ್ನು ಸಂಸ್ಥೆಯ ವಿಸ್ತರಣೆಗೆ ಬಳಸಬಹುದಾಗಿದೆ.
ವಿದೇಶಿ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣದ ಜತೆಗೆ ಸಲಹೆ ನೀಡುವ ಯೋಜನೆ (ಕನ್ಸಲ್ಟೆನ್ಸಿ ಪ್ರಾಜೆಕ್ಟ್)ಗಳನ್ನು ಸ್ಥಾಪಿಸಬಹುದಾಗಿದ್ದು, ಅದರಿಂದ ಬರುವ ಲಾಭವನ್ನು ತೆಗೆದುಕೊಂಡು ಹೋಗಬಹುದಾಗಿದೆ.
ಈ ಮಸೂದೆ ಕಳೆದ ನಾಲ್ಕು ವರ್ಷಗಳಿಂದ ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಹಾಗೂ ಸಮಾಜದ ವಿವಿಧ ರಂಗಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.
ಹಾಗಾಗಿ ಕಳೆದ ವರ್ಷ ಈ ಮಸೂದೆಯ ಕರಡನ್ನು ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಗೆ ಮಾರ್ಪಾಡು ಮಾಡಲು ಕಳುಹಿಸಿದ್ದು, ಅದಕ್ಕೆ ಸೋಮವಾರದ ಸಂಪುಟ ಸಭೆ ಅನುಮತಿ ನೀಡಿದೆ.
ಇಂತಹ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತದಲ್ಲಿರುವ ಮೀಸಲಾತಿ ವ್ಯವಸ್ಥೆಯು ಅನ್ವಯ ಆಗುವುದಿಲ್ಲ ಎಂದು ಈಗಾಗಲೇ ಕಪಿಲ್ ಸಿಬಲ್ ಸ್ಪಷ್ಟಪಡಿಸಿದ್ದಾರೆ.
ವಿದೇಶಿ ವಿವಿಗೆ ಕೆಂಪುಹಾಸು
ನವದೆಹಲಿ: ವಿದೇಶಿ ಬಟ್ಟೆಯಾಯ್ತು, ವಿದೇಶಿ ಆಹಾರವಾಯ್ತು, ವಿದೇಶಿ ಆಟಿಕೆಗಳಾಯ್ತ್ತು..., ಇನ್ನು ವಿದೇಶಿ ಸಂಸ್ಥೆಗಳು ನೀಡುವ ಶಿಕ್ಷಣವನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಭಾರತ ಬರಬೇಕಾಗಬಹುದು. ಕಾರಣ, ಕೇಂದ್ರ ಸಚಿವ ಸಂಪುಟ ಸಭೆ ವಿದೇಶಿ ವಿವಿಗಳಿಗೆ ಕೆಂಪುಹಾಸಿನ ಸ್ವಾಗತ ಕೋರುವ ಮಸೂದೆಗೆ ಅನುಮೋದನೆ ನೀಡಿದೆ.
ಈ ವಿವಿಗಳ ಪ್ರವೇಶ ಬೇಡ ಎಂದು ಕಳೆದ ನಾಲ್ಕು ವರ್ಷಗಳಿಂದಲೂ ವಿಪಕ್ಷಗಳು ಆಗ್ರಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿ ಕೆಲ ಮಾರ್ಪಾಡು ಮಾಡಿತ್ತು. ಇದೀಗ ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವುದೇ ಬದಲಾವಣೆ ಇಲ್ಲದೇ ಒಪ್ಪಿಗೆ ನೀಡಲಾಗಿದೆ.
ಮಸೂದೆಯಲ್ಲಿ ವಿವಿಗಳ ಪ್ರವೇಶಕ್ಕೆ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಮೊದಲು ೫೦ ಕೋಟಿ ಮೂಲಧನ ಇಡಬೇಕಾಗುತ್ತದೆ. ನಂತರ ವಿವಿಗಳಿಂದ ಬರುವ ಲಾಭವನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಈ ಹಣವನ್ನು ಇಲ್ಲಿಯೇ ವಿನಿಯೋಗಿಸಬೇಕು ಎಂದು ನಿಯಮ ಹಾಕಲಾಗಿದೆ. ಈ ನೀತಿಗಳನ್ನು ಒಪ್ಪಿಕೊಂಡು ಬರುವ ವಿವಿಗಳಿಗೆ ಅವಕಾಶ ನೀಡಲಾಗುತ್ತದೆ.
ಹೇಗೆ ಕಾರ್ಯಾಚರಣೆ? : ಭಾರತದಲ್ಲಿ ವಿದೇಶಿ ವಿವಿ ತೆರೆಯುವ ಆಸಕ್ತಿ ಇರುವ ಶಿಕ್ಷಣ ಸಂಸ್ಥೆಗಳಿಗೆ ೮ ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಸಮಯದಲ್ಲಿ ಯುಜಿಸಿ ಅಥವಾ ಇದಕ್ಕೆ ಸಮನಾದ ಅಧಿಕಾರ ಹೊಂದಿರುವ ಸಂಸ್ಥೆಯೊಂದರಿಂದ ವಿದೇಶಿ ಶಿಕ್ಷಣ ಸಂಸ್ಥೆ ಅನುಮತಿ ಪಡೆಯಬೇಕು. ಬಳಿಕ ಯುಜಿಸಿ ಅಥವಾ ಇದಕ್ಕೆ ಸಮನಾದ ಸಂಸ್ಥೆ ಪರಿಶೀಲನೆ ನಡೆಸುತ್ತದೆ. ಈ ಸಂಸ್ಥೆ ಭಾರತದ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ನೋಡಿಕೊಂಡು ಬಳಿಕ ಅನುಮತಿ ನೀಡಲಾಗುತ್ತದೆ. ಆದರೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಯಾವುದೇ ದೇಶದ ವಿವಿಗಳ ಸ್ಥಾಪನೆಗೆ ಅನುಮತಿ ನಿರಾಕರಿಸುವ ಅಧಿಕಾರವನ್ನು ಈ ಮಸೂದೆ ಒಳಗೊಂಡಿದೆ. ಯುಜಿಸಿ ಇದರ ಮೇಲ್ವಿಚಾರಣೆ ನೋಡಿಕೊಳ್ಳಲಿದೆ.
ಶೇ.೧೦೦ರಷ್ಟು ವಿದೇಶಿ ವಿನಿಮಯ!: ೨೦೦೦ನೇ ಇಸವಿಯಲ್ಲಿಯೇ ಶಿಕ್ಷಣ ವಲಯದಲ್ಲಿ ಶೇ.೧೦೦ ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಅವಕಾಶ ನೀಡಲಾಗಿತ್ತು. ಆದರೆ ಭಾರತದಲ್ಲಿ ಪ್ರಸ್ತುತವಿರುವ ಕಾನೂನುಗಳು ಯಾವುದೇ ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ನೇರವಾಗಿ ಇಲ್ಲೇ ಕಾರ್ಯ ನಿರ್ವಹಿಸುವ, ಪದವಿ ಕೊಡುವ ಅವಕಾಶ ಇರಲಿಲ್ಲ. ಇದೀಗ ಈ ಮಸೂದೆ ವಿದೇಶಿ ಸಂಸ್ಥೆಗಳು ಇಲ್ಲೇ ವಿವಿ ಸ್ಥಾಪಿಸಿ ಪದವಿ ಅಥವಾ ಉದ್ಯೋಗಾಧಾರಿತ ವಿಷಯಗಳಿಗೆ ತರಬೇತಿ ನೀಡಬಹುದಾಗಿದೆ.
ಎಲ್ಲೆಲ್ಲಿ ವಿದೇಶಿ ವಿವಿ? ರಾಜ್ಯಕ್ಕೂ ವಿದೇಶಿ ವಿವಿಗಳ ಆಗಮನವಾಗಲಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ಹೆಸರು ಮಾಡಿರುವ ರಾಜ್ಯದ ಪ್ರಮುಖ ನಗರಗಳಲ್ಲಿ ವಿದೇಶಿ ವಿವಿಗಳ ಸ್ಥಾಪನೆಯಾಗಬಹುದು ಎನ್ನಲಾಗುತ್ತಿದೆ. ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಬೆಳಗಾವಿಗಳಲ್ಲಿ ವಿದೇಶಿ ವಿವಿಗಳ ಸ್ಥಾಪನೆಯಾಗಬಹುದು ಎಂಬುದು ಶಿಕ್ಷಣ ವಲಯದ ತಜ್ಞರ ಲೆಕ್ಕಾಚಾರ.
ಸಾಧಕ ದೇಶದ ವಿವಿಗಳು ಸ್ಪರ್ಧೆ ಎದುರಿಸಬೇಕಾಗುತ್ತದೆ. ಹಾಗಾಗಿ ಉತ್ತಮ ಸಾಧನೆ ತೋರಲು ಅವಕಾಶವಿದೆ. ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೇಶದಲ್ಲೇ ಉತ್ತಮ ಅಧ್ಯಯನ ಅವಕಾಶ, ಉಪನ್ಯಾಸಕರು ಸೇರಿ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ.
ಬಾಧಕ ದುಬಾರಿ ಶುಲ್ಕದಿಂದ ಬಡ ವಿದ್ಯಾರ್ಥಿಗಳು ವಿದೇಶಿ ವಿವಿ ಪ್ರವೇಶ ಕಷ್ಟ. ವಿದ್ಯಾರ್ಥಿಗಳ ನಡುವೆ ಕಂದಕ ಏರ್ಪಡಬಹುದು. ನಮ್ಮಲ್ಲಿರುವಂತೆ ರೋಸ್ಟರ್ ವ್ಯವಸ್ಥೆ ಆ ವಿಶ್ವವಿದ್ಯಾಲಯಗಳಲ್ಲಿ ಜಾರಿಯಾಗದೇ ಇರಬಹುದು. ಇದರಿಂದ ಹಿಂದುಳಿದ ಜನಾಂಗಕ್ಕೆ ಅನ್ಯಾಯ ಖಚಿತ.
‘ವಿದೇಶಿ ವಿಶ್ವವಿದ್ಯಾಲಯಗಳು ಇಲ್ಲಿ ಕ್ಯಾಂಪಸ್ ತೆರೆಯುವುದರಿಂದ ಸಾಧಕಬಾಧಕ ಎರಡೂ ಇದೆ. ವಿದ್ಯಾರ್ಥಿ ವಲಯದಲ್ಲಿ ಕಂದಕ ಏರ್ಪಡುತ್ತದೆ ಜೊತೆಗೆ ಹೆಚ್ಚಿನ ಅವಕಾಶವೂ ಇದೆ. ಹೀಗಾಗಿ ಧನ ಮತ್ತು ಋಣಾತ್ಮಕ ಅಂಶಗಳುಂಟು.’ - ಡಾ| ಚಿತ್ರಾ ಪಣಿಕ್ಕರ್, ರೀಡರ್, ಇಂಗ್ಲಿಷ್ ವಿಭಾಗ, ಬೆಂವಿವಿ.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ | ಪ್ರಜಾವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-16 00:00:00
|
|
|