| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್ |
ಪ್ರಕಟಿಸಿದ ದಿನಾಂಕ : 2010-03-12
ಅಹ್ಮದಾಬಾದ್, ಮಾ.೧೧: ಕಳೆದ ೨೦೦೨ರ ಗುಜರಾತ್ ದಂಗೆಯ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಯೊಂದು ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಮಾ.೨೧ರಂದು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ಕಳುಹಿಸಿದೆ.
ಅಹ್ಮದಾಬಾದ್ನ ಗುಲ್ಬರ್ಗ್ ಸೊಸೈಟಿಯಲ್ಲಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಹಾಗೂ ಇತರ ೭೦ ಮಂದಿಯ ಸಜಿವ ದಹನ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೇಲಿರುವ ಆರೋಪಗಳಿಗೆ ಉತ್ತರ ನೀಡುವಂತೆ ಮೋದಿಯವರನ್ನು ಕೋರಲು ಸಮಿತಿ ನಿರ್ಧರಿಸಿದೆ.
ಆದರೆ, ಮೋದಿಯವರಿಗೆ ಸಮನ್ಸ್ ಇನ್ನಷ್ಟೇ ತಲುಪಬೇಕಿದೆಯೆಂದು ಅವರ ಕಚೇರಿಯ ಮೂಲಗಳು ತಿಳಿಸಿವೆ.
ಮೋದಿ ಹಾಗೂ ಅವರ ಸಂಪುಟದ ಸಚಿವರು ಮುಸ್ಲಿಮರ ಹತ್ಯೆಗೆ ಪಿತೂರಿ ನಡೆಸಿದ್ದರೆಂದು ಆರೋಪಿಸಿ ಜಾಫ್ರಿಯವರ ಪತ್ನಿ ಝಕಿಯಾ ಮೋದಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ದಂಗೆಯ ವೇಳೆ ಮುಸ್ಲಿಮರಿಂದ ಬರುವ ಸಹಾಯದ ಬೇಡಿಕೆಗೆ ಸ್ಪಂದಿಸದಿರುವಂತೆ ಮೋದಿ ಹಾಗೂ ಅವರ ಸಂಪುಟ ಸಚಿವರು ಪೊಲೀಸರಿಗೆ ಹಾಗೂ ಅಧಿಕಾರಿಗಳೀಗೆ ಸೂಚನೆ ನೀಡಿದ್ದರೆಂದು ಆಕೆ ಆರೋಪಿಸಿದ್ದರು. ಝಕಿಯ್ಯಾ ತನ್ನ ದೂರಿನಲ್ಲಿ ಮೋದಿ ಸಹಿತ ೬೩ ಮಂದಿಯನ್ನು ಹೆಸರಿಸಿದ್ದರು.
ಸಿಬಿಐಯ ಮಾಜಿ ಮುಖ್ಯಸ್ಥ ಆರ್.ಕೆ. ರಾಘವನ್ ನೇತೃತ್ವದ ಸಮಿತಿಯ ಮುಂದೆ ಮಾ.೨೧ರಂದು ಹಾಜರಾಗುವಂತೆ ಮೋದಿಯವರಿಗೆ ಸಮನ್ಸ್ ಕಳುಹಿಸಿರುವುದಾಗಿ ತಿಳಿದುಬಂದಿದೆ.
ಮೋದಿಯವರ ವಿಚಾರಣೆ ಈ ಸಮಿತಿಯ ಅಂತಿಮ ಹಂತವಾಗಿದೆ. ಮುಖ್ಯಮಂತ್ರಿಯ ವಿಚಾರಣೆಯ ಬಳಿಕ ವರದಿಯನ್ನು ಎಪ್ರಿಲ್ನೊಳಗೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವುದು. ಅನೇಕ ಜನರು ಪಿತೂರಿ ನಡೆಸಿ ಅ ದಿನ ಅನೇಕ ತೊಂದರೆಗಳಿಗೆ ಕಾರಣರಾಗಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಅದರಂತೆ, ತಾವು ಹಲವು ಸಾಕ್ಷಿಗಳ ವಿಚಾರಣೆ ನಡೆಸಿದ್ದು, ತನಿಖೆ ಸುಮಾರು ಕೊನೆಯ ಹಂತ ತಲುಪಿದೆ. ಆದುದರಿಂದ ತಾವು ಸಂಗ್ರಹಿಸಿರುವ ಮಾಹಿತಿಯ ಕುರಿತು ಮೋದಿಯವರ ಅಭಿಪ್ರಾಯ ಕೇಳುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆ ಬಳಿಕ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಾಗುವುದು ಎಂದು ರಾಘವನ್ ಎನ್ಡಿಟಿವಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಮೋದಿಯವರ ವಿರುದ್ಧ ಆರೋಪ ಹೊರಿಸಿರುವುದು ಝಕಿಯ್ಯಾ ಒಬ್ಬರೇ ಆಗಿದ್ದು, ಅವರು ತನ್ನ ೧೦೦ ಪುಟಗಳ ದೂರಿನಲ್ಲಿ ಮೂರು ಪ್ರಮುಖ ಪ್ರಶ್ನೆಗಳನ್ನೇತ್ತಿದ್ದಾರೆ.
೧. ಗೋಧ್ರಾ ರೈಲು ದಹನದಲ್ಲಿ ಮೃತರಾದವರ ಮೃತದೇಹಗಳನ್ನು ಅಹ್ಮದಾಬಾದ್ನ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದುದೇಕೆ?
೨. ಸಂಘಪರಿವಾರ ೨೦೦೨ರ ಫೆ.೨೭ರಂದು ಕರೆ ನೀಡಿದ್ದ ಬಂದನ್ನು ಯಾಕೆ ತಡೆಯಲಿಲ್ಲ?
೩. ಮುಖ್ಯಮಂತ್ರಿ ಮೋದಿ ೨೦೦೨ರ ಫೆ.೨೭ರ ಬಳಿಕ ನಡೆಸಿದ ಸಭೆಗಳ ಬಗ್ಗೆ ದಾಖಲೆ ಏಕಿಲ್ಲ? ಎಂಬುವು ಈ ಮೂರು ಪ್ರಶ್ನೆಗಳಾಗಿವೆ.
ದಂಗೆಕೋರರಿಗೆ ಮುಕ್ತ ಸ್ವಾತಂತ್ರ ನೀಡಿ ತಾವು ಸುಮ್ಮನಿರುವಂತೆ ಪೊಲೀಸ್ ಹಾಗೂ ಭದ್ರತಾ ಸಂಸ್ಥೆಗಳಿಗೆ ಮೋದಿ ಸೂಚನೆ ನೀಡಿದ್ದರೆಂದು ಝಕಿಯ್ಯಾ ಆರೋಪಿಸಿದ್ದಾರೆ.
ಶೀಘ್ರವೇ ಪ್ರಕರಣ ಅಂತ್ಯಗೊಂಡು ತನಗೆ ನ್ಯಾಯ ದೊರೆಯುವುದಾಗಿ ಝಕಿಯ್ಯಾ ಆಶಾವಾದ ವ್ಯಕ್ತಪಡಿಸಿದ್ದಾರೆ.
ಮೋದಿ ವಿರುದ್ಧ ಎಫ್ಐಆರ್ ದಾಖಲಿಸಬೇಕು: ತನ್ವೀರ್ ಜಾಫ್ರಿ
ಹೊಸದಿಲ್ಲಿ: ತನ್ನ ತಾಯಿ ಝಕಿಯ್ಯಾ ಜಾಫ್ರಿ ಸಲ್ಲಿಸಿರುವ ದೂರು ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸುವತ್ತ ಒಂದು ಹೆಜ್ಜೆಯೆಂದು ಜಾಫ್ರಿಯವರ ಪುತ್ರ ತನ್ವೀರ್ ಜಾಫ್ರಿ ಹೇಳಿದ್ದಾರೆ.
“ಇದು ಮೋದಿಯವರ ವಿರುದ್ಧ ಎಫ್ಐಆರ್ ದಾಖಲಿಸುವತ್ತ ಒಂದು ಹೆಜ್ಜೆಯಾಗಿದೆ. ಎಫ್ಐಆರ್ ದಾಖಲಾಗುವವರೆಗೆ ತನಿಖೆಯು ಯಾವ ದಿಕ್ಕಿಗೆ ಸಾಗಿದೆಯೆಂದು ನೀವು ಹೇಳಲಾರಿರಿ” ಎಂದವರು ಸಿಎನ್ಎನ್-ಐಬಿಎನ್ಗೆ ನೀಡಿದ ಸಂದರ್ಶನವೊಂದರಲ್ಲಿ ಅಭಿಪ್ರಾಯಿಸಿದ್ದಾರೆ.
ದೂರಿನಲ್ಲಿ ಕೇವಲ ಗುಲ್ಬರ್ಗ ಸೊಸೈಟಿ ಹತ್ಯಾಕಾಂಡ ಮಾತ್ರವಲ್ಲದೆ, ಇಡೀ ದಂಗೆ ಪ್ರಕರಣದ ಮಾಹಿತಿಯಿದೆಯೆಂದು ತನ್ವೀರ್ ಹೇಳಿದ್ದಾರೆ.
ಇದರಿಂದ ಇತರ ಪ್ರಕರಣಗಳನ್ನು ತೆರೆಯಲೂ ಅನುಕೂಲವಾಗಲಿದೆಯೆಂದು ಅವರು ನುಡಿದಿದ್ದಾರೆ.
ಈ ಕ್ಷಣದಲ್ಲಿ ತನ್ನ ತಾಯಿಯ ಭಾವನೆಯ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ತನ್ವೀರ್, “ನನ್ನ ತಾಯಿಗೆ ಇದು ಪ್ರತಿ ದಿನದ ಹೋರಾಟ. ಈಗಲೂ ನೀವಾಕೆಯನ್ನು ಭೇಟಿಯಾದರೆ ಅವರು ಇಡೀ ಘಟನೆಯನ್ನು ವಿವರಿಸುತ್ತಾರೆ. ಆಕೆ ತನ್ನ ದಿನದ ಅರ್ಧದಷ್ಟು ಅವಧಿ ಈ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ನಾವು ಸೂಕ್ತ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ” ಎಂದಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12 00:00:00
|
|
| riyaaz.nala, govindoor | 2010-03-13 | | good luck mashalla alla kareem |
|
|
|