ಮಹಿಳಾ ಮೀಸಲಾತಿ: ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ; ಸಮಾಜವಾದಿ, ಆರ್ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ; ಪ್ರಧಾನಿಯಿಂದ ಸರ್ವಪಕ್ಷ ಸಭೆ... |
ಪ್ರಕಟಿಸಿದ ದಿನಾಂಕ : 2010-03-08
ಮಹಿಳಾ ಮಸೂದೆ ಕುರಿತಂತೆ ಎಸ್ಪಿ(ಸಮಾಜವಾದಿ ಪಕ್ಷ),ಆರ್ಜೆಡಿ(ರಾಷ್ಟ್ರಿಯ ಜನತಾದಳ), ಜೆಡಿ(ಯು) ಸದಸ್ಯರು ರಾಜ್ಯಸಭೆ ಮತ್ತು ಲೋಕ ಸಭೆಗಳಲ್ಲಿ ಕೋಲಾಹಲ ಮೂಡಿಸಿದಾಗ ಕಲಾಪವನ್ನು ಮುಂದೂಡ ಬೇಕಾ ಯಿತು.ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಜೆ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.
ನವದೆಹಲಿ(ಪಿಟಿಐ): ಮಹಿಳಾ ಮಸೂದೆ ಅಂಗೀಕಾರ ಕುರಿತಂತೆ ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿವಿಧ ಪಕ್ಷಗಳ ಪ್ರತಿಭಟನೆಯ ಕಾರಣ ಕೋಲಾಹಲ ನಡೆದು ಸಂಜೆಯವರೆಗೆ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು.
ಮಸೂದೆ ಅಂಗೀಕಾರ ಕುರಿತು ಒಮ್ಮತ ಮೂಡಿಸುವ ಸಲುವಾಗಿ, ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಜೆ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.
ಈಗಿರುವ ಸ್ವರೂಪದಲ್ಲಿ ಮಸೂದೆಯನ್ನು ಅಂಗೀಕರಿಸಬಾರದೆಂದು ಎಸ್ ಪಿ (ಸಮಾಜವಾದಿ ಪಕ್ಷ), ಆರ್ಜೆಡಿ(ರಾಷ್ಟ್ರಿಯ ಜನತಾದಳ), ಮತ್ತು ಜೆಡಿ(ಯು) ಸದಸ್ಯರು ಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗಿ ಕೋಲಾಹಲ ಉಂಟುಮಾಡಿದ್ದರಿಂದ ಕಲಾಪವನ್ನು ಸಂಜೆಯವರೆಗೆ ಹಲವಾರು ಬಾರಿ ಮೂಂದೂಡಲಾಯಿತು. ಬೆಂಬಲ ವಾಪಸ್: ಈ ಮಸೂದೆಯ ಕಾರಣವಾಗಿ ಸಮಾಜವಾದಿ ಪಕ್ಷ ಮತ್ತು ಆರ್ಜೆಡಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿವೆ.
ತೊಂದರೆ ಇಲ್ಲ: ಆದರೆ, ಎಸ್ಪಿಯ 21 ಮಂದಿ ಮತ್ತು ಆರ್ಜೆಡಿಯ 4 ಮಂದಿ ಬೆಂಬಲ ವಾಪಸಾತಿಯಿಂದ ಸರ್ಕಾರಕ್ಕೆ ಯಾವುದೆ ತೊಂದರೆ ಇಲ್ಲ ಎಂದು ಸರ್ಕಾರದ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಸಭೆ: ರಾಜ್ಯಸಭೆಯಲ್ಲಿ ಎಸ್.ಪಿ, ಆರ್ ಜೆಡಿ ಮತ್ತು ಜೆಡಿ(ಯು) ಸದಸ್ಯರು ಗದ್ದಲ ಉಂಟುಮಾಡಿದಾಗ ಅಲ್ಲಿಯೂ ಕಲಾಪವನ್ನು ಸಂಜೆಯವರೆಗೆ ಮುಂದೂಡಲಾಯಿತು. ಮಸೂದೆಯ ಪ್ರತಿಗಳನ್ನು ಹರಿದು ಸಭಾಧ್ಯಕ್ಷರತ್ತ ತೂರಿದ ಪ್ರಕರಣವೂ ನಡೆಯಿತು. ನಂತರ ಆ ಸದಸ್ಯರು ತಮ್ಮ ನಡವಳಿಕೆಯ ಬಗೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದರು.
ದಲಿತರ ವಿರೋಧಿ: ಈ ಮಸೂದೆ ರಾಜಕೀಯ ದುರುದ್ದೇಶದಿಂದ ಕೂಡಿದ್ದು ದಲಿತ ಮತ್ತು ಮುಸ್ಲಿಂರ ವಿರೋದಿಯಾಗಿದೆ ಅದ್ದರಿಂದ ನಮ್ಮ ಬೆಂಬಲ ವಾಪಸ್ ಪಡೆದಿದ್ದೇವೆ ಎಂದು ಲಾಲೂ ಪ್ರಸಾದ್ ತಿಳಿಸಿದ್ದಾರೆ. ಅವರ ನಿಲುವನ್ನು ಸಮರ್ಥಿಸಿದ ಮುಲಾಯಂಸಿಂಗ್ ಯಾದವ್ ಅವರು ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದಲಿತರಿಗೆ, ಅಲ್ಪಸಂಖ್ಯಾತರಿಗೆ ಯಾವುದೆ ತೊಂದರೆ ಆಗುವುದಿಲ್ಲವೆಂದು ಸಚಿವರೊಬ್ಬರು ತಿಳಿಸಿದ್ದಾರೆ. ಮಹಿಳೆಯರ ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣ ಮಾಡುವುದೇ ನಮ್ಮ ಪ್ರಯತ್ನ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಚರ್ಚೆ ನಡೆಯಬೇಕು:
ಈ ನಡುವೆ, ರಾಜ್ಯ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದ ನಂತರವೇ ತಾನು ಮಸೂದೆಯನ್ನು ಬೆಂಬಲಿಸುವುದು ಎಂದು ಬಿಜೆಪಿ ಹೇಳಿದೆ.
ಆಗ್ರಹ: ದಲಿತರು, ಮುಸ್ಲೀಂರು ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಬೇಕೆಂದು ಕೆಲವು ಮುಸ್ಲೀಂ ಸಂಘಟನೆಗಳು ಆಗ್ರಹಪಡಿಸಿವೆ
ಕರುಣಾ, ಮಮತಾರೂ ಕೈಕೊಟ್ಟರೆ?; ಇದು ಕಾಂಗ್ರೆಸ್ ಚಿಂತೆ..! ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಸರಕಾರದ ಪರ ಲೆಕ್ಕಕ್ಕಿಂತ ಹೆಚ್ಚೇ ಬಹುಮತವಿದ್ದರೂ ರಾಷ್ಟ್ರೀಯ ಜನತಾದಳ ಮತ್ತು ಸಮಾಜವಾದಿ ಪಕ್ಷಗಳು ಸರಕಾರದಿಂದ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಘೋಷಿಸಿದ ತಕ್ಷಣವೇ ವಿಧೇಯಕದ ಮೇಲಿನ ಮತದಾನವನ್ನು ಒಮ್ಮಿಂದೊಮ್ಮೆಲೇ ಮುಂದೂಡಿದ್ದು ಸರಕಾರದ ದೂರದೃಷ್ಟಿಯೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಇಂದು ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕ ಮಂಡನೆಯಾದ ಬಳಿಕ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷ, ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಮತ್ತು ಶರದ್ ಯಾದವ್ ಅವರ ಸಂಯುಕ್ತ ಜನತಾದಳಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದರೂ ಮಸೂದೆಯ ಮೇಲಿನ ಮತದಾನವನ್ನು ಮುಂದೂಡುವ ಅಗತ್ಯ ಪ್ರಬಲ ಯುಪಿಎ ಸರಕಾರಕ್ಕಿರಲಿಲ್ಲ.
ರಾಜ್ಯಸಭೆಯಲ್ಲಿ ವಿಧೇಯಕವನ್ನು ಚರ್ಚೆಗೊಳಪಡಿಸದೆ ನೇರ ಮತದಾನಕ್ಕೆ ಒಳಪಡಿಸುವ ಅವಕಾಶವಿರುವುದರಿಂದ ಯುಪಿಎ ಸರಕಾರಕ್ಕೆ ಸುಲಭವಾಗಿ ಮಸೂದೆಗೆ ಅಂಗೀಕಾರ ಪಡೆದುಕೊಳ್ಳಬಹುದಿತ್ತು. ಪ್ರತಿರೋಧ ಒಡ್ಡುತ್ತಿರುವ ಪಕ್ಷಗಳು ವಿರುದ್ಧ ಮತದಾನ ಮಾಡಿದರೂ ಕಾಯ್ದೆ ಅಂಗೀಕಾರಕ್ಕೆ ಯಾವುದೇ ಅಡ್ಡಿಯಾಗುತ್ತಿರಲಿಲ್ಲ. ಆದರೂ ಸರಕಾರ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಂದು ಹೆಜ್ಜೆ ಹಿಂದಕ್ಕಿಟ್ಟಿದೆ.
ಡಿಎಂಕೆ, ಟಿಸಿಗಳೂ ಬ್ಲ್ಯಾಕ್ಮೇಲ್ ಮಾಡುತ್ತಿವೆ...
ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿಚಾರದಲ್ಲಿ ಮಗ್ಗುಲ ಮುಳ್ಳಾಗುತ್ತಿರುವ ಕರುಣಾನಿಧಿಯವರ ಡಿಎಂಕೆ ಮತ್ತು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಇತ್ತೀಚಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಯನ್ನೂ ತೀವ್ರವಾಗಿ ವಿರೋಧಿಸುತ್ತಿವೆ. ಅಲ್ಲದೆ ಈ ಕುರಿತ 2010-11ರ ಸಾಲಿನ ಬಜೆಟ್ ಸದನದಲ್ಲಿ ಇನ್ನೂ ಅಂಗೀಕಾರ ಪಡೆದುಕೊಂಡಿಲ್ಲ.
ಈಗ ಲೆಕ್ಕಕ್ಕಿಲ್ಲ ಎಂದೇ ಮೇಲ್ನೋಟಕ್ಕೆ ಭಾವಿಸಲಾಗುತ್ತಿರುವ ಸಮಾಜವಾದಿ (22) ಮತ್ತು ರಾಷ್ಟ್ರೀಯ ಜನತಾದಳ ಪಕ್ಷಗಳು (4) ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡರೆ, ಅತ್ತ ಯುಪಿಎ ಬಲಾಬಲ ಸುಮಾರು 290ಕ್ಕೆ ಕುಸಿಯುತ್ತದೆ. ಸುಭದ್ರ ಸರಕಾರಕ್ಕೆ ಬೇಕಾಗಿರುವುದು 272 ಮಾತ್ರ. ಲೆಕ್ಕಾಚಾರದ ನಿಟ್ಟಿನಲ್ಲಿ ಇದು ಸರಿಯೆನಿಸುತ್ತದೆ.
ಆದರೆ ಬೆಲೆಯೇರಿಕೆಯನ್ನೇ ಮುಂದಿಟ್ಟುಕೊಂಡು ಡಿಎಂಕೆ (18) ಮತ್ತು ತೃಣಮೂಲ ಕಾಂಗ್ರೆಸ್ಗಳು (19) ಬ್ಲ್ಯಾಕ್ಮೇಲ್ ಮಾಡಿದರೆ ಆಗ ಸರಕಾರವೇ ಅತಂತ್ರವಾಗಬಹುದು (253ಕ್ಕೆ ಇಳಿಯಬಹುದು) ಎಂಬುದು ಯುಪಿಎ ಸರಕಾರದ ದೂರದೃಷ್ಟಿ. ಇದೇ ಕಾರಣದಿಂದ ಮಹಿಳಾ ಮೀಸಲಾತಿ ವಿಧೇಯಕಕ್ಕೆ ತೀವ್ರ ಪ್ರತಿರೋಧ ತೋರಿಸುತ್ತಿರುವ ಲಾಲೂ ಮತ್ತು ಮುಲಾಯಂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿಯಿಂದ ಸರ್ವಪಕ್ಷ ಸಭೆ...
ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದರೂ, ಅಂಗೀಕಾರಕ್ಕಾಗಿನ ಮತದಾನವನ್ನು ನಾಳೆಯವರೆಗೆ ಮುಂದೂಡಲಾಗಿದೆ.
ಅದಕ್ಕೂ ಮೊದಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸರ್ವಪಕ್ಷಗಳ ಸಭೆಯನ್ನು (ಮಾರ್ಚ್ 9ರಂದು) ಕರೆದಿದ್ದಾರೆ. ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಸಭೆ ಕರೆಯಲಾಗಿದೆ ಎಂದು ಪ್ರಧಾನಿಯವರು ಹೇಳಿಕೊಂಡಿದ್ದಾರೆ.
ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಮಹಿಳಾ ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದ್ದು, ಮಹಿಳಾ ಮೀಸಲಾತಿಯನ್ನೇ ನೇರವಾಗಿ ವಿರೋಧಿಸುತ್ತಿಲ್ಲ ಎಂದು ಅತ್ತ ಸಮಾಜವಾದಿ ಮತ್ತು ರಾಷ್ಟ್ರೀಯ ಜನತಾದಳಗಳು ಹೇಳಿರುವುದರಿಂದ ಈಗಿರುವ ಮಸೂದೆಗೆ ಮತ್ತೆ ತಿದ್ದುಪಡಿ ತರುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.
ಸಮಾಜವಾದಿ, ಆರ್ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ
ನವದೆಹಲಿ, ಸೋಮವಾರ, 8 ಮಾರ್ಚ್ 2010
ಮಹಿಳಾ ಮೀಸಲಾತಿ ಮಸೂದೆಯನ್ನು ಈಗ ಇರುವ ರೂಪದಲ್ಲಿ ಸ್ವೀಕರಿಸಲು ತೀವ್ರ ವಿರೋಧ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳಗಳು, ಕೇಂದ್ರದ ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿವೆ. ಇದರ ಬೆನ್ನಿಗೆ ಮಸೂದೆಯ ಮೇಲಿನ ಮತದಾನವನ್ನು ಸ್ಪೀಕರ್ ನಾಳೆಗೆ ಮುಂದೂಡಿದ್ದಾರೆ.
ಲೋಕಸಭಾ ಮತ್ತು ವಿಧಾನಸಭಾ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಬಳಿಕ ತೀವ್ರ ಗದ್ದಲ ಎಬ್ಬಿಸಿದ ಈ ಪಕ್ಷಗಳು, ಮಸೂದೆಯನ್ನು ಅಂಗೀಕರಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿವೆ. ಒಂದು ಹಂತದಲ್ಲಿ ಸಭಾಧ್ಯಕ್ಷರಿಗೆ ಮುತ್ತಿಗೆ ಹಾಕಿದ ಆಕ್ರೋಶಿತ ಸದಸ್ಯರು, ಮಸೂದೆಯ ಪ್ರತಿಗಳನ್ನೂ ಹರಿದು ಹಾಕಿದ್ದಾರೆ.
ಮಹಿಳಾ ಮೀಸಲಾತಿ ಕಾಯ್ದೆಯನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದು, ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಜಾರಿಗೊಳಿಸಲು ಯತ್ನಿಸುತ್ತಿದೆ; ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ. ಕಾಯ್ದೆಯನ್ನು ಈ ರೂಪದಲ್ಲಿ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ ಎಂದಿದ್ದಾರೆ.
ಯಾವುದೇ ಒತ್ತಡಕ್ಕೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬಗ್ಗದೇ ಇರುವುದನ್ನು ಮನಗಂಡಿರುವ ಸಮಾಜವಾದಿ ಮತ್ತು ರಾಷ್ಟ್ರೀಯ ಜನತಾದಳಗಳು, ಮಹಾ ಚುನಾವಣೆ ನಂತರ ಎದ್ದುಬಿದ್ದು ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳುವುದಾಗಿ ಹೇಳಿವೆ.
ಸರಕಾರಕ್ಕೆ ಧಕ್ಕೆಯಿಲ್ಲ...
ಲೋಕಸಭೆಯಲ್ಲಿ 22 ಸ್ಥಾನಗಳನ್ನು ಹೊಂದಿರುವ ಸಮಾಜವಾದಿ ಪಕ್ಷ ಮತ್ತು ನಾಲ್ಕು ಸ್ಥಾನಗಳನ್ನು ಹೊಂದಿರುವ ರಾಷ್ಟ್ರೀಯ ಜನತಾದಳಗಳು ಯುಪಿಎಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದರೂ ಸರಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.
ಕಾಂಗ್ರೆಸ್ (208), ತೃಣಮೂಲ ಕಾಂಗ್ರೆಸ್ (19), ಡಿಎಂಕೆ (18), ಎನ್ಸಿಪಿ (9), ನ್ಯಾಷನಲ್ ಕಾನ್ಫರೆನ್ಸ್ (3)ಗಳೊಂದಿಗೆ ಪ್ರಸಕ್ತ ಯುಪಿಎ ಮೈತ್ರಿಕೂಟವು 257 ಲೋಕಸಭಾ ಸದಸ್ಯರನ್ನು ಹೊಂದಿದೆ.
ಬಿಎಸ್ಪಿ (21), ಮುಸ್ಲಿಂ ಲೀಗ್ (2), ಜಾರ್ಖಂಡ್ ವಿಕಾಸ್ ಮೋರ್ಛಾ (1), ಜೆಡಿಎಸ್ (3)ಗಳು ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದು, ಯುಪಿಎ ಬಲಾಬಲ 284ರಲ್ಲಿದೆ. ಇತರ ಕೆಲವು ಸ್ವತಂತ್ರ ಅಭ್ಯರ್ಥಿಗಳೂ ಯುಪಿಎಗೆ ಬೆಂಬಲ ಸೂಚಿಸಿರುವುದರಿಂದ ಲೋಕಸಭೆಯಲ್ಲಿನ ಒಟ್ಟು ಸಂಖ್ಯಾಬಲ 290ಕ್ಕೇರುತ್ತದೆ.
543 ಲೋಕಸಭಾ ಸ್ಥಾನಗಳಲ್ಲಿ ಸರಕಾರಕ್ಕೆ ಬೇಕಾಗಿರುವುದು 272 ಸ್ಥಾನಗಳು ಮಾತ್ರ. ಹಾಗಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಂದ ಸರಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.
ರಾಜ್ಯಸಭೆಯಲ್ಲಿ ಮಂಡನೆ... ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಸಭೆಯ ಅಧ್ಯಕ್ಷ ಹಮೀದ್ ಅನ್ಸಾರಿಯವರು ಸಭೆಯ ಮುಂದಿಟ್ಟರು.
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರು. ಇದರ ಬೆನ್ನಿಗೆ ಆರಂಭವಾದ ಚರ್ಚೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ, ಮಾಯಾವತಿ ನಾಯಕತ್ವದ ಬಹುಜನ ಸಮಾಜವಾದಿ ಪಕ್ಷ ಹಾಗೂ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.
ಈ ಹಿನ್ನೆಲೆಯಲ್ಲಿ ಹಲವು ಬಾರಿ ಕಲಾಪನ್ನು ಮುಂದೂಡಲಾಯಿತು. ಸಂಖ್ಯಾಬಲದ ಪ್ರಕಾರ ಯುಪಿಎ ಸರಕಾರದ ಈ ಮಸೂದೆ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಮತದಾನ ಮುಂದೂಡಿಕೆ.... ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಸಂಜೆ ಆರು ಗಂಟೆಗೆ ರಾಜ್ಯಸಭೆಯಲ್ಲಿ ಮತದಾನ ನಡೆಯಲಿದೆ ಎಂದು ಮಧ್ಯಾಹ್ನ ಎರಡು ಗಂಟೆಗೆ ಪ್ರಕಟಿಸಲಾಗಿತ್ತು.
ಆದರೆ ಆರ್ಜೆಡಿ ಮತ್ತು ಸಮಾಜವಾದಿ ಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರು ಸರ್ವಪಕ್ಷಗಳ ಸಭೆ ಕರೆದಿದ್ದು, ಈ ಹಿನ್ನೆಲೆಯಲ್ಲಿ ಮಸೂದೆಯ ಮೇಲಿನ ಮತದಾನವನ್ನು ನಾಳೆಗೆ ಮುಂದೂಡುವ ನಿರ್ಧಾರಕ್ಕೆ ಸ್ಪೀಕರ್ ಬಂದಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿದಂತೆ ಹೆಚ್ಚಿನ ಪಕ್ಷಗಳು ಮಸೂದೆಯ ಪರವಾಗಿರುವುದರಿಂದ ಬಹುಮತದಿಂದ ಕಾಯ್ದೆಯು ಅಂಗೀಕಾರವಾಗಲಿದೆ ಎಂಬ ನಿರೀಕ್ಷೆಗಳಿದ್ದರೂ ಪ್ರತಿಪಕ್ಷಗಳ ಭಾರೀ ಗದ್ದಲದ ಹಿನ್ನೆಲೆಯಲ್ಲಿ ಸರಕಾರ ನಿಲುವು ಬದಲಾಯಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.
ಲೋಕಸಭೆಯಲ್ಲೂ ಗದ್ದಲ... ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆಯಾಗುತ್ತಿದ್ದಂತೆ ಇತ್ತ ಲೋಕಸಭೆಯಲ್ಲೂ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳಗಳ ಸದಸ್ಯರು ಭಾರೀ ಗದ್ದಲ ಎಬ್ಬಿಸಿವೆ.
ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಪ್ರಶ್ನೋತ್ತರ ವೇಳೆ ಪ್ರಕಟಿಸುತ್ತಿದ್ದಂತೆ ಸದನದ ಬಾವಿಗಿಳಿದ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳಗಳ ಸದಸ್ಯರು, ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.
ಹಲವಾರು ಬಾರಿ ಸದನವನ್ನು ಮುಂದೂಡಿದ ಬಳಿಕವೂ ಸದಸ್ಯರು ತಮ್ಮ ಪಟ್ಟು ಬಿಡದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-08 00:00:00
|
|
|