|
ಪ್ರಕಟಿಸಿದ ದಿನಾಂಕ : 2010-03-01
ಜಾಗತಿಕವಾಗಿ ಅದರಲ್ಲೂ ಉಪಖಂಡದಲ್ಲಿ ಭದ್ರತೆ ಮತ್ತು ಶಾಂತಿ ಸ್ಥಾಪನೆಗೆ ಭಾರತದ ಜತೆ ಪ್ರಮುಖ ಮಿತ್ರ ರಾಷ್ಟ್ರವಾಗಿ ಸಹಕರಿಸಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ನೆರೆಯ ಸೌದಿ ಅರೇಬಿಯಾಕ್ಕೆ ಕರೆ ನೀಡಿದರು.
ರಿಯಾದ್: ಇಲ್ಲಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ ಉಭಯ ದೇಶಗಳ ಉದ್ದಿಮೆದಾರರ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಉಪಖಂಡದಲ್ಲಿ ಶಾಂತಿ ಸ್ಥಾಪನೆಯೂ ವ್ಯಾಪಾರ-ಸಹಕಾರದಷ್ಟೇ ಮುಖ್ಯ ಆಗಿದೆ’ ಎಂದರು.
ಭಾರತವು ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಯೋತ್ಪಾದಕರು ನಡೆಸಿರುವ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ಈ ಕರೆ ನೀಡಿದರಾದರೂ ಯಾವ ಸಂಘಟನೆಯ ಹೆಸರನ್ನು ಪ್ರಸ್ತಾಪಿಸಲಿಲ್ಲ.ಸೌದಿ-ಭಾರತ ನೆರೆಹೊರೆಯ ಮಿತ್ರರಾಷ್ಟ್ರಗಳು ನೂರಾರು ವರ್ಷಗಳಿಂದ ನಮ್ಮ ಸಂಬಂಧ ಬೆಳೆದು ಬಂದಿದೆ. ಎಲ್ಲ ಕ್ಷೇತ್ರಗಳಲ್ಲೂ ಸ್ನೇಹ-ಸಹಕಾರ ಬಲಪಡಿಸುವ ಮೂಲಕ ಮತ್ತಷ್ಟು ಹತ್ತಿರಕ್ಕೆ ಬರಬೇಕೆಂದು ಹೇಳಿದರು.
ಸೌದಿ ಹೂಡಿಕೆದಾರರಿಗೆ ಭಾರತದ ಬಾಗಿಲು ತೆರೆದಿದೆ. ನಿರ್ಮಾಣ, ಯಂತ್ರೋಪಕರಣ, ಔಷಧ, ಆರೋಗ್ಯ, ಕೃಷಿ., ಇಂಧನ, ದೂರ ಸಂಪರ್ಕ, ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಶಿಕ್ಷಣ ಮತ್ತು ನೈಪುಣ್ಯತೆ ಅಭಿವೃದ್ಧಿ ಎರಡೂ ದೇಶಗಳ ಪ್ರಾಥಮಿಕ ಅಗತ್ಯವಾಗಿದ್ದು, ಇಂಥ ಹೊಸ ಕ್ಷೇತ್ರಗಳಲ್ಲಿ ಸಹಕಾರ ಹೊಂದುವುದು ಅನಿವಾರ್ಯವಾಗಿದೆ. ಜ್ಞಾನ ಆದಾರಿತ ಉದ್ದಿಮೆಗಳಿಗೆ ಭಾರತ ಹೆಸರಾಗಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ, ವಿಜ್ಞಾನ-ತಂತ್ರಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ನೈಪುಣ್ಯತೆ ವಿನಿಮಯಕ್ಕೆ ನಾವು ಸಿದ್ಧರಾಗಿದ್ದೇವೆ ಎಂದರು.
ಕಳೆದ ವರ್ಷ ಭಾರತ ಮತ್ತು ಸೌದಿ ದ್ವಿ ಪಕ್ಷೀಯ ವ್ಯಾಪಾರ ವಹಿವಾಟು 25 ಶತಕೋಟಿ ಅಮೆರಿಕ ಡಾಲರ್ಗೆ ತಲುಪಿದೆ. ಸೌದಿಯಲ್ಲಿ ಭಾರತದ ಹೂಡಿಕೆ 2 ಶತಕೋಟಿ ಅಮೆರಿಕ ಡಾಲರ್ಗೆ ತಲುಪಿದೆ. ಇದು ಸುಮಾರು 500 ಉದ್ದಿಮೆಗಳನ್ನು ಒಳಗೊಂಡಿದೆ ಎಂದರು.
ವ್ಯಾಪಾರ ಮತ್ತು ಹೂಡಿಕೆಗೆ ಎರಡೂ ದೇಶಗಳಲ್ಲಿ ಉತ್ತಮ ವಾತಾವರಣ ಇದೆ. ದುಪ್ಪಟ್ಟು ತೆರಿಗೆ ತಪ್ಪಿಸುವುದು ಹಾಗೂ ದ್ವಿ ಪಕ್ಷೀಯ ಹೂಡಿಕೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಂಟು ಸಲ ಜಂಟಿ ಸಮಿತಿ ಸಭೆ ನಡೆದಿದೆ ಎಂದು ಸಿಂಗ್ ವಿವರಿಸಿದರು.
ಭಾರತ-ಕೊಲ್ಲಿ ರಾಷ್ಟ್ಟ್ರಗಳ ಸಹಕಾರ ಮಂಡಳಿಯು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ನಡೆಸಿರುವ ಮಾತುಕತೆ ಪ್ರಗತಿಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಭಾರತದ ಒಟ್ಟಾರೆ ಆಂತರಿಕ ಉಳಿತಾಯ ಪ್ರಮಾಣ ಏರಿಕೆಯಾಗಿದೆ. ಜಿಡಿಪಿಯ ಶೇ 38ರಷ್ಟು ಹೂಡಿಕೆ ಪ್ರಮಾಣ ಬೆಂಬಲಿಸುವ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಸ್ಪಷ್ಟಪಡಿಸಿದರು. ನಮ್ಮ ಆರ್ಥಿಕ ಪ್ರಗತಿ ಗಣನೀಯ ಆಗಿದೆ. ಕಳೆದ ಕೆಲವು ವರ್ಷಗಳಲ್ಲಿ ಆರ್ಥಿಕ ಪ್ರಗತಿ ಸರಾಸರಿ ಶೇ 9ರಷ್ಟು ದಾಖಲಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7ರಷ್ಟು ಪ್ರಗತಿ ದಾಖಲಿಸಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಪುನಃ ಶೇ 9ರ ಪ್ರಮಾಣ ಮುಟ್ಟುವ ನಿರೀಕ್ಷೆ ಇದೆ ಎಂದರು.
ಸೌದಿಯ ಆರ್ಥಿಕ ಪರಿಸ್ಥಿತಿ 1990ರ ಬಳಿಕ ಸಾಕಷ್ಟು ಸಮೃದ್ಧವಾಗಿದೆ. ಇಂಧನೇತರ ವಲಯದ ಕಡೆಗೂ ಗಮನ ಹರಿಸಿರುವುದರಿಂದ ಯುವ ಪೀಳಿಗೆಗೆ ಉದ್ಯೋಗಾಕಾಶ ದೊರೆಯುತ್ತಿದೆ ಎಂದು ಪ್ರಧಾನಿ ನುಡಿದರು.ಇಂಧನ ಪೂರೈಕೆಯಲ್ಲಿ ಸೌದಿ ನಮಗೆ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ. ಇದರ ಆಚೆಯೂ ನಮ್ಮ ಸಂಬಂಧ ಬೆಳೆಯಬೇಕಿದೆ. ಇಂಧನ- ನೈಸರ್ಗಿಕ ಅನಿಲ ಯೋಜನೆಗಳಲ್ಲಿ ಹೂಡಿಕೆಗೆ ನಮ್ಮ ಉದ್ದಿಮೆದಾರರು ಆಸಕ್ತಿ ಹೊಂದಿದ್ದಾರೆ ಎಂದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-01 00:00:00
|
|
|