| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಬೆಲೆ ನಿಯಂತ್ರಣ ಶೀಘ್ರ: ಪ್ರಣವ್ ಆಶಾವಾದ |
ಪ್ರಕಟಿಸಿದ ದಿನಾಂಕ : 2010-02-09
ಕೋಲ್ಕತಾ, ಫೆ.೮: ಆಹಾರದುಬ್ಬರ ದರವು ಶೇ.೧೭ನ್ನೂ ಮೀರಿರುವಂತೆಯೇ ಸೋಮವಾರ ಹೇಳಿಕೆಯೊಂದನ್ನು ನೀಡಿದ ಕೇಂದ್ರ ಸರಕಾರವು, ಬೆಲೆ ಪರಿಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದ್ದು, ಅಗತ್ಯ ವಸ್ತುಗಳ ಬೆಲೆಗಳು ಶೀಘ್ರವೇ ನಿಯಂತ್ರಣಕ್ಕೆ ಬರಲಿದೆಯೆಂಬ ಆಶಾಭಾವ ವ್ಯಕ್ತಪಡಿಸಿವೆ.
ಬೆಲೆಯೇರಿಕೆ ನಿಯಂತ್ರಣದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಗತ್ಯ ವಸ್ತುಗಳ ಬೆಲೆಗಳು ಶೀಘ್ರವೇ ಇಳಿಯಲಿವೆಯೆಂಬ ಆಶಾಭಾವವನ್ನು ತಾನು ಹೊಂದಿದ್ದೇನೆ ಎಂದು ಇಲ್ಲಿನ ಏಶ್ಯಾಟಿಕ್ ಸೊಸೈಟಿಯಲ್ಲಿ ಇಂದಿರಾ ಗಾಂಧಿ ಸ್ವರ್ಣ ಫಲಕ ಸ್ವೀಕರಿಸಿದ ಬಳಿಕ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದರು.
ಬೇಡಿಕೆ ಮತ್ತು ಪೂರೈಕೆಯ ನಡುವೆ ಅಸಮತೋಲನವಿದೆ. ಕೇಂದ್ರ ಈ ಬಗ್ಗೆ ಗಮನ ಹರಿಸಿದೆ. ಕೆಲವರು ಇದರ ಲಾಭ ಗಳಿಸುತ್ತಿದ್ದಾರೆ. ಬೇಡಿಕೆ ಹಾಗೂ ಪೂರೈಕೆಯ ನಡುವೆ ಸಮತೋಲನ ಸಾಧಿಸಲು ಪೂರೈಕೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಸರಕಾರ ಕೈಗೊಂಡಿದೆಯೆಂದು ಅವರು ತಿಳಿಸಿದರು.
ಸಮಿತಿಯೊಂದನ್ನು ರಚಿಸಲಾಗಿದ್ದು, ಬೆಲೆ ಪರಿಸ್ಥಿತಿಯ ಪರಿಶೀಲನೆ ನಡೆಯುತ್ತಿದೆಯೆಂದು ಮುಖರ್ಜಿ ಹೇಳಿದರು.
ಬೆಲೆಯೇರಿಕೆ ತಡೆಯಲು ಪಡಿತರ ವಿತರಣೆ ಸುಧಾರಣೆ ಸಹಿತ ಅನೇಕ ಕ್ರಮಗಳ ಬಗ್ಗೆ ಸಲಹೆ ನೀಡಲು ಕೇಂದ್ರ ಹಣಕಾಸು, ಆಹಾರ ಮತ್ತು ಕೃಷಿ ಸಚಿವರು ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರು ಸಹಿತ ೧೦ ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ಸಮಿತಿಯೊಂದನ್ನು ಕೇಂದ್ರ ಸರಕಾರ ಶನಿವಾರ ಪ್ರಕಟಿಸಿದೆ.
ಕೇಂದ್ರವು ಆಮದು ಸಡಿಲಿಕೆ ಹಾಗೂ ಸುಂಕ ರದ್ದತಿಗಳಂತಹ ಕೆಲವು ದೃಢ ಕ್ರಮಗಳನ್ನು ಕೈಗೊಂಡಿದೆ. ಸರಕಾರದ ಕ್ರಮಗಳ ಲಾಭ ಜನಸಾಮಾನ್ಯರಿಗೆ ತಲುಪುವಂತೆ ಪಡಿತರ ವ್ಯವಸ್ಥೆಯನ್ನು ಸಂಪೂರ್ಣ ವಾಗಿ ಸುಧಾರಿಸಲಾಗುತ್ತಿದೆ ಎಂದು ಏಶ್ಯಾಟಿಕ್ ಸೊಸೈಟಿಯ ಯೋಜನಾ ಮಂಡಳಿಯ ಅಧ್ಯಕ್ಷರೂ ಆಗಿರುವ ಮುಖರ್ಜಿ ನುಡಿದರು.
ಕಳೆದ ವರ್ಷ ಶೂನ್ಯದಲ್ಲಿದ್ದ ಹಣದುಬ್ಬರ ಡಿಸೆಂಬರ್ನಲ್ಲಿ ಶೇ.೭ನ್ನು ದಾಟಿದ್ದು ಮಾರ್ಚ್ ವೇಳೆ ಶೇ.೮.೫ನ್ನು ತಲುಪುವ ನಿರೀಕ್ಷೆಯಿದೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-09 00:00:00
|
|
|
|
|