ಶ್ರೀನಗರ, ಫೆ.೮: ಇಲ್ಲಿಂದ ೭೦ ಕಿ.ಮೀ. ದೂರದ ಖಿಲನ್ ಮಾರ್ಗ್ ಎಂಬಲ್ಲಿ ಚಳಿಗಾಲದ ಯುದ್ಧ ಶಿಬಿರವೊಂದನ್ನು ರಚಿಸುತ್ತಿದ್ದ ೩೫೦ ಸೈನಿಕರ ತಂಡವೊಂದು ನೀರ್ಗಲ್ಲ ಪ್ರವಾಹಕ್ಕೆ ಸಿಲುಕಿ ಒಬ್ಬ ಅಧಿಕಾರಿ ಸಹಿತ ಕನಿಷ್ಠ ೧೩ ಸೇನಾ ಸಿಬ್ಬಂದಿ ಮೃತರಾಗಿದ್ದು, ಇತರ ೧೫ ಮಂದಿಗೆ ಗಂಭೀರ ಗಾಯಗಳಾಗಿವೆ.
ಹಲವರು ಕಾಣೆಯಾಗಿದ್ದು, ರಕ್ಷಣಾ ತಂಡಗಳು ಹಿಮದಾಳ್ದಲ್ಲಿ ಅವರಿಗಾಗಿ ಶೋಧ ನಡೆಸುತ್ತಿವೆ. ಇದುವರೆಗೆ ೭೦ ಯೋಧರನ್ನು ರಕ್ಷಿಸಲಾಗಿದೆ ಎಂದು ಸೇನಾ ವಕ್ತಾರ ಕ|ಜೆ.ಎಸ್.ಬ್ರಾರ್ ತಿಳಿಸಿದ್ದಾರೆ.
ಬಲಿಯಾದ ಸೇನಾಧಿಕಾರಿಯನ್ನು ಲೆ| ಪ್ರತೀಕ್ ಎಂದು ಗುರುತಿಸಲಾಗಿದ್ದು, ಉಳಿದ ೧೨ ಮಂದಿ ವಿವಿಧ ಹುದ್ದೆಗಳಿಗೆ ಸೇರಿದವರಾಗಿದ್ದರು. ಅವರೆಲ್ಲ ಸೇನೆಯ ಗೌರವಾನ್ವಿತ ಅತಿ ಎತ್ತರದ ಸೈನಿಕ ಶಾಲೆಗೆ ಸೇರಿದವರಾಗಿದ್ದರೆಂದು ಅವರು ಹೇಳಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಗುಲ್ಮಾರ್ಗ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಮಾರು ೩೫೦ ಸೈನಿಕರ ಗುಂಪೊಂದು ಇಂದು ಮುಂಜಾನೆ ೮ ಗಂಟೆಯ ವೇಳೆ ಗುಲ್ಮಾರ್ಗ್ನಿಂದ ಹೊರಟು ಅಲ್ಲಿಂದ ೮ ಕಿ.ಮೀ. ದೂರದ, ಸಮುದ್ರ ಮಟ್ಟದಿಂದ ೧೦ ಸಾವಿರ ಅಡಿ ಎತ್ತರದ ಖಿಲನ್ಮಾರ್ಗಗೆ ಚಳಿಗಾಲದ ಯುದ್ಧ ತರಬೇತಿ ಶಿಬಿರ ಸ್ಥಾಪಿಸುವುದಕ್ಕಾಗಿ ಹೋಗಿದ್ದ ವೇಳೆ ಈ ಭೀಕರ ದುರಂತ ಸಂಭವಿಸಿದೆ.