| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
‘ವಿಮರ್ಶೆ’ ಸಾಹಿತ್ಯ ಚಟುವಟಿಕೆ ಅಲ್ಲ; ಹೋರಾಟದ ಭಾಗ: ಕಿ.ರಂ. ನಾಗರಾಜ್: ಡಾ. ರಾಜೇಂದ್ರ ಚೆನ್ನಿ ಅವರಿಗೆ 2010ನೆ ಸಾಲಿನ ಜಿಎಸ್ಸೆಸ್ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-02-08
ಬೆಂಗಳೂರು, ಫೆ.೭: ವಿಮರ್ಶೆ ಕೇವಲ ಸಾಹಿತ್ಯ ಚಟುವಟಿಕೆ ಅಲ್ಲ. ಅದೊಂದು ಹೋರಾಟದ ಭಾಗ. ವಿಮರ್ಶೆ ಒಟ್ಟು ಸಾಹಿತ್ಯ ಅಲ್ಲ. ಸಾಹಿತ್ಯದ ಒಂದು ಭಾಗ ಎಂದು ವಿಮರ್ಶಕ ಕಿ.ರಂ. ನಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಡಾ. ಜಿಎಸ್ಎಸ್ ವಿಶ್ವಸ್ಥ ಮಂಡಳಿ ಸಾಹಿತ್ಯ ಪರಿಷತ್ನಲ್ಲಿ ಹಮ್ಮಿಕೊಂಡಿದ್ದ ಡಾ. ಜಿಎಸ್ಸೆಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ೨೦೧೦ನೆ ಸಾಲಿನ ಪ್ರಶಸ್ತಿಯನ್ನು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅವರಿಗೆ ನೀಡಲಾಗಿದೆ.
ವಿಮರ್ಶಕರಿಗೆ ವಿಮರ್ಶೆ ಅತ್ಯಂತ ಪ್ರಿಯ ಆದ್ದರಿಂದ ಅವರು ವಿಮರ್ಶೆ ಮಾಡುತ್ತಾರೆ. ತಾವು ಬರೆದದ್ದು ಪರಿಪೂರ್ಣ ಎಂಬ ಭಾವನೆ ಲೇಖಕರಲ್ಲಿ ಇರುವುದರಿಂದ ಅನೇಕ ಸಂದರ್ಭಗಳಲ್ಲಿ ಲೇಖಕರು ವಿಮರ್ಶಕರ ಮೇಲೆ ಹರಿಹಾಯುತ್ತಾರೆ. ವಿಮರ್ಶಕರ ಬಗ್ಗೆ ಆಗಾಗ ಉಗ್ರ ದೋರಣೆ ಲೇಖಕರಿಂದ ಕಂಡು ಬರುತ್ತದೆ. ಇದಕ್ಕೆ ವಿಮರ್ಶಕರು ಹೆದರಬೇಕಾದ ಅಗತ್ಯವಿಲ್ಲ. ಲೇಖಕರು ಬರೆದ ಹಾಗೆಯೇ ತಿಳಿದುಕೊಳ್ಳಬೇಕೆಂಬ ಸಿದ್ದ ನಿಯಮವೇನಿಲ್ಲ. ವಿಮರ್ಶಕನಿಗೆ ತನ್ನದೇ ಆದ ನಿಲವು-ನೋಟ ಇರುತ್ತದೆ ಎಂದು ಅವರು ಹೇಳಿದರು.
ಸಾಹಿತ್ಯದ ಸಂದರ್ಭದಲ್ಲಿ ಅನೇಕರು ಲೇಖಕರ ಜೊತೆಗೆ ವಿಮರ್ಶಕರಾಗಿದ್ದಾರೆ. ಅದಕ್ಕೂ ಮುಂದುವರೆದು ಸಾಹಿತ್ಯ ತತ್ವಶಾಸ್ತ್ರಜ್ಞರಾಗಿದ್ದಾರೆ. ಈಗಿನ ಕಾಲದಲ್ಲಿ ವಿಮರ್ಶಗೆ ಬಹಳ ಆಕರ್ಷಣೆ ಇದೆ. ಅದರ ಜೊತೆಗೆ ವಿಮರ್ಶೆ ಸಾಹಿತ್ಯಕ ಬೇಡಿಕೆಯಾಗಿದೆ. ಸಾಹಿತ್ಯ ವಿಮರ್ಶೆ ಸಾಂಸ್ಕೃತಿಕ ವೈರುದ್ಯಗಳನ್ನು ಮೀರಿ ನಿಲ್ಲಬೇಕು. ಸಾಮಾಜಿಕ ಲೋಕದ ಪಲ್ಲಟಗಳನ್ನು ಪ್ರಶ್ನಿಸಿಸುವುದು ವಿಮರ್ಶೆಯ ಬಹಳದೊಡ್ಡ ಜವಾಬ್ದಾರಿ ಎಂದು ಅವರು ಒತ್ತಿ ಹೇಳಿದರು.
ಸಾಹಿತ್ಯ ಕೃತಿಗಳ ಅಥವಾ ಲೇಖಕರ ಬರಹಗಳ ಕುರಿತು ವಿಶ್ಲೇಷಣೆ ಮಾಡುವುದು ಮಾತ್ರ ವಿಮರ್ಶೆ ಅಲ್ಲ. ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವಿಷಯಗಳ ಕುರಿತು ಸೂಕ್ಷ್ಮ ದೃಷ್ಠಿಕೋನ ಹೊಂದುವುದು ನಿಜವಾದ ವಿಮರ್ಶೆ. ಸಾಹಿತ್ಯ ವಿಮರ್ಶೆಯನ್ನು ಸಾಂಸ್ಕೃತಿಕ ಜಿಜ್ಞಾಸೆಗೊಳಪಡಿಸಿದಾಗ ವಿಮರ್ಶೆಯ ಸ್ಥಾಪಿತ ನಿಯಮಗಳನ್ನು ಮೆಟ್ಟಿ ನಿಲ್ಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ಸಾಹಿತಿ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ವಹಿಸಿದ್ದರು. ಪ್ರಶಸ್ತಿ ಪುರಸ್ಕೃತ ಡಾ. ರಾಜೇಂದ್ರ ಚೆನ್ನಿ, ಜಿಎಸ್ಎಸ್ ವಿಶ್ವಸ್ಥ ಮಂಡಳಿ ಅಧ್ಯಕ್ಷ ಡಾ. ಕೆ.ಮರುಳಸಿದ್ದಪ್ಪ ಹಾಗೂ ಕಾರ್ಯದರ್ಶಿ ಡಾ. ಎಚ್.ಎಸ್.ವೆಂಕಟೇಶ್ಮೂರ್ತಿ ಉಪಸ್ಥಿತ ರಿದ್ದರು.
ಸಾಂಸ್ಕೃತಿಕ ಭ್ರಷ್ಟತೆಯನ್ನು ಪ್ರಶ್ನಿಸಬೇಕು
ಇಂದಿನ ಆಲೋಚನಾ ವಿಧಾನಗಳು ಸಾಹಿತ್ಯ ಲೋಕವನ್ನು ತತ್ತರಗೊಳಿಸಿವೆ. ರಾಜಕೀಯ ಸ್ವೇಚ್ಛೆಗೆ ಬದ್ದವಾಗಿರುವ ಹಿಂದುತ್ವವನ್ನು ಎತ್ತಿ ಹಿಡಿಯಬೇಕೆಂಬ ಕಲ್ಪನೆ ಅತ್ಯಂತ ಅಮಾನಯ. ಫ್ಯಾಸಿಸಂಗೆ ಪರಂಪರೆ, ಸಾಹಿತ್ಯ, ಭಾಷೆ ಬೇಕಾಗಿಲ್ಲ. ಅದರ ನಕಲು ರೂಪಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಭ್ರಮಾಲೋಕ ಸೃಷ್ಠಿಸಲಾಗುತ್ತದೆ. ತಮಗೆ ಬೇಕಾದ ತತ್ವಗಳನು ಕಟ್ಟಿ ಅದಕ್ಕೆ ಬದ್ದರಾಗಲಿಕ್ಕೆ ಭಯಭೀತ ವಾತವರಣ ಸೃಷ್ಠಿ ಮಾಡಿ ಅದನ್ನು ನಿಜವಾದ ತತ್ವ ಎಂದು ಬಿಂಬಿಸಲಾಗುತ್ತದೆ.
ಧರ್ಮಶ್ರದ್ದೆ ರಾಜಕೀಯ ಕ್ಷೇತ್ರದ ಪ್ರಬಲ ಅಸ್ತ್ರವಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಅದು ಅತ್ಯಂತ ಸೂಕ್ಷ್ಮವಾಗಿ ಮತ್ತು ಅಷ್ಟೆ ವೇಗವಾಗಿ ನುಸುಳುತ್ತಿದೆ. ಎಲ್ಲೂ ಇದ್ದ ವಿವೇಕಾನಂದನನ್ನು ಎತ್ತಿಕಟ್ಟಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಲು ಪ್ರಯತ್ನಿಸಲಾಯಿತು. ವಿವೇಕಾನಂದರ ತತ್ವಗಳ ಪ್ರಚಾರದ ಬಗ್ಗೆ ಆಷ್ಟೊಂದು ಕಾಳಜಿ ಇದ್ದಿದ್ದರೆ, ವಿವೇಕಾನಂದ ಮತ್ತು ಪರಮಹಂಸರ ಬಗ್ಗೆ ಕುವೆಂಪು ಬರೆದ ಪುಸ್ತಕಗಳನ್ನು ಹಂಚಬೇಕಾಗಿತ್ತು.
೫೦೦ ವರ್ಷದ ಹಿಂದಿನ ಪಟ್ಟಾಭಿಷೇಕದ ವೈಭವ ನೋಡುವ ಕಾಲದಲ್ಲಿ ನಾವಿದ್ದೇವೆ. ಅನಗತ್ಯ ವೈಭವದ ಕಥನ ಬೆಳೆಸುವುದರಿಂದ ಮುಂದಿನ ಪೀಳಿಗೆಗ ಯಾವ ಸಂದೇಶ ನೀಡುತ್ತಿದ್ದವೆ. ನೆರೆಯವರು ಪ್ರವಾಹದಿಂದ ತತ್ತರಿಸುರುವಾಗ, ಸರಕಾರಿ ಶಾಲೆಗಳು ದುಸ್ಥಿತಿಯಲ್ಲರುವಾಗ, ಆರೋಗ್ಯ ಕೇಂದ್ರಗಳ ಅವ್ಯವಸ್ಥೆಯ ಆಗರವಾಗಿರುವಾಗ, ಲಕ್ಷಾಂತರ ಮಕ್ಕಳು ಪೌಷ್ಠಿಕ ಆಹಾರವಿಲ್ಲದೆ ನರಳುತ್ತಿರುವಾಗ ಇಂತಹ ವೈಭವ ನಡೆದದ್ದು ಯಾಕೆ ವಿಮರ್ಶೆಗೊಳಗಾಗಬಾರದು? ಎಂದು ಪ್ರಶ್ನಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-08 00:00:00
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|