| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಕುದುರೆಮುಖ ರಾಷ್ಟ್ರೀಯ ಉದ್ಯಾನವನಮೂಲ ನಿವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಆರಂಭ: ಅರಣ್ಯ ಇಲಾಖೆಯಿಂದ ಸರ್ವೆ; ಅಮಿಷ ಒಡ್ಡಿ ದಾರಿ ತಪ್ಪಿಸುವ ಪ್ರಯತ್ನ; ಪರಿಹಾರ ಕಾರ್ಯದಲ್ಲಿ ದಲ್ಲಾಳಿಗಳು |
ಪ್ರಕಟಿಸಿದ ದಿನಾಂಕ : 2010-02-08
ಬೆಳ್ತಂಗಡಿ, ಫೆ.೭: ನಕ್ಸಲ್ ಪ್ರಭಾವಿತ ಪ್ರದೇಶವೆಂದು ಘೋಷಿಸಲಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಿವಾಸಿಗಳನ್ನು ಅರಣ್ಯದಿಂದ ಹೊರಗೆ ಕಳುಹಿಸುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಮುಂದುವರಿದಿದ್ದು, ಅಲ್ಲಿನ ಮೂಲ ನಿವಾಸಿಗಳ ಮೇಲೆ ವಿವಿಧ ರೀತಿಯ ಒತ್ತಡಗಳನ್ನು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಅಲಂಬ ಕುರಿಯಾಡಿ ಗ್ರಾಮಸ್ಥರು ಆರೋಪಿಸಿದ್ದಾರೆ. ವಿವಿಧ ರೀತಿಯ ಅಮಿಷಗಳನ್ನು ಒಡ್ಡಿ ಅವರನ್ನು ಹೊರಗೆ ಕಳುಹಿಸಲು ಪ್ರಯತ್ನಿಸಲಾಗುತ್ತಿದೆ. ನಾರಾವಿ ಗ್ರಾ.ಪಂ. ವ್ಯಾಪ್ತಿಯ ಕುತ್ಲೂರು ಗ್ರಾಮದ ಅಲಂಬ ಕುರಿಯಾಡಿ ಪರಿಸರದಲ್ಲಿ ಸುಮಾರು ಏಳು ಕುಟುಂಬಗಳು ತಮ್ಮ ಭೂಮಿಯನ್ನು ಬಿಟ್ಟು ಹೊರಗೆ ಹೋಗಲು ಒಪ್ಪಿರುವುದಾಗಿ ತಿಳಿದು ಬಂದಿದ್ದು, ಶನಿವಾರ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳು ಈ ಪ್ರದೇಶಗಳಿಗೆ ತೆರಳಿ ಸರ್ವೇ ಕಾರ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇಲಾಖೆಯವರು ಸರ್ವೇ ಕಾರ್ಯ ನಡೆಸುತ್ತಿದ್ದರೂ ಜನರಿಗೆ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿಯಿಲ್ಲವಾಗಿದೆ. ಈಗಾಗಲೇ ಅರಣ್ಯದಿಂದ ಹೊರಹೋಗುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿರುವ ಸುರೇಶ ಎಂಬವರ ಮನೆಗೆ ತೆರಳಿ ಅವರನ್ನು ಮಾತನಾಡಿಸಿದಾಗ ಅವರು ಸಂಪೂರ್ಣ ಗೊಂದಲದಲ್ಲಿರುವುದು ಕಂಡು ಬಂತು. ಮೊದಲು ಸ್ಥಳೀಯರಾದ ರಾಮಚಂದ್ರ ಭಟ್ ಹತ್ತು ಲಕ್ಷಕ್ಕಿಂತ ಹೆಚ್ಚು ಪರಿಹಾರ ಕೊಡಿಸುತ್ತೇನೆ ಅರಣ್ಯದಿಂದ ಹೊರಗೆ ಹೋಗಿ ಎಂದು ಹೇಳಿದ್ದರು. ಆ ಹಿನ್ನೆಲೆಯಲ್ಲಿ ಒಪ್ಪಿಕೊಂಡಿದ್ದೆವು. ಇದೀಗ ಕೃಷಿಯ ಆಧಾರದ ಮೇಲೆ ಪರಿಹಾರ ನೀಡುವುದಾಗಿ ಹೇಳಿ ಅಧಿಕಾರಿಗಳು ಬರುತ್ತಿದ್ದಾರೆ. ಎಷ್ಟು ಪರಿಹಾರ ನೀಡುತ್ತಾರೆ ಎಂಬುದೇ ಸ್ಪಷ್ಟವಿಲ್ಲದಾಗ ಹೊರಗೆ ಹೋಗುವುದಾದರು ಹೇಗೆ ಎಂದು ಪ್ರಶ್ನಿದ್ದಾರೆ ಸುರೇಶ್ರ ಪತ್ನಿ ಪದ್ಮಾವತಿ. ಕೇಂದ್ರ ಸರಕಾರ ಈಗಾಗಲೇ ಮೂಲ ನಿವಾಸಿಗಳಿಗೆ ಅವರು ಇರುವಲ್ಲಿಯೇ ಹಕ್ಕುಪತ್ರ ನೀಡಲು ಯೋಜನೆ ರೂಪಿಸಿರುವಾಗ ಇಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆಯುತ್ತಿರುವುದು ಕಂಡು ಬರುತ್ತದೆ. ಸ್ವಇಚ್ಛೆಯಿಂದ ಅರಣ್ಯದಿಂದ ಹೊರಗೆ ಹೋಗುವವರಿಗಾಗಿ ಈ ಪ್ಯಾಕೇಜ್ ಇದೆ. ಆದರೆ ಬೆಳ್ತಂಗಡಿಯಲ್ಲಿ ವಿವಿಧ ಅಮಿಷಗಳನ್ನು ಒಡ್ಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದೆ. ಈ ಯೋಜನೆ ರಾಷ್ಟ್ರೀಯ ಉದ್ಯಾನವನದ ಮೂಲ ನಿವಾಸಿಗಳಲ್ಲಿ ಹಲವು ರೀತಿಯ ಗೊಂದಲಗಳಿಗೆ ಕಾರಣವಾಗಿದೆ. ಮುಖ್ಯವಾಗಿ ಸರಕಾರದ ಯೋಜನೆಯ ಬಗೆಗೆ ಹೇಳಲು ಸರಕಾರಿ ಅಧಿಕಾರಿಗಳು ಬಾರದೆ ಖಾಸಗಿ ವ್ಯಕ್ತಿಯೋರ್ವ ಬರುತ್ತಿರುವುದು ಜನರಲ್ಲಿ ಅನುಮಾನಗಳು ಮೂಡಲು ಕಾರಣವಾಗಿದೆ. ಇಂತಹ ಯೋಜನೆಯಿದ್ದರೆ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯವರು ಎಲ್ಲರನ್ನು ಕರೆದು ಅದರ ಬಗೆಗೆ ಹೇಳಲಿ ಎಂಬುದು ಇಲ್ಲಿನ ನಿವಾಸಿಗಳ ಒತ್ತಾಯ.
ಮೂಲನಿವಾಸಿಗಳಲ್ಲಿ ಒಡಕು ಮೂಡಿಸಿ ಅವರನ್ನು ಅರಣ್ಯದಿಂದ ಹೊರತಳ್ಳುವ ವ್ಯವಸ್ಥಿತ ಪ್ರಯತ್ನದ ಭಾಗವಾಗಿ ಇದೀಗ ಪರಿಹಾರ ನೀಡುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಎಂಬ ಆರೋಪ ಕೇಳಿ ಬರುತ್ತಿದೆ. ಪರಿಹಾರ ನೀಡುವ ಪ್ರಕ್ರಿಯೆಗೆ ಮುಂದಾಗಲು ಹೊರಗಿನ ವ್ಯಕ್ತಿಗೆ ಅಧಿಕಾರ ನೀಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆಯುತ್ತಿಲ್ಲ. ಇದೀಗ ಪುನರ್ವಸತಿ ಯೋಜನೆಯ ಹಿನ್ನೆಲೆಯಲ್ಲಿ ರೂಪಗೊಂಡಿರುವ ಗೊಂದಲಗಳು ನಿವಾರಣೆಯಾಗುವಂತೆ ತೋರುತ್ತಿಲ್ಲ. ಕಳೆದ ಕೆಲ ಸಮಯಗಳಿಂದ ಈ ಪ್ರದೇಶದಲ್ಲಿ ಒಂದಿಷ್ಟು ದುರ್ಬಲಗೊಂಡಿದ್ದ ನಕ್ಸಲೀಯ ಚಟುವಟಿಕೆಗಳು ಮತ್ತೆ ಬಲಗೊಳ್ಳಲು ಅವಕಾಶ ನೀಡುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-08 00:00:00
|
|
|
|
|