| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಗಳೂರು: ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಯಲಿ: ‘ಕೋಮುವಾದ ಮತ್ತು ಭಯೋತ್ಪಾದನೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಸನತ್ಕುಮಾರ್ ಬೆಳಗಲಿ |
ಪ್ರಕಟಿಸಿದ ದಿನಾಂಕ : 2010-02-08
ಮಂಗಳೂರು, ಫೆ.೭: ಕರ್ನಾಟಕದ ಮಟ್ಟಿಗೆ ದ.ಕ. ಜಿಲ್ಲೆ ಸಂಘ ಪರಿವಾರದ ಪ್ರಯೋಗ ಶಾಲೆಯಂತಿದ್ದು, ಇಲ್ಲಿ ಕೋಮುವಾದ ವಿಜೃಂಭಿಸುತ್ತಿದೆ. ಯಾರು ಏನು ಮಾಡಬೇಕು ಮತ್ತು ತಿನ್ನಬೇಕು ಎಂದು ನಿರ್ಧರಿಸುವ ಫ್ಯಾಶಿಸ್ಟ್ ಶಕ್ತಿಗಳ ಅಟ್ಟಹಾಸ ಹೆಚ್ಚುತ್ತಿದೆ. ಪ್ರಗತಿಪರರು ಧ್ವನಿ ಎತ್ತಿದರೆ ನಕ್ಸಲರು ಮತ್ತು ಮುಸ್ಲಿಮರು ಧ್ವನಿ ಎತ್ತಿದರೆ ಭಯೋತ್ಪಾದಕರು ಎಂಬ ಹಣೆ ಪಟ್ಟಿ ಕಟ್ಟಲಾಗುತ್ತದೆ. ಈ ಬಗ್ಗೆ ಭ್ರಮನಿರಸಗೊಳ್ಳದೆ ಎಲ್ಲ ಅನ್ಯಾಯ ಮತ್ತು ಅಕ್ರಮದ ವಿರುದ್ಧ ಹೋರಾಟ ಮುಂದುವರಿಯಬೇಕು ಎಂದು ಹಿರಿಯ ಪತ್ರಕರ್ತ, ಅಂಕಣಗಾರ ಸನತ್ಕುಮಾರ್ ಬೆಳಗಲಿ ಅಭಿಪ್ರಾಯಪಟ್ಟರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ವಿಜ್ಞಾನ ಜ್ಯೋತಿ ಪ್ರಕಾಶನ ನಗರದಲ್ಲಿ ರವಿವಾರ ಏರ್ಪಡಿಸಿದ್ದ ಹಿರಿಯ ವಿಚಾರವಾದಿ ಸಿ.ಎನ್.ಶೆಟ್ಟಿ ಸಂಪಾದಿಸಿದ ‘ಕೋಮುವಾದ ಮತ್ತು ಭಯೋತ್ಪಾದನೆ’ ಕೃತಿಯ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ. ಅವರಿಗೆ ಅಭದ್ರತೆ ಕಾಡುತ್ತಿದೆ. ರಾಜ್ಯ ಗೃಹ ಸಚಿವರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇದರ ವಿರುದ್ಧ ಎಲ್ಲ ಪ್ರಗತಿಪರರು ಜಾಗೃತರಾಗಬೇಕು. ಪ್ರಗತಿಪರರು ಧರ್ಮ ವಿರೋಧಿಗಳು ಎಂಬ ಭಾವನೆ ಕೆಲವರಿಗೆ ಇದೆ. ಆದರೆ, ಪ್ರಗತಿಪರರು ಎಂದೂ ಧರ್ಮ ವಿರೋಧಿಗಳಲ್ಲ. ಮಹಾತ್ಮಾಗಾಂಧಿ, ರಾಮಕೃಷ್ಣ ಪರಮಹಂಸ, ಬಸವಣ್ಣ ರಂತಹ ಮೇಧಾವಿಗಳು ಹೇಳುವ ಧರ್ಮದ ಮಾರ್ಗದಲ್ಲಿ ನಡೆಯೋಣ. ಪ್ರಣ್ ತೋಗಾಡಿಯಾ, ನರೇಂದ್ರ ಮೋದಿ, ಪ್ರಮೋದ್ ಮುತಾಲಿಕ್ರಂತಹವರ ಮಾತನ್ನು ತಿರಸ್ಕರಿಸೋಣ ಎಂದ ಸನತ್, ನವ ಪೀಳಿಗೆ ಈ ಶಕ್ತಿಗಳ ಕಪಿ ಮುಷ್ಠಿಯಿಂದ ದೂರ ಸರಿದಿದೆ ಎಂಬುದಕ್ಕೆ ಇತ್ತೀಚಿನ ಚುನಾವಣೆಗಳಲ್ಲಿ ಜಾತ್ಯತೀತ ಶಕ್ತಿಗಳ ಗೆಲುವು ಸಾಕ್ಷಿಯಾಗುತ್ತಿದೆ ಎಂದು ನುಡಿದರು.
ಕೃತಿಯನ್ನು ಬಿಡಗಡೆಗೊಳಿಸಿದ ಹಿರಿಯ ವಿಚಾರವಾದಿ, ಸಾಹಿತಿ ಕೆ.ಎಸ್.ಭಗವಾನ್‘ ಭಯೋತ್ಪಾದನೆ ಇತ್ತೀಚಿನದ್ದಲ್ಲ. ಅದಕ್ಕೂ ಸಾವಿರಾರು ವರ್ಷಗಳ ಇತಿಹಾಸವಿದೆ. ಬಹುತೇಕ ಧರ್ಮಗಳು ಈ ಭಯೋತ್ಪಾದನೆಗೆ ಅವಕಾಶ ನೀಡಿದ್ದು, ಅದರಿಂದ ಎಲ್ಲರೂ ದೂರವಿದ್ದು,ಮನುಷ್ಯನ ಉಳಿವಿಗೆ ಚಿಂತನೆ ನಡೆಸುವ ಮನಸ್ಸುಗಳಿಗೆ ಗೌರವ ಕೊಡೋಣ’ ಎಂದು ಹೇಳಿದರು.
ಪುಸ್ತಕವನ್ನು ಪರಿಚಯಿಸಿ ಮಾತನಾಡಿದ ಮತ್ತೋರ್ವ ಹಿರಿಯ ಸಾಹಿತಿ, ವಿಚಾರವಾದಿ ಹಾಸನದ ಜ.ಹೋ. ನಾರಾಯಣ ಸ್ವಾಮಿ ‘ವಿಚಾರ ಮತ್ತು ಚಿಂತನೆಗಳಿಗೆ ವಯಸ್ಸಿನ ಮಿತಿಯಿಲ್ಲ. ಈ ಕೃತಿಯನ್ನು ಸಂಪಾದಿಸಿದ ಸಿ.ಎನ್.ಶೆಟ್ಟಿ ವಯಸ್ಸಿನಲ್ಲಿ ಹಿರಿಯರಾದರೂ ತಮ್ಮ ಚಿಂತನೆಗಳಿಂದ ವಿಮುಖರಾಗಬಾರದು. ಒಂದು ಕಾಲದಲ್ಲಿ ಅವರು ಬೆಂಕಿಯಲ್ಲೇ ಬೆಂದಿದ್ದರು. ಇದೀಗ ಆ ಸಂಘಟನೆಯಿಂದ ಹೊರ ಬಂದು ನಮಗೆಲ್ಲರಿಗೂ ಬೆಳಕಾಗುತ್ತಿದ್ದಾರೆ’ ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್, ಸ್ವಾತಂತ್ರ ಹೋರಾಟಗಾರರು ಕಂಡ ಕನಸು ಇಂದು ನುಚ್ಚು ನೂರಾಗುತ್ತಿದೆ. ಆರ್ಎಸ್ಎಸ್ ಎಳೆಯ ಮಕ್ಕಳಿಗೆ ಕೋಮುವಾದದ ಬೀಜ ಬಿತ್ತುತ್ತಿದೆ. ಅದರ ಅಧೀನದಲ್ಲಿರುವ ಇತರ ೮೦ ಸಂಘಟನೆಗಳು ಕೂಡ ಅದೇ ಕೆಲಸವನ್ನು ಮಾಡುತ್ತಿವೆ. ಲಷ್ಕರೆ ತೊಯ್ಬಾ, ಜೈಶೇ ಮುಹಮ್ಮದ್ ಇತ್ಯಾದಿ ಮುಸ್ಲಿಮ್ ಹೆಸರಿನ ಸಂಘಟನೆಗಳು ಇಸ್ರೇಲ್ ರಾಷ್ಟ್ರದ ಕೂಸಾಗಿದ್ದು, ಮುಸ್ಲಿಮ್ ಸಮಾಜದ ಮೇಲೆ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ಅವು ಮುಸ್ಲಿಮ್ ಸಮುದಾಯಕ್ಕೆ ಕೆಟ್ಟ ಹೆಸರನ್ನು ತರುತ್ತಿದೆ. ಇದರ ಹಿಂದೆ ಇಸ್ರೇಲ್ ಮತ್ತು ಆರೆಸ್ಸೆಸ್ ವ್ಯವಸ್ಥಿತ ಷಡ್ಯಂತ್ರವಿದ್ದು, ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ನುಡಿದರು.
ಉಪನ್ಯಾಸಕಿ ಮಂಜುಳ ‘ಮಹಿಳೆಯರು ವಿಚಾರಶೀಲರಾಗಬೇಕು. ಪ್ರಗತಿಪರ ಸಂಘಟನೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಯುವ ಲೇಖಕ ಮತ್ತು ಕೋಮು ಸೌಹಾರ್ದ ವೇದಿಕೆಯ ಕೋಶಾಧಿಕಾರಿ ಇಸ್ಮತ್ ಫಜೀರ್ ಪ್ರಾಸ್ತಾವಿಕ ಮಾತನಾಡಿದರು. ಕೃತಿಯ ಸಂಪಾದಕ ಮತ್ತು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷ ಸಿ.ಎನ್.ಶೆಟ್ಟಿ ಸ್ವಾಗತಿಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕಕ್ಕಿಂಜೆ ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ಮೂಲ್ಕಿ ವಂದಿಸಿದರು.
ಇದೇ ವೇಳೆ ವಿಚಾರವಾದಿ ಸಿ.ಎನ್.ಶೆಟ್ಟಿಯವರನ್ನು ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಸನ್ಮಾನಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-08 00:00:00
|
|
| Ibrahim Hussain, Udipi, Karnataka | 2010-02-09 | | ಜಾತಿಯ ಶಕ್ತಿಗಳನ್ನು ನಿಯಂತ್ರಣದಲ್ಲಿರಿಸಲು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ವಿಜ್ಞಾನ ಜ್ಯೋತಿ ಪ್ರಕಾಶನ ಮುದ್ರಿಸಿದ ಕೋಮುವಾದ ಮತ್ತು ಭಯೋತ್ಪಾದನೆ’ ಕೃತಿಯು ಜನ ಸಾಮನ್ಯರಿಗೂ ತಲಪಲಿ. ಕೋಮುವಾದಿಗಳ ಬಣ್ಣ ಬಯಲಾದಲ್ಲಿ ಸಮಾಜದಲ್ಲಿ ಎಲ್ಲರೂ ಸಹಬಾಳ್ವೆ ಮತ್ತು ಶಾಂತಿಯಿಂದ ಇರಬಹುದು. ಇಂತಹ ಕಾರ್ಯಕ್ರಮಗಳು ಕೋಮು ಸೌಹಾರ್ದತೆಗೆ ನಾಂದಿಯಾಗಲಿ. ನನ್ನ ಸಹಕಾರ ನಿಮ್ಮೊಂಗಿದೆ. |
| ಬದ್ರುದ್ದೀನ್ ಹೆಂತಾರ್, ದುಬೈ | 2010-02-08 | | ಹಿಂದೆ ಕರಾವಳಿಗೆ ಬುದ್ದಿವಂತರ ನಾಡೆಂಬ ಕೀರ್ತಿ ಇತ್ತು ಅದರೆ ಈಗ ಅದೇ ಬುದ್ದಿವಂತರ ಮಕ್ಕಳು ಅಕ್ರಮಿಗಳ ನಾಡೆಂಬ ಹೆಗ್ಗಳಿಕೆಯನ್ನು ಇದೇ ಕರಾವಳಿಗೆ ದೊರಕಿಸಿ ಕೊಟ್ಟಿರುವುದು ಗತಿಸಿ ಹೋದ ಆ ಪುಣ್ಯಾತ್ಮರ ಆತ್ಮಕ್ಕೆ ಎಷ್ಟು ನೋವುಂಟು ಮಾಡಿದೆಯೋ ಅದಕ್ಕಿಂತಲೂ ಹೆಚ್ಹು ಬದುಕುಳಿದ ಶಾಂತಿ ಪ್ರಿಯ ಜನತೆಗೂ ವ್ಯಸನವನ್ನು ನೀಡ್ತಾ ಇದೆ.
ಇಲ್ಲೂ ಕೂಡ ಶಾಂತಿಗಾಗಿ ಹೋರಾಡುವ ಒಂದು ವಿಭಾಗ ಜನರಿದ್ದಾರೆ. ಅವ್ರೀಗೆ ಜಾತಿಗಿಂತಲೂ ಜೀವ ಮುಖ್ಯ.ಹರಿತವಿರುವ ಖಡ್ಗವು ಕೂಡಾ ಇಂತಹ ಶಾಂತಿಪ್ರಿಯ ಜನತೆಯ ಮುಂದೆ ತಲೆ ಬಾಗಿದ ಎಷ್ಟೋ ಚರಿತ್ರೆ ನಮ್ಮ ಮುಂದೆ ಇದೆ.ಕೋಮುವಾದಿ ವಿರುದ್ದ ಹೋರಾಟ ಮುಂದುವರಿಸಿ ನಾಡಿಗೆ ನೆಮ್ಮದಿ ತರುವ ಸಲುವಾಗಿ ನಡೆಸುವ ಎಲ್ಲಾ ಪ್ರಯತ್ನಗಳೀಗೆ ನಮ್ಮೆಲ್ಲರ ಸಹಕಾರ ಖಂಡಿತಾ ಇದೆ.ಈ ಸಂದರ್ಭದಲ್ಲಿ ಶ್ರೀಮಾನ್ ಸನತ್ ಬೆಳಗಲಿ,ಸಿ.ಎನ್ ಶೆಟ್ಟಿ,ಕೆ.ಯಸ್ ಭಗವಾನ್,ನರಾಯಣ ಸ್ವಾಮಿ, ಅನ್ವರ್ ಸಾದಾತ್, ಸುರೇಶ್ ಭಟ್ ಹಾಗೂ ಶ್ರೀಮತಿ ಮಂಜುಳ ರವರನ್ನು ಹೃತ್ಪೂರ್ವಕ ಅಭಿನಂದಿಸುತ್ತೇವೆ.ಅಕ್ರಮಿಗಳು ನಾಶವಾಗಲಿ,ಶಾಂತಿಯು ತಾಂಡವಾಡಲಿ,ಪ್ರೀತಿಯು ಚಿರಾಯುವಾಗಲಿ. ಜೈ ಹಿಂದ್. ಜೈ ಹಿಂದ್, ಜೈ ಹಿಂದ್ |
| elyas muhammad , thumbe, mangalore | 2010-02-08 | | Valuable and useful work by Sri CNShetty. Peace and communal harmony still exist in coastal districts of karnataka because of such kind of peace loving citizens and activists. We are always with you. |
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|