|
ಪ್ರಕಟಿಸಿದ ದಿನಾಂಕ : 2010-02-07
ಇಂಗ್ಲೆಂಡ್, ಅಮೆರಿಕ ಪ್ರವಾಸದಲ್ಲಿ ಕರ್ನಾಟಕದ ಸಾಹಿತಿ ಕಲಾವಿದರ ತಂಡ ಜೊತೆಯಲ್ಲದ್ದಷ್ಟೂ ಕಾಲ ಚಿಂದೋಡಿ ಲೀಲಾ ನಾವು ಮತ್ತು ನಮ್ಮ ಮಿತ್ರ ಪಂಡಿತಾರಾಧ್ಯ ಅವರ ಜೊತೆಗೇ ಹೆಚ್ಚಿನ ಆತ್ಮೀಯತೆಯಿಂದ ಇದ್ದರು; ಸ್ನೇಹದ ಸಂತೋಷವನ್ನು ನೀಡಿದ್ದರು.
ಕನ್ನಡ ವೃತ್ತಿರಂಗಭೂಮಿಯ ರಾಣಿ ಕಲಾವಿದೆ ಎಂಬಂತೆ ಬೆಳಗಿದ ಚಿಂದೋಡಿ ಲೀಲಾ ಅವರ ಬಗ್ಗೆ ಕೇಳಿದ್ದೆ; ಪರಿಚಯವಿರಲಿಲ್ಲ. 2000ರಲ್ಲಿ ಅಮೆರಿಕದ ಹ್ಯೂಸ್ಟನ್ನಲ್ಲಿ ದ್ವಿಸಹಸ್ರಮಾನ ವಿಶ್ವ ಕನ್ನಡ ಸಮ್ಮೇಳನವಾಯಿತು. ಅದೇ ಸಂದರ್ಭಕ್ಕೆ ಹೊಂದಿಕೊಂಡಂತೆ ನಾಲ್ಕು ದಿನ ಮೊದಲು ಇಂಗ್ಲೆಂಡಿನ ಮೆಂಚೆಸ್ಟರಿನಲ್ಲಿಯೂ ಇಂಗ್ಲೆಂಡಿನ ಕನ್ನಡಿಗರು ಕನ್ನಡ ಸಮ್ಮೇಳನ ಮಾಡಿದ್ದರು.
ಎರಡೂ ಸಮ್ಮೇಳನಗಳಿಗೆ ಸರ್ಕಾರ ನನ್ನನ್ನು ಸಾಹಿತಿ ಪ್ರತಿನಿಧಿಯಾಗಿ, ಚಿಂದೋಡಿ ಲೀಲಾ ಅವರನ್ನು ರಂಗಕಲಾವಿದೆಯಾಗಿ ಆಯ್ಕೆಮಾಡಿ ಕಳಿಸಿತ್ತು. ನನ್ನ ಪತ್ನಿ ಮೀರಾ ನಾಯಕ ಮಹಿಳೆ ಸಂಬಂವಾದ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಲು ಆಹ್ವಾನಿರಾಗಿದ್ದರು. ಡಾ ಪಂಡಿತಾರಾಧ್ಯರು ಕನ್ನಡ ಗಣಕ ಸಂಬಂಧವಾದ ಚರ್ಚೆಯ ಗೋಷ್ಠಿಗಳಲ್ಲಿ ಭಾಗವಹಿಸಲು ಆಹ್ವಾನಿತರಾಗಿದ್ದರು.
ಆ ಪ್ರವಾಸದಲ್ಲಿ ಚಿಂದೋಡಿ ಲೀಲಾ ನಮ್ಮೊಡನೆ ತುಂಬು ಆತ್ಮೀಯತೆಯಲ್ಲಿ ನಡೆದುಕೊಂಡದ್ದು ಮರೆಯದ ನೆನಪು. ಅವರ ಜೊತೆ ಅವರ ಸೋದರನ ಮಗ ಶಂಭುಲಿಂಗಪ್ಪನವರು ಬಂದಿದ್ದರು. ಲೀಲಾ ಅವರು ಎಲ್ಲಿಯೂ ಒಮ್ಮೆಯೂ ಅವರ ಕಲಾವಿದೆ ಕೀರ್ತಿಯ ಹಿರಿಮೆಯನ್ನು ತೋರಿಸದೆ ಹರ್ಷಚಿತ್ತರಾಗಿ ನಮ್ಮೊಡನೆ ನಡೆದುಕೊಂಡದ್ದು ಹಿತದ ಅನುಭವ.
ಇಂಗ್ಲೆಂಡ್, ಅಮೆರಿಕಗಳಿಗೆ ವೀಸಾ ಪಡೆಯಲು ಚೆನ್ನೈಗೆ ಹೋಗಬೇಕಾಗಿತ್ತು. ಬೆಂಗಳೂರಿನಿಂದ ಬಸ್ ಮಾಡಿಕೊಂಡು ಹೋಗಿ ಬರಲು ವ್ಯವಸ್ಥೆಯಾಗಿತ್ತು. ವೀಸಾ ಪಡೆದು ತಿರುಗಿ ಬರುವಾಗ ಬಸ್ಸಿನಲ್ಲಿ ಹಾಡುವುದು ಇತ್ಯಾದಿ ಪ್ರಾರಂಭವಾದವು. ನಾನು ಬೇಂದ್ರೆ ಕವನಗಳನ್ನು, ಯಕ್ಷಗಾನದ ಹಾಡುಗಳನ್ನು ಹಾಡಿದ್ದೆ. ಚಿಂದೋಡಿ ಲೀಲಾ ಅವರೂ ನಾಟಕದ ಹಾಡುಗಳನ್ನು ಹಾಡಿದ್ದರು. ಇತರರಲ್ಲಿಯೂ ಒಬ್ಬಿಬ್ಬರು ಹಾಡಿದ್ದರು. ಹಾಡುಗಳ ಬಗ್ಗೆ ಮೆಚ್ಚಿಗೆ ಸೂಚಿಸುತ್ತ ಇನ್ನೊಂದು, ಮತ್ತೊಂದು ಎಂದು ಹೇಳುತ್ತ ನಾನು ಎಲ್ಲರಿಗಿಂತ ಹೆಚ್ಚು ಹಾಡುಗಳನ್ನು ಹಾಡುವುದಕ್ಕೆ ಅವರು ಕಾರಣರಾಗಿದ್ದರು.
ಇಂಗ್ಲೆಂಡಿನಲ್ಲಿ ಕನ್ನಡ ಸಮ್ಮೇಳನ ಮುಗಿದ ಮೇಲೆ ಶೇಕ್ಸ್ಪಿಯರನ ಮನೆ ಹಾಗೂ ವರ್ಡ್ಸ್ ವರ್ತ ನ ಲೇಕ್ ಡಿಸ್ಟ್ರಿಕ್ಟ್ಗಳನ್ನು ನಮಗೆ ತೋರಿಸುವ ವ್ಯವಸ್ಥೆಯನ್ನು ಇಂಗ್ಲೆಂಡಿನ ಕನ್ನಡ ಸಂಘದವರು ಮಾಡಿದ್ದರು. ಆ ಬಸ್ ಪ್ರಯಾಣದಲ್ಲಿಯೂ ನಾನು ಬೇಂದ್ರೆಯವರ ಕವನಗಳನ್ನೂ ಯಕ್ಷಗಾನದ ಹಾಡುಗಳನ್ನೂ ಹಾಡಿದ್ದೆ. ಆಗಲೂ ಚಿಂದೋಡಿ ಲೀಲಾ ಮೆಚ್ಚಿಗೆ ಸೂಚಿಸಿ ನನ್ನನ್ನು ಹಾಡುವಂತೆ ಹುರಿದುಂಬಿಸಿದ್ದರು. ಶಾಸ್ತ್ರೀಯ ಶಿಸ್ತಿನ ತರಬೇತಿ ಇಲ್ಲದ, ನನಗೆ ತಿಳಿದಂತೆ, ನಾನೊಲಿದಂತೆ ಹಾಡಿದ ಆ ಹಾಡುಗಳಿಗೂ ಸಹೃದಯತೆ ತೋರಿದ ಚಿಂದೋಡಿ ಲೀಲಾ ಅವರ ಬಗ್ಗೆ ನನ್ನಲ್ಲಿ ತುಂಬು ಸದ್ಭಾವನೆ ಬೆಳೆದಿತ್ತು.
ಇಂಗ್ಲೆಂಡ್, ಅಮೆರಿಕ ಪ್ರವಾಸದಲ್ಲಿ ಕರ್ನಾಟಕದ ಸಾಹಿತಿ ಕಲಾವಿದರ ತಂಡ ಜೊತೆಯಲ್ಲದ್ದಷ್ಟೂ ಕಾಲ ಚಿಂದೋಡಿ ಲೀಲಾ ನಾವು ಮತ್ತು ನಮ್ಮ ಮಿತ್ರ ಪಂಡಿತಾರಾಧ್ಯ ಅವರ ಜೊತೆಗೇ ಹೆಚ್ಚಿನ ಆತ್ಮೀಯತೆಯಿಂದ ಇದ್ದರು; ಸ್ನೇಹದ ಸಂತೋಷವನ್ನು ನೀಡಿದ್ದರು. ಇಂಗ್ಲೆಂಡಿನ ಬಕಿಂಗ್ಹ್ಯಾಮ್ ಅರಮನೆ ನೋಡಲು ಹೋದಾಗ ಅವರಾಗಿ ಇಷ್ಟಪಟ್ಟು ಕೇಳಿ ನಮ್ಮ ಜೊತೆಯಲ್ಲಿ ಎರಡೊ ಮೂರೊ ಫೋಟೊಗಳನ್ನು ತೆಗೆಸಿಕೊಂಡರು. ನಮ್ಮ ಜೊತೆಗೆ ಈ ಪ್ರವಾಸ ಮಾಡಿದ ನೆನಪಿಗಾಗಿ ಇರಲಿ ಎಂದು ತಿರು ತಿರುಗಿ ಹೇಳಿದ್ದರು.
ಇಂಗ್ಲೆಂಡ್ ಅಮೆರಿಕ ಎರಡೂ ಕಡೆಯ ಕನ್ನಡ ಸಮ್ಮೇಳನಗಳಲ್ಲಿ ಬಣ್ಣ ಹಚ್ಚಿ ಟಿಪ್ಪೂಸುಲ್ತಾನ್, ಕಿತ್ತೂರು ಚೆನ್ನಮ್ಮ ಪಾತ್ರಗಳಲ್ಲಿ ಕಿರುಅವಧಿಯ ಅಭಿನಯ ನೀಡಿ ಲೀಲಾ ಅವರು ರಂಜಿಸಿದ್ದರು. ಇಂಗ್ಲೆಂಡಿನಲ್ಲಿ ಅವರು ಟಿಪ್ಪೂಸುಲ್ತಾನನ ಮೇಕ್ಅಪ್ ಮಾಡಿಕೊಂಡು ಬಂದ ಮೇಲೆಯೂ ರಂಗದ ಮೇಲೆ ಅಭಿನಯಿಸಲು ಬಹಳ ಹೊತ್ತು ಕಾಯಬೇಕಾಯಿತು.
ಅವರು ತಾಳ್ಮೆಯಿಂದ ಪ್ರೇಕ್ಷಕರ ಸಾಲಿನಲ್ಲಿ ಕಾದು ತಮ್ಮ ಅವಧಿ ಬಂದಾಗ ತನ್ಮಯತೆಯಿಂದ ಅಭಿನಯಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಚೆನ್ನಮ್ಮ ಮತ್ತು ವೀರ ಪುರುಷ ಟಿಪ್ಪೂಸುಲ್ತಾನ್ ಪಾತ್ರಗಳನ್ನೇ ಆಯ್ದುಕೊಂಡು ಅವರು ಅಭಿನಯಿಸಿದ್ದು ಕೂಡ ವಿಶೇಷ ಸಂಗತಿ ಯೆ ಆಗಿತ್ತು.
ಇಂಗ್ಲೆಂಡ್, ಅಮೆರಿಕ ದೇಶಗಳ ನಮ್ಮ ಆ ಪ್ರವಾಸದ ಅನಂತರದ ಕಾಲದಲ್ಲಿ ಚಿಂದೋಡಿ ಲೀಲಾ ಅವರ ಕೆಬಿಆರ್ (ಕರಿ ಬಸವ ರಾಜೇಂದ್ರ) ನಾಟಕದ ಕಂಪನಿ ಮೈಸೂರಿಗೆ ಬಂದಿತ್ತು. ಪುರಭವ ನದ ಆವರಣದಲ್ಲಿ ರಂಗಮಂದಿರ ನಿರ್ಮಾಣವಾಗಿತ್ತು. ‘ಪೊಲೀಸನ ಮಗಳು’ ನಾಟಕ ನೋಡಲು ಲೀಲಾ ಅವರು ನನ್ನನ್ನೂ ನನ್ನ ಹೆಂಡತಿಯನ್ನೂ ನಮ್ಮ ಮನೆಗೆ ಬಂದು ಆಹ್ವಾನಿಸಿದ್ದರು.
ಅವರು ನಮ್ಮನ್ನು ಆಹ್ವಾನಿಸಿದ್ದೇ ಗೌರವ ಎಂದು ಭಾವಿಸಿದ ನಾವು ಟಿಕೆಟ್ ಕೊಂಡಿದ್ದೆವು. ನಾವು ಹಾಗೆ ಮಾಡಿದ್ದು ಸರಿಯಲ್ಲ ಎಂದು ಲೀಲಾ ಅವರು ಹೇಳಿಯೂ ಹೇಳಿದರು. ನಾಟಕ ಮುಗಿದ ಮೇಲೆ ಅವರು ಬಣ್ಣ ಒರೆಸಿಕೊಂಡು ಬರುವವರೆಗೆ ನಾವು ಇರುವಂತೆ ತಮ್ಮ ಕಂಪನಿಯವರ ಮೂಲಕ ಹೇಳಿ ಕಳುಹಿಸಿ, ಬಂದು ನಮಗೆ ಕಾಫಿ, ಬಿಸ್ಕತ್ತುಗಳ ಆತಿಥ್ಯ ನೀಡಿ ಒಂದಷ್ಟು ಹೊತ್ತು ವಿಶ್ವಾಸದಿಂದ ಮಾತನಾಡಿಸಿ ಕಳಿಸಿದ ಅವರ ಸೌಜನ್ಯ ಸಜ್ಜನಿಕೆಯ ನೆನಪು ಮರೆಯುವಂಥ ದಲ್ಲ.
‘ಪೊಲೀಸನ ಮಗಳು’ 4500 ಪ್ರಯೋಗಗಳನ್ನು ಕಂಡ ಕನ್ನಡ ನಾಟಕ ಮಾತ್ರವಲ್ಲ, ಜಗತ್ತಿನಲ್ಲಿ ಯೇ ಅಷ್ಟು ಪ್ರಯೋಗಗಳನ್ನು ಕಂಡ ನಾಟಕವೆಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಅದರ ಲ್ಲಿ ಲೀಲಾ ಅವರೇ ಪೊಲೀಸನ ಮಗಳ ಪಾತ್ರದಲ್ಲಿದ್ದರು. ಆಗ ಅವರಿಗೆ ಅರುವತ್ತೆರಡೊ ಅರುವತ್ಮೂರೊ ವರ್ಷ.
ಆ ವಯಸ್ಸಿನಲ್ಲಿ ಅವರು ಮದುವೆಯಾಗಲಿರುವ ಪ್ರಾಯದ ಹೆಣ್ಣಿನ ಪಾತ್ರದಲ್ಲಿ ಅಭಿನಯ ನೀಡಿದ್ದ ರು. ಅವರ ವಯಸ್ಸೆಷ್ಟೆಂಬುದರ ನೆನಪು ಒಂದಷ್ಟು ಹೊತ್ತು ನಮ್ಮ ಮನಸ್ಸಿನಲ್ಲಿ ಎಣಿಕೆಗೊಂಡಿದ್ದ ರೂ ಬಲು ಬೇಗ ಅವರ ಅಭಿನಯದಲ್ಲಿ ತನ್ಮಯರಾಗಿಬಿಟ್ಟೆವು. ಚಿಂದೋಡಿ ಲೀಲಾ ನಿಜವಾದ ಜನ್ಮಜಾತ ಪ್ರತಿಭೆಯ ರಂಗ ಕಲಾವಿದೆ ಎಂಬುದು ನಮಗೆ ಮನವರಿಕೆಯಾಗಿತ್ತು.
ಕೇವಲ ಎರಡನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಲೀಲಾ ಕರ್ನಾಟಕ ರಂಗಭೂಮಿ ಯಲ್ಲಿ ಆರು ದಶಕಗಳಿಗಿಂತ ಹೆಚ್ಚು ಕಾಲ ಲಕ್ಷಾಂತರ ಪ್ರೇಕ್ಷಕರನ್ನು ರಂಜಿಸಿ ಮೆರೆದ ಕಥೆ ನಾಟಕ ರಂಗಭೂಮಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂಥದು. ಲೀಲಾ ಅವರ ಆ ಸಾಧನೆ ಸಾಮಾನ್ಯವಾದುದಲ್ಲ. ಲೀಲಾ ಕಲಾವಿದೆ ಮಾತ್ರವಲ್ಲ, ಬೆಳಗಾವಿಯಲ್ಲಿ ಮರಾಠಿಗರ ಕಿರುಕುಳ ಗಳನ್ನು ದಿಟ್ಟವಾಗಿ ಎದುರಿಸಿ ಅಲ್ಲಿಯೇ ಕನ್ನಡ ನಾಟಕವನ್ನು ಆಡಿದ ಮತ್ತು ಶಾಶ್ವತ ರಂಗಮಂದಿ ರವನ್ನು ನಿರ್ಮಿಸಿದ ಧೀರ ಮಹಿಳೆ. ಅವರು ಶಿವಾಜಿ ನಾಟಕವನ್ನು ಅಭಿನಯಿಸಿ ಮರಾಠಿಗರನ್ನೂ ಒಲಿಸಿಕೊಂಡರು. ಬೆಳಗಾವಿಯ ನಗರಸಭೆಗೂ ಆಯ್ಕೆಯಾಗಿದ್ದರು. ಅವರು ನಾವಿರುವವರೆಗೂ ಹಿತವಾದ ನೆನಪಾಗಿ ನಮ್ಮೊಡನೆ ಉಳಿದಿರುತ್ತಾರೆ.
ವರದಿಯ ವಿವರಗಳು |
 |
ಕೃಪೆ : ಜಿ.ಎಚ್. ನಾಯಕ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-07
|
|
|