‘ಕ್ಷಮೆ ಯಾಚಿಸಲ್ಲ’: ಬಿಗು ಭದ್ರತೆಯ ನಡುವೆ ಶಾರುಕ್ ಮುಂಬೈಗೆ |
ಪ್ರಕಟಿಸಿದ ದಿನಾಂಕ : 2010-02-07
ಮುಂಬೈ, ಫೆ.೬: ಐಪಿಎಲ್-೩ ಕ್ರಿಕೆಟ್ ತಂಡಗಳಲ್ಲಿ ಪಾಕಿಸ್ತಾನಿ ಆಟಗಾರರ ಸೇರ್ಪಡೆಯ ವಿವಾದದಲ್ಲಿ ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್, ಫೆ.೧೨ರಂದು ಬಿಡುಗಡೆಯಾಗಲಿರುವ ತನ್ನ ‘ಮೈ ನೇಮ್ ಈಸ್ ಖಾನ್’ ಚಿತ್ರದ ಜಾಗತಿಕ ಪ್ರಚಾರ ಅಭಿಯಾನ ಮುಗಿಸಿ ಮುಂಬೈಗೆ ಮರಳಿದ್ದಾರೆ.
ಅವರೊಂದಿಗೆ ಸಹ ನಟಿ ಕಾಜೋಲ್ ಹಾಗೂ ಚಿತ್ರದ ನಿರ್ದೇಶಕ ಹಾಗೂ ಸಹ ನಿರ್ಮಾಪಕ ಕರಣ್ ಜೋಹರ್ ಇದ್ದರು.
ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯ ನಡುವೆ ಅವರೆಲ್ಲ ಬ್ರಿಟಿಶ್ ಏರ್ವೇಸ್ ವಿಮಾನವೊಂದರಲ್ಲಿ ಮುಂಬೈಗೆ ಬಂದಿಳಿದರು.

ನಿನ್ನೆ ಈ ಮೂವರು ತಮ್ಮ ಚಿತ್ರ ಪ್ರದರ್ಶನಕ್ಕಾಗಿ ಬರ್ಲಿನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.
ಐಪಿಎಲ್ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರ ಅನುಪಸ್ಥಿತಿ ಹಾಗೂ ಐಪಿಎಲ್ ಪ್ರಾಯೋಜಕರಿಗೆ ಅವರನ್ನು ಖರೀದಿಸಲು ನಿರಾಸಕ್ತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದಕ್ಕಾಗಿ ಕ್ಷಮೆ ಯಾಚಿಸದ ಹೊರತು ಮುಂದಿನ ವಾರ ಶಾರೂಕ್ರ ಚಿತ್ರವನ್ನು ಬಿಡುಗಡೆಗೊಳಿಸಲು ಬಿಡುವುದಿಲ್ಲವೆಂದು ಶಿವಸೇನೆ ಬೆದರಿಕೆ ಹಾಕಿದೆ.
ಆದಾಗ್ಯೂ, ಕ್ಷಮೆ ಯಾಚಿಸಲು ನಿರಾಕರಿಸಿರುವ ಶಾರೂಕ್, ತನ್ನನ್ನು ಅನವಶ್ಯಕವಾಗಿ ಗುರಿಯಿರಿಸಲಾಗಿದೆಯೆಂದು ದೂರಿದ್ದಾರೆ.
ತನ್ನ ಹೇಳಿಕೆಯನ್ನು ವೈಯಕ್ತಿಕವೆಂದು ಭಾವಿಸದೆ ಒಂದು ಗುಂಪಿನ ವಿರುದ್ಧವೆಂದು ಭಾವಿಸಿರುವುದು ವಿಶಾದನೀಯವೆಂದು ಅವರು ಹೇಳಿದ್ದಾರೆ.
ವಿಚಾರಗಳ ಬಿನ್ನತೆಯ ಚರ್ಚೆಗೆ ವಸ್ತುವಾಗಬೇಕು ಹಾಗೂ ಅಭಿಪ್ರಾಯ ಸ್ವಾತಂತ್ರಕ್ಕಾಗಿ ಚರ್ಚೆ ಅತ್ಯಗತ್ಯ. ಅದನ್ನು ಇನ್ನೊಂದು ರೀತಿಯಾಗಿ ನೋಡುವುದು ದುರದೃಷ್ಟಕರವೆಂದು ಶಾರುಕ್ ನುಡಿದಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07
|
|
|