ವಿಶ್ರಾಂತ ಪತ್ರಕರ್ತ ಬನ್ನಂಜೆ ರಾಮಾಚಾರ್ಯ ಇನ್ನಿಲ್ಲ |
ಪ್ರಕಟಿಸಿದ ದಿನಾಂಕ : 2010-02-07
ಉಡುಪಿ;ಫೆ,6. ವಿಶ್ರಾಂತ ಪತ್ರಕರ್ತ ಬನ್ನಂಜೆ ರಾಮಾಚಾರ್ಯ ಅಲ್ಪಕಾಲದ ಅಸೌಖ್ಯದಿಂದಾಗಿ ಶನಿವಾರ ಅಪರಾಹ್ನ 2ರ ಸುಮಾರಿಗೆ ಉಡುಪಿಯ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ ಹಾಗೂ 7 ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅವರ ಸಹೋದರರಲ್ಲೋರ್ವರು.
೧೯೩೯ರಲ್ಲಿ `ನವಶಕ್ತಿ' ಸಂಪಾದಕತ್ವದ ಮೂಲಕ ಪತ್ರಿಕೋದ್ಯಮ ಆರಂಭಿಸಿದ ಬನ್ನಂಜೆ, `ಧುರೀಣ', `ಯುಗಪುರುಷ' ಮೊದಲಾದ ಪತ್ರಿಕೆಗಳ ಸಂಪಾದಕರಾಗಿದ್ದರು. ೧೯೫೯ರಲ್ಲಿ `ಪ್ರಕಾಶ' ವಾರಪತ್ರಿಕೆ ಆರಂಭಿಸಿದ್ದರು. `ಯುಗಪುರುಷ'ವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಪತ್ರಿಕೆಗಳು ಬಲುಕಾಲ ಮುಂದುವರಿಯಲಿಲ್ಲ. ತದನಂತರದಲ್ಲಿ ಕೊಡೆತ್ತೂರು ಅನಂತಪದ್ಮನಾಭ ಉಡುಪರ ಸಂಪಾದಕತ್ವದಲ್ಲಿ ಮುಂದುವರಿದ `ಯುಗಪುರುಷ' ಈಗಲೂ ಕಿನ್ನಿಗೋಳಿಯಿಂದ ಪ್ರಕಟವಾಗುತ್ತಿದೆ.
೧೯೬೦ರಿಂದ ೬೯ರ ವರೆಗೆ `ನವಭಾರತ' ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ಬನ್ನಂಜೆ ರಾಮಾಚಾರ್ಯ ೧೯೭೦ರಲ್ಲಿ ಮಣಿಪಾಲದಲ್ಲಿ ಆರಂಭಗೊಂಡ `ಉದಯವಾಣಿ'ಯ ಸಂಪಾದಕರಾದರು. ೧೯೮೪ರ ವರೆಗೂ ಆ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದರು.
೧೯೮೪-೮೯ರ ವರೆಗೆ ಭಾರತೀಯ ಸ್ಟೇಟ್ಬ್ಯಾಂಕಿನ ಸ್ಥಳೀಯ ಮಂಡಳಿ (ಲೋಕಲ್ ಬೋರ್ಡ್ ಕಮಿಟಿ) ನಿರ್ದೇಶಕರಾಗಿದ್ದರು. ಅವರಿಗೆ ೯೦ ವರ್ಷ ಸಂದ ಸಂದರ್ಭದಲ್ಲಿ ಕೃಷ್ಣಮಠ ರಾಜಾಂಗಣ ದಲ್ಲಿ ಅವರನ್ನು ಅವರ ಅಭಿಮಾನಿಗಳು ಮಾಜಿ ಶಾಸಕ ಯು. ಆರ್. ಸಭಾಪತಿ ನೇತೃತ್ವದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಗಿತ್ತು. ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ಕೊ. ಅ. ಉಡುಪ ಸಂಸ್ಮರಣ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಉತ್ಸವ ಇತ್ಯಾದಿಗಳಲ್ಲಿ ಬನ್ನಂಜೆ ರಾಮಾಚಾರ್ಯಸನ್ಮಾನಿತರಾಗಿದ್ದರು.
ಮೃತರ ಅಂತ್ಯಕ್ರಿಯೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಸಂಜೆ ೪.೩೦ರ ವೇಳೆಗೆ ನಡೆಯಿತು. ಆ ಸಂದರ್ಭದಲ್ಲಿ ಬನ್ನಂಜೆ ಗೋವಿಂದಾಚಾರ್ಯ, ಉದ್ಯಾವರ ಮಾಧವಾಚಾರ್ಯ, ಹೆರಂಜೆ ಕೃಷ್ಣಭಟ್, ಮುರಳಿ ಕಡೆಕಾರ್, ಎಸ್. ವಿ. ಭಟ್, ಕ್ಯಾಸೆಟ್ ಕಾರ್ನರ್ ಮುರಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎ. ಗಫೂರ್, ಪುತ್ತಿಗೆ ಮಠ ಆಡಳಿತಾಧಿಕಾರಿ ಪ್ರಸನ್ನಾಚಾರ್ಯ ಮೊದಲಾದವ ರಿದ್ದರು.
ಸಂತಾಪ: ಬನ್ನಂಜೆ ರಾಮಾಚಾರ್ಯ ನಿಧನಕ್ಕೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, ಪರ್ಯಾಯ ಶೀರೂರು ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ. ಎಸ್. ಆಚಾರ್ಯ, ಶಾಸಕ ಕೆ. ರಘುಪತಿ ಭಟ್, ಮಾಜಿ ಶಾಸಕ ಯು. ಆರ್. ಸಭಾಪತಿ, ಮಾಜಿ ಸಂಸದರಾದ ವಿನಯಕುಮಾರ್ ಸೊರಕೆ ಮತ್ತು ಮನೋರಮಾ ಮಧ್ವರಾಜ್, ಉದ್ಯಮಿ ಪ್ರಮೋದ ಮಧ್ವರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಕುಲದಾಸ ಪೈ ಮತ್ತು ಕಾರ್ಯದರ್ಶಿ ಕಿರಣ್ ಮಂಜನಬೈಲು, ಪತ್ರಿಕಾ ಛಾಯಾಚಿತ್ರಗಾರರ ಸ೦ಘದ ಉಪಾಧ್ಯಕ್ಷರಾದ ಜಯಪ್ರಕಾಶ್ ಕಿಣಿ ಉಡುಪಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2010-02-07 00:00:00
|
|
|