ನ್ಯಾ. ಬಿ.ಕೆ. ಸೋಮಶೇಖರ ಆಯೋಗದಿಂದ ಸರಕಾರಕ್ಕೆ ಮಧ್ಯಾಂತರ ವರದಿ ಸಲ್ಲಿಕೆ: ರಾಜ್ಯದಲ್ಲಿ ಚರ್ಚ್ ಮೇಲಿನ ದಾಳಿಗೆ ಬಜರಂಗದಳ, ಶ್ರೀರಾಮಸೇನೆ, ವಿಎಚ್ಪಿ ಹೊಣೆ (updated news) |
ಪ್ರಕಟಿಸಿದ ದಿನಾಂಕ : 2010-02-02
 ಮಂಗಳೂರು, ಫೆ.೧: ರಾಜ್ಯದಲ್ಲಿ ೨೦೦೮ರ ಸೆಪ್ಟಂಬರ್ ೧೪ರಿಂದ ಚರ್ಚ್ಗಳ ಮೇಲೆ ವಿವಿಧ ಜಿಲ್ಲೆಗಳಲ್ಲಿ ನಡೆದ ದಾಳಿಯಲ್ಲಿ ಬಜರಂಗದಳ, ಶ್ರೀರಾಮಸೇನೆ, ವಿಎಚ್ಪಿ ಸಂಘಟನೆಗಳು ಪ್ರಮುಖ ಪಾತ್ರ ವಹಿಸಿರುವುದು ಘಟನೆಗೆ ಸಂಬಂಧಿಸಿ ಇದುವೆರೆಗಿನ ವಿಚಾರಣೆಯಿಂದ ಕಂಡು ಬಂದಿದೆ ಎಂಬ ಅಭಿಪ್ರಾಯದೊಂದಿಗೆ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ ಆಯೋಗ ಇಂದು ರಾಜ್ಯ ಸರಾಕರಕ್ಕೆ ಮಧ್ಯಾಂತರ ವರದಿ ಸಲ್ಲಿಸಿದೆ.
ರಾಜ್ಯದಲ್ಲಿ ೨೦೦೮ರ ಸೆಪ್ಟಂಬರ್ ೧೪ರಿಂದ ವಿವಿಧ ಕಡೆ ಸರಣಿಯಾಗಿ ಚರ್ಚ್ಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ೨೦೦೮ರ ನವೆಂಬರ್ ೭ರಂದು ರಾಜ್ಯ ಸರಕಾರ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ ಆಯೋಗವನ್ನು ವಿಚಾರಣೆಗಾಗಿ ನೇಮಿಸಿತ್ತು. ಆ ಪ್ರಕಾರ ೨೦೦೯ರ ಡಿಸೆಂಬರ್ ಅಂತ್ಯದೊಳಗೆ ಮಧ್ಯಾಂತರ ವರದಿ ಸಲ್ಲಿಸಲು ಸರಕಾರ ಆಯೋಗಕ್ಕೆ ಸೂಚನೆ ನೀಡಿತ್ತು.
ಆ ಪ್ರಕಾರ ಆಯೋಗ ಒಟ್ಟು ಸಲ್ಲಿಕೆಯಾದ ೧೦೧೯ ಅರ್ಜಿಗಳಲ್ಲಿ ಇದುವರೆಗೆ ೧೭೦ ನ್ಯಾಯಾಂಗ ಕಲಾಪಗಳನ್ನು ನಡೆಸಿ ೭೩೧ ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಈ ಸಂಬಂಧ ಇಂದು ಸುಮಾರು ಒಂದು ಸಾವಿರಕ್ಕೂ ಅಧಿಕ ಪುಟಗಳ ವರದಿಯನ್ನು ರಾಜ್ಯ ಸರಕಾರದ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಭಿಜಿತ್ ದಾಸ್ ಗುಪ್ತ ಮತ್ತು ಕಾನೂನು, ನ್ಯಾಯ ಮತ್ತು ಮಾನವ ಹಕ್ಕು ಇಲಾಖೆಯ ಕಾರ್ಯದರ್ಶಿ ಸಿದ್ಧಲಿಂಗೇಶ್ವರ ಮೂಲಕ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಕಾನೂನು ಸಚಿವರಿಗೆ ವರದಿಯನ್ನು ದ.ಕ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನ್ಯಾ. ಬಿ.ಕೆ. ಸೋಮಶೇಖರ ಸಲ್ಲಿಸಿದರು.
‘ಜೈ ಭಾರತ ಜನನಿಯ ತನುಜಾತೆ... ಜಯಹೇ ಕರ್ನಾಟಕ ಮಾತೆ...’ ಎಂದು ಹೇಳುತ್ತಾ ಮಧ್ಯಾಂತರ ವರದಿಯ ಸಂಕ್ಷಿಪ್ತ ವರದಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಧಿಕಾರಿ ಪೊನ್ನುರಾಜ್ ಮೂಲಕ ಬಿಡುಗಡೆಗೊಳಿಸಿದ ನ್ಯಾ.ಬಿ.ಕೆ. ಸೋಮಶೇಖರ, ಚರ್ಚ್ ದಾಳಿಗೆ ಸಂಬಂಧಿಸಿ ಒಂದು ವರ್ಷದ ಹಿಂದೆ ಆಯೋಗ ತನ್ನ ಕಾರ್ಯಾಚರಣೆ ಆರಂಭಿಸಿದಾಗ ಆಯೋಗ ಯಾವ ರೀತಿಯಲ್ಲಿ ಕಾರ್ಯಾಚರಿಸಬಹುದೆಂಬ ಸಾರ್ವಜನಿಕರ ಆತಂಕವನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ಸಲ್ಲಿಕೆಯಾದ ದೂರು ಅರ್ಜಿಗಳಲ್ಲಿ ಬಹುಪಾಲು ವಿಚಾರಣೆಯನ್ನು ಈಗಾಗಲೆ ಪೂರೈಸಲಾಗಿದೆ ಎಂದರು.
ರಾಜ್ಯದ ಮಂಗಳೂರು, ದಕ್ಷಿಣ ಕನ್ನಡದ ಇತರ ಪ್ರದೇಶಗಳು, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಧಾರವಾಡ, ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಚರ್ಚ್ ಹಾಗೂ ಕ್ರೈಸ್ತರ ಪ್ರಾರ್ಥನಾ ಸ್ಥಳಗಳ ಮೇಲೆ ನಡೆದ ದಾ ಳಿಗಳಲ್ಲಿ ಮುಖ್ಯವಾಗಿ ವಿಎಚ್ಪಿ, ಬಜರಂಗದಳ, ಶ್ರೀರಾಮಸೇನೆ ಸಂಘಟನೆಗಳ ಪಾತ್ರ ಇರುವುದಾಗಿ ವಿಚಾರಣೆಯ ಬಳಿಕ ತಿಳಿದು ಬಂದಿರುವುದಾಗಿ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.
ಈ ಬಗ್ಗೆ ಪ್ರಮುಖ ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ಅಭಿಪ್ರಾಯ ಹಾಗೂ ಸ್ಥಲೀಯ ಪಂಚಾಯತ್ ಪ್ರಮುಖರ ಅಭಿಪ್ರಾಯಗಳನ್ನು ಸಂಗ್ರಹಿಸಿದಾಗ ಬಜರಂಗದಳ, ವಿಎಚ್ಪಿ, ಶ್ರೀರಾಮ ಸೇನೆಯ ಸಂಘಟನೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವನಾಗಿ ಚರ್ಚ್ ದಾಳಿಗೆ ಕಾರಣವಾಗಿದೆ ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.
ಕೆಲವು ಕ್ರಿಶ್ಚಿಯನ್ ಸಂಘಟನೆಗಳು ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಆಮಿಷಗಳನ್ನು ನೀಡಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಾಂತರ ನಡೆಸಿರುವ ಘಟನೆಗಳು, ವಿದೇಶಿ ನಿಧಿ ಪಡೆಯುತ್ತಿರುವ ಕೆಲ ಕ್ರೈಸ್ತ ಸಂಘಟನೆಗಳು, ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಲಾಗುತ್ತಿದೆ ಎಂಬ ಕಾರಣಗಳು ಹಿಂದೂ ಧಾರ್ಮಿಕ ಮನೋಭಾವದ ಕೆಲವು ಮುಖಂಡರಲ್ಲಿ ಕ್ರೈಸ್ತ ಸಂಸ್ಥೆಗಳ ವಿರುದ್ಧ ಅಪನಂಬಿಕೆಗಳನ್ನು ಸೃಷ್ಟಿಸಲು ಕಾರಣವಾಗಿರಬಹುದು. ಇದರಿಂದಾಗಿ ಈ ದೇಶಕ್ಕೆ ಅಮೂಲ್ಯ ಸೇವೆ ನೀಡಿ ಘನತೆ ಗೌರವನ್ನು ಹೊಂದಿದ್ದ ಕ್ರೈಸ್ತ ಸಂಸ್ಥೆಗಳು ದಾಳಿಗೊಳಗಾಗಬೇಕಾಯಿತು ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.
ದಕ್ಷಿಣ ಕನ್ನಡ, ಬಳ್ಳಾರಿ, ದಾವಣಗೆರೆ ಮೊದಲಾದ ಕಡೆಗಳಲ್ಲಿ ಚರ್ಚ್ಗಳ ಮೇಲೆ ದಾಳಿ ನಡೆದಾಗ ಪ್ರತಿಭಟನೆ ನಡೆಸಿದ ಕ್ರೈಸ್ತ ಸಂಘಟನೆಗಳ ಸದಸ್ಯರ ಮೇಲೆ ಪೊಲೀಸರು ಬಲ ಪ್ರಯೋಗ ನಡೆಸಿದ್ದಾರೆ. ಲಾಠಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಇದರಿಂದ ಅಮಾಯಕರು, ಮಹಿಳೆಯರು, ಮಕ್ಕಳು ಗಾಯಗೊಂಡರು ಮತ್ತು ಜನರಲ್ಲಿ ಭೀತಿಯ ಭಾವನೆಯನ್ನು ಸೃಷ್ಟಿಸಿತ್ತು. ಮತ್ತು ಈ ಘಟನೆ ಸರಕಾರ ಮತ್ತು ಜಿಲ್ಲಾಡಳಿತದಿಂದ ನೊಂದವರಿಗೆ ಅನುಕಂಪ, ಸಾಂತ್ವನ ರಕ್ಷಣೆಯ ಕ್ರಮ ಕೈಗೊಳ್ಳಲಿಲ್ಲ ಎನ್ನುವ ಭಾವನೆಯನ್ನು ನಿರ್ಮಾಣ ಮಾಡಿತ್ತು. ಚರ್ಚ್ ದಾಳಿ ನಡೆದ ಸಂದರ್ಭದಲ್ಲಿ ಜಿಲ್ಲಾಡಳಿತ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ ಮತ್ತು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿಲ್ಲ. ಅಮಾಯಕರಿಗೆ ತೊಂದರೆ ಉಂಟಾಗಿದೆ. ಕ್ರೈಸ್ತ ಧಾರ್ಮಿಕ ಕೇಂದ್ರಗಳಿಗೆ ಹಾನಿಯುಂಟುಮಾಡಿದೆ ಎನ್ನು ಭಾವನೆ ಉಂಟುಮಾಡಿದೆ ಎಂದು ಆಯೋಗ ತಿಳಿಸಿದೆ.
ಒರಿಸ್ಸಾದಲ್ಲಿ ಹಿಂದು ಧಾರ್ಮಿಕ ವ್ಯಕ್ತಿಯೊಬ್ಬರನ್ನು ಕ್ರಿಶ್ಚಿಯನ್ ಧರ್ಮದ ವ್ಯಕ್ತಿಯೊಬ್ಬರು ಕೊಲೈಗೈದ ಘಟನೆ ಕ್ರಿಶ್ಚಿಯನ್ನರ ವಿರುದ್ಧ ದ್ವೇಷಭಾವನೆ ಹೊಂದಲು ಒಂದು ಕಾರಣವಾಗಿದೆ. ಚರ್ಚ್ ದಾಳಿಯ ಸಂದರ್ಭದಲ್ಲಿ ಘಟನೆಯ ಸ್ಥಳದಲ್ಲಿದ್ದವರನ್ನು, ಆಕಸ್ಮಿಕವಾಗಿ ಅಲ್ಲಿದ್ದ ಅಮಾಯಕರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.
ಆಯೋಗದ ಪ್ರಮುಖ ಸಲಹೆಗಳು ಮತ್ತು ಶಿಫಾರಸ್ಸುಗಳು
* ರಾಜಕೀಯ ರಹಿತವಾಗಿ ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಚರ್ಚ್ ದಾಳಿಗೆ ಒಳಗಾದ ಜಿಲ್ಲೆಗಳಲ್ಲಿ ಎಲ್ಲಾ ಧರ್ಮದವರಿಗೆ ಮತ್ತು ಅವರ ಸಂಸ್ಥೆಗಳಿಗೆ ಸೂಕ್ತ ರೀತಿಯ ಭದ್ರತೆಯನ್ನು ಒದಗಿಸಲು ಸರಕಾರ ಬದ್ಧವಾಗಿರಬೇಕು.
* ಚರ್ಚ್ ದಾಳಿಯ ಅಹಿತಕರ ಘಟನೆಗೆ ಸಂಬಂಧಿಸಿ ಎಲ್ಲಾ ಧರ್ಮದವರನ್ನು, ರಾಜಕೀಯ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರವು ಪ್ರಥಮ ಕ್ರಮವಾಗಿ ದಾಳಿಗೊಳಗಾದ ಕ್ರೈಸ್ತ ಸಂಸ್ಥೆಗಳು ಮತ್ತು ಜನರೊಂದಿಗೆ ಅವರಿಗಾದ ತೊಂದರೆ ಬಗ್ಗೆ ಸಕಲ ರೀತಿಯ ಕ್ರಮವನ್ನು ಕೈಗೊಳ್ಳುತ್ತದೆ ಎಂಬ ಮನವರಿಕೆಯನ್ನು ಮಾಡಬೇಕು.
* ಯಾವುದೇ ತೆರನಾದ ಅಹಿತಕರ ಘಟನೆಗಳ ಸಂದಂರ್ಭ ಕಾನೂನು ಉಲ್ಲಂಘನೆಗೆ ಸಂಬಂಧಿಸಿ ಜಿಲ್ಲಾಡಳಿತವನ್ನೇ ಹೊಣೆಯನ್ನಾಗಿಸಬೇಕು.
* ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಎಲ್ಲಾ ರೀತಿಯ ಪರಿಸ್ಥಿತಿಯನ್ನು ಸಾರ್ವತ್ರಿಕವಾಗಿ, ನಿಷ್ಪಕ್ಷಪಾತವಾಗಿ, ಪರಿಣಾಮ ಕಾರಿಯಾಗಿ ಮತ್ತು ಕ್ಷಿಪ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಡಳಿತವು ಸಾಮಾನ್ಯ ಕಾರ್ಯನಿರ್ವಹಣಾ ಪದ್ಧತಿಯನ್ನು ರೂಪಿಸಬೇಕು.
* ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳು ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಘರ್ಷಣೆಗಳ ಬಗ್ಗೆ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವಲ್ಲಿ, ಸರಕಾರದ ಗುಪ್ತಚರ ವಿಭಾಗವು ಕನಿಷ್ಠ ಪ್ರತಿಯೊಂದು ಜಿಲ್ಲೆಯಲ್ಲಿ ಪರಿಣಿತ ಸಿಬ್ಬಂದಿಗಳು, ಮೂಲಭೌತ ಸೌಕರ್ಯವನ್ನು ಹೊಂದಿರುವಂತಾಗಬೇಕು.
* ಎಲ್ಲಾ ಧರ್ಮಗಳ ಹಿರಿಯರನ್ನೊಳಗೊಂಡ ಶಾಂತಿ ಸಭೆಗಳನ್ನು ರಚಿಸುವ ಮೂಲಕ ಯಾವುದೇ ರೀತಿಯ ನಿರೀಕ್ಷಿತ ಧಾರ್ಮಿಕ ಸಂಘರ್ಷಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ಧಾರ್ಮಿಕ ಸೌಹಾರ್ದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.
* ಧರ್ಮದ ಹೆಸರಿನಲ್ಲಿ ಯಾವುದೇ ವ್ಯಕ್ತಿಯ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕಾನೂನು ರಚಿಸುವ ಅಗತ್ಯವಿದೆ.
* ಯಾವುದೇ ಮತೀಯ ಸಂಘಟನೆಗಳು ಮತ್ತೊಂದು ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಬೋಧಿಸುವುದು ಮತ್ತು ನಡೆದುಕೊಳ್ಳುವುದನ್ನು ಪ್ರಸಕ್ತ ಇರುವ ಕಾನೂನಿನ ಮೂಲಕ ನಿರ್ಬಂಧಿಸಬೇಕು. ಅಥವಾ ಹೊಸ ಕಾನೂನನ್ನು ಜಾರಿಗೊಳಿಸಬೇಕು.
* ಧಾರ್ಮಿಕ ಹಿತಾಸಕ್ತಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಧಕ್ಕೆಯುಂಟುಮಾಡುವ ಯಾವುದೇ ರೀತಿಯ ಅವಹೇಳನಕಾರಿ ಅಥವಾ ನಿಂದನಾತ್ಮಕ ಭಾವನೆಗಳನ್ನು ಪ್ರಕಟಿಸುವ ಮಾಧ್ಯಮಗಳು ಸೇರಿದಂತೆ ಯಾವುದೇ ರೀತಿಯ ಪ್ರಕಟನೆ, ಕರಪತ್ರ, ಪುಸ್ತಕ, ಸಾಹಿತ್ಯಗಳನ್ನು ನಿಷೇಧಿಸಬೇಕು ಸೇರಿದಂತೆ ೨೦ ಪ್ರಮುಖ ಸಲಹೆ ಹಾಗೂ ಶಿಫಾರಸ್ಸುಗಳನ್ನು ಬಿ.ಕೆ. ಸೋಮಶೇಖರ ಆಯೋಗವು ಸರಕಾರಕ್ಕೆ ಸಲ್ಲಿಸಿರುವ ಮಧ್ಯಾಂತರ ವರದಿಯಲ್ಲಿ ಸೂಚಿಸಿದೆ.
ಕಾರ್ಯಕ್ರಮದಲ್ಲಿ ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿದ್ಯಾಶಂಕರ್ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-02
|
|
| ಸಂತೋಷ್, ಮಂಗಳೂರು | 2010-02-02 | | ಕೆಲವು ಕ್ರಿಶ್ಚಿಯನ್ ಸಂಘಟನೆಗಳು ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಆಮಿಷಗಳನ್ನು ನೀಡಿ ಸ್ಥಳಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಾಂತರ ನಡೆಸಿರುವ ಘಟನೆಗಳು, ವಿದೇಶಿ ನಿಧಿ ಪಡೆಯುತ್ತಿರುವ ಕೆಲವು ಕ್ರೈಸ್ತ ಸಂಘಟನೆಗಳು, ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಲಾಗುತ್ತಿದೆ ಎಂಬ ಕಾರಣಗಳು ಕೆಲವು ಕ್ರೈಸ್ತ ಸಂಸ್ಥೆಗಳು ದಾಳಿಗೊಳಗಾಗಿರುವ ವಿಚಾರ ಆಯೋಗದ ವರದಿಯಲ್ಲಿರುವುದು ರಾಜ್ಯದ ಎಲ್ಲರಿಗೂ ತಿಳಿದ ವಿಚಾರವೇ ಹಾಗಿದೆ. ಆದರೇ ಇನ್ನು ಮುಂದೆ ಇಂತಹ ದುರ್ಘಟನೆಗಳು ಎಲ್ಲಿಯೂ ನಡೆಯದಂತೆ ಕ್ರಮ ಕೈಗೊಳ್ಳಲು ಆಯೋಗ ನೀಡಿರುವ ಪ್ರಮುಖ ಸಲಹೆಗಳು ಮತ್ತು ಶಿಫಾರಸ್ಸುಗಳು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದರೆ ಮಾತ್ರ ಸಾಧ್ಯವಿದೆ. ಒಂದು ಸಮಯ ಸರ್ಕಾರ ಕಾರ್ಯರೂಪಕ್ಕೆ ತಂದರೆ, ನೆಮ್ಮದಿಯಿಂದ ಇರುವ ಸಮಾಜದಲ್ಲಿ ರಾಜಕಾರಣಿಗಳು ತಮ್ಮ ರಾಜಕೀಯದ ಮೂಲಕ ತಮ್ಮ ತಮ್ಮ ಲಾಭವನ್ನು ಪಡೆದುಕೊಳ್ಳಲು ಸಾಧ್ಯವೇ?
|
|