|
ಪ್ರಕಟಿಸಿದ ದಿನಾಂಕ : 2008-12-05
ಸುಬ್ರಹ್ಮಣ್ಯ, ಡಿ. ೪: ದೇಶದ ಪ್ರಸಿದ್ಧ ಪುಣ್ಯಕ್ಷೇತ್ರ ಹಾಗೂ ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುರುವಾರ ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಭಕ್ತಜನ ಸಾಗರದ ಸಮ್ಮುಖದಲ್ಲಿ ಭಕ್ತಿ-ಸಂಭ್ರಮ-ಸಡಗರದ ಚಂಪಾಷಷ್ಠಿ, ಬ್ರಹ್ಮರಥೋತ್ಸವ ನಡೆಯಿತು.
ದೇವಳದ ಹೊರಾಂಗಣದಲ್ಲಿ ಪಾಲಕಿ ಪ್ರದಕ್ಷಿಣೆ ಬಂದು ದೇವರು ಬ್ರಹ್ಮರಥಾರೋಹಣವಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರ ಮೂರ್ತಿ ಇರಿಸಲಾಯಿತು.
ಚಂಪಾಷಷ್ಠಿಯಂದು ಮಾತ್ರ ನಡೆಯುವ ಬ್ರಹ್ಮರಥವನ್ನು ನಾಗರ ಬೆತ್ತಗಳಿಂದಲೇ ಎಳೆದು ಪುನಃ ಸ್ವಸ್ಥಾನಕ್ಕೆ ತಂದಾಗ ಭಕ್ತಾದಿಗಳು ರಥ ಎಳೆದ ಬೆತ್ತಗಳನ್ನು ತುಂಡು ಮಾಡಿ ಪ್ರಸಾದ ರೂಪವಾಗಿ ಸ್ವೀಕರಿಸಿದರು.
ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಬ್ರಹ್ಮರಥವನ್ನೇರಿ ಪೂಜಾ ವಿಧಾನಗಳಲ್ಲಿ ಪಾಲ್ಗೊಂಡರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಶ್ಯಾಮ ಭಟ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಸಂಜೀವ ಮಡಿವಾಳ, ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ ಮೊದಲಾದ ಗಣ್ಯರು ಉತ್ಸವದ ವೇಳೆ ಉಪಸ್ಥಿತರಿದ್ದರು.
ವರ್ಷದಲ್ಲಿ ಒಂದು ಬಾರಿ ಮಾತ್ರ ನಡೆಸುವ ಬ್ರಹ್ಮರಥೋತ್ಸವ ಸೇವೆಯನ್ನು ಈ ಬಾರಿ ೨೫ ಮಂದಿ ಭಕ್ತರು ಮಾಡಿಸಿದ್ದರು.ಮಧ್ಯಾಹ್ನ ೨೫ ಸಾವಿರಕ್ಕೂ ಅಧಿಕ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ಹೊರಾಂಗಣದಲ್ಲಿ ಉಚ್ಛಿಷ್ಟದ ಮೇಲೆ ೧,೫೦೦ಕ್ಕೂ ಹೆಚ್ಚು ಮಂದಿ ಮಡೆ- ಮಡೆಸ್ನಾನ ಸೇವೆ ಸಲ್ಲಿಸಿದರು.
ಇಂದು ಅವಭೃತ ಶುಕ್ರವಾರದಂದು ಬೆಳಗ್ಗೆ ಕುಮಾರ ಧಾರಾ ನದಿಯಲ್ಲಿ ನೌಕಾವಿಹಾರ, ಅವಭೃತೋತ್ಸವ ನಡೆಯಲಿದೆ.
ಚಿನ್ನದ ಆಭರಣ ಸಮರ್ಪಣೆ ಷಷ್ಠಿ ಜಾತ್ರೆಗೆ ಬಂದಿದ್ದ ಮೈಸೂರಿನ ಶ್ರೀಕಂಠದತ್ತ ಒಡೆಯರ್ ಭಾರೀ ಮೌಲ್ಯದ ಚಿನ್ನದ ನೆಕ್ಲೆಸ್ ಒಂದನ್ನು ದೇವರಿಗೆ ಅರ್ಪಿಸಿದರು.
ಬ್ರಹ್ಮರಥ ಎಳೆದ ಮೈಸೂರು ಮಹಾರಾಜ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಮೈಸೂರು ರಾಜ ಮನೆತನಕ್ಕೂ ವಿಶೇಷ ನಂಟು. ಶ್ರೀ ದೇವಳದ ಅಭಿವೃದ್ಧಿ, ಬ್ರಹ್ಮರಥ ನಿರ್ಮಾಣ, ಅನ್ನಸಂತರ್ಪಣೆಗಾಗಿ ರಾಜರ ಕಾಲದಲ್ಲಿ ಧನ ಸಹಾಯ ನೀಡಲಾಗಿತ್ತು. ಹಲವು ಗ್ರಾಮಗಳನ್ನು ಉಂಬಳಿಯಾಗಿಯೂ ನೀಡಿದ್ದರು. ಮೈಸೂರು ಮಹಾರಾಜರ ಆರಾಧ್ಯ ದೈವನಾದ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಂದು ಇಂದಿನ ರಾಜರಾದ ಶ್ರೀಕಂಠದತ್ತ ಒಡೆಯರ್ ತಮ್ಮ ಪರಿವಾರ ದವರೊಂದಿಗೆ ಬ್ರಹ್ಮರಥೋತ್ಸವ ಹರಕೆ ಸೇವೆ ಸಲ್ಲಿಸಿದರಲ್ಲದೆ, ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ರಥಪೂಜೆ ಸಲ್ಲಿಸಿದರು.
ಶ್ರೀ ದೇವಳದ ಪರವಾಗಿ ಪ್ರಧಾನ ಅರ್ಚಕರಾದ ವೇ|ಮೂ| ಕೇಶವ ಜೋಗಿತ್ತಾಯರು ಅರಸರಿಗೆ ತೀರ್ಥಪ್ರಸಾದ ನೀಡಿ, ದರ್ಬಾರು ಶಾಲು ಹೊದೆಸಿ, ಫಲಪುಷ್ಪ, ದೇವರ ಭಾವಚಿತ್ರ ನೀಡಿ ಗೌರವಿಸಿದರು.
ಕುಡುಪು ದೇವಳದಲ್ಲಿ ಸಂಭ್ರಮದ ಷಷ್ಠಿ ಬ್ರಹ್ಮರಥೋತ್ಸವ
ಕುಡುಪು, ಡಿ. ೪: ದ.ಕ. ಜಿಲ್ಲೆಯ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಡುಪು ಅನಂತಪದ್ಮನಾಭ ದೇವಳದಲ್ಲಿ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗುರುವಾರ ಷಷ್ಠಿ ಬ್ರಹ್ಮರಥೋತ್ಸವ ಜರಗಿತು.
ಮಧ್ಯಾಹ್ನ ಷಷ್ಠಿಯ ಮಹಾಪೂಜೆ ಜರಗಿ ಅನಂತರ ಬಲಿ ಹೊರಟು, ಮಧ್ಯಾಹ್ನ ೧.೩೦ರ ಮುಹೂರ್ತದಲ್ಲಿ ರಥಾರೋಹಣಗೊಂಡು, ರಾಜಬೀದಿಯಲ್ಲಿ ಬ್ರಹ್ಮರಥೋತ್ಸವ ಜರಗಿತು. ಆ ಬಳಿಕ ಹೊರ ಪ್ರಾಂಗಣದಲ್ಲಿ ಮಡೆ-ಮಡೆಸ್ನಾನ ಸೇವೆ ನಡೆಯಿತು. ೨೫ ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು.
ರಥೋತ್ಸವದ ಸಂದರ್ಭ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಬಿ. ನಟರಾಜು, ಆನುವಂಶಿಕ ಮೊಕ್ತೇಸರ ಹಾಗೂ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಆನುವಂಶಿಕ ಮೊಕ್ತೇಸರ ಹಾಗೂ ಆನುವಂಶಿಕ ಅರ್ಚಕ ಪಿ. ಅನಂತ ಭಟ್, ಮೊಕ್ತೇಸರ ಕೆ. ಭಾಸ್ಕರ ಮೊದಲಾದವರು ಉಪಸ್ಥಿತರಿದ್ದರು.
ಇಂದು ಜೋಡು ಉತ್ಸವ
ಶುಕ್ರವಾರ ಪೂರ್ವಾಹ್ನ ಶ್ರೀ ಅನಂತ ಪದ್ಮನಾಭ ದೇವರ ಬಲಿ ಉತ್ಸವ ಜರಗಲಿದೆ.
ಚಂದ್ರ ಮಂಡಲ ಉತ್ಸವ, ಪಾಲಕಿ ಉತ್ಸವ, ಪ್ರಸಾದ ವಿತರಣೆಯೊಂದಿಗೆ ಷಷ್ಠಿ ಉತ್ಸವ ಸಮಾಪನಗೊಳ್ಳಲಿದೆ
ವರದಿಯ ವಿವರಗಳು |
 |
ಕೃಪೆ : ಚಿತ್ರ: ಮ್ಯಾಂಗಲೂರಿಯನ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-05
|
|
|