ಜಿಲ್ಲೆಯಲ್ಲಿ ಶಾಂತಿ ಕಾಯ್ದುಕೊಳ್ಳಲು ಸಹಕರಿಸಿ: ಧಾರ್ಮಿಕ ನಾಯಕರಿಗೆ ಜಿಲ್ಲಾಧಿಕಾರಿ ಕರೆ |
ಪ್ರಕಟಿಸಿದ ದಿನಾಂಕ : 2008-12-05
ಮಂಗಳೂರು: ಮುಂಬರುವ ಬಕ್ರೀದ್, ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆ, ಅಯ್ಯಪ್ಪ ವೃತಾಧಾರಿಗಳ ಪೂಜೆ ಸೇರಿದಂತೆ ವಿವಿಧ ಧರ್ಮಗಳ ಹಬ್ಬ-ಆಚರಣೆ ಸಂದರ್ಭ ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಧಾರ್ಮಿಕ ಮುಖಂಡರು, ಧರ್ಮಗುರುಗಳು ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮಹೇಶ್ವರ ರಾವ್ ಧಾರ್ಮಿಕ ನಾಯಕರಿಗೆ ಕರೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜಿಲ್ಲೆಯಲ್ಲಿ ಕೋಮು ಸೌಹಾರ್ದವನ್ನು ಕಾಪಾಡುವ ನಿಟ್ಟಿನಲ್ಲಿ ವಿವಿಧ ಧರ್ಮಗಳ ನಾಯಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಮಾತನಾಡಿದ ಧಾರ್ಮಿಕ ನಾಯಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಕಳೆದ ಬಾರಿ ಬಕ್ರಿದ್ ಹಬ್ಬದ ಸಂದರ್ಭ ನಗರದಲಲಿ ಕುರ್ಬಾನಿಯ ಸಂದರ್ಭ ಗಲಾಟೆ ನಡೆಯಿತು. ಕುರ್ಬಾನಿ ಸಾಂಪ್ರದಾಯಿ ಆಚರಣೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಯು ಪೊಲೀಸ್ ಭದ್ರತೆಯಲ್ಲೇ ನಡೆಯಲು ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ವಿಎಚ್ಪಿ ನಾಯಕ ಎಂ.ಬಿ. ಪುರಾಣಿಕ್ ಮಾತನಾಡಿ, ಬಕ್ರೀದ್ ಹೆಸರಿನಲ್ಲಿ ಜಾನುವಾರಗಳ ಸಾಗಾಟ, ಕ್ರಿಸ್ಮಸ್ ಸಂದರ್ಭ ಮೋಜಿನ ಆಚರಣೆಗೆ ಅವಕಾಶ ನೀಡಬಾರದು. ನಮಗಿರುವ ಸ್ವಾತಂತ್ರವನ್ನು ಮೀರಿ ಆಚರಣೆ ಮಾಡಲು ಅವಕಾಶ ನೀಡಬಾರದು ಎಂದು ಅಭಿಪ್ರಾಯಿಸಿದರು.
ಸಭೆಯಲ್ಲಿ ಕೆಐಸಿಸಿಯ ಕೋಶಾಧಿಕಾರಿ ಅಹ್ಮದ್ ಬಾವ, ಐವನ್ ಡಿಸೋಜಾ, ಬಿ. ಮಾಧವ, ಶ್ರೀನಿವಾಸ್ ಕಾಮತ್ ಹಾಗೂ ಇನ್ನಿತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಿಲೀಪ್, ಜಿ.ಪಂ. ಅಧ್ಯಕ್ಷ ಸುಚರಿತ ಶೆಟ್ಟಿ, ಜಿಲ್ಲಾಧಿಕಾರಿಗಳ ಕೇಂದ್ರೀಯ ಸ್ಥಾನೀಯ ಸಹಾಯಕ ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-05
|
|
|