ಬೆಂಗಳೂರು ಹಬ್ಬ ಅನುದಾನ ಹಿಂತೆಗೆತಕ್ಕೆ ಕರವೇ ಆಗ್ರಹ |
ಪ್ರಕಟಿಸಿದ ದಿನಾಂಕ : 2008-12-04
ಬೆಂಗಳೂರು, ಗುರುವಾರ, 4 ಡಿಸೆಂಬರ್ 2008 ಬೆಂಗಳೂರು ಹಬ್ಬವನ್ನು ರಾಜಧಾನಿಯಲ್ಲಿ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದ್ದರಿಂದ ಬೆಂಗಳೂರು ಹಬ್ಬಕ್ಕೆ ಕಾರ್ಮೋಡ ಕವಿದಂತಾಗಿದೆ.
ಬೆಂಗಳೂರು ಹಬ್ಬಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಎರಡೂವರೆ ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಹಿಂದೆ ಪಡೆಯುವವರೆಗೆ ಹೋರಾಟ ಮುಂದುವರಿಯುತ್ತದೆ. ಕನ್ನಡೇತರ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂ. ಅನುದಾನ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ಬೆಂಗಳೂರು ಹಬ್ಬ ಕಳೆದ ಐದಾರು ವರ್ಷಗಳಿಂದ ಖಾಸಗಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದು, ಖಾಸಗಿ ಸಂಸ್ಥೆಗಳಿಗೆ ಮಾರುಕಟ್ಟೆ ಒದಗಿಸುತ್ತಿದೆ ಎಂದು ನಾರಾಯಣ ಗೌಡ ಆರೋಪಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಆಚರಣೆಗೆ ಕನ್ನಡ ಸಂಸ್ಥೆಗಳಿಗೆ ಬಿಬಿಎಂಪಿ ಕೊಡುತ್ತಿದ್ದ 10 ಸಾವಿರ ರೂ. ಹಣವನ್ನು ನಿಲ್ಲಿಸಲಾಗಿದೆ. ರಾಜ್ಯದಲ್ಲಿ ಸಾವಿರಾರು ಮಂದಿ ರೈತರು ಸಾವಿಗೆ ಶರಣಾದಾಗ ಪರಿಹಾರ ನೀಡಲು ಸಮಿತಿ ರಚನೆ ಮಾಡಲಾಗುತ್ತದೆ. ಪುಸ್ತಕ ಬಿಡುಗಡೆಗೆ ಅನುದಾನ ಕೆಳಿದರೆ ಇಲ್ಲ ಎನ್ನುತ್ತಾರೆ. ಕನ್ನಡ, ಜಾನಪದ ಕಾರ್ಯಕ್ರಮಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿಲ್ಲ. ಆದರೆ ಬೆಂಗಳೂರು ಹಬ್ಬಕ್ಕೆ ಎರಡೂವರೆ ಕೋಟಿ ರೂ. ಅನುದಾನ ನೀಡಿರುವುದು ಖಂಡನೀಯ ಎಂದರು.
ಈ ಮಧ್ಯೆ ಬೆಂಗಳೂರು ಹಬ್ಬವನ್ನು ಯಾವುದೇ ಅಡೆತಡೆಗಳಿಲ್ಲದೇ ನಡೆಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-04
|
|
|