ಪರ್ಯಾಯ ಮಹೋತ್ಸವದ ವೈಭವ ಹೆಚ್ಚಿಸಿದ ಮೆರವಣಿಗೆ: ಸಾಕ್ಷಿಯಾದ ಭಕ್ತ ಸಮೂಹ; ಮೆರವಣಿಗೆ ವೀಕ್ಷಿಸಿದ ಮುಖ್ಯಮಂತ್ರಿ; ಶೀರೂರು ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ; ಅದಮಾರು ಶ್ರೀಗಳ ಗೈರು, ಹೊರ ಬಂದ ಭಿನ್ನಮತ; ಉಡುಪಿಯ ಕೋಮು ಸೌಹಾರ್ದ ಕೇಂದ್ರ ಸಚಿವ ಜಿತಿನ್ ಮೆಚ್ಚುಗೆ (updated news) |
ಪ್ರಕಟಿಸಿದ ದಿನಾಂಕ : 2010-01-19
ಉಡುಪಿ: ಶುಭ ಮುಹೂರ್ತದಲ್ಲಿ ಶೀರೂರು ಶ್ರೀ ಸರ್ವಜ್ಞ ಪೀಠಾರೋಹಣ
ಶ್ರೀಕೃಷ್ಣಮಠ(ಉಡುಪಿ): ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾಧೀಶರಾಗಿ ಶೀರೂರು ಮಠದ ಲಕ್ಷ್ಮೀವರ ತೀರ್ಥರು ಸೋಮವಾರ ಬೆಳಿಗ್ಗೆ 8.30ಕ್ಕೆ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಿದರು.
ಕಳೆದ ಎರಡು ವರ್ಷಗಳಿಂದ ಪರ್ಯಾಯ ಪೀಠಾಧೀಶರಾಗಿದ್ದ ಸುಗುಣೇಂದ್ರ ತೀರ್ಥರು ನೂತನ ಪರ್ಯಾಯ ಪೀಠಾಧೀಶರಿಗೆ ಸಂಪ್ರದಾಯದಂತೆ ಮಧ್ವಾಚಾರ್ಯರು ನೀಡಿದ್ದ ಅಕ್ಷಯ ಪಾತ್ರೆ ಮತ್ತು ಬೆಳ್ಳಿ ಸಟ್ಟುಗ ನೀಡಿ ದೇವಸ್ಥಾನದ ಬೀಗದ ಕೈಗಳನ್ನು ಅಧಿಕೃತ ವಾಗಿ ಹಸ್ತಾಂತರಿ ಸಿದರು.
ತನ್ಮೂಲಕ ಲಕ್ಷ್ಮೀವರ ತೀರ್ಥರು ಮೂರನೇ ಬಾರಿಗೆ ಶ್ರೀಕೃಷ್ಣನ ಪೂಜಾ ಕೈಂಕ ರ್ಯಕ್ಕೆ ವಿದ್ಯು ಕ್ತವಾಗಿ ಅನುಮತಿ ಪಡೆದರು. ಈ ಹಿಂದೆ 1978-80 ಹಾಗೂ 1994-96ರಲ್ಲಿ ಅವರು ಎರಡು ಪರ್ಯಾಯಗಳನ್ನು ಪೂರ್ಣಗೊಳಿಸಿದ್ದರು.
ಸಾಂಪ್ರದಾಯಿಕ ವಿಧಿ-ವಿಧಾನ:
ಇದಕ್ಕೂ ಮುನ್ನ ಬೆಳಗಿನ ಜಾವದಿಂದಲೇ ಪೀಠಾರೋಹಣದ ವಿಧಿ-ವಿಧಾನಗಳು ಆರಂಭವಾದವು. ಸಂಪ್ರದಾಯದಂತೆ ಕಾಪುವಿನಲ್ಲಿರುವ ದಂಡತೀರ್ಥಕ್ಕೆ ತೆರಳಿ ಸ್ನಾನಾದಿಕರ್ಮಗಳನ್ನು ಮುಗಿಸಿ ಲಕ್ಷ್ಮೀವರ ತೀರ್ಥರು ಜೋಡುಕಟ್ಟೆಗೆ ನಸುಕಿನ 5.30ಕ್ಕೆ ಆಗಮಿಸಿದರು.
ಅದಮಾರು ಮಠದ ಸ್ವಾಮೀಜಿ ಹೊರತುಪಡಿಸಿ ಸೋದೆ, ಪೇಜಾವರ, ಕೃಷ್ಣಾಪುರ, ಕಾಣಿಯೂ ರು, ಪಲಿಮಾರು ಮಠದ ಸ್ವಾಮೀಜಿಗಳು ತಲೆಗೆ ಪೇಟ ಸುತ್ತಿಕೊಂಡು ವಿಶೇಷ ಪೋಷಾಕಿನಲ್ಲಿ ಹಾಜರಿದ್ದು ಪೀಠವೇರುವ ಸ್ವಾಮೀಜಿಯನ್ನು ಎದುರು ಗೊಂಡರು. ಅಲ್ಲಿಂದ ವಿಶೇಷ ಮೇನೆಯಲ್ಲಿ ಪಟ್ಟದ ದೇವರನ್ನು (ವಿಠ್ಠಲ) ಮುಂದಿಟ್ಟು ಕೊಂಡು, ಹೂವಿನಿಂದ ಅಲಂಕರಿಸಿದ ಇತರ ಮೇನೆಯಲ್ಲಿ ಎಲ್ಲ ಸ್ವಾಮೀಜಿಗಳು ಧಾರ್ಮಿಕ-ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಆಕರ್ಷಕ ಮೆರವಣಿಗೆಯಲ್ಲಿ ರಥಬೀದಿಗೆ ಬಂದು ಕನಕನಕಿಂಡಿಯಲ್ಲಿ ಕೃಷ್ಣದರ್ಶನ ಮಾಡಿದರು.
ಕನಕನ ಕಿಂಡಿ- ಮೊದಲ ಕೃಷ್ಣದರ್ಶನ:

ಮೆರವಣಿಗೆ ರಥಬೀದಿ ಪ್ರವೇಶಿಸಿದಾಗ ಸಮಯ ಬೆಳಿಗ್ಗೆ 7.30. ಕನಕನ ಕಿಂಡಿಯಲ್ಲಿ ಕೃಷ್ಣನ ಮೊದಲ ದರ್ಶನ ಮಾಡಿದ ಸ್ವಾಮೀಜಿ ಅಲ್ಲಿ ನವಗ್ರಹ ಪ್ರಾರ್ಥನೆ, ನವಗ್ರಹ ದಾನ ನೀಡಿ, ಚಂದ್ರಮೌಳೀಶ್ವರ, ಅನಂತೇಶ್ವರ ದೇಗುಲಗಳಿಗೆ ಭೇಟಿ ನೀಡಿದರು. ಕೃಷ್ಣ ಮಠದ ಮುಂಭಾಗಕ್ಕೆ ಬಂದಾಗ ನಿರ್ಗಮಿತ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥರು ಅವರನ್ನು ಎದುರುಗೊಂಡು ಮಠದೊಳಗೆ ಕೈಹಿಡಿದು ಕರೆದುಕೊಂಡು ಬಂದರು.

ಗರ್ಭಗುಡಿಯ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣದರ್ಶನ ಮಾಡಿ, ಮುಖ್ಯಪ್ರಾಣ ದೇವರ-ಗರುಡ ದೇವರ ದರ್ಶನ ಮಾಡಿದರು. ಬಳಿಕ ಪಟ್ಟದ ದೇವರೊಂದಿಗೆ ಮಧ್ವಾಚಾರ್ಯ ಕುಳಿತು ಕೊಂಡಿದ್ದ ಸರ್ವಜ್ಞ ಪೀಠವಿರುವ ಸಿಂಹಾಸನ ಕೋಣೆ ಪ್ರವೇಶಿಸಿ ‘ಸರ್ವಜ್ಞ ಪೀಠಾರೋಹಣ’ ಮಾಡಿದರು.

ಬಡಗು ಮಾಳಿಗೆ ತೆರಳಿ ಯತಿಗಳಿಗೆ ಗಂಧದ್ಯುಪಚಾರ ಪೂರೈಸಿ ಬಳಿಕ, ರಾಜಾಂಗಣ ದಲ್ಲಿ ‘ಪರ್ಯಾಯ ದರ್ಬಾರ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗಣ್ಯರ ಸಮ್ಮುಖದಲ್ಲಿ ತಿರುಪತಿ, ಮಂತ್ರಾಲಯ ಹಾಗೂ ಧರ್ಮಸ್ಥಳ ಕ್ಷೇತ್ರಗಳ ಪ್ರಸಾದ ಸ್ವೀಕರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್ ನೂತನ ಸ್ವಾಮೀಜಿಗೆ ಶಾಲು ಹೊದೆಸಿ ಫಲ-ಪುಷ್ಪ ನೀಡಿ ಸನ್ಮಾನಿಸಿದರು.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ವಿಶ್ವ ಪ್ರಸನ್ನ ತೀರ್ಥರು, ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಇದ್ದರು.
ವರದಿ ವಿವರ:

ಉಡುಪಿ: ಸಾಗರೋಪಾದಿಯಲ್ಲಿ ಹರಿದು ಬಂದ ಜನಸಾಗರದ ಸಮ್ಮುಖದಲ್ಲಿ ಶೀರೂರು ಮಠಾಧೀಶರಾದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ಇಂದು ಬೆಳಗಿನ ಜಾವ ಮೂರನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣನ ಪೂಜಾ ಕೈಂಕರ್ಯ ದೀಕ್ಷೆಯನ್ನು ಸ್ವೀಕರಿಸಿದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯದ 31ನೇ ಚಕ್ರದ ಐದನೇ ಪರ್ಯಾಯ ಇದಾಗಿದೆ. ಶೀರೂರು ಶ್ರೀಗಳು, ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಂದ ಪರ್ಯಾಯದ ಪೂಜಾಧಿಕಾರವನ್ನು ಪಡೆದರು.

ಪರ್ಯಾಯ ಮಹೋತ್ಸವದ ಸಾಂಪ್ರದಾಯಿಕತೆ ಇಂದು ಮುಂಜಾನೆ ಐದೂವರೆಗೆ ಸುಮಾರಿಗೆ ಆರಂಭಗೊಂಡಿದ್ದು 8.40ರ ಸುಮಾರಿಗೆ ಶ್ರೀಕೃಷ್ಣ ಮಠದಲ್ಲಿ ನೆರೆದ ಅಭಿಮಾನಿಗಳ, ಭಕ್ತರ ಜಯಘೋಷ ಹಾಗೂ ವೇದಘೋಷಗಳ ನಡುವೆ ಮುಂದಿನ ಎರಡು ವರ್ಷಗಳ ಅವಧಿಗೆ ಪರ್ಯಾಯ ಪೀಠವನ್ನೇರಿದರು.

ಮಧ್ವಾಚಾರ್ಯರು ವಿದ್ಯಾಭ್ಯಾಸ ಮಾಡಿದ ಕಾಪು ಸಮೀಪದ ದಂಡತೀರ್ಥದಲ್ಲಿ ಸ್ನಾನ ಮುಗಿಸಿದ ಬಂದ ಶೀರೂರು ಶ್ರೀಗಳು, ಅಷ್ಟಮಠಗಳ ಪೈಕಿ ಐದು ಮಠಗಳ ಆರು ಮಂದಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಜೋಡುಕಟ್ಟೆಯಲ್ಲಿ ಪಟ್ಟದ ದೇವರಾದ ವಿಠಲನಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿನ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಿದ ಬಳಿಕ ಎಲ್ಲಾ ಸ್ವಾಮೀಜಿಗಳು ಹೂವಿನಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಕುಳಿತು ಭವ್ಯ ಮೆರವಣಿಗೆಯಲ್ಲಿ ಕೋರ್ಟು ರಸ್ತೆ, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಬಂದರು.

ಮೆರವಣಿಗೆ ರಥಬೀದಿಗೆ ಆಗಮಿಸಿದಾಗ ಎಲ್ಲಾ ಮಠಾಧೀಶರು ಪಲ್ಲಕ್ಕಿಯಿಂದ ಇಳಿದು ನೆಲಕ್ಕೆ ಹಾಸಿದ ನಡೆಮುಡಿಯ ಮೇಲೆ ಸಾಗಿ ಕನಕಗೋಪುರದ ಬಳಿ ಬಂದರು. ಅಲ್ಲಿ ಶೀರೂರು ಶ್ರೀಗಳು ಕನಕನ ಕಿಂಡಿಯ ಮೂಲಕ ಮೊದಲು ಕೃಷ್ಣನ ದರ್ಶನ ಮಾಡಿದರು.ಬಳಿಕ ಅವರು ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಶ್ರೀಕೃಷ್ಣ ಮಠ ಪ್ರವೇಶಿಸಿದರು.

ಶ್ರೀಮಠದ ಪ್ರವೇಶ ದ್ವಾರದಲ್ಲಿ ಶೀರೂರು ಶ್ರೀಗಳನ್ನು ಆತ್ಮೀಯವಾಗಿ ಸ್ವಾಗತಿಸಿದ ನಿರ್ಗಮನ ಪೀಠಾಧಿಪತಿ ಪುತ್ತಿಗೆ ಶ್ರೀಗಳು, ಮಠದೊಳಗೆ ಕರೆತಂದು ನವಗ್ರಹ ಕಿಂಡಿಯ ಮೂಲಕ ಅವರಿಗೆ ಕೃಷ್ಣನ ದರ್ಶನ ಮಾಡಿಸಿದರು. ಅಲ್ಲಿ ಮಠದ ದಿವಾನರು ಸ್ವಾಮೀಜಿಗಳ ಪಾದಪೂಜೆ ನಡೆಸಿದರು.
ಮುಂಜಾನೆ 8.30ಕ್ಕೆ ಸರಿಯಾಗಿ ಪುತ್ತಿಗೆ ಶ್ರೀಗಳು, ಶೀರೂರು ಶ್ರೀಗಳನ್ನು ಸರ್ವಜ್ಞ ಪೀಠದ ಮೇಲೆ ಕುಳ್ಳಿರಿಸುವ ಮೂಲಕ ಪರ್ಯಾಯ ಪೀಠಕ್ಕೇರಿಸಿದರು. ಬಳಿಕ ಗರ್ಭಗುಡಿಯೊಳಗೆ ಕರೆತಂದು ಮಠದ ಪಟ್ಟದ ದೇವರನ್ನು ಕೃಷ್ಣ ಎದುರು ಇಟ್ಟು ಪೂಜೆಯ ಸಂಕೇತವಾದ ಅಕ್ಷಯ ಪಾತ್ರೆ, ಗರ್ಭಗುಡಿಯ ಕೀಲಿಕೈ ಹಾಗೂ ಸಟುಗವನ್ನು ಶೀರೂರು ಶ್ರೀಗಳಿಗೆ ಹಸ್ತಾಂತರಿಸಿದರು. ಇಲ್ಲಿಗೆ ಪರ್ಯಾಯದ ಪ್ರಮುಖ ವಿಧಿಗಳು ಮುಕ್ತಾಯಗೊಂಡವು.

ಮುಂದಿನ ಧಾರ್ಮಿಕ ವಿಧಿಗಳು ಬಡಗು ಮಳಿಗೆಯಲ್ಲಿ ನಡೆದವು. ಅವು ಮುಗಿದ ಬಳಿಕ ಕೊಂಬು ಕಹಳೆ, ಚಂಡೆ, ವೇದಘೋಷಗಳ ನಡುವೆ ಎಲ್ಲಾ ಮಠಾಧಿಪತಿಗಳು ಮೆರವಣಿಗೆಯಲ್ಲಿ ಪರ್ಯಾಯ ದರ್ಬಾರು ನಡೆಯುವ ರಾಜಾಂಗಣಕ್ಕೆ ಬಂದರು.
ಇದೇ ಮೊದಲ ಬಾರಿ ಕರಾವಳಿಯ ಗುತ್ತಿನ ಮನೆಯ ಶೈಲಿಯಲ್ಲಿ ಅಲಂಕೃತಗೊಂಡಿದ್ದ ರಾಜಾಂಗಣದಲ್ಲಿ ಹಾಸಲಾದ ಅರಳು ಗದ್ದುಗೆಯಲ್ಲಿ ಎಲ್ಲಾ ಯತಿಗಳು ಕುಳಿತ ಬಳಿಕ ಪರ್ಯಾಯ ದರ್ಬಾರು ಆರಂಭಗೊಂಡಿತು.

ಪರ್ಯಾಯ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರೊಂದಿಗೆ ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶ ತೀರ್ಥ ಶ್ರೀಪಾದರು, ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ದರ್ಬಾರಿನಲ್ಲಿ ಭಾಗವಹಿಸಿದರು.
ಆದರೆ ಪರ್ಯಾಯ ಬಿಟ್ಟೇಳುತ್ತಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಗೈರುಹಾಜರಾಗುವ ಮೂಲಕ ಮಠದೊಳಗಿನ ಒಡಕಿಗೆ ಕನ್ನಡಿಯಾದರು.
ಪರ್ಯಾಯ ಪೀಠಾರೋಹಣಕ್ಕೆ ತಿರುಪತಿ, ಮಂತ್ರಾಲಯ ಹಾಗೂ ಧರ್ಮಸ್ಥಳಗಳಿಂದ ಪ್ರಸಾದ ರೂಪದಲ್ಲಿ ಕಾಣಿಕೆ ಹಾಗೂ ಇತರ ವಸ್ತುಗಳನ್ನು ಅಲ್ಲಿನ ಪ್ರತಿನಿಧಿಗಳು ಅರ್ಪಿಸಿದರು

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಪೆಟ್ರೋಲಿಯಂ ಮತ್ತು ಇಂಧನ ರಾಜ್ಯ ಸಚಿವ ಜಿತಿನ್ ಪ್ರಸಾದ್, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್ ಅವರು ಪರ್ಯಾಯ ಶ್ರೀಗಳನ್ನು ಅಭಿನಂದಿಸಿ ಮಾತನಾಡಿದರು. ಸ್ವಾಮೀಜಿ ಇವರನ್ನು ಸನ್ಮಾನಿಸಿದರು.
ಕೊನೆಯಲ್ಲಿ ಪರ್ಯಾಯ ಮಠದ ನೂತನ ಅಧಿಕಾರಿವರ್ಗವನ್ನು ಪ್ರಕಟಿಸಲಾಯಿತು. ಮಠದ ವತಿಯಿಂದ ಸನ್ಮಾನಿತರಾಗುವ ವಿದ್ವಾಂಸರ ಹೆಸರನ್ನು ಸಹ ಪ್ರಕಟಿಸಲಾಯಿತು.
ಕಬ್ಬಿನಾಲೆ ವಸನ್ತ ಭಾರದ್ವಾಜ್ ಕಾರ್ಯಕ್ರಮ ನಿರ್ವಹಿಸಿದರು. ಸರ್ವಾಧ್ಯಕ್ಷ ಪಾರುಪತ್ಯೆದಾರ ರಾಗಿ ವ್ಯಾಸಾಚಾರ್ಯ, ದಿವಾನರಾಗಿ ಲಾತವ್ಯ ಆಚಾರ್ಯ ನೇಮಕಗೊಂಡರು
ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ, ಸಚಿವ ಕೃಷ್ಣ ಪಾಲೇಮಾರ್, ಸಂಸದ ಡಿ.ವಿ.ಸದಾನಂದ ಗೌಡ, ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಶ್ರೀಧರ ರಾವ್, ಜಾವದ್ ರಹೀಂ, ನಿವೃತ್ತ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ, ಐಜಿಪಿ ಗೋಪಾಲ ಹೊಸೂರು, ಜಿಲ್ಲಾಧಿಕಾರಿ ಪಿ.ಹೇಮಲತಾ, ಎಸ್ಪಿ ಪ್ರಣ್ ಪವಾರ್, ಶಾಸಕರಾದ ಅಭಯಚಂದ್ರ ಜೈನ್, ಲಾಲಾಜಿ ಮೆಂಡನ್, ಜಿಲ್ಲಾ ನ್ಯಾಯಾಧೀಶ ಕೆ.ಬಿ.ಚೆಂಗಪ್ಪ, ನಗರಸಭಾಧ್ಯಕ್ಷ ದಿನಕರ ಶೆಟ್ಟಿ, ಪ್ರಮೋದ್ ಮುತಾಲಿಕ್ ಮುಂತಾದವರು ಉಪಸ್ಥಿತರಿದ್ದರು.

ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಶಾಸಕ ಕೆ.ರಘುಪತಿ ಭಟ್ ಸ್ವಾಗತಿಸಿದರೆ, ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಸನ್ತ ಭಾರಧ್ವಾಜ್ ಕಾರ್ಯಕ್ರಮ ನಿರ್ವಹಿಸಿದರು.
ಅದಮಾರು ಶ್ರೀಗಳ ಗೈರು, ಹೊರ ಬಂದ ಭಿನ್ನಮತ
ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಸ್ಥಾಪಿಸಿದ ಮಧ್ವಾಚಾರ್ಯರು ನಿತ್ಯಪೂಜೆಗಾಗಿ ಎಂಟು ಮಠಗಳನ್ನು ಸ್ಥಾಪಿಸಿ ಅವುಗಳ ಅಧಿಕಾರವನ್ನು ಸಮನಾಗಿ ಹಂಚಿ ಹಾಕಿದ್ದರೂ, ಅಷ್ಟಮಠಗಳು ಒಂದಾಗಿ ಇರುವುದು ಇತ್ತೀಚಿನ ವರ್ಷಗಳಲ್ಲಿ ಅಪರೂಪ. ಹಲವು ವಿಷಯಗಳಲ್ಲಿ ಮಠಗಳು ಗುಂಪಾಗಿ ಒಡೆದು ಅದು ಪರ್ಯಾಯದ ಸಂದರ್ಭದಲ್ಲಿ ಪರ್ಯಾಯ ಮೆರವಣಿಗೆ ಹಾಗೂ ಪರ್ಯಾಯ ದರ್ಬಾರುಗಳಲ್ಲಿ ಪ್ರತಿಬಿಂಬಿತವಾಗುತ್ತವೆ.
ಇಂದು ಸಹ ಪರ್ಯಾಯ ಮೆರವಣಿಗೆಯಲ್ಲಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಗೈರು ಹಾಜರಾಗಿ, ಶೀರೂರು ಮಠಾಧೀಶರೊಂದಿಗೆ ಇರುವ ಭಿನ್ನಮತವನ್ನು ಹೊರಹಾಕಿದರು. ಕಳೆದ ಪುತ್ತಿಗೆ ಪರ್ಯಾಯದಲ್ಲಂತೂ ಎಲ್ಲಾ ಏಳು ಮಠಗಳ ಸ್ವಾಮೀಜಿಗಳು ಮೆರವಣಿಗೆ ಹಾಗೂ ದರ್ಬಾರನ್ನು ಬಹಿಷ್ಕರಿಸಿದ್ದು, ಪುತ್ತಿಗೆ ಶ್ರೀಗಳು ಏಕಾಂಗಿಯಾಗಿ ಮೆರವಣಿಗೆಯಲ್ಲಿ ಭಾಗವಹಿಸಿ, ದರ್ಬಾರಿನಲ್ಲೂ ಒಬ್ಬರೇ ಪಾಲ್ಗೊಂಡಿದ್ದರು.

ಇಂದು ಅದಮಾರು ಹೊರತು ಪಡಿಸಿ ಉಳಿದ ಆರೂ ಮಠಗಳ ಸ್ವಾಮೀಜಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಆದರೆ ದರ್ಬಾರ್ ಸಭೆಯಲ್ಲಿ ಅದಮಾರು ಶ್ರೀಗಳೊಂದಿಗೆ ಪುತ್ತಿಗೆ ಶ್ರೀಗಳು ಭಾಗವಹಿಸದೇ ಮಠದೊಳಗೆ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸಿಕೊಟ್ಟರು.
೨೦೦೮ರಲ್ಲಿ ಭಾರೀ ವಿವಾದದ ಮಧ್ಯೆ ಉಳಿದ ಸ್ವಾಮಿಗಳ ಬಹಿಷ್ಕಾರದ ಮಧ್ಯೆ ಪರ್ಯಾಯ ಪೀಠವೇರಿದ್ದ ಪುತ್ತಿಗೆ ಶ್ರೀಗಳ ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ವಿವಾದ ಉಂಟಾಗಿರಲಿಲ್ಲ. ಆದರೆ ಪುತ್ತಿಗೆ ಶ್ರೀಗಳಿಗೆ ಕೃಷ್ಣನ ಪೂಜೆಗೆ ಅವಕಾಶ ನೀಡಿದರೂ, ಅವರನ್ನು ತಾವಿನ್ನೂ ಒಪ್ಪಿಕೊಂಡಿಲ್ಲ ಎಂಬುದನ್ನು ಉಳಿದ ಮಠಾಧೀಶರು ಪರೋಕ್ಷವಾಗಿ ಸಾರಿದಂತಾಗಿದೆ
ಮಠಾಧೀಶರು ಶುದ್ಧ ಚಾರಿತ್ರವಂತರಾಗಿರಬೇಕು: ಪೇಜಾವರ ಶ್ರೀ

ಮಠಾಧೀಶರು ಶುದ್ಧ ಚಾರಿತ್ರವಂತರಾಗಿದ್ದು, ಸನ್ಯಾಸಿ ಧರ್ಮವನ್ನು ಸರಿಯಾಗಿ ಪಾಲಿಸಬೇಕು. ಸಮಾಜ ಮತ್ತು ಜನರಿಗೆ ಮಾರ್ಗದರ್ಶನ ನೀಡುವ ನೈತಿಕ ಜವಾಬ್ದಾರಿಯೂ ಅವರ ಮೇಲಿದೆ ಎಂದು ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ ಪರ್ಯಾಯ ಪೀಠಾರೋಹಣದ ಬಳಿಕ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಅವರು ಉಪಸ್ಥಿತರಿದ್ದ ಮಠಾಧೀಶರ ಪರವಾಗಿ ಆಶೀರ್ವಚನ ನೀಡಿ ಮಾತನಾಡುತಿದ್ದರು.

ಮಠಗಳು ಹಾಗೂ ಮಠಾಧೀಶರು ಮೂರು ವಿಷಯಗಳಲ್ಲಿ ಇಡೀ ಸಮಾಜಕ್ಕೆ ಮಾದರಿಯಾಗಿರ ಬೇಕು ಎಂದು ಹೇಳಿದ ಪೇಜಾವರ ಶ್ರೀಗಳು, ಸಮಗ್ರ ಮಾನವ ಸಮಾಜಕ್ಕೆ ಧರ್ಮ, ಭಕ್ತಿ ಹಾಗೂ ಜ್ಞಾನದ ಪ್ರಸಾರ ನಡೆಸಬೇಕು. ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು ಹಾಗೂ ಶುದ್ಧ ಚಾರಿತ್ರ ಹೊಂದಿರಬೇಕು ಎಂದರು.
ಲೌಕಿಕ ಜೀವನ ನಡೆಸುವ ರಾಜ್ಯಪಾಲರೊಬ್ಬರು ಅನೈತಿಕ ಚಟುವಟಿಕೆ ನಡೆಸಿ ಅಧಿಕಾರದಿಂದ ವಂಚಿತರಾಗಿದ್ದಾರೆ. ಆಧ್ಯಾತ್ಮಿಕ ಜೀವನ ನಡೆಸುವ ಯತಿಗಳು ಸಹ ಶುದ್ದ ಗುಣನಡತೆ ಹೊಂದಿರಬೇಕು ಎಂದವರು ನುಡಿದರು.
ಮಠಾಧೀಶರ ನಡುವೆ ಪರಸ್ಪರ ಆರೋಗ್ಯಕರ ಸ್ಪರ್ಧೆ ಇರಬೇಕು. ಅದರಿಂದ ಸಮಾಜಕ್ಕೆ ಒಳಿತಾಗುವಂತಿರಬೇಕು. ಭಕ್ತಿ ಬೆಳೆಯಲು, ಭಯೋತ್ಪಾದನೆ ಅಳಿಯಲು, ಆತಂಕವಾದದ ಬದಲು ಅನುಕಂಪವಾದ ಬೆಳೆಯಬೇಕು ಎಂದವರು ಹಾರೈಸಿದರು.
ಉಡುಪಿಗೆ ೫೦ ಕೋಟಿ ರೂ.:

ಅಭಿನಂದನಾ ಭಾಷಣ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಉಡುಪಿಯ ಅಭಿವೃದ್ಧಿಗೆ ಮುಂದಿನ ಬಜೆಟ್ನಲ್ಲಿ 50 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ಪರ್ಯಾಯಾವಧಿಯಲ್ಲಿ ಯಾವುದೇ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಗುರಿ ತಮ್ಮದಾಗಿದ್ದು, ತಪ್ಪಿದಾಗ ಕಿವಿ ಹಿಂಡಿ ತಿದ್ದುವಂತೆ ಯತಿಗಳಿಗೆ ಮನವಿ ಮಾಡಿದರು.
ಉಡುಪಿಯ ಕೋಮು ಸೌಹಾರ್ದ: ಕೇಂದ್ರ ಸಚಿವ ಜಿತಿನ್ ಮೆಚ್ಚುಗೆ

ಶೀರೂರು ಶ್ರೀಗಳಿಂದ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಅವರಿಗೆ ಸಮ್ಮಾನ.
ಉಡುಪಿ, ಜ. ೧೮: ಉಡುಪಿಯ ಶ್ರೀಕೃಷ್ಣ ಮಠ, ಅಷ್ಟ ಮಠಗಳು, ಮಠಗಳೂ ಇಗರ್ಜಿ ನಿರ್ಮಿಸಲು ಸ್ಥಳ ಕೊಟ್ಟದ್ದು, ಹಾಜಿ ಅಬ್ದುಲ್ಲಾ ಸಾಹೇಬರಿಗೂ ಶ್ರೀಕೃಷ್ಣಮಠಕ್ಕೂ ಇದ್ದ ಸಂಬಂಧ ಇಂತಹ ವಿಷಯಗಳು ಉಡುಪಿಯವರಿಗೆ ಎಷ್ಟು ಗೊತ್ತಿದೆಯೋ ಗೊತ್ತಿಲ್ಲ. ಆದರೆ ಕೇಂದ್ರದ ಪೆಟ್ರೋಲಿಯಂ ಮತ್ತು ಇಂಧನ ರಾಜ್ಯ ಸಚಿವ ಉತ್ತರಪ್ರದೇಶದವರಾದ ಜಿತಿನ್ ಪ್ರಸಾದ್ರಿಗೆ ಮಾತ್ರ ಇವೆಲ್ಲ ಗೊತ್ತಿದೆ.
ರಾಜಾಂಗಣದಲ್ಲಿ ಸೋಮವಾರ ಬೆಳಗ್ಗೆ ನಡೆದ ಪರ್ಯಾಯ ದರ್ಬಾರ್ ಸಭೆಯಲ್ಲಿ ಕೇಂದ್ರ ಸರಕಾರದ ಪರವಾಗಿ ಶೀರೂರು ಶ್ರೀಗಳನ್ನು ಅಭಿನಂದಿಸಿ ಮಾತನಾಡಿದ ಅವರು ಉಡುಪಿ ಕೋಮು ಸೌಹಾರ್ದತೆಗೆ ಹೆಸರಾದ ತಾಣ. ಇಲ್ಲಿನ ಮಠಗಳು ನೀಡಿದ ಕೊಡುಗೆ, ಇಗರ್ಜಿ ನಿರ್ಮಿಸಲು ಮಠಾಧೀಶರು ಜಾಗ ಕೊಟ್ಟದ್ದು, ಹಾಜಿ ಅಬ್ದುಲ್ಲಾ ಸಾಹೇಬರು ಶ್ರೀಕೃಷ್ಣಮಠಕ್ಕೆ ಸಲ್ಲಿಸಿದ ಸೇವೆಗಳನ್ನೆಲ್ಲ ಬೆಟ್ಟು ಮಾಡಿ ಉಡುಪಿ ಕೋಮು ಸೌಹಾರ್ದದ ದೇಗುಲ ಎಂದು ಬಣ್ಣಿಸಿದರು. ಆಸ್ಕರ್ ಅವರು ಸಪತ್ನೀಕರಾಗಿ ಪರ್ಯಾಯೋತ್ಸವದಲ್ಲಿ ಪಾಲ್ಗೊಂಡರು..
ಪರ್ಯಾಯ ಪೀಠವೇರಿದ ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ಮಾತನಾಡಿ, ಎರಡು ವರ್ಷಗಳ ತಮ್ಮ ಪರ್ಯಾಯಾವಧಿಯಲ್ಲಿ ನಿರಂತರ ಅನ್ನದಾನ ನಡೆಯಲಿದೆ. ಜನರು ಇದನ್ನು ತಮ್ಮದೇ ಪರ್ಯಾಯವೆಂದು ಭಾವಿಸಿ ನಡೆಸಿಕೊಡ ಬೇಕೆಂದು ಮನವಿ ಮಾಡಿದರು.
ಪರ್ಯಾಯ ಮಹೋತ್ಸವ - ಆರಂಭದ ಮೆರವಣಿಗೆ
ಉಡುಪಿ, ಜ.೧೮: ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ ತೃತೀಯ ಪರ್ಯಾಯ ಮಹೋತ್ಸವದ ಮೆರವಣಿಗೆ ಲಕ್ಷಾಂತರ ಭಕ್ತಸಮೂಹದ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ಜರಗಿತು. ಅದಮಾರು ಸ್ವಾಮೀಜಿಯ ಅನುಪಸ್ಥಿತಿಯಲ್ಲಿ ಉಳಿದ ಆರು ಮಠಗಳ ಸ್ವಾಮೀಜಿಗಳನ್ನು ಸಂಪ್ರದಾಯದಂತೆ ಪಲ್ಲಕಿಯಲ್ಲಿ ರಥಬೀದಿಗೆ ಕರೆತರಲಾಯಿತು.
ಪರ್ಯಾಯ ಶಿರೂರು ಸ್ವಾಮೀಜಿ ಜ.18 ರ ಉಷಾ: ಕಾಲ ಕಾಪುವಿನ ದಂಡತೀರ್ಥದಲ್ಲಿ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದರು.
ಅಲ್ಲಿ ಗಣ್ಯರು, ಪರ್ಯಾಯ ಸಾಗತ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾಧಿಗಳು ಸಾಂಪ್ರಾದಾಯಿಕ ಸ್ವಾಗತ ಕೋರಿ, ಸ್ವಾಮೀಜಿಯನ್ನು ಬರಮಾಡಿಕೊಂಡರು.
ಈ ಹಿಂದಿನ ಪರ್ಯಾಯದ ಮೆರವಣಿಗೆಗಳಿಂತ ತುಸು ತಡವಾಗಿ ಅಂದರೆ ಮುಂಜಾನೆ 5.30ಕ್ಕೆ ಆರಂಭಗೊಂಡ ಮೆರವಣಿಗೆ ಬೆಳಗ್ಗೆ 7.30ರ ವೇಳೆಗೆ ರಥಬೀದಿಯನ್ನು ತಲುಪಿತು. ಮೆರವಣಿಗೆ ಜೋಡುಕಟ್ಟೆ, ಕೋರ್ಟ್ರೋಡ್, ಡಯನ ಸರ್ಕಲ್, ಐಡಿಯಲ್ ಸರ್ಕಲ್ ಮಾರ್ಗವಾಗಿ ಶ್ರೀಕೃಷ್ಣಮಠದಲ್ಲಿ ಸಮಾಪ್ತಿಗೊಂಡಿತು.
ಶೀರೂರು ಸ್ವಾಮೀಜಿ ಅವರನ್ನು ಹಾಗೂ ಮಠದ ಪಟ್ಟದ ದೇವರನ್ನು ಸಂಪ್ರದಾಯದಂತೆ ಪಲ್ಲಕಿಯಲ್ಲಿ ಕುಳ್ಳಿರಿಸಿ ಶ್ರೀಕೃಷ್ಣಮಠಕ್ಕೆ ಕರೆತರಲಾಯಿತು. ಅದಮಾರು ಸ್ವಾಮೀಜಿಯವರನ್ನು ಹೊರತು ಪಡಿಸಿ ಪೇಜಾವರ ಹಿರಿಯ ಹಾಗೂ ಕಿರಿಯ, ಕಾಣಿಯೂರು, ಕೃಷ್ಣಾಪುರ, ಪಲಿಮಾರು, ಸೋದೆ ಸ್ವಾಮೀಜಿಗಳು ಮೆರವಣಿಗೆಯಲ್ಲಿ ಆಗಮಿಸಿದರು.
ಮೆರವಣಿಗೆ ರಥಬೀದಿ ತಲುಪುವ ವೇಳೆಗೆ ಸಂಪೂರ್ಣ ಬೆಳಕು ಹರಿದಿತ್ತು. ಮುಂಜಾವಿನ ಚುಮುಚಮು ಚಳಿಯಲ್ಲಿ ಭಕ್ತರು ಕಾತುರದಿಂದ ಮೆರವಣಿಗೆಯನ್ನು ಕ್ಷಿಸಿ ಆನಂದಪಟ್ಟರು.
ಮೆರವಣಿಗೆಯ ಆಕರ್ಷಣೆಗಳು: ಪರ್ಯಾಯ ಮೆರವಣಿಗೆಯ ವೈಭವಕ್ಕೆ ಅದನ್ನು ಕ್ಷಿಸಲು ಕಿನ್ನಿಮುಲ್ಕಿಯಿಂದ ರಥಬೀದಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳಲ್ಲಿ ನಿಂತ ಲಕ್ಷಾಂತರ ಮಂದಿ ಭಕ್ತಾಧಿಗಳು ಸಾಕ್ಷಿಯಾದರು.
ಕೊಂಬು- ಕಹಳೆ, ಹುಲಿವೇಷ, ಮರಕಾಲು ವೇಷ, ಬ್ಯಾಂಡ್ ಸೆಟ್, ನಾಗಸ್ವರ ವಾದ್ಯ, ಸ್ಯಾಕ್ಸೋಫೋನ್, ತಾಲಿಮು, ಚಂಡೆ, ನಂದಿಕೋಲು, ಕೀಲುಕುದುರೆ, ಮುಖವಾಡ, ಕೊಡೆ, ೭೦ಜನರ ಬ್ಯಾಂಡ್ ಸೆಟ್, ಆನೆ, ಬಿರುದಾವಳಿ, ತಟ್ಟಿರಾಯ, ಸೋಮಕಾಸುರ, ನಾಸಿಕ್ ಬ್ಯಾಂಡ್ ಸೆಟ್, ಸ್ಕೌಟ್, ಡೋಲು, ಕೇರಳ ಚಂಡೆ, ಡೋಲು ಕುಣಿತ, ಪೂಜಾ ಕುಣಿತ, ದಾಸರ ಶಂಖ ಮತ್ತು ಗಂಟೆ, ಪೂರ್ಣ ಕುಂಬ ಕಲಶ, ಭಜನಾ ಮಂಡಳಿ, ಕುಡುಬಿ ಜನಪದ ನೃತ್ಯ, ಕೂರ್ಗಿ ನೃತ್ಯ, ವೇದಘೋಷ, ಮಠದ ಡೋಲು, ಕಹಳೆ, ಮಹಿಳೆಯರ ಚಂಡೆ ಬಳಗ, ಬೆಂಕಿ ಉಗುಳುವ ದೊಡ್ಡ ಪೂತನಿಯ ವೇಷಧಾರಿ, ಕಂUಲು ಕುಣಿತ ಜನರ ಕಣ್ಮನ ತಣಿಸಿತು.
ಮಟ್ಟುಗುಳ್ಳ, ದೇವಲೋಕದಲ್ಲಿ ದೇವೇಂದ್ರ, ಅಪ್ಸರಾ ನೃತ್ಯ, ವಿಶ್ವರೂಪ ದರ್ಶನ, ಕಾಳಿಂಗ ಮರ್ಧನ, ಕಾಮಧೇನು ಹಾಲುಣಿಸುವುದು, ಉಗ್ರ ನರಸಿಂಹ, ಶ್ರೀಕೃಷ್ಣ ಉದ್ಯಾವನ, ಗಜೇಂದ್ರ ಮೋಕ್ಷ, ಪುಷ್ಪಕ ದೋಣಿ, ತ್ರಿಪುರ ಸಂಹಾರ, ಗರುಡ ಅಂಜನೇಯ, ಮಹಿಷಾಸುರ ಮರ್ಧಿನಿ, ಸೂರ್ಯ ಆಂಜನೇಯ, ಸಾನೂರ ಮರ್ಧನ, ಯಕ್ಷಗಾನ ಬಡಗುತಿಟ್ಟು, ಕೋಟಿಚೆನ್ನಯ, ಆಟಿ ಕಳಿಂಜ, ರಕ್ತ ಬೀಜಾಸುರ ಸಂಹಾರದ ಟ್ಯಾಬ್ಲೋಗಳು ಮೆರವಣಿಗೆಯ ವೈಭವ ಮತ್ತಷ್ಟು ಹೆಚ್ಚಿಸಿದವು.
10 ಸ್ತಬ್ಧ ಚಿತ್ರಗಳು, ಮತ್ಸಾವತಾರ, ವೈಕುಂಠ ಆರಾಧನ, ಶಿಶುಪಾಲ ವಧೆ, ಮತ್ಸಾವತಾರ ಮತ್ತು ಕೃಷ್ಣ, ಗೀತೋಪದೇಶ, ವಾಲಿ ಸುಗ್ರೀವ ಕಾಳಗ, ಲೇಸರ್ ಲೈಟ್ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮೆರವಣಿಗೆ ವೀಕ್ಷಿಸಿದ ಮುಖ್ಯಮಂತ್ರಿ!

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರ್ಯಾಯ ಮೆರವಣಿಗೆಯನ್ನು ಪೊಲೀಸ್ ಬಿಗಿ ಬಂದೋಬಸ್ತಿನ ಮಧ್ಯೆ ಉಡುಪಿಯ ನ್ಯಾಯಾಲಯದ ಆವರಣದಲ್ಲಿ ಹಾಕಲಾಗಿದ್ದ ವಿಶೇಷ ವೇದಿಕೆಯಲ್ಲಿ ಕುಳಿತು ವೀಕ್ಷಿಸಿದರು.
ಶ್ರೀಕೃಷ್ಣಮಠದ ಇತಿಹಾಸದಲ್ಲೇ ಮುಖ್ಯಮಂತ್ರಿಯೊಬ್ಬರು ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಂಡು ಮೆರವಣಿಗೆಯನ್ನು ಕ್ಷಿಸಿದ್ದು ಇದೇ ಪ್ರಥಮವಾಗಿದೆ. ಮುಖ್ಯಮಂತ್ರಿಯವರು ಆರಂಭದಿಂದ ಕಡೆಯವರೆಗೂ ಮೆರವಣಿಗೆಯ ವೈಭವವನ್ನು ಕ್ಷಿಸಿದರು. ಪಲ್ಲಕಿಯಲ್ಲಿ ಕುಳಿತು ಆಗಮಿಸಿದ ಸ್ವಾಮೀಜಿಗಳಿಗೆ ಅವರು ಎದ್ದು ನಿಂತು ವಂದಿಸಿದರು.
ಮುಖ್ಯಮಂತ್ರಿಯವರೊಂದಿಗೆ ಕೇಂದ್ರ ಪೆಟ್ರೋಲಿಯಂ ಸಚಿವ ಜಿತಿನ್ ಪ್ರಸಾದ್, ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್, ಸುರತ್ಕಲ್ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್, ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಸೋಮಶೇಖರ್ ಭಟ್, ಮಂಗಳೂರು ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರು, ಉಡುಪಿ ಜಿಲ್ಲಾಧಿಕಾರಿ ಪಿ.ಹೇಮಲತಾ, ಎಸ್ಪಿ ಪ್ರಣ್ ಮಧುಕರ್ ಪವಾರ್ ಅವರೂ ಮೆರವಣಿಗೆಯನ್ನು ವೀಕ್ಷಿಸಿದರು.








ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ. ಚಿತ್ರ: ದುರ್ಗಪ್ರಸಾದ್ ಕಡಿಯಾಳಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-19 00:00:00
|
|
|